Thursday, November 19, 2009

ಗಂಡಾಂತರ ಪದ ನಿಷೇಧಕ್ಕೆ ಪುರುಷರ ಆಗ್ರಹ

(ಬೊಗಳೂರು ಗಂಡಸರು-ಹೆಂಡಸರ ಅಸಮಾನತಾ ಬ್ಯುರೋದಿಂದ)
ಬೊಗಳೂರು, ನ.19- ಇಂದು ಅಂತಾರಾಷ್ಟ್ರೀಯ ಪುರುಷರ ದಿನವಾಗಿರುವುದರಿಂದ ಬೊಗಳೂರಿನ ಬೀದಿ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ಅಖಿಲ ಬೊಗಳೆ ಪುರುಷರ ಸಂಘವು, ಗಂಡಾಂತರ ಎಂಬ ಶಬ್ದ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಹಿಳೆಯರು ಯಾವುದೇ ತಪ್ಪು ಮಾಡಿದರೂ ಅದು ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದನ್ನು ಗಂಡಾಂತರ ಎಂದು ಕರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಮಹಿಳೆಯರು ಗಂಡಂದಿರನ್ನು ಬದಲಾಯಿಸುವ ಪ್ರಕ್ರಿಯೆಗೆ ಮಾತ್ರವೇ ಗಂಡಾಂತರ ಎಂಬ ಪದವನ್ನು ಬಳಸಬೇಕು ಎಂದು ಆ(ಹ್)ಗ್ರಹಿಸಿದ್ದಾರೆ.

ಗಂಡಾಂತರ ಪದವನ್ನು ನಿಷೇಧಿಸದಿದ್ದರೆ, ಅದರ ಜೊತೆಗೆ ಪುರುಷರು ಆಗಾಗ್ಗೆ ಮಾಡುವ ತಪ್ಪುಗಳಿಗೆ ಮತ್ತು ಅವು ಭಾರೀ ತೊಂದರೆಗೆ ಕಾರಣವಾದರೆ, ಅವುಗಳನ್ನು ಹೆಂಡಾಂತರ(ಕಾರಿ) ಎಂದು ಕರೆಯಬೇಕು ಎಂದು ಕೂಡ ಒತ್ತಾಯಿಸಿದ್ದಾರೆ.

ಆದರೆ ಇದು ಹೆಂಡವನ್ನು ಪದೇ ಪದೇ ಬದಲಾಯಿಸಿ ಕುಡಿಯುವ ಪ್ರಕ್ರಿಯೆಗೆ ಪರ್ಯಾಯ ಪದವಾಗುತ್ತದೆಯೇ ಎಂದು ಬೊಗಳೂರು ಬ್ಯುರೋ ವರದ್ದಿಗಾರರು ಕೇಳಿದ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಲ್ಲ! ಅವರು ನಕ್ಕ ನಗೆ ನೋಡಿದರೆ, ಸಲ್ಮಾನ್ ರಶ್ದೀ ಆಗಾಗ್ಗೆ ಹೆಂಡ್ತೀರನ್ನು ಬದಲಾಯಿಸ್ತಾ ಹೆಂಡಾಂತರ ಮಾಡುವ ಪ್ರಕ್ರಿಯೆ ನೆನಪಿಗೆ ಬಂದಂತೆ ತೋರುತ್ತಿತ್ತು.

ಸಮಾನತೆ ಸಮಾನತೆ ಎಂದು ಹೋರಾಟ ಮಾಡುವ ಹೆಂಡಸರು ಉಫ್.... ಅಲ್ಲಲ್ಲ ಹೆಂಗಸರು, ಈ ಗಂಡಾಂತರದಂತಹುದೇ ಪದ (ಹೆಂಡಾಂತರ) ನಮಗೆ ಬೇಕು ಎಂದು ಒತ್ತಾಯಿಸುತ್ತಿಲ್ಲವೇಕೆ, ಕೂಗಾಡುತ್ತಿಲ್ಲವೇಕೆ ಮತ್ತು ಅರಚಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದ ಅವರು, ಆದರೆ, ಹೆಣ್ಣುಗಳ ಪಾನೀಯ ಸೇವನೆ ಪ್ರಕ್ರಿಯೆಗೆ ಹೆಂಗಸರ ಕುಡಿತ ಅಂತ ಕರೀತಾರೆ, ಅದೇ ರೀತಿ ಗಂಡುಗಳ ಪ್ರಕ್ರಿಯೆಗೆ ಗಂಗಸರ* ಕುಡಿತ ಅಂತ ಕರೆಯುವುದಿಲ್ಲವೇಕೆ, ಹೆದರಿಕೆಯೇ? ಎಂದು ಪ್ರಶ್ನಿಸಿದರು.

ಇದೇ ರೀತಿಯಾಗಿ, ಗಂಡಸರನ್ನೆಲ್ಲಾ ಹೆಂಡಸಾರಾಯಿ ಕುಡುಕರು ಅಂತೆಲ್ಲಾ ಹೀಯಾಳಿಸುತ್ತಾರೆ, ಇನ್ನು ಮುಂದೆ ಅದನ್ನು ಗಂಡಸಾರಾಯಿ ಎಂದು ಬದಲಾಯಿಸತಕ್ಕದ್ದು ಎಂದೂ ಅವರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಇಲ್ಲಿಯೂ ಹೆಂಗಸರಿಗೇ ಪ್ರಾಧಾನ್ಯತೆ ಕೊಟ್ಟು, ಸಾಮಾಜಿಕ ಅಸಮತೋಲನಕ್ಕೆ ನಾಂದಿ ಹಾಡುತ್ತದೆ ಎಂದವರು ಹೀಗಳೆದಿದ್ದಾರೆ.

ಈ ರೀತಿಯಾಗಿ ಮಹಿಳೆಯರಿಗೇ ಎಲ್ಲ ಪದಗಳಲ್ಲಿಯೂ ಪ್ರಾಧಾನ್ಯತೆ ನೀಡುವುದರಿಂದ ಸಾಮಾಜಿಕ ಸಮತೋಲನ ತಪ್ಪುತ್ತದೆ ಎಂದವರು ಅಭಿಪ್ರಾಯಪಟ್ಟರು.

* ಗಂಗಸರ = ಕರಾವಳಿ ಭಾಷೆಯಲ್ಲಿ ಹೆಂಡ ಎಂದರ್ಥ

Monday, November 16, 2009

ನರ್ಸರಿ ರೈಮ್ ಬೇಡ, ಸಿನಿಮಾ ಹಾಡು ಕಲಿಸಿ: ಮಕ್ಕಳ ಆಗ್ರಹ

(ಬೊಗಳೂರು ಬಾಲ ಕರುಗಳ ಬ್ಯುರೋದಿಂದ)
ಬೊಗಳೂರು, ನ.15- ಕರ್ನಾಟಕ ರಾಜ್ಯೋತ್ಸವಕ್ಕೂ ಎಚ್ಚರವಾಗದ ಬೊಗಳೂರು ಬ್ಯುರೋ ವಿರುದ್ಧ ಕನ್ನಡ ವಿರೋಧಿ ಪತ್ರಿಕೆ ಎಂದು ಕನ್ನಡ ಹೋರಾಟಗಾರರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿರುವಂತೆಯೇ, ನಾವೇನೂ ಗಣಿ ಧಣಿಗಳೊಂದಿಗೆ ಸೇರಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿರುವ ಬೊಗಳೂರು ಸೊಂಪಾದಕರುಗಳು, ಇದೀಗ ಮಕ್ಕಳ ದಿನಾಚರಣೆಯ ದಿನ ಎಚ್ಚೆತ್ತುಕೊಳ್ಳಲು ನಿರ್ಧರಿಸಿದ್ದರಾದರೂ, ಅದು ಕೂಡ ಡೇಟ್ ಬಾರ್ ಆಗಿ ಹೋಗಿರುವುದಕ್ಕೆ ಯಾವುದೇ ಬಾರ್ ಕಾರಣವಲ್ಲ ಎಂದು ಸ್ಪಷ್ಟಪಡಿಸಲಾಗುತ್ತಿದೆ.

ಮಕ್ಕಳ ದಿನಾಚರಣೆ ಅದು ಕೂಡ ಎರಡನೇ ಶನಿವಾರ ಬಂದ ಕಾರಣದಿಂದಾಗಿ ಮಕ್ಕಳು ಮತ್ತು ಮರಿಗಳೆಲ್ಲಾ ಕೆಂಡಾಮಂಡಲವಾಗಿದ್ದುದು ಅವುಗಳ ಮುಖಾರವಿಂದ ನೋಡಿದಾಗಲೇ ಗೊತ್ತಾಗಿಬಿಟ್ಟಿತ್ತು ಬೊಗಳೂರು ಬ್ಯುರೋಗೆ. ಒಂದೊಂದೇ ಬಾಲದಕರುಗಳನ್ನು ವಿಚಾರಿಸುವುದು ಕಷ್ಟಕರ ಸಂಗತಿ ಎಂದು ತಿಳಿದ ಹಿನ್ನೆಲೆಯಲ್ಲಿ, ಅತ್ಯಂತ ಸುಲಭವಾದ ಬಾಲ-ಕರುಗಳ ಸಂಘವನ್ನು ಪ್ರವೇಶಿಸಲಾಯಿತು.

ಅವರು ಅದಾಗಲೇ ಬೊಗಳೂರು ಬ್ಯುರೋ ಸಿಬ್ಬಂದಿಗಾಗಿ ಕಾಯುತ್ತಿರುವಂತೆ ಕಂಡುಬಂದಿತ್ತು ಮತ್ತು ನಮ್ಮ ಸಿಬ್ಬಂದಿ ಹೊಕ್ಕ ತಕ್ಷಣ ಇದು ಪತ್ರಿಕಾಗೋಷ್ಠಿ ಎಂದು ಘೋಷಿಸಿ ಮಾತನಾಡತೊಡಗಿದರು.

ಮುಖ್ಯವಾಗಿ ಈ ಪತ್ರಿಕಾಗೋಷ್ಠಿ ಕರೆದಿರುವುದು ಮಕ್ಕಳಿಗೂ ಸಮಾನತೆ ಬೇಕು ಎಂಬುದನ್ನು ಹೇಳುವುದಕ್ಕಾಗಿ ಎಂದು ಬಾಲ-ಕರುಗಳ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಲ ಅವರು ಘೋಷಿಸಿದರು.

ನಮಗೆ ಅಂಗನವಾಡಿಗಳಲ್ಲಿ ನರ್ಸರಿ ರೈಮ್ ಹೇಳಿಕೊಡಲಾಗುತ್ತದೆ. ಹೇಳಿದ್ದನ್ನೇ ಹೇಳಿ ಹೇಳಿ ಸಾಕಾಗಿದೆ. ಆದರೆ, ಅದೇ ಬೆಳೆದುಬಿಟ್ಟ ಬಾಲಕರ ಬಾಯಲ್ಲಿ ಸಿನಿಮಾ ಪದಗಳು, ಮಚ್ಚು-ಗಿಚ್ಚು, ಹಳೇ ಪಾತ್ರೆ ಹಳೇ ಕಬ್ಣ ಮುಂತಾದ ಪದಗಳು ನಲಿದಾಡುತ್ತವೆ. ಆದರೆ ನಮಗೇಕೆ ಈ ಶಿಕ್ಷೆ ಎಂದು ಅವರು ಪ್ರಶ್ನಿಸಿದರು.

ಹೀಗಾಗಿ, ಇನ್ನು ಮುಂದೆ ನರ್ಸರಿ ರೈಮ್‌ಗಳ ಬದಲಿಗೆ ಕನ್ನಡದ ಸಿನಿಮಾ ಹಾಡುಗಳನ್ನೇ ನಮಗೆ ಕಲಿಸಬೇಕು, ಮತ್ತು ಅದನ್ನು ಬಾಲವಾಡಿ ಎಂದು ಕರೆಯಬಾರದು. ಬಾಲಶಿಕ್ಷಣ ಕೇಂದ್ರ ಎಂದು ಕರೆಯಬೇಕು ಎಂಬ ಬೇಡಿಕೆಗಳನ್ನೂ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಂದಿಟ್ಟರು.

ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಮುಂತಾದ ಕ್ಲಿಷ್ಟಕರ ಪದಗಳ ಉಚ್ಚಾರಣೆ ಮಕ್ಕಳಾಗಿರುವುದರಿಂದ ನಮಗೆ ಕಷ್ಟವಾಗುತ್ತದೆ. ಅದೇ ರೀತಿ ಬಾ ಬಾ ಬ್ಲ್ಯಾಕ್ ಶೀಪ್, ರೈನ್ ರೈನೇ ಗೋ ಅವೇ ಮುಂತಾದ ಅರ್ಥ ಹೀನ ಹಾಡುಗಳು ನಮಗೆ ಭವಿಷ್ಯದಲ್ಲಿ ಅಗತ್ಯವೇ ಇರುವುದಿಲ್ಲ. ಆದರೆ ಕೊಡೇ ಕಿಸ್ಸು, ಬಂತು ಬಂತು ಕರೆಂಟು ಬಂತು, ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಪಾಠ ಹೇಳೀ ಬನ್ನೀ... ಮುಂತಾದ ಕನ್ನಡ ಸಿನಿಮಾ ಹಾಡುಗಳನ್ನು ಈಗಲೇ ಕಲಿತುಕೊಂಡರೆ, ಮುಂದೆ ಕುಣಿಯೋಣು ಬಾರಾ, ನಲಿಯೋಣು ಬಾರಾ, ಲಿಟ್ಲ್ ಸಿಂಗರ್, ಚಾಂಪಿಯನ್ ಡ್ಯಾನ್ಸರ್ ಮುಂತಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ ಎಂದು ಬಾಲ ಪ್ರತಿಪಾದಿಸಿದರು.

ನಾವು ಯಾವತ್ತೋ ಕರೆದ ಪತ್ರಿಕಾಗೋಷ್ಠಿಯ ವಿವರ ಇನ್ನೂ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲವಲ್ಲ, ಎಂಥಾ ಪತ್ರಿಕೇರೀ ನಿಮ್ದು ಎಂದು ಬಾಲ-ಕರುಗಳೆಲ್ಲ ಜೋರು ಮಾಡಿ ಮಚ್ಚು-ಲಾಂಗು ಹಿಡಿದು ಬೆದರಿಕೆಯೊಡ್ಡಿದ ಬಳಿಕವಷ್ಟೇ ಈ ವರದ್ದಿಯನ್ನು ಇಲ್ಲಿ ಪ್ರಕಟಿಸಲಾಗಿದೆ ಎಂದು ಸೊಂಪಾದಕರು ಸ್ಪಷ್ಟಪಡಿಸಿದ್ದಾರೆ.

Tuesday, October 13, 2009

ಸಂತ್ರಸ್ತ ಗ್ರಾಮಗಳ ಸ್ಥಳಾಂತರ: ಬೊಗಳೂರಲ್ಲಿ ಆತಂಕ

(ಬೊಗಳೂರು ಸಂತ್ರಸ್ತ ಸ್ಥಳಾಂತರ ಬ್ಯುರೋದಿಂದ)
ಬೊಗಳೂರು, ಅ.13- ಪ್ರವಾಹದ ಭೀತಿ ಎದುರಿಸುತ್ತಿರುವ ಹಳ್ಳಿಗಳನ್ನೇ ಸ್ಥಳಾಂತರಿಸುವ ಸರಕಾರದ ಕಾರ್ಯಕ್ರಮಕ್ಕೆ ಬೊಗಳೂರು ಒಂದು ಕಡೆಯಿಂದ ಸ್ವಾಗತಿಸಿದೆ ಮತ್ತು ಇನ್ನೊಂದು ಕಡೆಯಿಂದ ವಿರೋಧಿಸುತ್ತಿದೆ ಎಂದು ವರದಿಯಾಗಿದೆ.

ಓಟು ಪಡೆದು ನಿಧಾನಸಭೆಗೆ ಆಯ್ಕೆಯಾಗಿ ಅಲ್ಲಿ ಐದು ವರ್ಷಗಳ ಕಾಲ ನಿಧಾನವಾಗಿಯೇ ನಿದ್ದೆ ಮಾಡಿದ ಬಳಿಕ, ಮತ್ತೆ ಓಟು ಬರುವ ಹೊತ್ತಿಗೆ ನಿಧಾನವಾಗಿ ಮೇಲೆದ್ದು, ಸಕಲ ಮಂತ್ರಿ ಗಡಣ, ಹಿಂಬಾಲಕರನ್ನು ಕರೆದುಕೊಂಡು ಪ್ರವಾಹದೋಪಾದಿಯಲ್ಲಿ ಕ್ಷೇತ್ರಗಳಿಗೆ ಮಂತ್ರಿ ಮಾಗಧರು ಆಗಮಿಸುವುದರಿಂದ ಬೊಗಳೂರು ಸೇರಿದಂತೆ ಕೆಲವು ಹಳ್ಳಿಗಳ ಜನರು ಭಯಭೀತರಾಗಿದ್ದಾರೆ.

ಈ ರೀತಿ ಜಾರಕಾರಣಿಗಳ ಪ್ರವಾಹ ಬರುವ ಹಳ್ಳಿಗಳನ್ನು ಸ್ಥಳಾಂತರ ಮಾಡಿದರೆ, ಅಥವಾ ಇಂತಹಾ ಪ್ರವಾಹಗಳು ಮತ್ತೆ ಬಾರದಂತೆ ತಡೆದರೆ ಪುಣ್ಯ ಕಟ್ಟಿಕೊಟ್ಟಂತಾಗುತ್ತದೆ ಎಂದು ಬೊಗಳೂರಿನ ಜಾರಕೀಯ ಪ್ರವಾಹ ಸಂತ್ರಸ್ತರಲ್ಲೊಬ್ಬರಾದ ಬೊಗಳೇದಾಸ ಅವರು ಪ್ರತಿಕ್ರಿಯಿಸಿದ್ದಾರೆ.

ಈ ಗ್ರಾಮಗಳನ್ನು ನಿಧಾನಸೌಧ ಪಕ್ಕದಲ್ಲೇ ಇರುವ ಬೆಂಗಳೂರಿಗೆ ಸ್ಥಳಾಂತರಿಸಿದರೆ ಮತ್ತೂ ಉತ್ತಮ. ಅಲ್ಲಿನ ರಸ್ತೆಗಳಲ್ಲೇ ಹೇಗೂ ಬೇಕಾದಷ್ಟು ಹೊಂಡಾ-ಗುಂಡಿಗಳಿವೆ. ಅದರಲ್ಲೇ ಒಂದಷ್ಟು ಬೀಜ ಬಿತ್ತಿ ಕೃಷಿ ಮಾಡಬಹುದು ಎಂಬುದು ಅವರ ಮುಂದಾಲೋಚನೆ.

ಹಾಗಿದ್ದರೆ ಕಾಂಕ್ರೀಟು ಕಾಡುಗಳ ಮಧ್ಯೆ, ಕೃಷಿಗಾಗಿ ಫಲವತ್ತಾದ ಮಣ್ಣು ಬೇಡವೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಗಳೇದಾಸ ಅವರು, ಸಿಕ್ಕೇ ಸಿಗುತ್ತದಲ್ಲ. ಹೇಗೂ ರಸ್ತೆಗಳ ಹೊಂಡಾಗುಂಡಿಗಳಿಂದ ಸಾಕಷ್ಟು ಧೂಳು ಅಥವಾ ಮಳೆ ಬಂದರೆ ಕೆಸರು ಮೇಲೇಳುತ್ತದೆ. ಪಕ್ಕದ ಕಟ್ಟಡಗಳಿಗೆ ರಾಚಿದ ಈ ಧೂಳು ಮತ್ತು ಕೆಸರನ್ನು ತೆಗೆದು ನಾವು ರಸ್ತೆಯಲ್ಲಿ ನೆಟ್ಟ ಗಿಡಗಳ ಬುಡಕ್ಕೆ ಹಾಕುತ್ತೇವೆ. ಇದು ಫಿಲ್ಟರ್ ಆದ ಮಣ್ಣು ಆಗಿದ್ದು, ಸಾಕಷ್ಟು ಫಲವತ್ತಾಗಿರುತ್ತದೆ ಎಂದವರು ಸ್ಪಷ್ಟನೆ ನೀಡಿದರು.

ಈಗ ಸ್ಥಳಾಂತರವನ್ನು ಸ್ವಾಗತಿಸುವವರು, ಅದನ್ನು ವಿರೋಧಿಸಲು ಏನು ಕಾರಣವಿದೆ ಎಂದು ಕೇಳಿದಾಗ, ತತ್ತರಿಸಿ ಉತ್ತರಿಸಿದ ಬೊಗಳೆದಾಸ, ಅವರು ಆ ಗ್ರಾಮಗಳನ್ನು ಏನಾದರೂ ಬೊಗಳೂರಿಗೆಯೇ ಸ್ಥಳಾಂತರಿಸಿದರೆ ಎಂಬುದೇ ನಮ್ಮ ಆತಂಕ ಎಂದರು.

ಇದಕ್ಕೇಕೆ ಆತಂಕಪಡಬೇಕು ಎಂದು ಪ್ರಶ್ನಿಸಿದಾಗ, ಎಲ್ಲ ಜಾರಕಾರಣಿಗಳ ಪ್ರವಾಹವು ಇಲ್ಲಿಗೆ ಬಂದರೆ ಅವರನ್ನು ಇಡಲು ಇಲ್ಲಿ ಜಾಗ ಇಲ್ಲ. ಅದಕ್ಕಾಗಿಯೇ ಶೋಕೇಸುಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಒಂದಷ್ಟು ಜನರನ್ನು ಒಟ್ಟುಗೂಡಿಸಿ ಕೈಗೊಂದು ಮೈಕು ನೀಡುವ ಅನಿವಾರ್ಯತೆ ಎದುರಾಗುತ್ತದೆ. ಹೀಗಾಗಿ ಇಲ್ಲಸಲ್ಲದ ಕೆಲಸಕ್ಕೆ ಬೊಗಳೂರಿಗರು ಆತಂಕಿತರಾಗಿದ್ದಾರೆ ಎಂದರವರು.

Friday, October 09, 2009

ನೋBell ಶಾಂತಿ ಪ್ರಶಸ್ತಿ ಒಬಾಮ ಅಲ್ಲ, ಒಸಾಮ!

(ಬೊಗಳೂರು Barking News! ಬ್ಯುರೋದಿಂದ)
ಬೊಗಳೂರು, ಅ.9- ಅಮೆರಿಕ ಅಧ್ಯಕ್ಷ ಒಬಾಮ ಅವರಿಗೇ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ನೇರಾನೇರವಾಗಿ, ಖಡಾಖಂಡಿತವಾಗಿ ತಳ್ಳಿ ಹಾಕಿರುವ ಬೊಗಳೆ-ರಗಳೆ, ಇದು ನಿಜ ಸುದ್ದಿಯನ್ನು ಒಡೆದು ಹಾಕಿದ (Breaking) ಸೊಂಪಾದಕರು ಮತ್ತು ವರದ್ದಿಗಾರರ ಕೈವಾಡ ಎಂದು ಘೋಷಿಸಿದೆ.

ಶೂ ಎಸೆದ ಪತ್ರಕರ್ತನನ್ನು ಕ್ಷಮಿಸಿದ್ದು, ಇರಾಕಿನಲ್ಲಿ ಯುದ್ಧಕ್ಕೆ ಮಂಗಳ ಹಾಡಿ ಶಾಂತಿಗೆ ಸಹಕರಿಸಿದ್ದು, ಮಾತ್ರವಲ್ಲದೆ ಭಾರತದ ಮೇಲೆ ದಾಳಿ ಮಾಡಿ, ದಿನಕ್ಕೊಂದು ಬಾಯಿಗೆ ಬಂದ ಹೇಳಿಕೆ ನೀಡುತ್ತಾ, ಸಣ್ಣ ಮಕ್ಕಳಂತೆ ಆಟವಾಡುತ್ತಿರುವ ಪಾಕಿಸ್ತಾನಕ್ಕೆ ಯಾವುದೇ ಬುದ್ಧಿ ಕಲಿಸುವ ಗೋಜಿಗೆ ಒಬಾಮ ಹೋಗಿಲ್ಲ ಎಂಬುದು ಅಪ(ಸ)ಥ್ಯವಾದರೂ, ಇದರ ನಡುವೆಯೇ ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಅವರು ನೊಣವೊಂದನ್ನು ಹೊಡೆದು ಕೊಂದು ತಮ್ಮ ಹಿಂಸಾ ಮನೋಭಾವ ಮೆರೆದಿದ್ದಾರೆ. ಇದು ಅಶಾಂತಿಯಲ್ಲವೇ? ಹೀಗಾಗಿ ಒಬಾಮಗೆ ಹೇಗೆ ಈ ಪ್ರಶಸ್ತಿ ಲಭಿಸಿತು ಎಂಬುದು ಬೊಗಳೂರು ತಲೆಯಿಲ್ಲದ ಸೊಂಪಾದ-ಕರುಗಳ ಪ್ರಶ್ನೆ.

ಇದರ ಹಿಂದೆ ಸ್ವತಃ ಒಬಾಮ ಕೈವಾಡವನ್ನೂ ತಳ್ಳಿ ಹಾಕುವಂತಿಲ್ಲ. ಯಾಕೆಂದರೆ, ಒಬಾಮ ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅಮೆರಿಕವನ್ನು ಬದಲಾಯಿಸುತ್ತೇವೆ ಎಂಬ ಸಂದೇಶದೊಂದಿಗೆ "Yes, We Can" ಎಂದೇ ಜನರಲ್ಲಿ ಸಮೂಹ ಸನ್ನಿ ಮೂಡಿಸಿದ್ದರು. ಈ ಕಾರಣಕ್ಕೆ, ನೊಬೆಲ್ ಸಮಿತಿಯವರಲ್ಲಿಯೂ "ನೀವು ನೊಬೆಲ್ ಪ್ರಶಸ್ತಿ ನನಗೆ ಕೊಡಬಹುದೇ?" ಎಂದು ಕೇಳಿದಾಗ, ಅದೇ ಸಮೂಹಸನ್ನಿಗೊಳಗಾಗಿದ್ದ ನೊಬೆಲ್ ಕಮಿಟಿಯವರು ಕೂಡ Yes, We can ಎಂದು ಹೇಳಿರುವುದೂ ಕೂಡ ಕಾರಣವಿರಬಹುದು ಎಂದು ಸಂದೇಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಆದರೆ, ಇಲ್ಲಿ ಬೊಗಳೂರಿನ ಸಂದೇಹ ಬೇರೆಯದೇ ಆಗಿದೆ. ಇತ್ತೀಚೆಗಿನ ದಿನಗಳಲ್ಲಿ ಸತ್ತಿದ್ದಾನೆಯೇ ಬದುಕಿದ್ದಾನೆಯೇ ಎಂಬುದಿನ್ನೂ ಸಾಬೀ-ತಾಗದಿರುವ ಮತ್ತು ಅಮೆರಿಕದ ಯಾವುದೇ ಡ್ರೋನ್ ದಾಳಿಯೂ ತಾಗದಿರುವ ಒಸಾಮ ಬಿನ್ ಲಾಡೆನ್ ಯಾವುದೇ ಸದ್ದು ಮಾಡುತ್ತಿಲ್ಲ. ಬಾಂಬು ಪಟಾಕಿ ಸಿಡಿಸಿದ್ದೂ ಕಡಿಮೆ. ಸದ್ದು ಮಾಡಲು Bell ಬೇಕಲ್ಲವೇ? ಹೀಗಾಗಿ No Bell ಆಗಿಬಿಟ್ಟಿರುವ ಒಸಾಮನಿಗೆ ಅಶಾಂತಿ ಪ್ರಶಸ್ತಿ ಸಿಕ್ಕಿದ್ದು, ಅದನ್ನು ಸೊಂಪಾದಕರು ಅಥವಾ ರದ್ದಿಗಾರರು ಪ್ರೂಫ್ ಮಿಸ್ಟೇಕ್‌ನಿಂದ ಒbaಮ ಮಾಡಿ ಜಗಜ್ಜಾಹೀರುಗೊಳಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಅಹಿಂಸೆ ಪ್ರತಿಪಾದಿಸಿದ ಗಾಂಧೀಜಿಗೇ ದೊರೆಯದ ನೋ-ಬೆಲ್, ಗಾಂಧೀಜಿಯೇ ನನಗೆ ಪ್ರೇರಣೆ ಎನ್ನುತ್ತಲೇ ನೊಣವೊಂದನ್ನು ಕೊಂದು ಹಾಕಿದ್ದ ಒಬಾಮನಿಗೆ ದೊರೆತಿರುವುದು ಸರ್ವಥಾ ಸರಿಯಲ್ಲ ಎಂಬ ಕಾರಣಕ್ಕಾಗಿಯೇ ಬೊಗಳೂರು ಬ್ಯುರೋ ಈ ರೀತಿಯ ತಗಾದೆ ಎಬ್ಬಿಸಿರುವುದಾಗಿ ಎಲ್ಲಿಯೂ ವರದಿಯಾಗಿಲ್ಲ.

Thursday, October 01, 2009

ಬೊಗಳೆ: ಜಾನುವಾರುಗಳ ದರ್ಜೆಗೆ ತಶಿ ಶರೂರ್ ಸಮರ್ಥನೆ

(ಬೊಗಳೂರು ಟ್ವೀಟ್ ಬ್ಯುರೋದಿಂದ)
ಬೊಗಳೂರು, ಅ.1- ಕೇಂದ್ರ ಸಚಿವ ತಶಿ ಶರೂರ್ ಅವರು ವಿಮಾನದಲ್ಲಿ ಜಾನುವಾರು ಕ್ಲಾಸ್ ಇದೆ ಎಂಬ ಬಗ್ಗೆ ಹೇಳಿಕೆ ನೀಡಿ ಇದು ಸುಮ್ ಸುಮ್ನೇ ವಿವಾದವಾಗಿದ್ದನ್ನು ಕಂಡು ಕಿಡಿ ಕಾರಿದ್ದಾರೆ. ಅವರು ನೇರವಾಗಿ ಕಿಡಿ ಕಾರಿದವರೇ, ಅವರು ಕಾರಿದ ಕಿಡಿ ಬೊಗಳೂರಿನ ಕ.ಬು.ಗೇ ಬಂದು ಬಿದ್ದಿದೆ.

ಹೀಗಾಗಿ ಅವರು ಬೊಗಳೂರಿಗೇ ಬಂದು ಸಂದರ್ಶನ ನೀಡಿ ಒಂದು ಪ್ರಶ್ನೆಗೆ ಉತ್ತರಿಸಿ ಬೊಗಳೂರು ಬ್ಯುರೋವನ್ನು ತತ್ತರಿಸಿ ಹೋಗಿದ್ದಾರೆ.

ನೀವು ಜಾನುವಾರು ದರ್ಜೆಯ ವಿಮಾನ ಯಾನ ಅಂತ ಹೇಳಿದ್ದು ಸರಿಯೋ ತಪ್ಪೋ? ನೀವದನ್ನು ಒಪ್ಪುತ್ತೀರೋ ಇಲ್ವೋ? ಸಮರ್ಥಿಸಿಕೊಳ್ತೀರಾ ಇಲ್ಲಾ ನಿರಾಕರಿಸ್ತೀರಾ? ಪಕ್ಷವು ನಿಮ್ಮನ್ನು ಉಚ್ಚಾಟಿಸಿದರೆ ಒಪ್ತೀರಾ ಇಲ್ವಾ? ಜಾನುವಾರು ಅಂದಿದ್ದು ಸರಿಯೋ ತಪ್ಪೋ ಎಂಬಿತ್ಯಾದಿಯಾಗಿ ಒಂದೇ ಒಂದು ಪ್ರಶ್ನೆಯನ್ನು ಕೇಳಲಾಯಿತು.

ಅದಕ್ಕೆ ಅವರು ಉತ್ತರಿಸಿದ್ದು ಹೀಗೆ: ಜಾನುವಾರುಗಳು ಎಂದರೆ ನಾಯಿ, ಕುರಿ, ಬೆಕ್ಕು, ದನ, ಜನ, ಒಂಟೆ, ಆನೆ ಮುಂತಾದ ಪ್ರಾಣಿಗಳು ಬರುತ್ತವೆ. ನಾನು ನಿಜವಾಗಿಯೂ ಹೇಳಿದ್ದು ಆನೆಗಳನ್ನು ಉದ್ದೇಶಿಸಿ ಮಾತ್ರ. ಆದರೆ ಅವು ಬಿಳಿಯಾನೆಗಳಿಗೆ ಮಾತ್ರ!

ಅಂತ ಹೇಳಿ ಅವರು ಟ್ವಿಟ್ಟರಿನಲ್ಲಿಮತ್ತೊಂದು ಟ್ವೀಟ್ ಮಾಡಲು ಹೊರಟೇಹೋದರು.

Thursday, September 24, 2009

ಚಂದ್ರನಲ್ಲಿ ನೀರು: ಭೂಮಿಯಲ್ಲಿ ತಲ್ಲಣ!

(ಬೊಗಳೂರು ನೀರು ಪತ್ತೆ ಬ್ಯುರೋದಿಂದ)
ಬೊಗಳೂರು, ಸೆ.24- ಚಂದ್ರನಲ್ಲಿ ಸಾಕಷ್ಟು ನೀರು ಇದೆ ಎಂಬುದನ್ನು ತಿಳಿದುಕೊಂಡ ನಾಗರಿಕರು, ಇದೀಗ ಭೂಮಿಯ ಮೇಲಿರುವ ನೀರನ್ನೆಲ್ಲಾ ಬೇಕಾಬಿಟ್ಟಿ ಖರ್ಚು ಮಾಡಲಾರಂಭಿಸಿರುವುದು ಬೆಳಕಿಗೆ ಬಂದಿದೆ.

ಬೊಗಳೂರಿನ ಗಲ್ಲಿ ಗಲ್ಲಿಗಳ ಚರಂಡಿಯೆಲ್ಲಾ ಇದೀಗ ತುಂಬಿ ತುಳುಕಾಡುತ್ತಿದ್ದು, ಪ್ರವಾಹದ ಭೀತಿಯೂ ಉಂಟಾಗಿದೆ. ಬಹುಶಃ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆಯಾಗಿರುವುದು ಕೂಡ ಇದೇ ಕಾರಣಕ್ಕೆ ಎಂದು ಅಜ್ಞಾನಿಗಳು ಶಂಕಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣವೇ, ವರ್ಷಗಟ್ಟಲೆ ಸ್ನಾನ ಮಾಡದೇ ಇರುವವರೆಲ್ಲರೂ ಇದೀಗ ಸ್ನಾನ ಮಾಡಲು ಆರಂಭಿಸಿದ್ದಾರೆ ಎಂಬ ವರದಿಗಳು ರಾಜ್ಯದ ನಾನಾ ಕಡೆಗಳಿಂದ ಬರತೊಡಗಿವೆ.

ಚಂದ್ರನಲ್ಲಿ ಹೇಗಿದ್ದರೂ ಸಾಕಷ್ಟು ನೀರು ಇದೆಯಲ್ಲ, ಇನ್ನು ನಮಗೇತರ ಭಯ ಎಂದು ಬೊಗಳೂರಿನ ಪ್ರಜೆಯೊಬ್ಬರು ನೀರನ್ನೇ ಕುಡಿಯುತ್ತಾ, ನೀರಿನಲ್ಲೇ ಸ್ನಾನ ಮಾಡುತ್ತಾ, ನೀರನ್ನೇ ಹೊರಬಿಡುತ್ತಾ ಪ್ರಶ್ನಿಸಿದ್ದಾರೆ.

ಈ ವರದಿ ಪ್ರಕಟವಾಗತೊಡಗಿದಂತೆಯೇ, ದೇವಸ್ಥಾನದಲ್ಲಿ ಲೋಟೆಗಳಲ್ಲಿ ತೀರ್ಥ ಕೊಡಲು ಆರಂಭವಾಗಿರುವುದಾಗಿ ವರದಿಗಳು ತಿಳಿಸಿವೆ. ಮತ್ತೆ ಕೆಲವರು, ಚಂದ್ರನಲ್ಲಿ ನೀರಲ್ಲ, ಬೀರು ಲಭ್ಯವಾಗಿದೆ ಎಂದು ಅಪಾರ್ಥ ಮಾಡಿಕೊಂಡು, ಸಿಕ್ಕಾಪಟ್ಟೆ ಬೀರು ಕುಡಿದು ಕುಡಿದು ಸುಸ್ತಾಗಿ ಅಲ್ಲಲ್ಲಿ ಬಿದ್ದಿರುವ ವರದಿಗಳೂ ಬೊಗಳೂರು ಬ್ಯುರೋದ ಬಾಗಿಲಲ್ಲಿ ಬಂದು ಬೀಳತೊಡಗಿವೆ.

ಇನ್ನೊಬ್ಬ ನಾಗರಿಕರು ಹೇಳುವಂತೆ, UPAವಾಸ (©ಸುನಾಥ) ಸರಕಾರವಂತೂ ತಿನ್ನುವ ವಸ್ತುಗಳ ಬೆಲೆ ಬೇಕಾಬಿಟ್ಟಿಯಾಗಿ ಏರಿಸಿಬಿಟ್ಟಿದೆ. ಇನ್ನು ಬದುಕುವುದು ಹೇಗೆಂಬ ಚಿಂತೆ ಆವರಿಸಿಬಿಟ್ಟಿತ್ತು. ಇದೀಗ ನೀರು ಸಿಕ್ಕಿರುವುದರಿಂದ ನೀರನ್ನೇ ಸಾಕಷ್ಟು ಬಾರಿ ಕುಡಿದು ಬದುಕಬಹುದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಚಂದ್ರನಲ್ಲಿ ನೀರು ಪತ್ತೆಯಾಗಿರುವ ಸಂಭ್ರಮದ ಸಂಗತಿ ಕೇಳಿ, ಅಲ್ಲಲ್ಲಿ ಹಾಲಿನಲ್ಲಿ ನೀರಿನಂಶ ಹೆಚ್ಚಾಗಿರುವುದೂ ಕಂಡುಬಂದಿದೆ. ಇದು ಹಾಲಿನ ಸಾಂದ್ರತೆ ಪತ್ತೆ ಯಂತ್ರದಲ್ಲಿ ಶೇ.90ರಷ್ಟು ದಾಖಲಾಗಿದೆ ಎಂದು ಬೊಗಳೂರು ರದ್ದಿಗಾರರ ಮೂಲಗಳು ತಿಳಿಸಿವೆ.

ಈ ಮಧ್ಯೆ, ಕೊಳಚೆ ನೀರನ್ನು ಚೆನ್ನಾಗಿ ಸೋಪು ಹಾಕಿ ತೊಳೆದು ಶುದ್ಧವಾಗಿ ಕಾಣಿಸುವಂತೆ ಮಾಡಿ ಬಾಟಲಿಯಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಪೂರೈಸುವ ಕಂಪನಿಗಳು ಅಂಗಾತ ನೆಲಕಚ್ಚತೊಡಗಿವೆ ಎಂದು ಮೂಲಗಳು ವರದ್ದಿ ಸುರಿದಿವೆ. ತೀವ್ರ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ, ಈ ಕಂಪನಿಗಳು ನೀರನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿರುವ ವರದ್ದಿಗಳು ಅಲ್ಲಲ್ಲಿಂದ ಬೊಗಳೂರು ಬ್ಯುರೋಗೆ ಬಂದು ತಲುಪತೊಡಗಿವೆ.

ಇಷ್ಟು ಮಾತ್ರವಲ್ಲದೆ, ಅಮೆರಿಕದಲ್ಲಿ ಟಾಯ್ಲೆಟ್ ಪೇಪರ್ ಉದ್ಯಮವೂ ಮಕಾಡೆ ಮಲಗಿದ್ದು, ಎಲ್ಲರೂ ಇದೀಗ ನೀರು ಉಪಯೋಗಿಸಲಾರಂಭಿಸಿರುವುದಾಗಿ ನಮ್ಮ ಬಾತ್ಮೀದಾರರಾದ ಬರಾಕ್ ಹೋಗಾಕ್ ಒಬಾಮ ಅವರು ಬೊಗಳೂರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಇನ್ನೊಂದೆಡೆ, ಚಂದ್ರನಲ್ಲಿ ನೀರು ಪತ್ತೆ ಮಾಡಿರುವುದರ ಹಿಂದೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುವ ಸಂಚು ಇದೆ ಎಂದು ಕಾನ್guess ವಕ್ತಾರರು ಅವಸರದ ಪತ್ರಿಕಾಗೋಷ್ಠಿ ಕರೆದು ದೂರಿದ್ದಾರೆ. ರಮ್ಜಾನ್ ಮಾಸ ಮುಗಿದ ತಕ್ಷಣವೇ ಆ ಚಂದ್ರನಲ್ಲಿ ನೀರು ಇದೆ ಎಂದೆಲ್ಲಾ ವರದ್ದಿ ಮಾಡಿರುವುದು, ಚಂದ್ರನನ್ನು ಮುಂದೆಂದೂ ಕಾಣಿಸದಂತೆ ಮಾಡುವ ಸಂಚು ಎಂದು ಅವರು ದೂರಿದ್ದಾರೆ. ಮಾತ್ರವಲ್ಲದೆ, ಚಂದ್ರನ ಮೇಲೆ ನೀರು ಇರುವಿಕೆಯನ್ನು ಪತ್ತೆ ಹಚ್ಚಿದ ಇಸ್ರೋ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಚಂದ್ರನಲ್ಲಿರುವ ನೀರಿನಲ್ಲಿ ಅಲ್ಪಸಂಖ್ಯಾತರಿಗೆ, ದಲಿತರಿಗೆ ಮೀಸಲಾತಿ ಇರಬೇಕು. ಒಳಮೀಸಲಾತಿಯನ್ನೂ ನೀಡಬೇಕು ಎಂದು ಒತ್ತಾಯಿಸತೊಡಗಿದ್ದಾರೆ.

ಇಷ್ಟೆಲ್ಲದರ ನಡುವೆ, ಚಂದ್ರನಿಗೊಂದು ಕೊಳವೆ ಸಿಕ್ಕಿಸಿ, ಅಲ್ಲಿಂದ ನೀರು ತರುವ ಅಥವಾ ಕದಿಯುವ ಹುನ್ನಾರವೂ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

Tuesday, September 22, 2009

ಬೆಲೆ ಏರಿಕೆಗೆ 'ಆಟೋಮ್ಯಾಟಿಕ್' ಪ್ರತಿಭಟನೆ

(ಬೊಗಳೂರು ಅಪ್ರತಿಭ-ಟನೆ ಬ್ಯುರೋದಿಂದ)
ಬೊಗಳೂರು, ಸೆ.22- ಚೀಲ ತುಂಬಾ ನೋಟುಗಳನ್ನು ಹಾಕಿಕೊಂಡು ಜೇಬು ತುಂಬಾ ದಿನಸಿ ಸಾಮಾನು ಮತ್ತು ಒಂದು ಸಿಂಗಲ್ ತರಕಾರಿ ತುಂಡು ತರುವ ಸಾಧ್ಯತೆಯಿರುವ ಈ ಬೆಲೆ ಏರಿಕೆ ದಿನಗಳಲ್ಲಿ, ಕೇಂದ್ರದ ಪೀಪಿಏ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಪ್ರತಿಭಟಿಸಿ ಬೊಗಳೂರು ನಾಗರಿಕರು ಸ್ವಯಂಚಾಲಿತವಾಗಿ ಪ್ರತಿಭಟಿಸತೊಡಗಿದ್ದಾರೆ.

ವಿಶೇಷವೆಂದರೆ, ಈ ಪ್ರತಿಭಟನಾ ಆಂದೋಲನಕ್ಕೆ ಯಾರ ಕುಮ್ಮಕ್ಕು ಕೂಡ ಇಲ್ಲದಿರುವುದು ಮತ್ತು ಯಾರದ್ದೇ ಒತ್ತಡ, ಸಲಹೆ ಇತ್ಯಾದಿಗಳು ಅನಗತ್ಯವಾಗಿರುವುದು.

ಈ ಮಧ್ಯೆ, ಬೆಲೆ ಏರಿಕೆ ನಿಯಂತ್ರಿಸುವ ಬದಲು ನಾವು ಕಡಿಮೆ ಖರ್ಚು ಮಾಡುತ್ತಿದ್ದೇವೆ, ನೀವೂ ಕಡಿಮೆ ಖರ್ಚು ಮಾಡಿ ಎಂಬ ಸಂದೇಶ ನೀಡಲು ಕೇಂದ್ರದ Unprecedented Price-rise Agenda ಸರಕಾರ ನಿರ್ಧರಿಸಿದೆ.

ಸಚಿವರು, ಸಂಸದರು ಮತ್ತು 'ಸೂಪರ್ ಪ್ರಧಾನಿನಿ'ಯರೆಲ್ಲರೂ ಇಕಾನಮಿ ಕ್ಲಾಸ್ ಎನ್ನುತ್ತಾ ಬೊಗಳೆ ರಗಳೆ ಬ್ಯುರೋಗಿಂತಲೂ ಜೋರಾಗಿ ಬೊಗಳೆ ಬಿಡತೊಡಗಿರುವುದು ನಮ್ಮ ಬ್ಯುರೋದ ಅಸ್ತಿತ್ವಕ್ಕೇ ಬಂದ ಸವಾಲು ಆಗಿದೆ. ಕೇಂದ್ರದಲ್ಲಂತೂ ಸಾಕಷ್ಟು ಬೊಗಳೆ ಬ್ಯುರೋಗಳು ಅಣಬೆಗಳಂತೆ ಮೇಲೇಳುತ್ತಿವೆ. ಈ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ದುಂದುವೆಚ್ಚದ ಮಿತವ್ಯಯ ಬೋಧಿಸುತ್ತಾ ಬೊಗಳೆ ಬ್ಯುರೋ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆಯಾದರೂ, ಅದನ್ನು ಎಲ್ಲಿಯೂ ತೋರ್ಪಡಿಸಿಕೊಳ್ಳುತ್ತಿಲ್ಲ. ಜಾನುವಾರು ದರ್ಜೆಯಲ್ಲಿ ಪ್ರಯಾಣ ಮಾಡುವ ಸಲಹೆ ನೀಡಿದ ಕೇಂದ್ರದ ವಿದೇಶದ ಅಂಗವಾಗಿರುವ ಸಚಿವ ತಶಿ ಶರೂರ್ ಅವರನ್ನು ಪಶುಸಂಗೋಪನಾ ಖಾತೆ ಸಚಿವರನ್ನಾಗಿಸಬೇಕು ಎಂದು ಬೊಗಳೂರು ಬ್ಯುರೋ ಬಾಯಿಬಿಟ್ಟು ಆಗ್ರಹಿಸತೊಡಗಿದೆ.

ಇದಕ್ಕಾಗಿ ದೇಶದ ಪ್ರಜೆಗಳೆಲ್ಲರನ್ನೂ ಜಾನುವಾರುಗಳೆಂದು ಪರಿಗಣಿಸಿ, ಅವರಿಗೆ ದಿನಸಿ ಆಹಾರದ ಅಗತ್ಯವಿಲ್ಲ, ಅಕ್ಕಿಯಂತೂ ತೀರಾ ಅನಗತ್ಯ (ಇದಕ್ಕಾಗಿ ಅದರ ಬೆಲೆ 35 ರೂಪಾಯಿಗೂ ಹೆಚ್ಚು ಮಾಡಲಾಗಿದೆ). ಈ ಎಲ್ಲ ದುಂದುವೆಚ್ಚವನ್ನು ನಿಲ್ಲಿಸಿ ಮಿತವ್ಯಯ ಮಾಡಬೇಕು ಎಂದು ಪರಿಗಣಿಸಿರುವ ಕೇಂದ್ರದ ಸರಕಾರದ ಪಕ್ಷೋದ್ಧಾರದ ಗಮನವನ್ನು ಇತ್ತ ಕಡೆ ಸೆಳೆಯುವುದಕ್ಕಾಗಿ ಸಕಲ ಜನ-ಜಾನುವಾರುಗಳೊಂದಿಗೆ ಅಪ್ರತಿಭ-ಟನೆ ಮಾಡಲು ನಿರ್ಧರಿಸಲಾಗಿದೆ.

ಈ ಪ್ರತಿಭಟನೆಯ ಅಂಗವೇ ಬಾಯ್ಮುಚ್ಚುವ ಅಂಗ. ಅಂದರೆ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಯಾವುದೇ ಆಹಾರ ಪದಾರ್ಥ ಕೊಳ್ಳುವುದು ಅಸಾಧ್ಯವಾಗಿರುವುದರಿಂದ ಆಟೋಮ್ಯಾಟಿಕ್ ಆಗಿ ಉಪವಾಸ ಅನ್ನ ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ. ಇದು ಬೊಗಳೂರು ಜನತೆಗೆ ಗಾಂಧೀಜಿಯೇ ಹೇಳಿಕೊಟ್ಟಿದ್ದು, ಈಗಿನ ಸಾನಿಯಾ ಗಾಂಧೀಜಿಗಳು ಕೂಡ ಅದನ್ನೇ ಅನುಸರಿಸುವಂತೆ ಜನತೆಗೆ ಕರೆ ನೀಡಿರುವುದನ್ನು ಬೊಗಳೂರು ಬ್ಯುರೋ ಮಾತ್ರವೇ ವರದಿ ಮಾಡಿದೆ.

ಇದನ್ನು ಕೇಳಿ ಮಾನ್ಯ ನಿಧಾನ ಮಂತ್ರಿಗಳು ಮತ್ತವರ ಸಚಿವರ ಬಳಗವು ಮಾಧ್ಯಮಗಳ ಕಣ್ಣಿಗೆ ಬೀಳದಂತೆ ನಾಪತ್ತೆಯಾಗಿ ಬೊಗಳೂರಿನಲ್ಲಿ ಅವಿತು ಕೂತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

Thursday, September 17, 2009

ತಿರುಪತಿ ಲಡ್ಡು ಮಾತ್ರವಲ್ಲ, ನಾಮಕ್ಕೂ ಪೇಟೆಂಟ್!

(ಬೊಗಳೂರು ನಾಮ ಹಾಕಿಸಿಕೊಳ್ಳೋ ಬ್ಯುರೋದಿಂದ)
ಬೊಗಳೂರು, ಸೆ.17- ತಿರುಪತಿಯ ನಕಲಿ ಲಡ್ಡು ತಯಾರಿಸದಂತೆ ನಿರ್ಬಂಧ ವಿಧಿಸಿರುವ ಬೆನ್ನಲ್ಲೇ, ನಾಮ ಹಾಕಿಸಿಕೊಳ್ಳುವುದಕ್ಕೂ ಪೇಟೆಂಟ್ ಮಾಡಿಸಬೇಕು ಎಂದು ಬೊಗಳೂರು ಪ್ರಜೆಗಳು ವ್ಯರ್ಥಾಲಾಪ ಆರಂಭಿಸಿದ್ದಾರೆ.

ಈಗಾಗಲೇ ನಮ್ಮನ್ನು ಆಳಲೆಂದು ನಾವು ಆರಿಸಿ ಕಳುಹಿಸಿದವರೆಲ್ಲರೂ ಬೊಗಳೂರಿನ ಬಡ ಪ್ರಜೆಗಳಿಗೆ ಸಾಕಷ್ಟು ಬಾರಿ ನಕಲಿ ಮೂರ್‌ನಾಮಗಳನ್ನು ಹಾಕಿದ್ದಾರೆ. ಕೇಂದ್ರ ಸರಕಾರವಂತೂ ತಿನ್ನುವ ಆಹಾರ ವಸ್ತುಗಳ ಬೆಲೆಯನ್ನು ಬೇಕಾಬಿಟ್ಟಿ ಏರಿಸಿ, ಆರಾಮವಾಗಿ ಪ್ರಯಾಣದಲ್ಲಿ ಮಿತವ್ಯಯ ಮಾಡಿ ಎಂಬಿತ್ಯಾದಿ ಗಿಮಿಕ್‌ಗಳ ಮೂಲಕ ಈಗಾಗಲೇ ಪ್ರಜೆಗಳಿಗೆ ದೊಡ್ಡ ದೊಡ್ಡ ಮೂರು ನಾಮ ಹಾಕಲಾರಂಭಿಸಿದೆ. ಇದೇ ರೀತಿ ರಾಜ್ಯ ಸರಕಾರದಲ್ಲಿ ಭದ್ರವಾಗಿ ನೆಲೆಯಾಗಿರುವ ಮಂತ್ರಿ-ಮಾಗಧರು, ಅಧಿಕಾರಿಗಳು ಕೂಡ ಗಣಿ ಲೂಟಿ, ಇದ್ದಿಲು-ಮಣ್ಣು-ಮಸಿ ಹಗರಣ, ಭೂಕಬಳಿಕೆ ಮುಂತಾದ ಹಗರಣಗಳು, ವಿದ್ಯುತ್ ಕೊಡುತ್ತೇವೆ ಎಂಬೋ ಭರವಸೆಗಳ ಹೆಸರಲ್ಲಿ ನಕಲಿ ನಾಮ ಹಾಕುತ್ತಿರುವುದನ್ನು, ನಮ್ಮನ್ನಾಳುವವರ ಅಂದ-ಚಂದ-ವೈಭವವನ್ನೆಲ್ಲ ಕಣ್ಣಾರೆ ಕಾಣಲಾರಂಭಿಸಿದ್ದಾರೆ.

ಚೀಲ ತುಂಬಾ ಹಣ ಒಯ್ದು, ಜೇಬು ತುಂಬಾ ದಿನಸಿ ಸಾಮಗ್ರಿ ಖರೀದಿಸಬೇಕಾಗಿರುವ ಈ ದಿನಗಳಲ್ಲಿ, ನಾಮ ಹಾಕಿಸಿಕೊಳ್ಳೋದಕ್ಕೂ ಕೆಲವರ ಬಳಿ ಹಣವಿಲ್ಲದಿರುವುದು ಕಂಡುಬಂದಿದೆ. ಹಿಂದೆ, ವಿನಿವಿಂಕ್‌ನಿಂದ ಬಿದ್ದ ನಾಮದಿಂದಲೇ ಪ್ರಜೆಗಳು 'ಚಾ'ತರಿಸಿಕೊಂಡಿಲ್ಲ, ಅದರ ನಡುವೆ ಆ ಸ್ಕೀಮು, ಈ ಸ್ಕೀಮು ಎಂಬಿತ್ಯಾದಿ ಸಾಲೋಸಾಲಾಗಿ ಬ್ಲೇಡು ಕಂಪನಿಗಳು ನಾಮ ಹಾಕುತ್ತಲೇ ಇರುತ್ತವೆ. ಈ ನಾಮದ ಮಹಿಮೆ ಅಪಾರವಾಗಿ, ನಾಮದ ಬಲ ಜೋರಾಗಿ ಜನರು ಜಾಗತಿಕ ಹಣಕಾಸು ಬಿಕ್ಕಟ್ಟಿನ ಮಧ್ಯೆ ಅಳಿದುಳಿದ ಬಿಡಿಗಾಸನ್ನೂ ಕಳೆದುಕೊಳ್ಳತೊಡಗಿರುವುದು ಈ ಪೇಟೆಂಟ್ ಕುರಿತ ಜನಾಗ್ರಹಕ್ಕೆ ಮೂಲ ಹೇತುವಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆಯೇ, ನಾಲ್ಕನೇ ನಾಮ ಹಾಕಲು ಭಾರೀ ಸಿದ್ಧತೆ ನಡೆದಿದ್ದು, ವಿಮಾನ ಪ್ರಯಾಣದಲ್ಲಿ ಎಕಾನಮಿ ದರ್ಜೆ, ಬ್ಯುಸಿನೆಸ್ ದರ್ಜೆ, ಎಕ್ಸಿಕ್ಯೂಟಿವ್ ದರ್ಜೆ ಮುಂತಾದವುಗಳು ಮಾತ್ರವಲ್ಲದೆ, ಹಸುಗಳ ದರ್ಜೆ, ನಾಯಿ-ನರಿಗಳ ದರ್ಜೆಗಳನ್ನೂ ತೆರೆಯುವ ಮೂಲಕ ಮತ್ತೊಂದು ನಾಮದ ಸ್ಮರಣೆಯೊಂದು ಕೇಳಿಬರುತ್ತಿದೆ ಎಂದು ಇಲ್ಲಿ ವರದಿಯಾಗಿರುವುದು, ಬಡ ಪ್ರಜೆಗಳೆಲ್ಲರೂ, ಇಷ್ಟೆಲ್ಲಾ ನಾಮಗಳನ್ನು ಎಲ್ಲಿ ಧರಿಸುವುದು ಎಂಬ ಕುರಿತು ಕಕ್ಕಾಬಿಕ್ಕಿಯಾಗಿದ್ದಾರೆ ಎಂದು ಅಪ್ರತ್ಯಕ್ಷದರ್ಶಿ ವರದಿಗಾರರು ವರದ್ದಿ ತಂದು ಸುರುವಿದ್ದಾರೆ.

ಇದ್ದ ಬದ್ದವರ ಕೈಯಲ್ಲಿ ನಮಗೆ ನಾಮ ಹಾಕಿಸಿಕೊಳ್ಳೋದೇ ಆಯ್ತು. ಹೀಗಾಗಿ ಈ ತಿರುಪತಿ ಲಡ್ಡಿನ ಬದಲು, ತಿರುಪತಿಯ ನಕಲಿ ನಾಮ ಹಾಕುವ ಈ ಪ್ರಕ್ರಿಯೆಗಳಿಗೆ ಪೇಟೆಂಟ್ ಮಾಡಿಸಿಟ್ಟರೆ ಸ್ವಲ್ಪವಾದರೂ ಉಸಿರುಬಿಡಬಹುದು ಎಂಬುದು ಬೊಗಳೂರು ಪ್ರಜೆಗಳ ಲೆಕ್ಕಾಚಾರ.

Monday, September 14, 2009

Blame-Game: ನಿಮಗೆ ಬ್ಲೇಮ್, ನಮಗೆ ಗೇಮ್ ಎಂದ ಪಾಕ್!

(ಬೊಗಳೂರು Blame ಕ್ರೀಡಾ ಬ್ಯುರೋದಿಂದ)
ಬೊಗಳೂರು, ಸೆ.14- ಮುಂಬೈ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವು blame ಮಾತ್ರ ಮಾಡಬೇಕು, game ನಮಗೆ ಇರಲಿ ಎಂದು ಪಾತಕಿ ಸ್ತಾನವು ಸ್ಪಷ್ಟಪಡಿಸಿದೆ.

ಮುಂಬೈ ಮೇಲೆ ನಡೆದ ದಾಳಿಯ ವರ್ಷಾಚರಣೆ ಸಮೀಪಿಸುತ್ತಿರುವಂತೆಯೇ ಉಭಯ ರಾಷ್ಟ್ರಗಳ ನಡುವೆ ಸೌಹಾರ್ದತೆ ಏರ್ಪಡಲು ಹೊಸ ಹೊಸ ಸಾಧ್ಯತೆಗಳನ್ನು ಪರದಾಡಿ ಪರದಾಡಿ ಹುಡುಕಲಾಗುತ್ತಿದ್ದು, ಕಳೆದ ಒಂದು ವರ್ಷದಿಂದ "ಉಗ್ರರ ವಿರುದ್ಧ ಕ್ರಮ ಕೈಗೊಳ್ಳೀssssssssssss, ಇಲ್ಲವಾದರೆ ನಾವೇ ಕ್ರಮ ಕೈಗೊಳ್ಳುತ್ತೇವೆ" ಎಂದು ಪದೇ ಪದೇ ಹೇಳುತ್ತಿದ್ದ ಭಾರತ ಸರಕಾರವು ಪಾತಕಿಸ್ತಾನದ ಮೇಲೆ Blame ಮಾತ್ರ ಮಾಡಿ, Game ಆಡಲು ಅದಕ್ಕೆ ಬಿಟ್ಟಿರುವುದಾಗಿ ಮೂಲಗಳು ವರದ್ದಿ ಮಾಡಿವೆ.

"ನೀವು ಬ್ಲೇಮ್ ಮಾಡಿ, ನಾವು ಗೇಮ್ ಆಡುತ್ತೇವೆ" ಎಂದು ಇತ್ತೀಚೆಗೆ ಪಾತಕಿಸ್ತಾನದಿಂದ ಭಾರತದ ನಿಧಾನಮಂತ್ರಿ ಸೋನಿಯಾ ಸಿಂಗ್.... ಅಲ್ಲಲ್ಲ ಮನಮೋಹಕ ಸಿಂಗ್ ಅವರಿಗೆ ಪಾಕಿಸ್ತಾನದ ಸರಕಾರದ ಮುಖ್ಯಸ್ಥರೂ ಆಗಿರುವ ಐಎಸ್ಐ ಮುಖ್ಯಸ್ಥರು ಪತ್ರ ಬರೆದಿರುವುದಾಗಿ ಮೂಲಗಳು ಬೊಗಳೆ-ರಗಳೆಗೆ ತಿಳಿಸಿಲ್ಲ.

ಮುಂಬೈ ಮೇಲೆ ನಮ್ಮವರು ದಾಳಿ ಮಾಡಿ ಒಂದು ವರ್ಷವಾಗ್ತಾ ಬಂದ್ರೂ ನಿಮ್ ಕೈಯಲ್ಲಿ ಏನೂ ಮಾಡಲಾಗಿಲ್ಲ ಎಂಬ ಕುಹಕ ನಗೆಯೊಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಮೂಲಿ ಪ್ರಕ್ರಿಯೆಯಾಗಿಬಿಟ್ಟಿರುವ, ಗಡಿ ನಿಯಂತ್ರಣ ರೇಖೆ ದಾಟಿ ನುಸುಳುವ ಪ್ರಕ್ರಿಯೆಯ ಮೂಲಕ ಭಾರತ ಪ್ರವೇಶಿಸಿರುವುದಾಗಿ ಬೊ.ರ. ಬ್ಯುರೋದ ಮಂದಿ ಕದ್ದು ಮುಚ್ಚಿ ವರದ್ದಿ ತಂದು ಹಾಕಿದ್ದಾರೆ.

(ಕೆಲವಾರು ದಿನಗಳಿಂದ ಬೊಗಳೂರು ಬ್ಯುರೋ ಸಿಕ್ಕಾಪಟ್ಟೆ ಧೂಳು ತಿನ್ನುತ್ತಿದ್ದ ಕಾರಣ ಚಾ-ತರಿಸಿಕೊಂಡು ಬಳಿಕ ಧೂಳೊರೆಸಿ ವಾಪಸ್ ಮರಳಲಾಗಿದೆ. ಆದರೆ, ಈ ಸಮಯದಲ್ಲಿ ನಮ್ಮ ಬೊಗಳೆ-ರಗಳೆ ಪತ್ರಿಕೆ ಲಭಿಸದ ದಾರವಿಲ್ಲದ ಚಂದಾರಹಿತರು, ಅಡ್ಜಸ್ಟ್ ಮಾಡಿಕೊಂಡು, ಮುಂದಿನ ತಿಂಗಳ ಬಿಲ್‌ನಲ್ಲಿ ಸೇರಿಸಿ ನಮಗೆ ಪಾವತಿಸಲು ಕೋರಲಾಗಿದೆ.)

Tuesday, August 25, 2009

ಪಾತಕಿಸ್ತಾನ ಜೊತೆ ಅನರ್ಥಪೂರ್ಣ ಮಾತುಕತೆಗೆ ಸಿದ್ಧ

(ಬೊಗಳೂರು ಬಂಬಡಾ ಬ್ಯುರೋದಿಂದ)
ಬೊಗಳೂರು, ಆ.25- ಪಾತಕಿಸ್ತಾನದ ಜೊತೆಗೆ ನಾವು ಟೂ ಬಿಡುತ್ತೇವೆ, ಕೋಪ.... ಮಾತನಾಡುವುದೇ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಆದರೂ ಈ ಹುಸಿಮುನಿಸು ಆಗಾಗ್ಗೆ ಶಮನವಾಗಿ, ಎಲ್ಲಾದರೂ ನಮ್ಮ ಕೈಮೀರಿ, ನಮಗರಿವಿಲ್ಲದಂಯೆತೇ ಮಾತುಕತೆ ನಡೆಸಿಬಿಟ್ಟರೆ...? ಎಂಬ ಆತಂಕವೂ ಭಾರತವನ್ನು ಆಳುತ್ತಿರುವವರಿಗಿದೆ. ಹೀಗಾಗಿ, ಪಾತಕಿಸ್ತಾನದೊಂದಿಗೆ "ಅರ್ಥಪೂರ್ಣ" ಮಾತುಕತೆ ಇಲ್ಲ ಎಂಬ ಪದಗುಚ್ಛವನ್ನು ಪತ್ರಿಕಾ ಹೇಳಿಕೆಯೊಳಗೆ ಸೇರಿಸಲಾಗಿದೆ.

ಈ ಮೂಲಕ, ಖಂಡಿತವಾಗಿಯೂ ಪಾತಕಿಸ್ತಾನದ ಜೊತೆಗೆ ಅನರ್ಥಪೂರ್ಣವಾದ ಮಾತುಕತೆ ನಡೆಸುತ್ತೇವೆ ಎಂದು ವಿದೇಶದಅಂಗಿ (ಹಾಕಿಕೊಳ್ಳುವ) ಸಚಿವರು ಸ್ಪಷ್ಟಪಡಿಸಿದ್ದಾರೆ.

ಪಾತಕಿಸ್ತಾನವು ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ, ಆದರೆ ಕ್ರಮ ಕೈಗೊಂಡಂತೆ ಆಗಾಗ್ಗೆ ಏನೇನೋ ಬಡಬಡಾಯಿಸುತ್ತಿರುತ್ತದೆ ಎಂಬುದನ್ನು ಮನಗಂಡಿರುವ ಬೊಗಳೂರು ಪ್ರಜೆಗಳು, ವಿದೇಶದ ಅಂಗವಾಗಿರುವ ಸಚಿವರ ವಿರುದ್ಧ ಪ್ರತಿಭಟನೆ ನಡೆಸದಿರಲು ತೀರ್ಮಾನಿಸಿದ್ದಾರೆ. ಪ್ರತಿಭಟನೆ ನಡೆಸಿದರೂ ಪ್ರಯೋಜನವಿಲ್ಲ ಎಂಬುದೇ ಅವರ ಈ ತೀರ್ಮಾನಕ್ಕೆ ಕಾರಣ.

ಭಾರತ-ಪಾತಕಿಸ್ತಾನಗಳ ನಡುವಣ ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಎಲ್ಲಾದರೂ "ಧನಾ"ತ್ಮಕ ತಿರುವು ದೊರೆಯುತ್ತದೆಯೋ ಎಂದು ಎರಡೂ ದೇಶಗಳ ರಾಜಕಾರಣಿಗಳು ಕಾಯುತ್ತಿದ್ದಾರೆ. ಈ ಧನ ಲಭ್ಯವಾದಲ್ಲಿ, ಈಗಾಗಲೇ ಭ್ರಷ್ಟ ರಾಜಕಾರಣಿಗಳಿಂದಾಗಿ ಭ್ರಷ್ಟ ದೇಶಗಳ ಪಟ್ಟಿ ಸೇರಿಕೊಂಡುಬಿಟ್ಟಿರುವ ಎರಡು ದೇಶಗಳಿಗೂ ತಮ್ಮ ರ‌್ಯಾಂಕಿಂಗ್ ವೃದ್ಧಿಸಿಕೊಳ್ಳಲು ಸಹಾಯಕವಾಗುತ್ತದೆ ಎಂಬುದು ಅವರ ನಂಬಿಕೆ.

ಪಾತಕಿಸ್ತಾನವು ಭರವಸೆಗಳನ್ನು ಪೂರೈಸುವುದಿಲ್ಲ ಎಂದು ಅಲ್ಲಿನ ಮಂಡೆಗಳ ಕಂಪ್ಯೂಟರುಗಳಲ್ಲಿ ಡೀಫಾಲ್ಟ್ ಪ್ರೋಗ್ರಾಂ ಆಗಿ ಫಿಕ್ಸ್ ಮಾಡಲಾಗಿದೆ. ಆದರೆ, ಅಲ್ಲಿನ ಎಲ್ಲ ಮಂಡೆಗಳು ಕೂಡ ಭರವಸೆಗಳನ್ನು ಧಂಡಿಯಾಗಿ ನೀಡುತ್ತವೆ. ಅಂತಾರಾಷ್ಟ್ರೀಯ ಸಮುದಾಯವನ್ನು ಸಂತುಷ್ಟಗೊಳಿಸಲು ಇದು ಸಾಕಾಗುತ್ತದೆ ಎಂದು ಭಾರತದ ಜಾರಕಾರಣಿಗಳು ಬಲವಾಗಿ ನಂಬಿದ್ದಾರೆ.

ಮುಂಬೈ ಮೇಲಿನ ದಾಳಿಗೆ ಸಂಬಂಧಿಸಿದಂತೆ ಅದೆಷ್ಟೋ ಸಾಕ್ಷ್ಯಾಧಾರಗಳ ಸಹಿತ ಅಜ್ಮಲ್ ಎಂಬ ಕಸ ಸಿಕ್ಕಿಬಿದ್ದಿದ್ದರೂ, ಆತನಿಗೆ ಏನೂ ಆಗದಂತೆ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಕ್ಷಣೆ ನೀಡುತ್ತಾ, ಬಿರಿಯಾನಿ, ಮಟನ್ ಎಲ್ಲ ನೀಡುತ್ತಾ ಆತನಿಗೆ ಐಷಾರಾಮದ ವ್ಯವಸ್ಥೆ ಮಾಡಿರುವುದು ಯಾಕೆ ಎಂಬುದರ ಕುರಿತು ಸ್ವತಃ ಪಾಕಿಸ್ತಾನವೇ ಅಚ್ಚರಿ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವ ಕುರಿತು ಭಾರತದಲ್ಲಿ ಜನಾಕ್ರೋಶವಿದ್ದರೂ, ನಮಗಿಂತ ಯಾರೂ ಮೇಲಲ್ಲ ಎಂದು ಸರಕಾರ ತೋರಿಸಿಕೊಡುತ್ತಿದೆ ಎಂಬುದನ್ನು ಬೊಗಳೂರು ಜನತೆ ಪತ್ತೆ ಹಚ್ಚಿಬಿಟ್ಟಿದ್ದಾರೆ. ಇದರ ಹಿಂದಿರುವ (ಓಟ್) ಬ್ಯಾಂಕಿನ ಕೈವಾಡವನ್ನು ಕೂಡ ತಳ್ಳಿ ಹಾಕಲು ಮೂಲಗಳು ನಿರಾಕರಿಸಿವೆ. ಸದ್ಯಕ್ಕೆ ಓಟುಗಳೆಲ್ಲವನ್ನೂ ಸ್ವಿಸ್ ಬ್ಯಾಂಕಿನಲ್ಲಿ ಭದ್ರ ಮಾಡಿ ಇರಿಸಲಾಗಿದೆ ಎಂಬುದನ್ನು ಕೂಡ ಮೂಲಗಳು ಪತ್ತೆ ಹಚ್ಚಿವೆ.