Tuesday, January 24, 2012

ಟ್ರಾಫಿಕ್ಕು ಕಿರಿಕ್ಕು: ಮಂತ್ರಿಗಳನ್ನೇ ಬೊಗಳೂರಿನಿಂದ ಹೊರಹಾಕಿ!

[ಬೊಗಳೂರು ಟ್ರಾಫಿಕ್ ಕಿರಿಕ್ ಬ್ಯುರೋದಿಂದ]
ಬೊಗಳೂರು, ಜ.24- ಬೊಗಳೂರಿನಲ್ಲಾಗುತ್ತಿರುವ ಟ್ರಾಫಿಕ್ಕಿನ ಜಾಮ್‌ಗೆ ಬೊಗಳೂರು ಬೀಜಪಿ ಶಾಸಕರು ಶಾಪಿಂಗು ಮಾಲುಗಳು ಹಾಗೂ ಅಪಾರ್ಟುಮೆಂಟುಗಳೇ ಕಾರಣ ಎಂಬ ಒಕ್ಕೊರಲಿನ ಕೂಗಾಟ ಮಾಡಿದ್ದರಿಂದ ಆಘಾತಗೊಂಡು ಬೆಚ್ಚಿ ಬಿದ್ದಿರುವ ಬೊಗಳೂರು ಬ್ಯುರೋ, ಇದರ ಹಿಂದಿನ ಅಸತ್ಯವೇನು ಮತ್ತು ಪರಿಹಾರಗಳೇನು ಎಂಬ ಕುರಿತು ತೀವ್ರ ತಪಾಸಣೆಗೆ ತೊಡಗಿಕೊಂಡುಬಿಟ್ಟು ನಿದ್ದೆಗೆ ಜಾರಿತು.

ಈ ನಿದ್ರೆಯ ಫಲಿತಾಂಶವೇ, ಹೊಸದೊಂದು ಸಂಚೋದನೆ.  ಟ್ರಾಫಿಕ್ಕು ಕಿರಿಕಿರಿ ಕಡಿಮೆಯಾಗಬೇಕಿದ್ದರೆ, ಏನು ಮಾಡಬೇಕೆಂಬ ಪ್ರಶ್ನೆಗೆ ಉತ್ತರ ಕೆದಕಿ ತತ್ತರಿಸುತ್ತಿರುವಾಗ ಹೊಳೆದು ಬಂದ ಅಂಶವೆಂದರೆ, ಈ ಮಂತ್ರಿಗಳು, ಶಾಸಕರು ಮುಂತಾದ ಕೆಂಪು ಗೂಟದ ಕಾರಿನವರನ್ನೇ ಬೊಗಳೂರಿನಿಂದ ಹೊರಹಾಕಬೇಕು.

ಮಂತ್ರಿ ಬರುತ್ತಾರೆಂದರೆ ನೂರಾರು ವಾಹನಗಳ ಸಾಲು, ಹಿಟ್ ಆಂಡ್ ರನ್ ಕೇಸು ಆಗುತ್ತೆ, ಟ್ರಾಫಿಕ್ಕಿನಲ್ಲಿ ಸಿಲುಕಿಕೊಂಡು ಬ್ರೆಡ್ಡಿಗೆ ಜಾಮು ಹಾಕಿಕೊಂಡು ತಿನ್ನುತ್ತಾ ಕೂರಬೇಕಾಗುತ್ತದೆ. ಅದೇನೋ ರಾಜಕೀಯ ಸಮಾವೇಶ ಮಾಡಿದರೆ ದಿನಗಟ್ಟಲೆ ಜಾಮು ಹಾಕಿಕೊಂಡಿರಬೇಕಾಗುತ್ತದೆ. ಹೀಗಾಗಿ ಇಡೀ ನಗರದ ಸಂಚಾರ ನಿಧಾನಕ್ಕೆ ಕಾರಣವಾಗುವ ವಿಧಾನಸೌಧವನ್ನೇ ಬೊಗಳೂರಿನಿಂದ ಹೊರಗೆ ತಂದುಬಿಟ್ಟರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ ಎಂಬ ಅಸತ್ಯಾನ್ವೇಷಣೆಯೊಂದು ಎಲ್ಲೆಡೆ ಪ್ರಕಟವಾಗಿ ಪಬ್ಲಿಷ್ ಆಗಿ ಚರ್ಚೆಗೆ ಕಾರಣವಾಗಿ, ವಿಧಾನಸೌಧದ ಮೆಟ್ಟಿಲೇರುವ ಸಾಧ್ಯತೆಗಳೂ ಇವೆ.

Wednesday, January 18, 2012

ಆನೆಗೇ ಬಕೀಟು: ಪರ್ದಾ ನಿಷೇಧಕ್ಕೆ ಉ.ಪ್ರ.ಸರ್ಕಾರ ಚಿಂತನೆ

[ಬೊಗಳೂರು ಆನೆಗೆ ಬಕೀಟು ಹಿಡಿಯುವ ಬ್ಯುರೋದಿಂದ]
ಬೊಗಳೂರು, ಜ.18- ತತ್ತರ ಪ್ರದೇಶದಲ್ಲಿ ಪರ್ದಾ ನಿಷೇಧ ಹೇರಲಾಗಿದೆ. ದಲಿತರ ಅಧಿನಾಯಕಿ ಮಾಯಾವತಿ ಇರುವ ನಾಡಿನಲ್ಲಿ, ಮುಸಲ್ಮಾನರ ಏಳಿಗೆಗಾಗಿ ಹಗಲಿರುಳೂ ಶ್ರಮಿಸುತ್ತಿರುವ ಮುಲಾಮು ಸಿಂಗ್ ಕೂಡ ಗರ್ಜಿಸುವ ಈ ನಾಡಿನಲ್ಲಿ ಪರ್ದಾಕ್ಕೆ ಅಷ್ಟು ಸುಲಭವಾಗಿ ಮತ್ತು ಧೈರ್ಯದಿಂದ ನಿಷೇಧ ಹೇರಿದ್ದು ಹೇಗೆ ಎಂಬುದು ಎಲ್ಲರಿಗೂ ಆತಂಕಕ್ಕೂ, ಅಚ್ಚರಿಗೂ, ಕುತೂಹಲಕ್ಕೂ ಕಾರಣವಾಗಿತ್ತು.

ಈ ಕಾರಣಕ್ಕಾಗಿ ಬೊಗಳೂರು ಏಕಸದಸ್ಯ ಬ್ಯುರೋದ ಸರ್ವ ಸದಸ್ಯರೂ ವಿಶೇಷ ಪ್ರವಾಸಕ್ಕೆಂದು ಕೇಂದ್ರ ಸರಕಾರದಿಂದ ಅನುದಾನ ಪಡೆದುಕೊಂಡು ಅಲ್ಲಿಗೆ ಹೋಗಿ ವರದ್ದಿ ತರಲು ತೆರಳಿತು.

ಅಲ್ಲಿ ಹೋಗಿ ನೋಡಲೆನಿತು ಅಚ್ಚರಿ! ಎಲ್ಲೆಲ್ಲೂ ಆನೆಗಳು! ಮತ್ತು ಆನೆ ನಡೆದದ್ದೇ ದಾರಿ ಎಂದು ತಮಗೆ ಮನಬಂದಂತೆ ನಿಯಮಾವಳಿಗಳನ್ನು ರೂಪಿಸುತ್ತಾ, ತಾವು ಮಾಡಿದ್ದೇ ಸರಿ ಎಂಬ ಧೋರಣೆ ತಳೆಯುವ ಈ ಆನೆಗಳ ಹಿಂದೆಯೂ ಮುಂದೆಯೂ ಬಕೀಟು ಹಿಡಿಯುವವರೇ ಹೆಚ್ಚಾಗಿದ್ದಾರೆ!

ಇಂಥ ಒಂದು ಅಚ್ಚರಿಗಳ ನಡುವೆಯೇ, ನಮ್ಮ ವರದ್ದಿಗಾರರು ಬಕೀಟು ಹಿಡಿದದ್ದು ಲದ್ದಿಗೋ ಅಥವಾ ವರದ್ದಿಗೋ ಎಂಬ ಅನುಮಾನ ಬಾರದಿರಲಿ ಎಂದು ಸೊಂಪಾದಕರು ಈಗಾಗಲೇ ಸೂಚಿಸಿರುವ ಹಿನ್ನೆಲೆಯಲ್ಲಿ, ಆನೆಯ ಹಿಂದೆ ಹೋಗುವ ಬದಲು, ಆನೆಗಳೆಲ್ಲವೂ ಪರದೆಯೊಳಗೆ ಅವಿತಿರುವುದರ ಹಿಂದಿನ ರಹಸ್ಯದ ಹಿಂದೆ ಹೋಗಲು ತೀರ್ಮಾನಿಸಲಾಯಿತು.

ನಮ್ಮ ಅಸತ್ಯದ ಅನ್ವೇಷಣೆಯ ಬ್ಯುರೋದವರು ಹೋದಲ್ಲಿ, ಬಂದಲ್ಲಿ, ಕಾಲುಗಳಡಿ ಸಿಲುಕುವ ಈ ಬೃಹತ್ ಗಾತ್ರದ ಆನೆಗಳು ಯಾರ ಕಣ್ಣಿಗೂ ಬೀಳಬಾರದು ಎಂದು ಚುನಾವಣಾ ಆಯೋಗವು ಕಟ್ಟು ನಿಟ್ಟಿನ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ಮಾಯಾಂಗನೆ ಸರಕಾರವು, ಬಡಪಾಯಿಗಳ, ದಲಿತರ ಕಲ್ಯಾಣಕ್ಕಾಗಿ ಮೀಸಲಾಗಿಟ್ಟ, ರಾಜ್ಯದ ಪ್ರಜೆಗಳ ತೆರಿಗೆ ಹಣದಲ್ಲಿ ಶತಸಹಸ್ರ ಕೋಟಿ ವ್ಯಯಿಸಿ ನಿರ್ಮಿಸಿದ ಆನೆಗಳನ್ನು ಮುಚ್ಚಲು ಮತ್ತೆ ನೂರು ಕೋಟಿ ವ್ಯಯಿಸುವ ಸಂಕಷ್ಟವನ್ನು ಎದುರಿಸಿತ್ತು.

ಹೀಗಾಗಿ, ಉತ್ತರ ಪ್ರದೇಶದಲ್ಲಿ ಚುನಾವಣೆಗಳು ಮುಗಿಯುವವರೆಗಾದರೂ ಪರ್ದಾ ನಿಷೇಧ ಕಾನೂನು ಜಾರಿಗೊಳಿಸಿದರೆ, ಆನೆಗಳಿಗೆ ಮುಸುಕು ಹಾಕುವ ವ್ಯರ್ಥ ಕಸರತ್ತಿನಿಂದ ಪಾರಾಗಬಹುದು ಎಂದು ಸರಕಾರ ಆಲೋಚಿಸಿದೆ ಎಂದು ನಮ್ಮ ಬಾತು-ಮೀದಾರರು ವರದ್ದಿ ಮಾಡಿದ್ದಾರೆ.

Thursday, January 05, 2012

ಬೊಗಳೆ ಬ್ರೇಕಿಂಗ್: ಹ್ಯೂಮನ್ ಆಂಟಿಗಳ ಟ್ರಾಫಿಕ್ ಕಿಂಗ್


(ಬೊಗಳೂರು ಆಂಟಿ ಟ್ರಾಫಿಕ್ ಕಿಂಗ್ ಬ್ಯುರೋದಿಂದ)
ಬೊಗಳೂರು, ಜ.1- ದೇಶಾದ್ಯಂತ ಆಂಟಿ ಹ್ಯೂಮನ್‌ಗಳ ಟ್ರಾಫಿಕಿಂಗು ಹೆಚ್ಚಾಗುತ್ತಿದೆ ಅಂತ ವರದ್ದಿ ಓದಿದಾಕ್ಷಣ, ಕಳೆದ ವರ್ಷದಿಂದೀಚೆಗೆ ಗಡದ್ದಾಗಿ ನಿದ್ದೆ ಹೊಡೀತಿದ್ದ ಬೊಗಳೆ ರಗಳೆ ಬ್ಯುರೋ ಎಚ್ಚೆತ್ತುಕೊಂಡಿದೆ. ಆಂಟಿ ಹ್ಯೂಮನ್ ಹೆಸರು ಹೇಳಿದಾಕ್ಷಣ ಮಾವನ ಸಂಪನ್ಮೂಲ ಸಚಿವರಾಗಿದ್ದ ಕಪಿಕಪಿಲ ಸಿಬ್ಬಲ್ ಅವರ ಹೆಸರು ನೆನಪಾಗಿ, ಬೊಗಳೂರೆಂಬ ಅಂತರಜಾಲಾಡುವ ಪತ್ರಿಕೆಯ ಎಲ್ಲ ಐಟಂಗಳಿಗೆ ಕಡಿವಾಣ ಹಾಕುತ್ತಾರೆಂಬ ಕಾರಣಕ್ಕೆ ಬೆಚ್ಚಿ, ಕೆಳಗೆ ಬಿದ್ದ ಕಾರಣದಿಂದಾಗಿ ಕಳೆದ ವರ್ಷ ಆರಂಭಿಸಿದ ನಿದ್ರೆ ಜರ್ರನೇ ಇಳಿದು, ಈ ವರ್ಷ ಎಚ್ಚರವಾಗಿತ್ತು. ಈ ಸಂದರ್ಭದಲ್ಲಿ ಬೊಗಳೂರು ಬ್ಯುರೋ, ಸದ್ದು ಗದ್ದಲವಿಲ್ಲದೆ ಹೊಸ ವರ್ಷಾಚರಣೆ ಆರಂಭಿಸಿರುವುದಾಗಿ ತಿಳಿದುಬಂದಿದೆಯಾದರೂ, ಈಗಿನ ಸುದ್ದಿಯ ಮೇಲೆ ಗಮನ ಹರಿಸಲು ಆರಂಭಿಸಿದೆ.

ಸಿಬಿಐ ಎಂಬ ಯುಪಿಎ ಸರಕಾರದ ಅಧೀನದಲ್ಲಿ 'ಸರ್ವತಂತ್ರ ಸ್ವತಂತ್ರ'ವಾಗಿ ಕಾರ್ಯಾಚರಿಸುತ್ತಿರುವ ತನಿಖಾ ಸಂಸ್ಥೆಯು, ಹ್ಯೂಮನ್ ಆಂಟಿಗಳನ್ನು ಟ್ರಾಫಿಕ್ ಮಾಡುವ ಘಟಕವನ್ನೇ ಸ್ಥಾಪಿಸಿರುವುದು ಸ್ವಲ್ಪ ಕುತೂಹಲಕ್ಕೆ ಕಾರಣವಾದ ಕಾರಣ, ನಮ್ಮ ಏಕ ಸದಸ್ಯ ಬ್ಯುರೋದ ಎಲ್ಲಾ ಸಿಬ್ಬಂದಿಗಳೂ ಅಲ್ಲಿಗೆ ಧಾವಿಸಿ ಈ ವರದ್ದಿ ತಂದು ಸುರುವಿದ್ದಾರೆ.

ಇದರ ಪ್ರಕಾರ, ದೇಶಾದ್ಯಂತ ಆಂಟಿಗಳ ಟ್ರಾಫಿಕಿಂಗ್ ಹೆಚ್ಚಾಗುತ್ತಿದೆಯಂತೆ. ಇದಕ್ಕಾಗಿ ಈ ಆಂಟಿಗಳಿಗಾಗಿಯೇ ಟ್ರಾಫಿಕ್ ಯುನಿಟ್ ಒಂದನ್ನು ಸ್ಥಾಪಿಸಲು ಸಿಬಿಐ ನಿರ್ಧರಿಸಿದೆ ಎಂದು ನಮ್ಮ ಬಾತ್‌ಬಾತ್ಮೀದಾರರು ತಿಳಿಸಿದ್ದಾರೆ. ಆದರೂ, ಇದು ಆಂಟಿ ಹ್ಯೂಮನ್‌ಗಳ ಟ್ರಾಫಿಕಿಂಗ್ ಸುಗಮಗೊಳಿಸಲು ರಚಿಸಿದ ಘಟಕವೇ? ಅಥವಾ ಹ್ಯೂಮನ್ ಆಂಟಿಗಳ ಟ್ರಾಫಿಕಿಂಗ್ ಸರಳವಾಗಿಸುವ ಘಟಕವೇ, ಇಲ್ಲಾಂದ್ರೆ, ಹ್ಯೂಮನ್‌ಗಳಿಗೆ ವಿರುದ್ಧವಾಗಿ (ಆಂಟಿಬಯೋಟಿಕ್ ಮಾದರಿಯಲ್ಲಿ) ರಚಿಸಲಾದ ಘಟಕವೇ ಎಂಬುದರ ಬಗ್ಗೆ ಬೊಗಳೂರು ಪಂಡಿತರೆಲ್ಲರೂ ತಲೆ ಕೆರೆದುಕೊಳ್ಳಲಾರಂಭಿಸಿದ್ದಾರೆ. ಅಲ್ಲದೆ, ಇದು ಆಂಟಿಗಳನ್ನು ಟ್ರಾಫಿಕ್ ಮಾಡುವ ಟ್ರಾಫಿಕ್ ಕಿಂಗ್ ಒಬ್ಬಾತನನ್ನು ನೇಮಿಸಿಕೊಳ್ಳಲು ನಡೆಸಿದ ಹುನ್ನಾರವೇ ಎಂಬುದೂ ಬಟಾಬಯಲಾಗಬೇಕಿದೆ.

ಈ ಮಧ್ಯೆ, ಕೇಂದ್ರೀಯ ತನಿಖಾ ಮಂಡಳಿಯೇ ಈ ಘಟಕವನ್ನು ಸ್ಥಾಪಿಸಿರುವುದರಿಂದ, ಈ ಘಟಕ ಸ್ಥಾಪನೆಯ ಉದ್ದೇಶದ ಬಗ್ಗೆಯೇ ತನಿಖೆ ನಡೆಸಲು ಸಿಬಿಐ ಲೋಕಪಾಲವೊಂದನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಆದರೂ, ಟ್ರಾಫಿಕ್ ಕಿಂಗು ಮಾಡುವ ಕುರಿತು ಯಾರೇ ದೂರು ನೀಡಿದರೂ, ಅವರಿಗೆ 2 ಲಕ್ಷ ರೂಪಾಯಿ ಬಹುಮಾನ ಕೊಡಿಸುವ ಭರವಸೆ ನೀಡಿರುವುದರಿಂದ, ಈ ತನಿಖೆಯನ್ನು ನಡೆಸದಿರಲು ಬೊಗಳೂರು ಬ್ಯುರೋ ನಿರ್ಧರಿಸಿದೆ.

Wednesday, January 04, 2012

ಬೊಗಳೆ ಬ್ಯುರೋ ಏನಾಯ್ತು?

ಕಳೆದ ವರ್ಷ ಕಣ್ಣು ಮುಚ್ಚಿಕೊಂಡಿದ್ದ ಬೊಗಳೂರು ಬ್ಯುರೋ, ಈ ವರ್ಷ ಕಾಣಿಸ್ತಾ ಇಲ್ಲವಲ್ಲಾ ಅಂತ ಖುಷಿಯೇ?
ಕಾದು ನೋಡಿ, ಗುರುವಾರ ಮತ್ತೊಂದು ಬ್ರೇಕ್-ಕಿಂಗ್ ನ್ಯೂಸ್‌ನೊಂದಿಗೆ ಬರ್ತಾ ಇದೆ...
ಆಂಟಿಗಳ ಬಗ್ಗೆ...

Friday, December 02, 2011

ಚಿಲ್ಲರೆ ಕ್ಷೇತ್ರಕ್ಕೆ ವಿದೇಶೀ ಹೂಡಿಕೆ: ಚಿಲ್ಲರೆ ಕೊಡದ ಕಂಡಕ್ಟರುಗಳು!


(ಬೊಗಳೂರು ಚಿಲ್ಲರೆ ಬ್ಯುರೋದಿಂದ)
ಬೊಗಳೂರು, ಡಿ.2- ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶೀ ನೇರ ಹೂಡಿಕೆಗೆ ಕೇಂದ್ರ ಸರಕಾರವು ಅನುಮತಿ ನೀಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಚಿಲ್ಲರೆಯ ಕೊರತೆ ಕಾಣತೊಡಗಿರುವುದು ಈಗಷ್ಟೇ ಬೊಗಳೆ ರಗಳೆ ಬ್ಯುರೋದ ಅನುಭವಕ್ಕೆ ಬಂದಿದೆ.

ಕಳೆದ ಕೆಲವು ದಿನಗಳಿಂದ ಬೊಗಳೂರಿನ ಬಸ್ಸುಗಳಲ್ಲಿ ಓಡಾಡಿ ಅನುಭವವಿದ್ದ ಏಕ ಸದಸ್ಯ ಬ್ಯುರೋದ ಎಲ್ಲ ಸಿಬ್ಬಂದಿಗಳು, ಚೀಟಿಯನ್ನು ಚುಚ್ಚಿ ತೂತು ಕೊರೆದು ವಿತರಿಸುವ ಕಂಟ್ರಾಕ್ಟರಿಗೆ ನೋಟು ನೀಡಿ ಚಿಲ್ಲರೆ ಕೇಳಿದರು. ಏನಾಶ್ಚರ್ಯ! ಈ ಕಂಟ್ರಾಕ್ಟರರ ಬಾಯಲ್ಲಿ ಒಂದೇ ಒಂದು ಶಬ್ದವಿಲ್ಲ, ಬದಲಾಗಿ ಚೀಟಿಯ ಹಿಂದುಗಡೆ 1 ಅಂತ ಗೀಚಿ ವಾಪಸ್ ಕೊಟ್ಟಿದ್ದರು.

ಇದರ ಹಿಂದಿನ ಮರ್ಮ ಹುಡುಕಿದಾಗ ನಮಗೆ ತಿಳಿದದ್ದು ಇಷ್ಟು. ದೇಶದಲ್ಲಿ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶೀ ನೇರ ಹೂಡಿಕೆಗೆ ಕೇಂದ್ರದ ಬೆಲೆ ಏರಿಕೆ ಸರಕಾರವು ಅನುಮತಿ ನೀಡಲು ನಿರ್ಧರಿಸಿರುವುದರಿಂದ ಎಲ್ಲ ಚಿಲ್ಲರೆಗಳಿಗೂ ಬೇಡಿಕೆ ಹೆಚ್ಚಾಗಿದೆಯಂತೆ. ಹೀಗಾಗಿ ಚಿಲ್ಲರೆಯನ್ನೇ ಬಂಡವಾಳವಾಗಿಸಿಕೊಳ್ಳುವ ಈ ಬಸ್ ಕಂಟ್ರಾಕ್ಟರುಗಳು, ಈ ಚಿಲ್ಲರೆಗಳನ್ನೆಲ್ಲಾ ಒಳಗೆ ಹಾಕಿಕೊಳ್ಳುವ ನಿಟ್ಟಿನಲ್ಲಿ ಇಂಥದ್ದೊಂದು ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದಾರೆ ಎಂಬುದನ್ನು ಬೊಗಳೆ ರಗಳೆಯ ಅನ್ವೇಷಕರು ಕಂಡುಕೊಂಡಿದ್ದಾರೆ.

ಈ ತಂತ್ರಗಾರಿಕೆಯ ಪ್ರಕಾರ, ಹಣ ಕೇಳಿ ಪಡೆದುಕೊಂಡ ಚೀಟಿಯ ಹಿಂದುಗಡೆ 1 ಅಥವಾ 2 ಅಂತೆಲ್ಲಾ ಗೀಚಿ ಬರೆಯುವುದು, ರಶ್ ಇರುವ ಸಂದರ್ಭದಲ್ಲೆಲ್ಲಾ ಪ್ರಯಾಣಿಕರು ಇಳಿಯುವಾಗ ಅವರು ಇರುವಲ್ಲಿಂದ ಮತ್ತೊಂದು ಬಾಗಿಲಿನ ಬಳಿ ನಿಂತುಕೊಂಡು ರೈಟ್ ರೈಟ್ (ಈ ನತದೃಷ್ಟ ಪ್ರಯಾಣಿಕನ ಕಡೆ ಬೆನ್ನು ಹಾಕಿ, ಅಂದರೆ ತಿರುಗಿಯೂ ನೋಡದೆ) ಹೇಳುತ್ತಾ ಇರುವುದು .... ಇದರಿಂದಾಗಿ ಚಿಲ್ಲರೆಗಳೆಲ್ಲವೂ ಚರ್ಮದ ಚೀಲದೊಳಗೆಯೇ ಭದ್ರವಾಗಿ ಕುಳಿತಿರುತ್ತವೆ.

ಎಲ್ಲಾದರೂ ಅಪ್ಪಿ ತಪ್ಪಿ ಪ್ರಯಾಣಿಕರು ಚಿಲ್ಲರೆ ವಾಪಸ್ ಕೇಳಿಯೇ ಬಿಟ್ಟರೋ... ಅವರನ್ನು ಚಿಲ್ಲರೆಯಂತೆಯೇ ನೋಡಲಾಗುತ್ತದೆಯಾದರೂ, ಬಸ್ ಈ ಕಂಡಕ್ಟರುಗಳ ಲಾಭದ ಪ್ರಮಾಣವು ಹೆಚ್ಚಾಗುತ್ತದೆ! ಹೇಗೆ ಗೊತ್ತೇ? ಚಿಲ್ಲರೆ ಕೊಡುತ್ತೇನೆ ಎಂಬ ನೆಪದಲ್ಲಿ, ಎಷ್ಟು ಬರೆದಿದ್ದು ಎಂಬುದನ್ನು ನೋಡಲೆಂದು, ಅವರಿಂದ ಪ್ರಯಾಣದ ಚೀಟಿಯನ್ನು ಕಿತ್ತುಕೊಳ್ಳುವುದು; ಒಂದೋ ಎರಡೋ ಚಿಲ್ಲರೆ ಕೊಡುವುದು, ಆದರೆ ತನ್ನ ಕೈಗೆ ಸಿಕ್ಕಿದ ಅದೇ ಚೀಟಿಯನ್ನು ಬೇರೊಬ್ಬ ಪ್ರಯಾಣಿಕನಿಗೆ ವಿತರಿಸುವುದು! ಹೇಗಿದೆ ಚಿಲ್ಲರೆ ಐಡಿಯಾ? ಹೀಗಾಗಿ ಬೊಗಳೂರೆಂಬ ಬೊಗಳೂರಲ್ಲಿ ಹೇಗಾದರೂ ಬದುಕಬಹುದು ಎಂಬುದಕ್ಕೆ ಈ ಕಂಟ್ರಾಕ್ಟರುಗಳು ದಾರಿಯನ್ನು ತೋರಿಸಿದ್ದಾರೆ. ಈಗ ಇದೇ ಅಡ್ಡದಾರಿ ಹಿಡಿಯಲು ಬೊಗಳೂರು ಬ್ಯುರೋದ ಸರ್ವ ಸದಸ್ಯರೂ ಉದ್ಯುಕ್ತರಾಗಿದ್ದಾರೆ ಎಂಬುದನ್ನು ನಮ್ಮ ಹದ್ದಿನ ಕಣ್ಣಿನ ತನಿಖಾ ಮಂಡಳಿ ಪತ್ತೆ ಹಚ್ಚಿರುವುದಾಗಿ ಬೊಗಳೂರಿನ ಪ್ರತಿಸ್ಪರ್ಧಿ ಪತ್ರಿಕೆಯಲ್ಲಿ ವರದಿ ಬಂದಿದೆ.

Thursday, November 03, 2011

ತನು,ಮನದಲ್ಲಿ ಕನ್ನಡಕ್ಕೆ ಒತ್ತು ನೀಡೋಣ!


(ಬೊಗಳೂರು ಕನ್ನಡವೇ ಆತ್ಮ ಬ್ಯುರೋದಿಂದ)
ಭೊಘಳೂರು: ಖಣ್ಣಢ ರಾಝ್ಯೋಥ್ಸವ ಭಂಧಿಧ್ಧರೂ ಭೊಘಳೂರು ಭ್ಯುರೋ ಎಛ್ಛೆಥ್ಥೂ...! ಖೊಂಢಿಳ್ಳವೇಖೆ ಎಂಧು ವಿಷ್ವಾಧ್ಯಂತ ಹರಢಿಖೊಂಢಿರುವ ಭೊಘಳೆ ರಘಳೆ ಅಂಥರ್ಝಾಳ ಫಥ್ರಿಖೆಯ ಏಖೈಖ ಓಧುಘರೆಳ್ಳರೂ ಧಭಾಯಿಸಿಧ ಖಾರಣಧಿಂಧಾಘಿಯೇ ಈ ಒಂಧು ಶ್ಫಷ್ಠಣೆ.

ಮೇಲೆ ಅಕ್ಷರಗಳೆಲ್ಲವೂ ಮಹಾಪ್ರಾಣ ಹೆಚ್ಚಾಗಿದ್ದು, ನಮ್ಮ ಪ್ರಾಣ ಯಾಕೆ ತಿಂತೀರಾ ಎಂದು ಕೇಳುವ ಓದುಗರಿಗೆಲ್ಲಾ ನಮ್ಮ ಉತ್ತರ... "ಮುಖ್ಯಮಂತ್ರಿಗಳು ಹೇಳಿದ್ದಾರೆ!" ಅಂತ ಮಾತ್ರ.

ಹಾಗಾದರೆ ಮುಖ್ಯಮಂತ್ರಿಗೋಳು ಏನಂತ ಹೇಳಿದ್ದಾರೆ? ಕನ್ನಡ ರಾಜ್ಯೋತ್ಸವದ ಭಾಷಣ ಮಾಡುತ್ತಿದ್ದ ಅವರು, ಕನ್ನಡ ನಮ್ಮ ಆಸ್ತಿ, ಅದನ್ನು ನಾವು ಉಳಿಸಬೇಕು (ಕಡಿಮೆ ಬಳಸಿದರೆ ಉಳಿತಾಯ ಆಗುತ್ತದೆ ಅಂತ ಗಣಕಿಂಡಿಯ ಪವನಜ ಆಗಾಗ್ಗೆ ಉಲ್ಲೇಖಿಸುತ್ತಲೇ ಬಂದಿದ್ದಾರೆ.) ಮತ್ತು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕನ್ನಡಕ್ಕೆ ನಾವು ಯಾವಾಗಲೂ ಒತ್ತು ನೀಡಬೇಕು ಎಂದಿದ್ದರು. ಅದನ್ನೇ ಕಾಯಾ-ವಾಚಾ-ಮನಸಾ-ಪೆನ್ನಾ ಪಾಲಿಸಿದ ನಮ್ಮ ಬ್ಯುರೋ, ಕನ್ನಡವನ್ನು ಒತ್ತಿ ಒತ್ತಿ ಬರೆಯಲು ನಿರ್ಧರಿಸಿದ ಪರಿಣಾಮವಾಗಿ ಮೇಲಿನ ವಾಕ್ಯ ಮೂಡಿಬಂದಿದೆ.

||ನಮ್ಮ ಬರಹವೂ, ಮಾತೂ, ಮನಸ್ಸೂ ಕನ್ನಡವಾಗಿರಲಿ, ಮತ್ತು ನಮ್ಮ ಯೋಚನೆಯೂ ಕನ್ನಡದಲ್ಲೇ ಇರಲಿ||
ಸರ್ವರಿಗೂ ಕನ್ನಡದ ಹಬ್ಬದ ಶುಭಾಶಯಗಳು