Aunty-Mosquito ಸಾಫ್ಟ್-ವೇರ್ !
Wednesday, February 03, 2010
Aunty ಸೊಳ್ಳೆಯಿಂದ ಕಚ್ಚಿಸಿಕೊಂಡು ತಡೆಯಲಾರದೆ ಈ Anti ಸೊಳ್ಳೆ ತಂತ್ರಜ್ಞಾನ ಕಂಡುಹುಡುಕಿದ ವಿಜ್ಞಾನಿಯ (ದೈಹಿಕ ಮತ್ತು ಮಾನಸಿಕ) ಸ್ಥಿತಿ ನೆನಪಿಸಿಕೊಂಡು ಗೊಳ್ಳನೆ ನಕ್ಕ ಅಸತ್ಯಾನ್ವೇಷಿ, ಈ ಬಗ್ಗೆ ತನಿಖೆ ನಡೆಸಿದಾಗ ಹೊಸ ಅಂಶವೊಂದು ಬಯಲಾಗಿದೆ.
ವಾಸ್ತವವಾಗಿ ವಿಜ್ಞಾನಿ ಇದನ್ನು ಕಂಡುಹುಡುಕಿದ್ದು ಸೊಳ್ಳೆಗಳಿಗಾಗಿ ಅಲ್ಲವಂತೆ. "Every new product comes out by an accident" ಎಂಬಂತೆ, ಸೊಳ್ಳೆಗಳಿಗೆ ಈ ಸಾಫ್ಟ್ ವೇರ್ ಮಾರಕವಾದದ್ದು ಕೂಡ ಒಂದು ಆಕ್ಸಿಡೆಂಟ್.
ಈ ಸುರಸುಂದರಾಂಗ ವಿಜ್ಞಾನಿಗೆ ಸುಂದರಿಯರ ವಿಪರೀತ ಕಾಟ. ಒಂಚೂರು ವಿಶ್ರಾಂತಿ ತೆಗೆದುಕೊಳ್ಳೋಣವೆಂದರೆ ಬಿಡಲೊಲ್ಲರು. ಅವರನ್ನು ದೂರ ಮಾಡುವುದು ಹೇಗೆ ಎಂಬ ಸಂಶೋಧನೆಯಲ್ಲಿದ್ದಾಗ ಹೆಣ್ಣು ಸೊಳ್ಳೆಗಳಿಗಷ್ಟೇ ಮಾರಕವಾಗಿರುವ ಈ ಸಾಫ್ಟ್ ವೇರ್ ಉತ್ಪತ್ತಿಯಾಗಿದೆ. ಮೊಬೈಲ್ ಫೋನ್ಗೂ ಇದು ಲಭ್ಯವೆಂಬುದು ಇತ್ತೀಚಿನ ಸುದ್ದಿ.
ಮಾನವನ ರಕ್ತ ಹೀರುವ ಹೆಣ್ಣು ಸೊಳ್ಳೆಗಳು ಈ ಸಾಫ್ಟ್ ವೇರ್ ಹೊರಡಿಸುವ ಶಬ್ದ ಬಂದತ್ತ ಧಾವಿಸುತ್ತವೆ. ಅದು ಕಂಪ್ಯೂಟರ್ನಿಂದ ಬರುವುದರಿಂದ ಅಲ್ಲಿ ಬ್ರೌಸ್ ಮಾಡುತ್ತಾ ಬೊಗಳೆ-ರಗಳೆ ಓದತೊಡಗುತ್ತವೆ. ಅಲ್ಲಿಗೆ ಬೇರೆಯವರ ರಕ್ತ ಹೀರುವ ಮನುಷ್ಯ ಪ್ರಾಣಿಗೆ ಸುಖ ನಿದ್ದೆ.
ಈ ಕುರಿತ ಹೆಚ್ಚಿನ ಮಾಹಿತಿ ನಿಮಗೆ ಇಲ್ಲಿ ಸಿಗಲಾರದು.
ಈ ಸಾಫ್ಟ್ ವೇರ್ ಇಲ್ಲಿ ಡೌನ್ ಲೋಡ್ ಮಾಡಬೇಕಿದ್ದರೆ ಬೊಗಳೆ-ರಗಳೆ ಓದುಗರಿಗೆ ಸಂಪೂರ್ಣ ಉಚಿತ. (ಶರತ್ತುಗಳು ಅನ್ವಯ. ಬೇಕಿದ್ದರೆ ನೀವು ಸೇವಾ ತೆರಿಗೆ, ಹ್ಯಾಂಡ್ಲಿಂಗ್ ಚಾರ್ಜ್, ಸಾಗಾಟ ವೆಚ್ಚ, ಕೂಲಿ ವೆಚ್ಚ, ತಯಾರಿಕಾ ವೆಚ್ಚ, ಊಟದ ಖರ್ಚು, ಮಾಹಿತಿ ಶುಲ್ಕ... ಇನ್ನೂ ಇತ್ಯಾದಿ ಏನೇನೋ ಶುಲ್ಕಗಳನ್ನೆಲ್ಲಾ ಸೇರಿಸಿ ಬೊಗಳೆ-ರಗಳೆ ಬ್ಯುರೋದ ಅಸತ್ಯಾನ್ವೇಷಿಗೆ ಕಳುಹಿಸಬಹುದು.
ಅಮೀರ್ ಖಾನ್ ಹೊಸ ಚಿತ್ರ: All Idiots!
Monday, January 18, 2010
ಪದಕೋಶಕ್ಕೆ ತಿದ್ದುಪಡಿ: ವೇದೇಗೌಡ್ರ ಒತ್ತಾಯ
Monday, January 11, 2010
ಗೌರವಾನ್ವಿತ ಮಣ್ಣಿನ ಮಗನಾಗಿರುವ ಮಾಜಿ ನಿಧಾನಿಯೂ ಆಗಿರುವ ಶ್ರೀಶ್ರೀಮಾನ್ಮಾನ್ ವೇದೇಗೌಡರು ಮುಖ್ಯಮಂತ್ರಿಯನ್ನು ಬಹಳ ಆತ್ಮೀಯತೆಯಿಂದ, ಅತಿ ಸಲುಗೆಯಿಂದ ಈ ಮೇಲಿನ ಪದಗಳನ್ನು ಉಪಯೋಗಿಸಿ ಸಂಬೋಧಿಸಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಬೊಗಳೂರು ಸಿಬ್ಬಂದಿ ಈ ಕುರಿತು ತನಿಖೆ ಆರಂಭಿಸಿದ್ದರು.
ತನಿಖೆ ಆರಂಭಿಸಿರುವಾಗ ತಿಳಿದುಬಂದ ಅಂಶವೆಂದರೆ, ಮಾಜಿ ನಿಧಾನಿಗಳೂ, ಮಣ್ಣಿನಿಂದಲೇ ಚಿನ್ನ ಮಾಡಿಕೊಂಡ ರೈತಪುತ್ರರೂ ಆದ ವೇದೇಗೌಡರು ಹೊಸ ಹೊಸ ಮತ್ತು ಹಳೆ ಹಳೆಯ ಶಬ್ದಕೋಶಗಳನ್ನು ಹುಡುಕಿ ಹುಡುಕಿ ಜರೆದಿದ್ದಾರೆ ಎಂಬುದು ಪತ್ತೆಯಾಗಿದೆ. ತಾವು ಯಾವತ್ತಿಗೂ ಅಧ್ಯಯನ ನಿರತರಾಗಿದ್ದು, ಈ ಹೊಸ ಪದಗಳನ್ನು ಯಾರೂ ಹೆಚ್ಚಾಗಿ ಯಾಕೆ ಬಳಸುತ್ತಿಲ್ಲವೆಂಬುದು ನಮಗೇ ಅಚ್ಚರಿಯಾದ ಕಾರಣದಿಂದ ಅವುಗಳನ್ನು ಬಳಸಿ, ಬೆಳೆಸಲು ಪ್ರಯತ್ನಿಸಿರುವುದಾಗಿ ಹೇಳಿದರು.
ಮತ್ತೊಂದು ವರದ್ದಿ ಮೂಲಗಳ ಪ್ರಕಾರ, ವೇದೇಗೌಡರು ಇಂತಹ ವೇದವಾಕ್ಯಗಳನ್ನು ಉದುರಿಸಿರುವುದಕ್ಕೆ ಬೇರೆ ಕಾರಣಗಳೂ ಇವೆ. ಅವರು ಇತ್ತೀಚೆಗೆ ತಮ್ಮ ರೈತಪುತ್ರರೊಂದಿಗೆ ಸೇರಿಕೊಂಡು ನೈಸಾಗಿರುವ ರಸ್ತೆಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಮಾಜಿ ನಿಧಾನಿ ಪಟ್ಟದ ಮೇಲಿದ್ದವರು ಧಡಕ್ಕನೇ ಬೀದಿಗಿಳಿದು ಹೋರಾಟ ಮಾಡುವುದೇನೂ ಸಣ್ಣ ಪುಟ್ಟ ವಿಷಯವಲ್ಲ. ಅದೊಂದು ದಿನ ತಾವು ದಿಢೀರನೇ ಈ ಪಟ್ಟಕ್ಕೇರಿದಾಗ, ಹಿಂದಿ ಕಲಿಯಲು ಹೋಗಿ ಸೋತು ಸುಣ್ಣವಾಗಿದ್ದು ಇನ್ನೂ ನೆನಪಿನಲ್ಲಿತ್ತು. ಆವತ್ತು 'ಏರಿದ' ಸಂದರ್ಭ ಎದುರಾದ ಬಿಕ್ಕಟ್ಟು ಈ ಬಾರಿ ಬೀದಿಗೆ 'ಇಳಿದಾಗ' ಕಾಣಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಅವರು, ಬೀದಿ ಭಾಷೆಯನ್ನು ಬೀದಿಯಲ್ಲಿದ್ದುಕೊಂಡೇ ತಕ್ಷಣ ಪ್ರಯೋಗಿಸಿ ತಮ್ಮ ಕಲಿಕಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ನಮ್ಮ ವರದ್ದಿಗಾರರು ಎಲ್ಲಿಯೂ ವರದಿ ಮಾಡಿಲ್ಲ.
ಇನ್ನೊಂದು ದೃಷ್ಟಿಕೋನದಿಂದ ತಪಾಸಣೆ ನಡೆಸಿದಾಗ ಬೇರೆಯೇ ವಿಷಯ ಹೊರಬಿದ್ದಿದೆ. ತಾವೊಬ್ಬ ಮಣ್ಣಿನ ಮಗನಾಗಿ ಇಷ್ಟು ದಿನಗಳಿಂದ ಬೀದಿಗಿಳಿದು ತಮ್ಮ ತಮ್ಮ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ, ತಾವೊಬ್ಬ ಮಾಜಿ ನಿಧಾನಿ ಎಂಬ ಪರಿಜ್ಞಾನವೂ ಇಲ್ಲದೆ ರಾಷ್ಟ್ರೀಯ ಸುದ್ದಿ ವಾಹಿನಿಗಳು, ರಾಷ್ಟ್ರೀಯ ಸುದ್ದಿ ಪತ್ರಿಕೆಗಳು ಈ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ, ಒಂದೇ ಒಂದು ಸುದ್ದಿಯನ್ನೂ ಮಾಡುತ್ತಿಲ್ಲ, ಬಿತ್ತರಿಸುತ್ತಿಲ್ಲ. ಹೀಗಾಗಿ ಏನಾದರೂ ಮಾಡಬೇಕಲ್ಲ ಎಂದು ಕೂದಲಿಲ್ಲದ ತಲೆ ಕೆರೆದುಕೊಂಡು ಯೋಚಿಸಿದವರೇ, ಈ ಪದ ಪ್ರಯೋಗದ ಸಾಹಿತ್ಯಕೃಷಿಗೆ ಕೈಹಚ್ಚಿದ್ದರು ಎಂದು ಮೂಲಗಳು ವರದ್ದಿ ಮಾಡಿವೆ. ಇದರಲ್ಲಿ ಅವರು ಯಶಸ್ಸನ್ನೂ ಕಂಡಿದ್ದು, ಆದರೂ ಕೆಲವು ಚಾನೆಲ್ಗಳು ತಾವು ಕಷ್ಟಪಟ್ಟು ಹುಡುಕಿ ಕಾಯಿನ್ ಮಾಡಿದ್ದ ಈ ಹೊಸ ಶಬ್ದಗಳು ಬರುವಾಗ 'ಕೀಂssss....' ಎಂಬ ಸದ್ದು ತೂರಿಸಿ, ಅದೇನೆಂದು ಜನರು ತಿಳಿಯದಂತೆ ಮಾಡಿದ್ದಾರೆ ಎಂದೂ ಅವರು ಅಸಮಾಧಾನ ಹೊರಗೆಡಹಿದ್ದಾರೆ.
ಮಾತ್ರವಲ್ಲದೆ, ಈಗೀಗ ಜನರಲ್ಲಿ ರಾಜಕಾರಣಿಗಳ ಬಗ್ಗೆ ಹಾಗೂ ರಾಜಕಾರಣಿಗಳಲ್ಲಿ ಎದುರಾಳಿಗಳ ಬಗ್ಗೆ ಅಸಹನೆ ಹೆಚ್ಚಾಗುತ್ತಿದೆ, ಇಂತಹ ಸಂದರ್ಭದಲ್ಲಿ ಈ ರೀತಿಯ ಪದಗಳೇ ಕೆಲಸ ಮಾಡುತ್ತವೆ. ಹೀಗಾಗಿ ಅವುಗಳನ್ನು ಅಸಾಂವಿಧಾನಿಕ ಪದಕೋಶದಿಂದ ಕಿತ್ತೆಸೆದು ಸಾಂವಿಧಾನಿಕ ಪದಕೋಶಕ್ಕೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. Read more...
ಗೋಚರವಾಗದ ಚಂದ್ರ ಗ್ರಹಣ: ತನಿಖೆಗೆ ಆದೇಶ
Monday, January 04, 2010
2010ನೇ ಇಸವಿ ಆರಂಭವಾಗುವ ಸ್ವಲ್ಪ ಹೊತ್ತಿಗೆ ಮುಂಚೆ ಚಂದ್ರನಿಗೆ ಗ್ರಹಣ ಹಿಡಿಯುತ್ತದೆ ಎಂಬ ಸುದ್ದಿ ಕೇಳಿ, ಆತಂಕಿತರಾಗಿದ್ದ ಬೊಗಳೂರು ಬ್ಯುರೋದ ರದ್ದಿಗಾರ ಅನ್ವೇಷಿ, ಅಷ್ಟೂ ದಿನಗಳ ಕಾಲ ತಲೆ ಮರೆಸಿಕೊಂಡು, ಚಂದ್ರ ಗ್ರಹಣವನ್ನೇ ಕಾಯುತ್ತಿದ್ದ ಎಂದು ಮೂಲಗಳು ಹೇಳಿವೆ.
ಆದರೆ, ಮತ್ತಷ್ಟು ಸಂಶೋಧಿಸಿದಾಗ, ಚಂದ್ರಗ್ರಹಣಕ್ಕಾಗಿ ಕಾತರಿಸುತ್ತಾ ಹಾತೊರೆಯುತ್ತಿದ್ದವರಲ್ಲಿ ತಾನು ಮಾತ್ರವೇ ಅಲ್ಲ, ಇಡೀ ವಿಶ್ವ ಸಮುದಾಯದ ಮಂದಿಯೂ ಸೇರಿದ್ದಾರೆ ಎಂಬುದು ಅನ್ವೇಷಿಗೆ ತಿಳಿದಾಗ ತಡವಾಗಿತ್ತು. ಹೀಗಾಗಿ ಮೂರ್ನಾಲ್ಕು ದಿನ ಕಳೆದು ವರದಿ ತಂದು ಒಪ್ಪಿಸಲಾಗಿದೆ ಎಂದು ಸೊಂಪಾದಕೀಯ ಮೂಲಗಳು ಹೇಳಿವೆ.
ಮರುದಿನ ಸುದ್ದಿ ಪತ್ರಿಕೆಗಳನ್ನೆಲ್ಲಾ ಹರವಿಕೊಂಡು, ಅಂತರಜಾಲದಲ್ಲಿ ಸಂಚೋಧನೆ ನಡೆಸಿದಾಗ ತಿಳಿದುಬಂದ ಅಂಶವೆಂದರೆ, ಆ ದಿನ ಅಲ್ಲಲ್ಲ... ರಾತ್ರಿಯಲ್ಲಿ, ಚಂದ್ರಗ್ರಹಣವು ಪಾರ್ಶ್ವ ಚಂದ್ರಗ್ರಹಣ ಎಂದು ನಿಗದಿಯಾಗಿದ್ದರೂ, ಕೆಲವು ಕಡೆ ಅದು ಗೋಚರಿಸಲೇ ಇರಲಿಲ್ಲ, ಇನ್ನು ಕೆಲವೆಡೆ ಅದು ಖಗ್ರಾಸ (ಪೂರ್ಣ) ಗ್ರಹಣವಾಗಿ ಗೋಚರಿಸಿತ್ತು, ಮಾತ್ರವೇ ಅಲ್ಲ, ಕೆಲವರಿಗೆ ಹಗಲಲ್ಲೂ ನಕ್ಷತ್ರಗಳು ಕಾಣಿಸತೊಡಗಿದ್ದವು!
ತಕ್ಷಣವೇ ಇದನ್ನು ಕೇಂದ್ರ ಸರಕಾರದ ಮತ್ತು ರಾಜ್ಯ ಸರಕಾರದ ಗಮನಕ್ಕೆ ತರಲಾಗಿ, ಎರಡೂ ಸರಕಾರಗಳು ಸಿಬಿಐ ಮತ್ತು ಸಿಐಡಿ ತನಿಖೆಗೆ ಆದೇಶ ನೀಡಿದ್ದು, ಒಂದಿಪ್ಪತ್ತು ಮೂವತ್ತು ವರ್ಷಗಳಲ್ಲೇ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಅದಕ್ಕೆ ಮುಂಚೆಯೇ ಬೊಗಳೂರು ಬ್ಯುರೋದ ಸಮಸ್ತರು ಹಲವರನ್ನು, ಕೆಲವರನ್ನು, ಅಳಿದವರನ್ನು, ಉಳಿದವರನ್ನು ಮಾತನಾಡಿಸಿ, ತನಿಖೆ ನಡೆಸಿ ವರದಿ ಸಲ್ಲಿಸಿದೆ. ಯಾಕ್ರೀಯಪಾ ಇಂಗಾತು? ಎಂದೆಲ್ಲಾ ಬೊಗಳೂರು ಬ್ಯುರೋ ಸಮಸಮಶೋಧಿಸಿದಾಗ ಗೊತ್ತಾಗಿಬಿಟ್ಟ ವಿಷಯವೆಂದರೆ:
ಹಲವರಿಗೆ ಚಂದ್ರಗ್ರಹಣವೇ ಕಾಣಿಸದಿರಲು ಮತ್ತು ಕೆಲವರಿಗೆ ಪೂರ್ಣ ಚಂದ್ರಗ್ರಹಣದೊಂದಿಗೆ ನಕ್ಷತ್ರಗಳೂ ಕಾಣಿಸಲು ಕಾರಣವೆಂದರೆ, ಅವರೆಲ್ಲರೂ ಅಂದು ಹೊಸ ವರ್ಷಾಚರಣೆಯ ಸಂಭ್ರಮದ ರಾತ್ರಿ ಪಾರ್ಟಿಯಲ್ಲಿ 'ತೇಲಾಡುತ್ತಿದ್ದುದು'! ತೇಲಾಡುತ್ತಲೇ ಮನೆಗೆ ಬಂದಾಗ ಅವರಿಗೆ ಮನೆಯಲ್ಲಿಯೂ ಪೂಜೆ ಆಗಿತ್ತು, ಇದರಿಂದಾಗಿ ಹಗಲಲ್ಲೂ ಅವರಿಗೆ ನಕ್ಷತ್ರಗಳು ಕಾಣಿಸುತ್ತಿದ್ದವು ಎಂಬುದನ್ನು ವರದ್ದಿಗಾರ ಅನ್ವೇಷಿ ಪತ್ತೆ ಹಚ್ಚಿದ್ದಾನೆ.
ರಾತೋರಾತ್ರಿ ತೆಲಂಗಾಣಕ್ಕೆ ಅಸ್ತು: ಸಂಚು ಬಯಲು
Friday, December 11, 2009
ಕೋಪನ್ ಹೇಗನ್ಗೆ ಓಪನ್ ಏಗೋಣ್? ಬೊಗಳೂರು ಘೋಷಣ್
Wednesday, December 09, 2009
ಬೊಗಳೂರಿನಿಂದ ಕೋಪನ್ ಹೇಗನ್ ಘೋಷಣೆ!
Tuesday, December 08, 2009
Barking News!: ಮಕ್ಕಳೆಲ್ಲಾ ನಿಗೂಢ ನಾಪತ್ತೆ!
Thursday, December 03, 2009
ಮಕ್ಕಳೇಕೆ ಕಾಣಿಸುತ್ತಿಲ್ಲ? ಬೊಗಳೂರು ಬ್ಯುರೋ ತನಿಖೆ!
Wednesday, December 02, 2009
ಬೇಕಾರಾಗಿದ್ದಾರೆ!
Thursday, November 26, 2009
ಪಾಕಿಸ್ತಾನವು ಪ್ರತಿ ಬಾರಿಯೂ ಸಾಕ್ಷ್ಯಾಧಾರ ಕೊಡಿ, ಸಾಕ್ಷ್ಯಾಧಾರ ಕೊಡಿ ಅಂತ ಕೇಳುತ್ತಿರುವಾಗ, ಕೊಡ್ತೀವಿ ಕೊಡ್ತೀವಿ ಅನ್ನುತ್ತಲೇ ರಾಶಿ ರಾಶಿ ಕಾಗದ ಪತ್ರಗಳನ್ನು ಟ್ರಕ್ಗಳಲ್ಲಿ ಪಾಕಿಸ್ತಾನಕ್ಕೆ ರವಾನಿಸುವ ಸರಕಾರವನ್ನು ನಿಭಾಯಿಸುವವರು ಬೇಕಾರಾಗಿದ್ದಾರೆ.
ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಉಗ್ರಗಾಮಿ ದಾಳಿಯನ್ನು ಇನ್ನಾದರೂ ಸಮರ್ಥವಾಗಿ ಎದುರಿಸುವಲ್ಲಿ ಪೊಲೀಸ್ ವ್ಯವಸ್ಥೆಯನ್ನು ಇನ್ನೂ ಆಧುನೀಕರಣಗೊಳಿಸಲು ಸಮಯವಿಲ್ಲದಿರುವುದರಿಂದ, ಇನ್ನಾದರೂ ಪೊಲೀಸರಿಗೆ ಬಲ ತುಂಬುವವರು ಬೇಕಾರಾಗಿದ್ದಾರೆ.
ಪಾಕಿಸ್ತಾನದೊಂದಿಗೆ ಶಾಂತಿ ಶಾಂತಿಯೇ ಮುಖ್ಯವಾಗಿರುವವರು ಮತ್ತು ಯಾವುದೇ ಕಾರಣಕ್ಕೂ ಪಾಕಿಸ್ತಾನವು ನೊಂದುಕೊಳ್ಳಬಾರದು. ಯಾಕೆಂದರೆ, ಅವರಲ್ಲಿಯೂ ಉಗ್ರಗಾಮಿಗಳ ದಾಳಿ ನಡೆಯುತ್ತಿದೆಯಲ್ಲ ಎಂಬ ಮನೋಭಾವವಿರುವವರು ದೇಶವಾಳಲು ಬೇಕಾರಾಗಿದ್ದಾರೆ.
ಪಾಕಿಸ್ತಾನವನ್ನು ನಡುಗಿಸುವ, ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ವ ರೀತಿಯಲ್ಲಿಯೂ ಒತ್ತಡ ಹೇರುವ ಅವಕಾಶಗಳನ್ನೆಲ್ಲಾ ಕೈಚೆಲ್ಲಿ, ಶಾಂತಿ ಮಂತ್ರ ಪಠಿಸುತ್ತಲೇ ಇರುವವರು ಬೇಕಾಗಿದ್ದಾರೆ.
ಅತ್ತ ಕಡೆಯಿಂದ ಚೀನಾ ಪಾಕಿಸ್ತಾನಕ್ಕೆ ಸಕಲ ರೀತಿಯಲ್ಲಿಯೂ ನೆರವು ನೀಡುತ್ತಾ, ಅರುಣಾಚಲ ಪ್ರದೇಶ ನನ್ನದು ಎಂದು ಹೇಳಿಕೊಳ್ಳುತ್ತಲೇ ಇದೆ. ಇನ್ನೊಂದೆಡೆಯಿಂದ, ಪಾಕಿಸ್ತಾನಕ್ಕೆ ಉಗ್ರರ ವಿರುದ್ಧ ಹೋರಾಡಲೆಂದು ಕೋಟಿ ಕೋಟಿ ನೆರವು ನೀಡುತ್ತಲೇ, ಭಾರತ ನನ್ನ ಪರಮಾಪ್ತ ರಾಷ್ಟ್ರ ಎಂದು ಹೇಳಿಕೊಳ್ಳುತ್ತಿರುವ ಚೀನಾ, ಇವುಗಳೊಂದಿಗೆ ಮೈತ್ರಿಯನ್ನು ಗಾಢವಾಗಿ ಬೆಸೆಯುವವರು ಬೇಕಾರಾಗಿದ್ದಾರೆ.
ದೇಶದಲ್ಲಿ ಪ್ರಜೆಗಳು ಬೆಲೆ ಏರಿಕೆಯಿಂದ ಕಂಗಾಲಾಗಿ, ಪ್ರವಾಹ, ಅತಿವೃಷ್ಟಿ-ಪ್ರವಾಹ, ಅನಾವೃಷ್ಟಿಯಿಂದ ತತ್ತರಿಸುತ್ತಿದ್ದರೂ, ನಮಗೆ ಬೇರೆ ದೇಶಗಳೊಂದಿಗಿನ ಸಂಬಂಧವೇ ಮುಖ್ಯ, ಅದಕ್ಕಿಂತಲೂ ಅಣು ಒಪ್ಪಂದ ಮುಖ್ಯ ಎನ್ನುತ್ತಾ, ದೇಶದ ಜನತೆಯ ಕಣ್ಣೀರೊರೆಸಬೇಕಾದವರು ಬೇಕಾರಾಗಿದ್ದಾರೆ.
ಭವಿಷ್ಯದಲ್ಲಿ ನಡೆಯುವ ಉಗ್ರರ ನೂರಾರು ದಾಳಿ ಪ್ರಕರಣಗಳಿಗೆ ಈಗಲೇ ವಿಷಾದಿಸ್ತೀವಿ ಮತ್ತು ಮುಂದೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ತೀವಿ ಅಂತ ಭರವಸೆಯನ್ನು ಈಗಲೇ ಕೊಡುವ ದೇಶವಾಳುವ ನಾಯಕರೂ ಬೇಕಾರಾಗಿದ್ದಾರೆ.
ಮುಖ್ಯ ಅರ್ಹತೆ: ಉಗ್ರಗಾಮಿಗಳೇನಾದರೂ ಇನ್ನು ಮುಂದೆ ಭಾರತದ ಮೇಲೆ ದಾಳಿ ಮಾಡಿದರೆ ಅವರಿಗೆಲ್ಲಾ ಬಾಳಾ ಠಾಕ್ರೆ ಮತ್ತು ಶಿವಸೇನೆಯ ವಿರುದ್ಧ ಏನಾದರೂ ಒದರುವಂತೆ ಉಪಾಯ ಮಾಡಿ ಮನವೊಲಿಸುವುದು. ಇದರಿಂದ ಶಿವಸೈನಿಕರೇ ಈ ಉಗ್ರರನ್ನು ಚೆನ್ನಾಗಿ ಚಚ್ಚಿ ಚಚ್ಚಿ ಮುಗಿಸಿಬಿಡಬಹುದು. ಇಲ್ಲವಾದರೆ, ಹಿಂದಿ, ಇಂಗ್ಲಿಷಿನಲ್ಲಿ ಪ್ರಮಾಣವಚನ ಸ್ವೀಕರಿಸುವಂತೆ/ಶಪಥ ಮಾಡುವಂತೆ/ಪಣ ತೊಡುವಂತೆ/ ಭಾಷೆ ಕೊಡುವಂತೆ ಉಗ್ರರನ್ನು ಪ್ರೇರೇಪಿಸುವುದು. ಆಗ ಶಿವಸೇನೆ ಮತ್ತು ಮಹಾರಾಷ್ಟ್ರ ನವ ನಿರ್ನಾಮ ಸೇನೆಗಳು ನಾ ಮುಂದು ತಾ ಮುಂದು ಅಂತ ಚಚ್ಚಲು ಹೊರಡುತ್ತವೆ. ಇಂತ ಚಾಕಚಕ್ಯತೆ ಉಳ್ಳವರು ಕೂಡ ಬೇಕಾರಾಗಿದ್ದಾರೆ.
(ಸೂಚನೆ: ನಾವು ಸರಿಯಾಗಿಯೇ ಬರೆದಿದ್ದರೂ ಬೇಕಾಗಿದ್ದಾರೆ ಮಧ್ಯೆ ಒಂದು ರಾ ಹೆಚ್ಚು ಸೇರಿಕೊಂಡಿದ್ದು ಹೇಗೆಂಬುದು ನಮಗೇ ಗೊತ್ತಿಲ್ಲ. ಈ ಬಗ್ಗೆ ತನಿಖೆಗೆ ಆಯೋಗವೊಂದನ್ನು ರಚಿಸಲಾಗಿದ್ದು, ಅದಕ್ಕೆ ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಈ ಆಯೋಗವು ಸುಮಾರು ೧೭ ವರ್ಷಗಳ ಬಳಿಕ ಎಲ್ಲರಿಗೂ ಗೊತ್ತಿರುವ ವರದಿಯನ್ನು ಸಲ್ಲಿಸಲಿದೆ.) Read more...
ಗಂಡಾಂತರ ಪದ ನಿಷೇಧಕ್ಕೆ ಪುರುಷರ ಆಗ್ರಹ
Thursday, November 19, 2009
ನರ್ಸರಿ ರೈಮ್ ಬೇಡ, ಸಿನಿಮಾ ಹಾಡು ಕಲಿಸಿ: ಮಕ್ಕಳ ಆಗ್ರಹ
Monday, November 16, 2009
ಸಂತ್ರಸ್ತ ಗ್ರಾಮಗಳ ಸ್ಥಳಾಂತರ: ಬೊಗಳೂರಲ್ಲಿ ಆತಂಕ
Tuesday, October 13, 2009
ನೋBell ಶಾಂತಿ ಪ್ರಶಸ್ತಿ ಒಬಾಮ ಅಲ್ಲ, ಒಸಾಮ!
Friday, October 09, 2009
ಬೊಗಳೆ: ಜಾನುವಾರುಗಳ ದರ್ಜೆಗೆ ತಶಿ ಶರೂರ್ ಸಮರ್ಥನೆ
Thursday, October 01, 2009
ಚಂದ್ರನಲ್ಲಿ ನೀರು: ಭೂಮಿಯಲ್ಲಿ ತಲ್ಲಣ!
Thursday, September 24, 2009
ಬೊಗಳೂರಿನ ಗಲ್ಲಿ ಗಲ್ಲಿಗಳ ಚರಂಡಿಯೆಲ್ಲಾ ಇದೀಗ ತುಂಬಿ ತುಳುಕಾಡುತ್ತಿದ್ದು, ಪ್ರವಾಹದ ಭೀತಿಯೂ ಉಂಟಾಗಿದೆ. ಬಹುಶಃ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆಯಾಗಿರುವುದು ಕೂಡ ಇದೇ ಕಾರಣಕ್ಕೆ ಎಂದು ಅಜ್ಞಾನಿಗಳು ಶಂಕಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ, ವರ್ಷಗಟ್ಟಲೆ ಸ್ನಾನ ಮಾಡದೇ ಇರುವವರೆಲ್ಲರೂ ಇದೀಗ ಸ್ನಾನ ಮಾಡಲು ಆರಂಭಿಸಿದ್ದಾರೆ ಎಂಬ ವರದಿಗಳು ರಾಜ್ಯದ ನಾನಾ ಕಡೆಗಳಿಂದ ಬರತೊಡಗಿವೆ.
ಚಂದ್ರನಲ್ಲಿ ಹೇಗಿದ್ದರೂ ಸಾಕಷ್ಟು ನೀರು ಇದೆಯಲ್ಲ, ಇನ್ನು ನಮಗೇತರ ಭಯ ಎಂದು ಬೊಗಳೂರಿನ ಪ್ರಜೆಯೊಬ್ಬರು ನೀರನ್ನೇ ಕುಡಿಯುತ್ತಾ, ನೀರಿನಲ್ಲೇ ಸ್ನಾನ ಮಾಡುತ್ತಾ, ನೀರನ್ನೇ ಹೊರಬಿಡುತ್ತಾ ಪ್ರಶ್ನಿಸಿದ್ದಾರೆ.
ಈ ವರದಿ ಪ್ರಕಟವಾಗತೊಡಗಿದಂತೆಯೇ, ದೇವಸ್ಥಾನದಲ್ಲಿ ಲೋಟೆಗಳಲ್ಲಿ ತೀರ್ಥ ಕೊಡಲು ಆರಂಭವಾಗಿರುವುದಾಗಿ ವರದಿಗಳು ತಿಳಿಸಿವೆ. ಮತ್ತೆ ಕೆಲವರು, ಚಂದ್ರನಲ್ಲಿ ನೀರಲ್ಲ, ಬೀರು ಲಭ್ಯವಾಗಿದೆ ಎಂದು ಅಪಾರ್ಥ ಮಾಡಿಕೊಂಡು, ಸಿಕ್ಕಾಪಟ್ಟೆ ಬೀರು ಕುಡಿದು ಕುಡಿದು ಸುಸ್ತಾಗಿ ಅಲ್ಲಲ್ಲಿ ಬಿದ್ದಿರುವ ವರದಿಗಳೂ ಬೊಗಳೂರು ಬ್ಯುರೋದ ಬಾಗಿಲಲ್ಲಿ ಬಂದು ಬೀಳತೊಡಗಿವೆ.
ಇನ್ನೊಬ್ಬ ನಾಗರಿಕರು ಹೇಳುವಂತೆ, UPAವಾಸ (©ಸುನಾಥ) ಸರಕಾರವಂತೂ ತಿನ್ನುವ ವಸ್ತುಗಳ ಬೆಲೆ ಬೇಕಾಬಿಟ್ಟಿಯಾಗಿ ಏರಿಸಿಬಿಟ್ಟಿದೆ. ಇನ್ನು ಬದುಕುವುದು ಹೇಗೆಂಬ ಚಿಂತೆ ಆವರಿಸಿಬಿಟ್ಟಿತ್ತು. ಇದೀಗ ನೀರು ಸಿಕ್ಕಿರುವುದರಿಂದ ನೀರನ್ನೇ ಸಾಕಷ್ಟು ಬಾರಿ ಕುಡಿದು ಬದುಕಬಹುದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಚಂದ್ರನಲ್ಲಿ ನೀರು ಪತ್ತೆಯಾಗಿರುವ ಸಂಭ್ರಮದ ಸಂಗತಿ ಕೇಳಿ, ಅಲ್ಲಲ್ಲಿ ಹಾಲಿನಲ್ಲಿ ನೀರಿನಂಶ ಹೆಚ್ಚಾಗಿರುವುದೂ ಕಂಡುಬಂದಿದೆ. ಇದು ಹಾಲಿನ ಸಾಂದ್ರತೆ ಪತ್ತೆ ಯಂತ್ರದಲ್ಲಿ ಶೇ.90ರಷ್ಟು ದಾಖಲಾಗಿದೆ ಎಂದು ಬೊಗಳೂರು ರದ್ದಿಗಾರರ ಮೂಲಗಳು ತಿಳಿಸಿವೆ.
ಈ ಮಧ್ಯೆ, ಕೊಳಚೆ ನೀರನ್ನು ಚೆನ್ನಾಗಿ ಸೋಪು ಹಾಕಿ ತೊಳೆದು ಶುದ್ಧವಾಗಿ ಕಾಣಿಸುವಂತೆ ಮಾಡಿ ಬಾಟಲಿಯಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಪೂರೈಸುವ ಕಂಪನಿಗಳು ಅಂಗಾತ ನೆಲಕಚ್ಚತೊಡಗಿವೆ ಎಂದು ಮೂಲಗಳು ವರದ್ದಿ ಸುರಿದಿವೆ. ತೀವ್ರ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ, ಈ ಕಂಪನಿಗಳು ನೀರನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿರುವ ವರದ್ದಿಗಳು ಅಲ್ಲಲ್ಲಿಂದ ಬೊಗಳೂರು ಬ್ಯುರೋಗೆ ಬಂದು ತಲುಪತೊಡಗಿವೆ.
ಇಷ್ಟು ಮಾತ್ರವಲ್ಲದೆ, ಅಮೆರಿಕದಲ್ಲಿ ಟಾಯ್ಲೆಟ್ ಪೇಪರ್ ಉದ್ಯಮವೂ ಮಕಾಡೆ ಮಲಗಿದ್ದು, ಎಲ್ಲರೂ ಇದೀಗ ನೀರು ಉಪಯೋಗಿಸಲಾರಂಭಿಸಿರುವುದಾಗಿ ನಮ್ಮ ಬಾತ್ಮೀದಾರರಾದ ಬರಾಕ್ ಹೋಗಾಕ್ ಒಬಾಮ ಅವರು ಬೊಗಳೂರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಇನ್ನೊಂದೆಡೆ, ಚಂದ್ರನಲ್ಲಿ ನೀರು ಪತ್ತೆ ಮಾಡಿರುವುದರ ಹಿಂದೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುವ ಸಂಚು ಇದೆ ಎಂದು ಕಾನ್guess ವಕ್ತಾರರು ಅವಸರದ ಪತ್ರಿಕಾಗೋಷ್ಠಿ ಕರೆದು ದೂರಿದ್ದಾರೆ. ರಮ್ಜಾನ್ ಮಾಸ ಮುಗಿದ ತಕ್ಷಣವೇ ಆ ಚಂದ್ರನಲ್ಲಿ ನೀರು ಇದೆ ಎಂದೆಲ್ಲಾ ವರದ್ದಿ ಮಾಡಿರುವುದು, ಚಂದ್ರನನ್ನು ಮುಂದೆಂದೂ ಕಾಣಿಸದಂತೆ ಮಾಡುವ ಸಂಚು ಎಂದು ಅವರು ದೂರಿದ್ದಾರೆ. ಮಾತ್ರವಲ್ಲದೆ, ಚಂದ್ರನ ಮೇಲೆ ನೀರು ಇರುವಿಕೆಯನ್ನು ಪತ್ತೆ ಹಚ್ಚಿದ ಇಸ್ರೋ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಚಂದ್ರನಲ್ಲಿರುವ ನೀರಿನಲ್ಲಿ ಅಲ್ಪಸಂಖ್ಯಾತರಿಗೆ, ದಲಿತರಿಗೆ ಮೀಸಲಾತಿ ಇರಬೇಕು. ಒಳಮೀಸಲಾತಿಯನ್ನೂ ನೀಡಬೇಕು ಎಂದು ಒತ್ತಾಯಿಸತೊಡಗಿದ್ದಾರೆ.
ಇಷ್ಟೆಲ್ಲದರ ನಡುವೆ, ಚಂದ್ರನಿಗೊಂದು ಕೊಳವೆ ಸಿಕ್ಕಿಸಿ, ಅಲ್ಲಿಂದ ನೀರು ತರುವ ಅಥವಾ ಕದಿಯುವ ಹುನ್ನಾರವೂ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. Read more...
ಬೆಲೆ ಏರಿಕೆಗೆ 'ಆಟೋಮ್ಯಾಟಿಕ್' ಪ್ರತಿಭಟನೆ
Tuesday, September 22, 2009
ತಿರುಪತಿ ಲಡ್ಡು ಮಾತ್ರವಲ್ಲ, ನಾಮಕ್ಕೂ ಪೇಟೆಂಟ್!
Thursday, September 17, 2009
Blame-Game: ನಿಮಗೆ ಬ್ಲೇಮ್, ನಮಗೆ ಗೇಮ್ ಎಂದ ಪಾಕ್!
Monday, September 14, 2009
ಮುಂಬೈ ಮೇಲೆ ನಡೆದ ದಾಳಿಯ ವರ್ಷಾಚರಣೆ ಸಮೀಪಿಸುತ್ತಿರುವಂತೆಯೇ ಉಭಯ ರಾಷ್ಟ್ರಗಳ ನಡುವೆ ಸೌಹಾರ್ದತೆ ಏರ್ಪಡಲು ಹೊಸ ಹೊಸ ಸಾಧ್ಯತೆಗಳನ್ನು ಪರದಾಡಿ ಪರದಾಡಿ ಹುಡುಕಲಾಗುತ್ತಿದ್ದು, ಕಳೆದ ಒಂದು ವರ್ಷದಿಂದ "ಉಗ್ರರ ವಿರುದ್ಧ ಕ್ರಮ ಕೈಗೊಳ್ಳೀssssssssssss, ಇಲ್ಲವಾದರೆ ನಾವೇ ಕ್ರಮ ಕೈಗೊಳ್ಳುತ್ತೇವೆ" ಎಂದು ಪದೇ ಪದೇ ಹೇಳುತ್ತಿದ್ದ ಭಾರತ ಸರಕಾರವು ಪಾತಕಿಸ್ತಾನದ ಮೇಲೆ Blame ಮಾತ್ರ ಮಾಡಿ, Game ಆಡಲು ಅದಕ್ಕೆ ಬಿಟ್ಟಿರುವುದಾಗಿ ಮೂಲಗಳು ವರದ್ದಿ ಮಾಡಿವೆ.
"ನೀವು ಬ್ಲೇಮ್ ಮಾಡಿ, ನಾವು ಗೇಮ್ ಆಡುತ್ತೇವೆ" ಎಂದು ಇತ್ತೀಚೆಗೆ ಪಾತಕಿಸ್ತಾನದಿಂದ ಭಾರತದ ನಿಧಾನಮಂತ್ರಿ ಸೋನಿಯಾ ಸಿಂಗ್.... ಅಲ್ಲಲ್ಲ ಮನಮೋಹಕ ಸಿಂಗ್ ಅವರಿಗೆ ಪಾಕಿಸ್ತಾನದ ಸರಕಾರದ ಮುಖ್ಯಸ್ಥರೂ ಆಗಿರುವ ಐಎಸ್ಐ ಮುಖ್ಯಸ್ಥರು ಪತ್ರ ಬರೆದಿರುವುದಾಗಿ ಮೂಲಗಳು ಬೊಗಳೆ-ರಗಳೆಗೆ ತಿಳಿಸಿಲ್ಲ.
ಮುಂಬೈ ಮೇಲೆ ನಮ್ಮವರು ದಾಳಿ ಮಾಡಿ ಒಂದು ವರ್ಷವಾಗ್ತಾ ಬಂದ್ರೂ ನಿಮ್ ಕೈಯಲ್ಲಿ ಏನೂ ಮಾಡಲಾಗಿಲ್ಲ ಎಂಬ ಕುಹಕ ನಗೆಯೊಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಮೂಲಿ ಪ್ರಕ್ರಿಯೆಯಾಗಿಬಿಟ್ಟಿರುವ, ಗಡಿ ನಿಯಂತ್ರಣ ರೇಖೆ ದಾಟಿ ನುಸುಳುವ ಪ್ರಕ್ರಿಯೆಯ ಮೂಲಕ ಭಾರತ ಪ್ರವೇಶಿಸಿರುವುದಾಗಿ ಬೊ.ರ. ಬ್ಯುರೋದ ಮಂದಿ ಕದ್ದು ಮುಚ್ಚಿ ವರದ್ದಿ ತಂದು ಹಾಕಿದ್ದಾರೆ.
(ಕೆಲವಾರು ದಿನಗಳಿಂದ ಬೊಗಳೂರು ಬ್ಯುರೋ ಸಿಕ್ಕಾಪಟ್ಟೆ ಧೂಳು ತಿನ್ನುತ್ತಿದ್ದ ಕಾರಣ ಚಾ-ತರಿಸಿಕೊಂಡು ಬಳಿಕ ಧೂಳೊರೆಸಿ ವಾಪಸ್ ಮರಳಲಾಗಿದೆ. ಆದರೆ, ಈ ಸಮಯದಲ್ಲಿ ನಮ್ಮ ಬೊಗಳೆ-ರಗಳೆ ಪತ್ರಿಕೆ ಲಭಿಸದ ದಾರವಿಲ್ಲದ ಚಂದಾರಹಿತರು, ಅಡ್ಜಸ್ಟ್ ಮಾಡಿಕೊಂಡು, ಮುಂದಿನ ತಿಂಗಳ ಬಿಲ್ನಲ್ಲಿ ಸೇರಿಸಿ ನಮಗೆ ಪಾವತಿಸಲು ಕೋರಲಾಗಿದೆ.) Read more...

