ಬೊಗಳೆ ಸಂಚೋದನೆ: ಪುಣೆ ಸ್ಫೋಟದ ರೂವಾರಿ ಒಬ್ಬ ಮಹಿಳೆ!

Tuesday, February 16, 2010

(ಬೊಗಳೂರು ಓಂ ಶಾಂತಿ ಓಂ ಬ್ಯುರೋದಿಂದ)
ಬೊಗಳೂರು, ಫೆ. 16- ಪುಣೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನು ಬೊಗಳೂರು ಬ್ಯುರೋದ ಸಿಬ್ಬಂದಿಯೂ ತನಿಖೆ ಮಾಡಿದ್ದು, ಪ್ರಧಾನ ಆರೋಪಿಯನ್ನು ಬೊಗಳೂರು ಏಕಸದಸ್ಯ ಬ್ಯುರೋದ ಸರ್ವ ಸದಸ್ಯರೂ ಸೇರಿಕೊಂಡು ಪತ್ತೆ ಹಚ್ಚಿದ್ದಾರೆ.

ಪುಣೆ ಸ್ಫೋಟದ ಹಿಂದಿನ ರೂವಾರಿ ಶಾ ಎಂಬ ಪದದಿಂದ ಆರಂಭವಾಗುವ ಹೆಸರಿರುವ ಒಬ್ಬ ಮಹಿಳೆ ಎಂದು ಆರಂಭಿಕ ತನಿಖೆಯಿಂದ ಗೊತ್ತಾದ ತಕ್ಷಣವೇ ಬೊಗಳೂರಿನ ಬೊಗಳಿಗರ ತಂಡವು ನೇರವಾಗಿ ತನಿಖೆಗೆ ಭಾರತ-ಪಾಕಿಸ್ತಾನ ಗಡಿಗೆ ಹೋಯಿತು.

ಮಹಿಳೆ ಎಂಬ ಸುಳಿವು ಪತ್ತೆಯಾಗುವುದಕ್ಕೂ ಕಾರಣವಿದೆ. ಇದೊಂದು ಸಿಲಿಂಡರ್ ಸ್ಫೋಟ ಪ್ರಕರಣ ಎಂದು ಆರಂಭಿಕ ಮಾಹಿತಿಗಳು ಹೇಳಿದ್ದಾಗಲೇ, ಬೊಗಳೂರು ಬ್ಯುರೋ, ಅಡುಗೆ ಸಿಲಿಂಡರ್ ಆಗಿರುವುದರಿಂದ ಇದರ ಹಿಂದೆ ಖಂಡಿತ ಮಹಿಳೆಯೊಬ್ಬರು ನಿಂತಿದ್ದಿರಬಹುದು ಎಂದು ಶಂಕಿಸಿತ್ತು. (ಈಗ ಕಾಲ ಬದಲಾಗಿ, ಮಹಿಳೆಯರ ಬದಲಾಗಿ ಕೆಲವೊಮ್ಮೆ ಪುರುಷರು ಕೂಡ ಅಡುಗೆ ಸಿಲಿಂಡರ್ ಇಟ್ಟುಕೊಂಡು ಮನೆಯಲ್ಲಿ ಅಡುಗೆ ಮಾಡುತ್ತಿದ್ದರೂ ಕೂಡ!).

ಈ ಮಹಿಳೆಯ ಹೆಸರು 'ಶಾ'ದಿಂದ ಆರಂಭವಾಗುತ್ತಿದೆ ಎಂದು ತಿಳಿದ ತಕ್ಷಣ, ಇದಕ್ಕೂ ಪಾತಕಿಸ್ತಾನದ ಬಗೆಗೆ ಕೇಂದ್ರ ಸರಕಾರದ ನೀತಿಗೂ ಸಂಬಂಧವಿದೆಯೇ ಎಂದು ಹೊಳೆಯಿತು. ತಕ್ಷಣವೇ ನಮ್ಮ ಸರಕಾರ ಹೇಳುತ್ತಿರುವ ಶಾಂತಿ ಮಂತ್ರವೇ ನೆನಪಾದ ತಕ್ಷಣ, ಈ ಮಹಿಳೆ ಬೇರಾರೂ ಅಲ್ಲ, ಶಾಂತಿ ಎಂಬುದು ಖಚಿತವಾಯಿತು.

ಇದರೊಂದಿಗೆ, ಪುಣೆ ಸ್ಫೋಟದಲ್ಲಿ ಶಾಂತಿಯ ಕೈವಾಡವಿರುವುದು ಬಹಿರಂಗಗೊಂಡಂತಾಗಿದೆ. ಭಯೋತ್ಪಾದನೆ ಕೈಬಿಡದೆ ಶಾಂತಿಯ ಕುರಿತಾದ ಮಾತುಕತೆಯನ್ನು ಪ್ರಪೋಸ್ ಮಾಡುವುದೇ ಇಲ್ಲ ಎಂದು ಹೇಳುತ್ತಿದ್ದ ಯುಪಿಎ ಸರಕಾರ, ಇತ್ತೀಚೆಗೆ ತೊಂದರೆ ಇಲ್ಲ, ಶಾಂತಿಯೇ ಬೇಕು ಎಂದು ಹಠ ಹಿಡಿದು ಪ್ರಸ್ತಾಪ ಮುಂದಿಟ್ಟಿತ್ತು. ಇದೀಗ ಈ ಶಾಂತಿಯೇ ಈ ಅಶಾಂತಿಗೆ ಕಾರಣ ಎಂದು ಬೊಗಳೂರು ಬ್ಯುರೋ ಪತ್ತೆ ಹಚ್ಚಿ, ಸಂಚೋದನೆ ನಡೆಸಿದೆ.

Read more...

Aunty-Mosquito ಸಾಫ್ಟ್-ವೇರ್ !

Wednesday, February 03, 2010

(ಬೊಗಳೂರು ನೆಟ್ಗಳ್ಳರ ಬ್ಯುರೋದಿಂದ)
ಬೊಗಳೂರು, ಫೆ.3- ಪೆಪ್ಸಿ ಬಾಟಲಿಯಿಂದ ಸ್ಟ್ರಾ ಇಟ್ಟು ಕೋಲಾ ಹೀರುವಂತೆ ಮಾನವನ ರಕ್ತವನ್ನು ಹೀರುವ, ಕಿವಿ ತಮಟೆ ಒಡೆಯುವಂತೆ ಗುಂಯ್‌ಗುಡುವ ರಕ್ತ-ಪಿಪಾಸು ಸೊಳ್ಳೆಗಳಿಗೆ ಮುಕ್ತಿ ಕಾಣಿಸಲು ಹೊಸ ಸಾಫ್ಟ್ ವೇರ್ ಸಿದ್ಧವಾಗಿದೆ ಎಂಬ ಹಳೆ ವರದಿ ಪ್ರಕಟವಾಗಿರುವಂತೆಯೇ ಎಲ್ಲರ ಕಿವಿಗಳೂ ಒಮ್ಮೆಗೆ ನೆಟ್ಟಗಾಗಿವೆ.

Aunty ಸೊಳ್ಳೆಯಿಂದ ಕಚ್ಚಿಸಿಕೊಂಡು ತಡೆಯಲಾರದೆ ಈ Anti ಸೊಳ್ಳೆ ತಂತ್ರಜ್ಞಾನ ಕಂಡುಹುಡುಕಿದ ವಿಜ್ಞಾನಿಯ (ದೈಹಿಕ ಮತ್ತು ಮಾನಸಿಕ) ಸ್ಥಿತಿ ನೆನಪಿಸಿಕೊಂಡು ಗೊಳ್ಳನೆ ನಕ್ಕ ಅಸತ್ಯಾನ್ವೇಷಿ, ಈ ಬಗ್ಗೆ ತನಿಖೆ ನಡೆಸಿದಾಗ ಹೊಸ ಅಂಶವೊಂದು ಬಯಲಾಗಿದೆ.

ವಾಸ್ತವವಾಗಿ ವಿಜ್ಞಾನಿ ಇದನ್ನು ಕಂಡುಹುಡುಕಿದ್ದು ಸೊಳ್ಳೆಗಳಿಗಾಗಿ ಅಲ್ಲವಂತೆ. "Every new product comes out by an accident" ಎಂಬಂತೆ, ಸೊಳ್ಳೆಗಳಿಗೆ ಈ ಸಾಫ್ಟ್ ವೇರ್ ಮಾರಕವಾದದ್ದು ಕೂಡ ಒಂದು ಆಕ್ಸಿಡೆಂಟ್.

ಈ ಸುರಸುಂದರಾಂಗ ವಿಜ್ಞಾನಿಗೆ ಸುಂದರಿಯರ ವಿಪರೀತ ಕಾಟ. ಒಂಚೂರು ವಿಶ್ರಾಂತಿ ತೆಗೆದುಕೊಳ್ಳೋಣವೆಂದರೆ ಬಿಡಲೊಲ್ಲರು. ಅವರನ್ನು ದೂರ ಮಾಡುವುದು ಹೇಗೆ ಎಂಬ ಸಂಶೋಧನೆಯಲ್ಲಿದ್ದಾಗ ಹೆಣ್ಣು ಸೊಳ್ಳೆಗಳಿಗಷ್ಟೇ ಮಾರಕವಾಗಿರುವ ಈ ಸಾಫ್ಟ್ ವೇರ್ ಉತ್ಪತ್ತಿಯಾಗಿದೆ. ಮೊಬೈಲ್‌ ಫೋನ್‌ಗೂ ಇದು ಲಭ್ಯವೆಂಬುದು ಇತ್ತೀಚಿನ ಸುದ್ದಿ.

ಮಾನವನ ರಕ್ತ ಹೀರುವ ಹೆಣ್ಣು ಸೊಳ್ಳೆಗಳು ಈ ಸಾಫ್ಟ್ ವೇರ್ ಹೊರಡಿಸುವ ಶಬ್ದ ಬಂದತ್ತ ಧಾವಿಸುತ್ತವೆ. ಅದು ಕಂಪ್ಯೂಟರ್‌ನಿಂದ ಬರುವುದರಿಂದ ಅಲ್ಲಿ ಬ್ರೌಸ್ ಮಾಡುತ್ತಾ ಬೊಗಳೆ-ರಗಳೆ ಓದತೊಡಗುತ್ತವೆ. ಅಲ್ಲಿಗೆ ಬೇರೆಯವರ ರಕ್ತ ಹೀರುವ ಮನುಷ್ಯ ಪ್ರಾಣಿಗೆ ಸುಖ ನಿದ್ದೆ.

ಈ ಕುರಿತ ಹೆಚ್ಚಿನ ಮಾಹಿತಿ ನಿಮಗೆ ಇಲ್ಲಿ ಸಿಗಲಾರದು.

ಈ ಸಾಫ್ಟ್ ವೇರ್ ಇಲ್ಲಿ ಡೌನ್ ಲೋಡ್ ಮಾಡಬೇಕಿದ್ದರೆ ಬೊಗಳೆ-ರಗಳೆ ಓದುಗರಿಗೆ ಸಂಪೂರ್ಣ ಉಚಿತ. (ಶರತ್ತುಗಳು ಅನ್ವಯ. ಬೇಕಿದ್ದರೆ ನೀವು ಸೇವಾ ತೆರಿಗೆ, ಹ್ಯಾಂಡ್ಲಿಂಗ್ ಚಾರ್ಜ್, ಸಾಗಾಟ ವೆಚ್ಚ, ಕೂಲಿ ವೆಚ್ಚ, ತಯಾರಿಕಾ ವೆಚ್ಚ, ಊಟದ ಖರ್ಚು, ಮಾಹಿತಿ ಶುಲ್ಕ... ಇನ್ನೂ ಇತ್ಯಾದಿ ಏನೇನೋ ಶುಲ್ಕಗಳನ್ನೆಲ್ಲಾ ಸೇರಿಸಿ ಬೊಗಳೆ-ರಗಳೆ ಬ್ಯುರೋದ ಅಸತ್ಯಾನ್ವೇಷಿಗೆ ಕಳುಹಿಸಬಹುದು.
[ಒಂದಾನೊಂದು ಕಾಲದ ಬೊಗಳೆ ರಗಳೆಯ ವರದಿ]

Read more...

ಅಮೀರ್ ಖಾನ್ ಹೊಸ ಚಿತ್ರ: All Idiots!

Monday, January 18, 2010

(ಬೊಗಳೂರು ಈಡಿಯಟ್ಸ್ ಬ್ಯುರೋದಿಂದ)
ಬೊಗಳೂರು, ಜ.18 -ಕರ್‌ನಾಟಕದ ಬೆಳವಣಿಗೆಗಳಿಂದ ತೀವ್ರ ರೊಚ್ಚಿಗೆದ್ದಿರುವ ಆಮೀರ್ ಖಾನ್, ವಿಧು ವಿನೋದ್ ಚೋಪ್ರಾ ಮತ್ತು ರಾಮ್ ಗೋಪಾಲ್ ವರ್ಮಾ ಅವರೆಲ್ಲರೂ ಸೇರಿಕೊಂಡು 3 ಈಡಿಯಟ್ಸ್ ಎಂಬ ಚಿತ್ರವನ್ನು ಕಸದಬುಟ್ಟಿಗೆ ಹಾಕಿ All Idiots ಎಂಬ ಚಿತ್ರ ನಿರ್ಮಿಸಲು ತರಾತುರಿಯ ನಿರ್ಧಾರ ಕೈಗೊಂಡಿದ್ದಾರೆ.

ಇದು ನಿರಂತರವಾಗಿ ಓಡಲಿರುವ ಚಿತ್ರವಾಗಿದ್ದು, ಇದನ್ನು ವೀಕ್ಷಿಸಲು ಯಾವುದೇ ಶುಲ್ಕ ತೆರಬೇಕಾಗಿಲ್ಲ. ಈ ಚಿತ್ರವು ಚಿತ್ರ ಮಂದಿರಗಳಲ್ಲಿಯೂ ಪ್ರದರ್ಶಿಸಲ್ಪಡುವುದಿಲ್ಲ. ಬದಲಾಗಿ, ಕರ್ನಾಟಕದ ಬೀದಿ ಬೀದಿಗಳಲ್ಲಿ, ನಿಧಾನಸೌಧದ ಒಳಗೆ ಮತ್ತು ಹೊರಗೆ ಹಾಗೂ ಬಹುತೇಕ ವಾರ್ತಾ ವಾಹಿನಿಗಳ ಬ್ರೇಕಿಂಗ್ ನ್ಯೂಸ್ ವಿಭಾಗಗಳಲ್ಲೇ ಆಗಾಗ್ಗ ತೋರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಆದರೆ ಸಂಭಾಷಣೆ ಸಂದರ್ಭ ಮಧ್ಯೆ ಮಧ್ಯೆ 'ಕೀಂ....ssss' ಅಂತ ಸೌಂಡ್ ಬಂದರೆ ನಾವು ಜವಾಬ್ದಾರರಲ್ಲ ಎಂದೂ ನಿರ್ಮಾಪ-ಕರುಗಳು ತಿಳಿಸಿದ್ದಾರೆ.

ಈ ಮಧ್ಯೆಯೇ, ವೇದೇಗೌಡರ ಮಾಜಿ ಪ್ರಧಾನಿ ಎಂಬ ಬಿರುದನ್ನು ಕಿತ್ತೊಗೆಯಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿರುವ ಸಂಗತಿಯೂ ಎಲ್ಲಿಯೂ ಬೆಳಕಿಗೆ ಬರಲಿಲ್ಲ. ನೈಸ್ ರಸ್ತೆಯಲ್ಲಿ ಹೇಗೆ ನಿಯಂತ್ರಣವಿಲ್ಲದೆಯೇ ಎಕ್ಸ್‌ಪ್ರೆಸ್ ಆಗಿ ನಾಲಿಗೆಯನ್ನು ಹರಿಯಬಿಟ್ಟರೆ ಹೇಗಾಗುತ್ತದೆ ಎಂದು ಪ್ರಯೋಗ ಮಾಡಿ ನೋಡಿರುವುದಾಗಿಯೂ ವೇದೇಗೌಡರು ಪ್ರತಿಕ್ರಿಯಿಸಿದ್ದಾರೆ.

ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವೆಂದರೆ, ಈಗಾಗಲೇ ಈ ಕನ್ನಡ ನಾಡಿನಲ್ಲಿ ನಾನು ಹುಟ್ಟಬಾರದಾಗಿತ್ತು ಎಂದೆಲ್ಲಾ ಹೇಳಿದ್ದ ವೇದೇಗೌಡರ ಬಾಯಲ್ಲಿ ಬಂದ ಅತ್ಯಮೂಲ್ಯ ಶಬ್ದಗಳು.

Read more...

ಪದಕೋಶಕ್ಕೆ ತಿದ್ದುಪಡಿ: ವೇದೇಗೌಡ್ರ ಒತ್ತಾಯ

Monday, January 11, 2010

(ಬೊಗಳೂರು ಅಸಭ್ಯ ಪದಕೋಶ ಬ್ಯುರೋದಿಂದ)
ಬೊಗಳೂರು, ಜ.11- ಬಾಸ್ಟರ್ಡ್, ಬ್ಲಡಿ, ಬೋ... ಮಗ ಇತ್ಯಾದಿಗಳನ್ನು ಸಾಂವಿಧಾನಿಕ ಪದಕೋಶಕ್ಕೆ ಮತ್ತು ಸಾಧ್ಯವಾದರೆ ಆಕ್ಸ್‌ಫರ್ಡ್ ಪದಕೋಶಕ್ಕೂ, ಇದ್ದರೆ ಅದಕ್ಕಿಂತ ದೊಡ್ಡ ದೊಡ್ಡ ಡಿಕ್ಷನರಿಗೆ, ಫ್ರೆಂಚ್, ಗ್ರೀಸ್, ಇಟಲಿ, ಚೀನೀ ಇತ್ಯಾದಿ ಎಲ್ಲಾ ಭಾಷೆಗಳ ನಿಘಂಟುಗಳಿಗೂ ಸೇರಿಸಬೇಕು ಎಂದು ಪ್ರಾಂತೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಒತ್ತಾಯಿಸಿದ್ದಾರೆ.

ಗೌರವಾನ್ವಿತ ಮಣ್ಣಿನ ಮಗನಾಗಿರುವ ಮಾಜಿ ನಿಧಾನಿಯೂ ಆಗಿರುವ ಶ್ರೀಶ್ರೀಮಾನ್‌ಮಾನ್ ವೇದೇಗೌಡರು ಮುಖ್ಯಮಂತ್ರಿಯನ್ನು ಬಹಳ ಆತ್ಮೀಯತೆಯಿಂದ, ಅತಿ ಸಲುಗೆಯಿಂದ ಈ ಮೇಲಿನ ಪದಗಳನ್ನು ಉಪಯೋಗಿಸಿ ಸಂಬೋಧಿಸಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಬೊಗಳೂರು ಸಿಬ್ಬಂದಿ ಈ ಕುರಿತು ತನಿಖೆ ಆರಂಭಿಸಿದ್ದರು.

ತನಿಖೆ ಆರಂಭಿಸಿರುವಾಗ ತಿಳಿದುಬಂದ ಅಂಶವೆಂದರೆ, ಮಾಜಿ ನಿಧಾನಿಗಳೂ, ಮಣ್ಣಿನಿಂದಲೇ ಚಿನ್ನ ಮಾಡಿಕೊಂಡ ರೈತಪುತ್ರರೂ ಆದ ವೇದೇಗೌಡರು ಹೊಸ ಹೊಸ ಮತ್ತು ಹಳೆ ಹಳೆಯ ಶಬ್ದಕೋಶಗಳನ್ನು ಹುಡುಕಿ ಹುಡುಕಿ ಜರೆದಿದ್ದಾರೆ ಎಂಬುದು ಪತ್ತೆಯಾಗಿದೆ. ತಾವು ಯಾವತ್ತಿಗೂ ಅಧ್ಯಯನ ನಿರತರಾಗಿದ್ದು, ಈ ಹೊಸ ಪದಗಳನ್ನು ಯಾರೂ ಹೆಚ್ಚಾಗಿ ಯಾಕೆ ಬಳಸುತ್ತಿಲ್ಲವೆಂಬುದು ನಮಗೇ ಅಚ್ಚರಿಯಾದ ಕಾರಣದಿಂದ ಅವುಗಳನ್ನು ಬಳಸಿ, ಬೆಳೆಸಲು ಪ್ರಯತ್ನಿಸಿರುವುದಾಗಿ ಹೇಳಿದರು.

ಮತ್ತೊಂದು ವರದ್ದಿ ಮೂಲಗಳ ಪ್ರಕಾರ, ವೇದೇಗೌಡರು ಇಂತಹ ವೇದವಾಕ್ಯಗಳನ್ನು ಉದುರಿಸಿರುವುದಕ್ಕೆ ಬೇರೆ ಕಾರಣಗಳೂ ಇವೆ. ಅವರು ಇತ್ತೀಚೆಗೆ ತಮ್ಮ ರೈತಪುತ್ರರೊಂದಿಗೆ ಸೇರಿಕೊಂಡು ನೈಸಾಗಿರುವ ರಸ್ತೆಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಮಾಜಿ ನಿಧಾನಿ ಪಟ್ಟದ ಮೇಲಿದ್ದವರು ಧಡಕ್ಕನೇ ಬೀದಿಗಿಳಿದು ಹೋರಾಟ ಮಾಡುವುದೇನೂ ಸಣ್ಣ ಪುಟ್ಟ ವಿಷಯವಲ್ಲ. ಅದೊಂದು ದಿನ ತಾವು ದಿಢೀರನೇ ಈ ಪಟ್ಟಕ್ಕೇರಿದಾಗ, ಹಿಂದಿ ಕಲಿಯಲು ಹೋಗಿ ಸೋತು ಸುಣ್ಣವಾಗಿದ್ದು ಇನ್ನೂ ನೆನಪಿನಲ್ಲಿತ್ತು. ಆವತ್ತು 'ಏರಿದ' ಸಂದರ್ಭ ಎದುರಾದ ಬಿಕ್ಕಟ್ಟು ಈ ಬಾರಿ ಬೀದಿಗೆ 'ಇಳಿದಾಗ' ಕಾಣಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಅವರು, ಬೀದಿ ಭಾಷೆಯನ್ನು ಬೀದಿಯಲ್ಲಿದ್ದುಕೊಂಡೇ ತಕ್ಷಣ ಪ್ರಯೋಗಿಸಿ ತಮ್ಮ ಕಲಿಕಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ನಮ್ಮ ವರದ್ದಿಗಾರರು ಎಲ್ಲಿಯೂ ವರದಿ ಮಾಡಿಲ್ಲ.

ಇನ್ನೊಂದು ದೃಷ್ಟಿಕೋನದಿಂದ ತಪಾಸಣೆ ನಡೆಸಿದಾಗ ಬೇರೆಯೇ ವಿಷಯ ಹೊರಬಿದ್ದಿದೆ. ತಾವೊಬ್ಬ ಮಣ್ಣಿನ ಮಗನಾಗಿ ಇಷ್ಟು ದಿನಗಳಿಂದ ಬೀದಿಗಿಳಿದು ತಮ್ಮ ತಮ್ಮ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ, ತಾವೊಬ್ಬ ಮಾಜಿ ನಿಧಾನಿ ಎಂಬ ಪರಿಜ್ಞಾನವೂ ಇಲ್ಲದೆ ರಾಷ್ಟ್ರೀಯ ಸುದ್ದಿ ವಾಹಿನಿಗಳು, ರಾಷ್ಟ್ರೀಯ ಸುದ್ದಿ ಪತ್ರಿಕೆಗಳು ಈ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ, ಒಂದೇ ಒಂದು ಸುದ್ದಿಯನ್ನೂ ಮಾಡುತ್ತಿಲ್ಲ, ಬಿತ್ತರಿಸುತ್ತಿಲ್ಲ. ಹೀಗಾಗಿ ಏನಾದರೂ ಮಾಡಬೇಕಲ್ಲ ಎಂದು ಕೂದಲಿಲ್ಲದ ತಲೆ ಕೆರೆದುಕೊಂಡು ಯೋಚಿಸಿದವರೇ, ಈ ಪದ ಪ್ರಯೋಗದ ಸಾಹಿತ್ಯಕೃಷಿಗೆ ಕೈಹಚ್ಚಿದ್ದರು ಎಂದು ಮೂಲಗಳು ವರದ್ದಿ ಮಾಡಿವೆ. ಇದರಲ್ಲಿ ಅವರು ಯಶಸ್ಸನ್ನೂ ಕಂಡಿದ್ದು, ಆದರೂ ಕೆಲವು ಚಾನೆಲ್‌ಗಳು ತಾವು ಕಷ್ಟಪಟ್ಟು ಹುಡುಕಿ ಕಾಯಿನ್ ಮಾಡಿದ್ದ ಈ ಹೊಸ ಶಬ್ದಗಳು ಬರುವಾಗ 'ಕೀಂssss....' ಎಂಬ ಸದ್ದು ತೂರಿಸಿ, ಅದೇನೆಂದು ಜನರು ತಿಳಿಯದಂತೆ ಮಾಡಿದ್ದಾರೆ ಎಂದೂ ಅವರು ಅಸಮಾಧಾನ ಹೊರಗೆಡಹಿದ್ದಾರೆ.

ಮಾತ್ರವಲ್ಲದೆ, ಈಗೀಗ ಜನರಲ್ಲಿ ರಾಜಕಾರಣಿಗಳ ಬಗ್ಗೆ ಹಾಗೂ ರಾಜಕಾರಣಿಗಳಲ್ಲಿ ಎದುರಾಳಿಗಳ ಬಗ್ಗೆ ಅಸಹನೆ ಹೆಚ್ಚಾಗುತ್ತಿದೆ, ಇಂತಹ ಸಂದರ್ಭದಲ್ಲಿ ಈ ರೀತಿಯ ಪದಗಳೇ ಕೆಲಸ ಮಾಡುತ್ತವೆ. ಹೀಗಾಗಿ ಅವುಗಳನ್ನು ಅಸಾಂವಿಧಾನಿಕ ಪದಕೋಶದಿಂದ ಕಿತ್ತೆಸೆದು ಸಾಂವಿಧಾನಿಕ ಪದಕೋಶಕ್ಕೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Read more...

ಗೋಚರವಾಗದ ಚಂದ್ರ ಗ್ರಹಣ: ತನಿಖೆಗೆ ಆದೇಶ

Monday, January 04, 2010

(ಬೊಗಳೂರು ಹೊಸವರ್ಷ ತೇಲಾಡುವ ಬ್ಯುರೋದಿಂದ)
ಬೊಗಳೂರು, ಜ.4- ಕಳೆದ ವರ್ಷದಿಂದೀಚೆಗೆ ನಿಸ್ತೇಜವಾಗಿ, ಸ್ತಬ್ಧವಾಗಿ ಮತ್ತು ನಿಶ್ಚೇಷ್ಟಿತವಾಗಿ ಬಿದ್ದಿದ್ದ ಬೊಗಳೂರು ಏಕಸದಸ್ಯ ಬ್ಯುರೋದ ಸರ್ವ ಸದಸ್ಯರು ಹಾಗೂ ಮತ್ತೊಬ್ಬ ವರದ್ದಿಗಾರರು, 2010 ಬಂದು ನಾಲ್ಕು ದಿನಗಳೇ ಕಳೆದರೂ ಏಳದೇ ಇರುವುದಕ್ಕೆ ನ್ಯೂ ಇಯರ್ ಪಾರ್ಟಿ ಅಲ್ಲವೆಂದು ಸ್ಪಷ್ಟಪಡಿಸುತ್ತಾ, ಹೊಸದೊಂದು ವರದ್ದಿಯನ್ನು ತಂದು ಸುರುವಿದ್ದಾರೆ.

2010ನೇ ಇಸವಿ ಆರಂಭವಾಗುವ ಸ್ವಲ್ಪ ಹೊತ್ತಿಗೆ ಮುಂಚೆ ಚಂದ್ರನಿಗೆ ಗ್ರಹಣ ಹಿಡಿಯುತ್ತದೆ ಎಂಬ ಸುದ್ದಿ ಕೇಳಿ, ಆತಂಕಿತರಾಗಿದ್ದ ಬೊಗಳೂರು ಬ್ಯುರೋದ ರದ್ದಿಗಾರ ಅನ್ವೇಷಿ, ಅಷ್ಟೂ ದಿನಗಳ ಕಾಲ ತಲೆ ಮರೆಸಿಕೊಂಡು, ಚಂದ್ರ ಗ್ರಹಣವನ್ನೇ ಕಾಯುತ್ತಿದ್ದ ಎಂದು ಮೂಲಗಳು ಹೇಳಿವೆ.

ಆದರೆ, ಮತ್ತಷ್ಟು ಸಂಶೋಧಿಸಿದಾಗ, ಚಂದ್ರಗ್ರಹಣಕ್ಕಾಗಿ ಕಾತರಿಸುತ್ತಾ ಹಾತೊರೆಯುತ್ತಿದ್ದವರಲ್ಲಿ ತಾನು ಮಾತ್ರವೇ ಅಲ್ಲ, ಇಡೀ ವಿಶ್ವ ಸಮುದಾಯದ ಮಂದಿಯೂ ಸೇರಿದ್ದಾರೆ ಎಂಬುದು ಅನ್ವೇಷಿಗೆ ತಿಳಿದಾಗ ತಡವಾಗಿತ್ತು. ಹೀಗಾಗಿ ಮೂರ್ನಾಲ್ಕು ದಿನ ಕಳೆದು ವರದಿ ತಂದು ಒಪ್ಪಿಸಲಾಗಿದೆ ಎಂದು ಸೊಂಪಾದಕೀಯ ಮೂಲಗಳು ಹೇಳಿವೆ.

ಮರುದಿನ ಸುದ್ದಿ ಪತ್ರಿಕೆಗಳನ್ನೆಲ್ಲಾ ಹರವಿಕೊಂಡು, ಅಂತರಜಾಲದಲ್ಲಿ ಸಂಚೋಧನೆ ನಡೆಸಿದಾಗ ತಿಳಿದುಬಂದ ಅಂಶವೆಂದರೆ, ಆ ದಿನ ಅಲ್ಲಲ್ಲ... ರಾತ್ರಿಯಲ್ಲಿ, ಚಂದ್ರಗ್ರಹಣವು ಪಾರ್ಶ್ವ ಚಂದ್ರಗ್ರಹಣ ಎಂದು ನಿಗದಿಯಾಗಿದ್ದರೂ, ಕೆಲವು ಕಡೆ ಅದು ಗೋಚರಿಸಲೇ ಇರಲಿಲ್ಲ, ಇನ್ನು ಕೆಲವೆಡೆ ಅದು ಖಗ್ರಾಸ (ಪೂರ್ಣ) ಗ್ರಹಣವಾಗಿ ಗೋಚರಿಸಿತ್ತು, ಮಾತ್ರವೇ ಅಲ್ಲ, ಕೆಲವರಿಗೆ ಹಗಲಲ್ಲೂ ನಕ್ಷತ್ರಗಳು ಕಾಣಿಸತೊಡಗಿದ್ದವು!

ತಕ್ಷಣವೇ ಇದನ್ನು ಕೇಂದ್ರ ಸರಕಾರದ ಮತ್ತು ರಾಜ್ಯ ಸರಕಾರದ ಗಮನಕ್ಕೆ ತರಲಾಗಿ, ಎರಡೂ ಸರಕಾರಗಳು ಸಿಬಿಐ ಮತ್ತು ಸಿಐಡಿ ತನಿಖೆಗೆ ಆದೇಶ ನೀಡಿದ್ದು, ಒಂದಿಪ್ಪತ್ತು ಮೂವತ್ತು ವರ್ಷಗಳಲ್ಲೇ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಅದಕ್ಕೆ ಮುಂಚೆಯೇ ಬೊಗಳೂರು ಬ್ಯುರೋದ ಸಮಸ್ತರು ಹಲವರನ್ನು, ಕೆಲವರನ್ನು, ಅಳಿದವರನ್ನು, ಉಳಿದವರನ್ನು ಮಾತನಾಡಿಸಿ, ತನಿಖೆ ನಡೆಸಿ ವರದಿ ಸಲ್ಲಿಸಿದೆ. ಯಾಕ್ರೀಯಪಾ ಇಂಗಾತು? ಎಂದೆಲ್ಲಾ ಬೊಗಳೂರು ಬ್ಯುರೋ ಸಮಸಮಶೋಧಿಸಿದಾಗ ಗೊತ್ತಾಗಿಬಿಟ್ಟ ವಿಷಯವೆಂದರೆ:

ಹಲವರಿಗೆ ಚಂದ್ರಗ್ರಹಣವೇ ಕಾಣಿಸದಿರಲು ಮತ್ತು ಕೆಲವರಿಗೆ ಪೂರ್ಣ ಚಂದ್ರಗ್ರಹಣದೊಂದಿಗೆ ನಕ್ಷತ್ರಗಳೂ ಕಾಣಿಸಲು ಕಾರಣವೆಂದರೆ, ಅವರೆಲ್ಲರೂ ಅಂದು ಹೊಸ ವರ್ಷಾಚರಣೆಯ ಸಂಭ್ರಮದ ರಾತ್ರಿ ಪಾರ್ಟಿಯಲ್ಲಿ 'ತೇಲಾಡುತ್ತಿದ್ದುದು'! ತೇಲಾಡುತ್ತಲೇ ಮನೆಗೆ ಬಂದಾಗ ಅವರಿಗೆ ಮನೆಯಲ್ಲಿಯೂ ಪೂಜೆ ಆಗಿತ್ತು, ಇದರಿಂದಾಗಿ ಹಗಲಲ್ಲೂ ಅವರಿಗೆ ನಕ್ಷತ್ರಗಳು ಕಾಣಿಸುತ್ತಿದ್ದವು ಎಂಬುದನ್ನು ವರದ್ದಿಗಾರ ಅನ್ವೇಷಿ ಪತ್ತೆ ಹಚ್ಚಿದ್ದಾನೆ.

ಸಮಸ್ತ ಓದುಗರಿಗೆ, ಓದುವವರಿಗೆ, ಓದಿಸುವವರಿಗೆ 2010ಕ್ಕಾಗಿ ಹ್ಯಾಪಿ ನ್ಯೂ ಇಯರ್!

Read more...

ರಾತೋರಾತ್ರಿ ತೆಲಂಗಾಣಕ್ಕೆ ಅಸ್ತು: ಸಂಚು ಬಯಲು

Friday, December 11, 2009

(ಬೊಗಳೂರು ರಾಜ್ಯ ಆಗ್ರಹ ಬ್ಯುರೋದಿಂದ)
ಬೊಗಳೂರು, ಡಿ.11- ತೆಲಂಗಾಣ ರಾಜ್ಯ ಘೋಷಣೆಗೆ ಕೇಂದ್ರ ಸರಕಾರ ನಿರ್ಧರಿಸಿರುವ ಬೆನ್ನಲ್ಲೇ, ಬೊಗಳೂರು ಸೇರಿದಂತೆ ಅಲ್ಲಲ್ಲಿ ರಾಜ್ಯ-ರಾಷ್ಟ್ರ ಘೋಷಣೆಯ ಕೂಗುಗಳು ಕೇಳಿಬರತೊಡಗಿವೆ.

ಇದೀಗ ಬೋಡೋಲ್ಯಾಂಡ್, ಗೂರ್ಖಾಲ್ಯಾಂಡ್, ಕಾಶ್ಮೀರ, ಕೊಡಗು, ಸೌರಾಷ್ಟ್ರ, ವಿದರ್ಭ, ಬುಂದೇಲ್‌ಖಂಡ, ಪೂರ್ವಾಂಚಲ, ಸೌರಾಷ್ಟ್ರ, ಮಿಥಿಲಾಂಚಲ, ಮಹಾಕೋಸಲ ಮುಂತಾದ ರಾಜ್ಯಗಳಿಗೂ ಬೇಡಿಕೆ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ಉಪವಾಸ ಸತ್ಯಾಗ್ರಹಗಳು ಕೂಡ ಆರಂಭವಾಗಿದೆ.

ಕೆಲವರು ಸಾಯುವವರೆಗೂ ನಾಲ್ಕು ದಿನ ಉಪವಾಸ ಮಾಡ್ತೀವಿ ಅಂತ ಪ್ರತಿಭಟನೆಗೆ ಇಳಿದಿದ್ದರೆ, ಇನ್ನು ಕೆಲವರು ನಾವು ಒಂದೆರಡು ದಿನ ಮಾತ್ರವೇ ಆಮರಣಾಂತ ಉಪವಾಸ ಮಾಡ್ತೀವಿ ಅಂತ ಬೊಗಳೆ ಬಿಡ್ತಿದ್ದಾರೆ. ಒಟ್ಟಿನಲ್ಲಿ ಉಪವಾಸ ಉಪವಾಸವೇ ಎಂಬುದು ಗೊತ್ತಾಗಿದೆ. ಅಂದರೆ ಮುಂದಿನ ಬಾರಿ ನೀರು-ಆಹಾರ-ಪಾನೀಯ ಸೇವಿಸುವವರೆಗೂ ಅದು ಉಪವಾಸವೇ ಆಗಿರುತ್ತದೆ ಎಂಬ ಅಮೂಲ್ಯ ದಾರ್ಶನಿಕ ತತ್ವವನ್ನು ಬೊಗಳೂರು ಬ್ಯುರೋ ಕಂಡುಹಿಡಿದಿದೆ.

ಇದೀಗ, ಅಲ್ಲಲ್ಲಿ ಪ್ರತ್ಯೇಕ ದೇಶ-ರಾಜ್ಯ ಸ್ಥಾಪನೆಗಾಗಿ ಇಷ್ಟೆಲ್ಲಾ ಹೈಪ್ ಹೆಚ್ಚಾಗಿದ್ದರ ಹಿಂದಿನ ಕಾರಣವನ್ನು ಬೊಗಳೂರು ಕೊನೆಗೂ ಪತ್ತೆ ಮಾಡಿದೆ.

ದೇಶಾದ್ಯಂತ ಆಹಾರಧಾನ್ಯಗಳು ಮತ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಜನರು ಹಸಿವಿನಿಂದ ಹೊಟ್ಟೆಗಿಲ್ಲದೆ ಅಲ್ಲಲ್ಲಿ ಸಾಯುವ ಹಂತದಲ್ಲಿದ್ದಾರೆ. ಲಿಬರ್ಹಾನ್, ಭಾರತ-ಪಾಕ್ ಸಂಬಂಧ, ಕೋಪನ್ ಹೇಗನ್‌ನಲ್ಲಿ ಹೇಗೆ ಏಗೋಣ ಅಂತೆಲ್ಲಾ ಬ್ಯುಸಿಯಾಗಿರುವಾಗ ಈ ಬಗ್ಗೆ ಗಮನ ಹರಿಸಲು ಸರಕಾರಕ್ಕೂ ಪುರುಸೊತ್ತಿಲ್ಲ. ಹೀಗಾಗಿ ಬೆಲೆ ನಿಯಂತ್ರಣಕ್ಕೆ ದೇವರೇ ಕೊಟ್ಟ ಅವಕಾಶವಿದು. ಎಲ್ಲರೂ ಉಪವಾಸ ಮಾಡಿದರೆ, ಆಹಾರಕ್ಕೆ ಬೇಡಿಕೆ ತಗ್ಗುತ್ತದೆ. ಪೂರೈಕೆ ಹೆಚ್ಚಾಗುತ್ತದೆ. ಬೆಲೆ ಇಳಿಯುತ್ತದೆ ಎಂಬ ತಂತ್ರಗಾರಿಕೆಯನ್ನು ಬೊಗಳೂರು ನಿಧಾನಿಗಳು ಉಪಯೋಗಿಸಿರುವುದಾಗಿ ಮೂಲಗಳು ವರದ್ದಿ ತಂದು ಸುರಿದಿವೆ.

ಇದರ ನಡುವೆ, ಅಂತಾರಾಷ್ಟ್ರೀಯ ಸಂಚನ್ನು ಕೂಡ ಬೊಗಳೂರಿನ ಏಕಸದಸ್ಯ ಬ್ಯುರೋದ ಸರ್ವ ಸದಸ್ಯರ ತಂಡವು ಬಯಲಿಗೆಳೆದಿದ್ದು, ಜನಸಂಖ್ಯೆಯಲ್ಲಿ ನಂ.1 ಪಟ್ಟವನ್ನು ತನ್ನಿಂದ ಕಸಿದುಕೊಳ್ಳುವತ್ತ ದಾಪುಗಾಲಿಡುತ್ತಿರುವ ಭಾರತದ ಜನಸಂಖ್ಯೆ ಕಡಿತಗೊಳಿಸಲು ಚೀನಾದ ಷಡ್ಯಂತ್ರಗಳಲ್ಲಿ ಇದೂ ಒಂದಾಗಿದೆ ಎಂದು ನಮ್ಮ ಗುಪ್ತರಲ್ಲದ ಚರರು ತಿಳಿಸಿದ್ದಾರೆ.

Read more...

ಕೋಪನ್ ಹೇಗನ್‌ಗೆ ಓಪನ್ ಏಗೋಣ್? ಬೊಗಳೂರು ಘೋಷಣ್

Wednesday, December 09, 2009

(ಬೊಗಳೂರು ವಾಯುಮಾಲಿನ್ಯ ಬ್ಯುರೋದಿಂದ)
ಬೊಗಳೂರು, ಡಿ.8- ಕೋಪನ್ ಹೇಗನ್‌ನಲ್ಲಿ ಭೂಮಿಯ ಓಪನ್ ವಾತಾವರಣದಲ್ಲಿ ಹೇಗೆ ಏಗೋಣ್? ಅಥವಾ ಅಲ್ಲಿ ತೀವ್ರ ಪ್ರತಿರೋಧ ಇದ್ದರೂ ಹೇಗೆ ಏಗೋಣ್ ಎಂದು ಚಿಂತಿಸಲು ಬೊಗಳೂರಿನ ನಿಧಾನಮಂತ್ರಿಗಳು ಏನಕ್ಕೋ ಸಹಿ ಹಾಕಲು ತೆರಳಿರುವ ಹಿನ್ನೆಲೆಯಲ್ಲಿ ಬೊಗಳೂರುವಿನ ಏಕಸದಸ್ಯ ಬ್ಯುರೋದ ಸರ್ವರನ್ನೊಳಗೊಂಡ ತಂಡವು ಈ ಬಗ್ಗೆ ತನಿಖೆ ಕೈಗೊಳ್ಳಲು ನಿರ್ಧರಿಸಿತು.

ಇದೀಗ ಈ ತನಿಖೆಯಿಂದ ಪತ್ತೆಯಾಗಿರೋ ಅಂಶಗಳ ಪ್ರಕಾರ, ವಾತಾವರಣದ ತಾಪಮಾನ ಏರಿಕೆ ತಗ್ಗಿಸಲು ಮತ್ತು ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಯಲು ಕೆಲವೊಂದು ಉಪಕ್ರಮಗಳನ್ನು ಬೊಗಳೂರಿನ ಆಮ್ ಆದ್ಮೀಗಳು, ಮಾನ್ಯ ನಿಧಾನ ಮಂತ್ರಿಗಳ ಕೈಗೊಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಅದನ್ನು ನಿಧಾನಮಂತ್ರಿಗಳು ಹೋಪ್ ಇಲ್ಲದೆಯೇ ಓಪನ್ ಹೇಗನ್‌ನಲ್ಲಿ ವಾಚಿಸಲಿದ್ದಾರೆ ಎಂದು ಕೂಡ ಮೂಲಗಳು ವರದ್ದಿ ಮಾಡಿವೆ.

ಇದರಲ್ಲಿರುವ ಸಲಹೆಗಳ ಪ್ರಕಾರ, ವಾತಾವರಣದ ತಾಪಮಾನ ಏರಿಕೆಗೆ ಬೊಗಳೂರು ಜನರು ದಯನೀಯವಾಗಿ ನೀಡಿದ ಕೆಲವೊಂದಿಷ್ಟು ಸಲಹೆಗಳು:

* ವಾತಾವರಣ ಬಿಸಿಯಾಗದಂತೆ ತಡೆಯಲು ಹಾಟ್ ಹಾಟ್ ಚಲನಚಿತ್ರಗಳನ್ನು, ಬಹಿರಂಗ ಚುಂಬನ ಮತ್ತಿತರ ರೋಮ್ಯಾಂಟಿಕ್ ದೃಶ್ಯಗಳನ್ನು ಕಡಿವಾಣ ಹಾಕಬೇಕು.

* ಚಲನಚಿತ್ರಗಳಲ್ಲಿ ನಟಿಯರಿಗೆ ಮತ್ತು ಕೆಲವೊಮ್ಮೊಮ್ಮೆ ನಟರಿಗೂ - ಕನಿಷ್ಠ ಉಡುಪು (ಗರಿಷ್ಠ ಎಷ್ಟಿದ್ದರೂ ಆದೀತು) ತೊಡುವುದು ಕಡ್ಡಾಯ ಮಾಡಬೇಕು.

* ಈ ಮೇಲಿನ ಎಲ್ಲಾ ಸಲಹೆಗಳು ವಾತಾವರಣದ ಉಷ್ಣತೆ ತಡೆಯಲು ವಿಫಲವಾದರೆ, ಸೂರ್ಯನ ಬಿಸಿಲು ಸೋಕದ ಜಾಗದೊಳಗೆ, AC ಹಾಕಿಕೊಂಡು ತಣ್ಣಗೆ ಬಾಯಿ ಮುಚ್ಚಿ ಕೂರಬೇಕು.

ವಾತಾವರಣದ ಮಾಲಿನ್ಯ ತಡೆಗೆ ಬೊಗಳೂರು ಜನತೆ ಸೂಚಿಸಿದ ಸಲಹೆಗಳು:

* ಮೊತ್ತ ಮೊದಲನೆಯದಾಗಿ, ವಾಹನಗಳು ಹೊಗೆಯುಳುವ ಪ್ರದೇಶಗಳಾದ ಸೈಲೆನ್ಸರ್ ಅನ್ನು ಕಡ್ಡಾಯವಾಗಿ ಕಿತ್ತು ಹಾಕಬೇಕು. ಹೀಗೆ ಮಾಡಿದ್ರೆ ಅದರ ಸದ್ದು ಹೆಚ್ಚಾಗುತ್ತದೆ ಎಂಬ ಆತಂಕವಿದ್ದರೆ, ಸೈಲೆನ್ಸರ್ ಅನ್ನೇ ಸೈಲೆನ್ಸ್ (ಬಂದ್) ಮಾಡಿಬಿಡಬೇಕು.

* ತಿನ್ನುವ ವಸ್ತುಗಳ ಬೆಲೆಗಳನ್ನು ಏರಿಸಿ, ಈಗಾಗಲೇ ತಿನ್ನದಂತೆ ಮಾಡಲಾಗಿದ್ದು, ಆಮ್ ಆದ್ಮೀಗಳು ಇದರ ಸದುಪಯೋಗ ಪಡೆದುಕೊಂಡು ಉಸಿರಾಡುವುದನ್ನು ನಿಲ್ಲಿಸಬೇಕು. ಉಸಿರಾಟದಿಂದಲೂ ವಾಯು ಮಾಲಿನ್ಯ ಹೆಚ್ಚಾಗುವುದರಿಂದ ಈ ಕ್ರಮ.

* ಅಪ್ಪಿ ತಪ್ಪಿ ಯಾರಾದರೂ ಉಸಿರಾಡಲು ಸಮರ್ಥರಾದರೆ, ಅವರು ಕಡ್ಡಾಯವಾಗಿ ದಿನಕ್ಕೆ ನಾಲ್ಕೈದು ಬಾರಿ ಹಲ್ಲುಜ್ಜಬೇಕು.

* ಕೊಟ್ಟ ಕೊನೆಯದಾಗಿ, ಈಗಾಗಲೇ ತೊಗರಿಬೇಳೆ, ಸಕ್ಕರೆ, ಈರುಳ್ಳಿ, ಅಕ್ಕಿ ಮುಂತಾದ ಬಡವರ ವಸ್ತುಗಳು ಆಕಾಶದಲ್ಲೇ ಇರುವುದರಿಂದ, ಭೂಮಿಯಲ್ಲಿ ಯಾರು ಕೂಡ ಅಡುಗೆ ಮಾಡಬೇಕಿಲ್ಲ. ಆಕಾಶದಲ್ಲೇ ಬೆಂದು ಬೆಂದು ಉದುರಿದಾಗ ತಿಂದರೆ ಸಾಕು. ಅಡುಗೆ ಮಾಡಿದರೆ ಹೊಗೆ ಬರುತ್ತದೆ, ಇದು ಮಾಲಿನ್ಯ ಕಾರಕ ಎಂಬ ಕಾರಣಕ್ಕೆ ನಮ್ಮ ಸರಕಾರವೇ ಅದರ ಬೆಲೆಯನ್ನು ಆಕಾಶದಲ್ಲೇ ಇರಿಸಿ ಉತ್ತಮ ಕ್ರಮ ಕೈಗೊಂಡಿದ್ದಕ್ಕೆ ಧನ್ಯವಾದಗಳು.

* ಇಷ್ಟಾಗಿಯೂ, ಯಾರೆಲ್ಲಾ ಈ ಆಹಾರವಸ್ತುಗಳನ್ನು ಖರೀದಿಸಿ ತಿನ್ನಲು ಸಮರ್ಥರಾಗುತ್ತಾರೋ, ಅಂಥವರು ಕೂಡ ಒಲೆ ಉರಿಸಬಾರದು. ಒಲೆ ಉರಿಸುವುದರಿಂದ ಹೊಗೆ ಬಂದು ವಾಯು ಮಾಲಿನ್ಯ ಉಂಟುಮಾಡುವ ಬದಲು ಇಷ್ಟೆಲ್ಲಾ ಆಹಾರವನ್ನು ಆಮ್ ಆದ್ಮೀಗಳಿಗೆ ತೋರಿಸಿಯೇ ತಿಂದು ಅಥವಾ ಒಂದೊಂದು ಕಿಲೋ ತರಕಾರಿಯೋ, ಒಂದು ಕಿಲೋ ಸಕ್ಕರೆಯೋ ಇಲ್ಲವೇ ಒಂದು ಕಿಲೋ ತೊಗರಿಬೇಳೆ ಅಥವಾ ಅಕ್ಕಿಯನ್ನು ಖರೀದಿಸಿ, ಅದನ್ನು ಎತ್ತಿ ಎತ್ತಿ ತೋರಿಸುತ್ತಾ ಆಮ್ ಆದ್ಮೀಗಳ ಹೊಟ್ಟೆ ಉರಿಸಿದರೆ ಸಾಕು.

ಹಾಗಿದ್ದರೆ ಮಾಲಿನ್ಯ ಕಾರಕಗಳಲ್ಲಿ ಇನ್ನೂ ಒಂದು ಬಾಕಿ ಉಳಿಯಿತಲ್ಲಾ? ಅದುವೇ ಶಬ್ದ ಮಾಲಿನ್ಯ... ಅದರ ತಡೆಗೆ?

ಇದೋ ಇಲ್ಲಿದೆ ಬೊಗಳೂರು ಜನ ನೀಡಿದ ಸಲಹೆ: ಅಲೂಗಡ್ಡೆ, ಗೆಣಸು ಮತ್ತಿತರ ವಾಯುಕಾರಕ ವಸ್ತುಗಳ ಸೇವನೆ ಕಡಿಮೆ ಮಾಡಬೇಕು!

Read more...

ಬೊಗಳೂರಿನಿಂದ ಕೋಪನ್ ಹೇಗನ್ ಘೋಷಣೆ!

Tuesday, December 08, 2009

ಬೊಗಳೂರು ಬ್ಯುರೋದಿಂದ ಕೋಪನ್ ಹೇಗನ್‌ನಲ್ಲಿ ಓಪನ್ ಆಗಿ ಹೇಗೆ ಏಗೋಣ್ ಎಂಬ ಕುರಿತ ನಿರ್ಣಯ!

ನಾಳಿನ ಸಂಚಿಕೆಯಲ್ಲಿ ಪ್ರಕಟವಾಗುವ ಸಾಧ್ಯತೆಗಳಿರುವುದರಿಂದ, ಇಂದೇ ನಿಮ್ಮ ಬೊಗಳೂರು ಪ್ರತಿಯನ್ನು ದ್ವಿಪ್ರತಿಯಲ್ಲಿ ಕಾದಿರಿಸಿಕೊಳ್ಳಿ. ಕಾದು ಕಾದು ನಿರಾಶರಾಗಬೇಡಿ.

ಹೋಪ್ ಇಟ್ಟುಕೊಂಡು, ಕೋಪ ಮಾಡಿಕೊಳ್ಳದೆ ಕೋಪನ ಹೇಗಣ್ಣದ ಬೊಗಳೂರು ಘೋಷಣೆ ಬುಧವಾರದ ಸಂಚಿಕೆಯಲ್ಲಿ ಪ್ರಕಟವಾಗಲಿದೆ.!

Read more...

Barking News!: ಮಕ್ಕಳೆಲ್ಲಾ ನಿಗೂಢ ನಾಪತ್ತೆ!

Thursday, December 03, 2009

[ಬೊಗಳೂರು ತನಿಖಾ ಬ್ಯುರೋದಿಂದ]
ಬೊಗಳೂರು, ಡಿ.2- ಬುಧವಾರದಿಂದೀಚೆಗೆ ಅಂಗನವಾಡಿಗಳಲ್ಲಿ, ಶಾಲೆಗಳಲ್ಲಿ ಮಕ್ಕಳು ದಿಢೀರ್ ನಾಪತ್ತೆಯಾಗುತ್ತಿರುವ ಘಟನೆ ಇಡೀ ಬೊಗಳೂರು ರಾಷ್ಟ್ರಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು, ಇದರ ತನಿಖೆಗೆ ಸಿಬಿಐ, ಸಿಐಡಿ, ಸೇನೆ, ಪೊಲೀಸ್ ಇಲಾಖೆಗಳೆಲ್ಲವೂ, ಜೊತೆಗೆ ಹೋಂ ಗಾರ್ಡ್ಸ್, ನಾಗರಿಕ ಪೊಲೀಸರು, ಮೋರಲ್ ಪೊಲೀಸರು ಕೂಡ ಹೊರಟಿದ್ದಾರೆ ಎಂದು ವರದಿಯಾಗಿದೆ.

ಈ ಎಲ್ಲಾ ತನಿಖಾ ಏಜೆನ್ಸಿಗಳು ತೀವ್ರ ತಪಾಸಣೆ, ತನಿಖೆ, ಸಂಶೋಧನೆ, ಪರಿಶೋಧನೆ, ಪರೀಕ್ಷೆ, ಪರಿಶೀಲನೆ, ತಪಾಸಣೆ ಎಲ್ಲವನ್ನೂ ನಡೆಸಿ ಇದಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು 'ಮಕ್ಕಳೇ ರಾಜಕೀಯಕ್ಕೆ ಬನ್ನಿ' ಎಂದು ಇಲ್ಲಿ ಆಹ್ವಾನ ನೀಡಿರುವುದು.

ನೆಟ್ಟೋದುಗ ಅಂಗನವಾಡಿ ಮಕ್ಕಳೆಲ್ಲಾ ನೆಟ್ ಬಿಟ್ಟೋಡುಗರಾಗಿ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪತ್ತೆಯಾಗಿರುವುದನ್ನು ಇದೇ ಸಂದರ್ಭ ಬೊಗಳೆ ರಗಳೆ ಬ್ಯುರೋದ ಏಕ ಸದಸ್ಯ ತನಿಖಾ ತಂಡದ ಎಲ್ಲ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ.

ಆದರೆ, ಇದೇ ಸಂದರ್ಭ ಕೆಲವು ಮಕ್ಕಳು ಅದಾಗಲೇ ಅಳಲಾರಂಭಿಸಿದ್ದು, ತಮ್ಮ ತಮ್ಮ ಮನೆಗೆ ಜೋಲು ಮೋರೆ ಹಾಕಿಕೊಂಡು ಹಿಂತಿರುಗಲಾರಂಭಿಸಿದ್ದವು. ಅಲ್ಲೇ ಇದ್ದ ಮಕ್ಕಳ ರಾಶಿಯಲ್ಲಿ ಒಂದೆರಡು ಮಕ್ಕಳನ್ನು ಹೆಕ್ಕಿಕೊಂಡು ತಡೆದು ನಿಲ್ಲಿಸಿ ಮಾತನಾಡಿಸಿದಾಗ, ಯಾಕೆ ಆಳುತ್ತಿರುವುದು ಎಂಬ ಪ್ರಶ್ನೆಗೆ ತೊದಲು ನುಡಿಯ ಉತ್ತರವೂ ದೊರಕಿತು.

ಈ ಚಿಳ್ಳೆ ಪಿಳ್ಳೆಗಳು ಅಳುತ್ತಲೇ ಹೇಳಿದ ಉತ್ತರ: "ಅವರು ಹೇಳಿದ್ದು ಬರೇ ಮಕ್ಕಳ ಬಗ್ಗೆ ಅಲ್ಲ, ರಾಜಕಾರಣಿಗಳ ಮಕ್ಕಳ ಬಗ್ಗೆ ಮಾತ್ರ. ರಾಜಕಾರಣಿಗಳ ಮಕ್ಕಳಿಗೆ ಮಾತ್ರವೇ ಅವರು ಟಿಕೆಟ್ ನೀಡ್ತಾರಂತೆ. ಉಳಿದರೆ, ರಾಜಕಾರಣಿಗಳ ಪತ್ನಿಯರಿಗೂ ಟಿಕೆಟ್ ನೀಡ್ತಾರಂತೆ!"

Read more...

ಮಕ್ಕಳೇಕೆ ಕಾಣಿಸುತ್ತಿಲ್ಲ? ಬೊಗಳೂರು ಬ್ಯುರೋ ತನಿಖೆ!

Wednesday, December 02, 2009

ನಾಳೆ ಬೊಗಳೂರಿನಲ್ಲಿ ಸುದ್ಧಿ ಸ್ಫೋಟ ಆಗಲಿದೆ.

ಮಕ್ಕಳ ನಾಪತ್ತೆ ಪ್ರಕರಣವನ್ನು ಬೊಗಳೂರು ಬೊಗಳೆ ಬ್ಯುರೋ ಭೇದಿಸಿದೆ.

ಇದರ ಪರಿಪೂರ್ಣ ವರದ್ದಿ, ಗುರುವಾರದ ಸಂಚಿಕೆಯಲ್ಲಿ!

ನಿಮ್ಮ ಪ್ರತಿಯನ್ನು ದ್ವಿಪ್ರತಿಯಾಗಿ ಕಾದಿರಿಸಿ... ಮತ್ತು ನಿರಾಶರಾಗದಿರಿ!

(ಆ-ದೇಶದ ಮೇರೆಗೆ - ಸೊಂಪಾದ-ಕರು)

Read more...

ಬೇಕಾರಾಗಿದ್ದಾರೆ!

Thursday, November 26, 2009

[ಮುಂಬೈ ಮೇಲೆ ಪಾಕಿಸ್ತಾನೀ ಬೆಂಬಲಿತ ಉಗ್ರಗಾಮಿಗಳಿಂದ ದಾಳಿ ನಡೆದು ಒಂದು ವರ್ಷವಾದರೂ, ಪಾಕಿಸ್ತಾನವು ಪರಿಣಾಮಕಾರಿಯಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಆ ರೀತಿ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ಸರಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಬೊಗಳೂರಿನಲ್ಲಿ ಕಾಣಿಸಿಕೊಂಡ ಜಾಹೀರಾತಿದು]

ಮುಂಬೈ ಮೇಲೆ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ದಾಳಿ ನಡೆಸಿದವರು ಮತ್ತು ಅವರ ಅಪ್ಪ ಅಮ್ಮ ಎಲ್ಲರೂ ಪಾಕಿಸ್ತಾನದಲ್ಲಿದ್ದಾರೆ ಎಂಬುದು ಜಗತ್ತಿಗೇ ತಿಳಿದರೂ, ಪಾಕಿಸ್ತಾನವು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಡಿಸುವ ವ್ಯಕ್ತಿಗಳು ಬೇಕಾರಾಗಿದ್ದಾರೆ.


ಪಾಕಿಸ್ತಾನವು ಪ್ರತಿ ಬಾರಿಯೂ ಸಾಕ್ಷ್ಯಾಧಾರ ಕೊಡಿ, ಸಾಕ್ಷ್ಯಾಧಾರ ಕೊಡಿ ಅಂತ ಕೇಳುತ್ತಿರುವಾಗ, ಕೊಡ್ತೀವಿ ಕೊಡ್ತೀವಿ ಅನ್ನುತ್ತಲೇ ರಾಶಿ ರಾಶಿ ಕಾಗದ ಪತ್ರಗಳನ್ನು ಟ್ರಕ್‌ಗಳಲ್ಲಿ ಪಾಕಿಸ್ತಾನಕ್ಕೆ ರವಾನಿಸುವ ಸರಕಾರವನ್ನು ನಿಭಾಯಿಸುವವರು ಬೇಕಾರಾಗಿದ್ದಾರೆ.


ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಉಗ್ರಗಾಮಿ ದಾಳಿಯನ್ನು ಇನ್ನಾದರೂ ಸಮರ್ಥವಾಗಿ ಎದುರಿಸುವಲ್ಲಿ ಪೊಲೀಸ್ ವ್ಯವಸ್ಥೆಯನ್ನು ಇನ್ನೂ ಆಧುನೀಕರಣಗೊಳಿಸಲು ಸಮಯವಿಲ್ಲದಿರುವುದರಿಂದ, ಇನ್ನಾದರೂ ಪೊಲೀಸರಿಗೆ ಬಲ ತುಂಬುವವರು ಬೇಕಾರಾಗಿದ್ದಾರೆ.


ಪಾಕಿಸ್ತಾನದೊಂದಿಗೆ ಶಾಂತಿ ಶಾಂತಿಯೇ ಮುಖ್ಯವಾಗಿರುವವರು ಮತ್ತು ಯಾವುದೇ ಕಾರಣಕ್ಕೂ ಪಾಕಿಸ್ತಾನವು ನೊಂದುಕೊಳ್ಳಬಾರದು. ಯಾಕೆಂದರೆ, ಅವರಲ್ಲಿಯೂ ಉಗ್ರಗಾಮಿಗಳ ದಾಳಿ ನಡೆಯುತ್ತಿದೆಯಲ್ಲ ಎಂಬ ಮನೋಭಾವವಿರುವವರು ದೇಶವಾಳಲು ಬೇಕಾರಾಗಿದ್ದಾರೆ.


ಪಾಕಿಸ್ತಾನವನ್ನು ನಡುಗಿಸುವ, ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ವ ರೀತಿಯಲ್ಲಿಯೂ ಒತ್ತಡ ಹೇರುವ ಅವಕಾಶಗಳನ್ನೆಲ್ಲಾ ಕೈಚೆಲ್ಲಿ, ಶಾಂತಿ ಮಂತ್ರ ಪಠಿಸುತ್ತಲೇ ಇರುವವರು ಬೇಕಾಗಿದ್ದಾರೆ.


ಅತ್ತ ಕಡೆಯಿಂದ ಚೀನಾ ಪಾಕಿಸ್ತಾನಕ್ಕೆ ಸಕಲ ರೀತಿಯಲ್ಲಿಯೂ ನೆರವು ನೀಡುತ್ತಾ, ಅರುಣಾಚಲ ಪ್ರದೇಶ ನನ್ನದು ಎಂದು ಹೇಳಿಕೊಳ್ಳುತ್ತಲೇ ಇದೆ. ಇನ್ನೊಂದೆಡೆಯಿಂದ, ಪಾಕಿಸ್ತಾನಕ್ಕೆ ಉಗ್ರರ ವಿರುದ್ಧ ಹೋರಾಡಲೆಂದು ಕೋಟಿ ಕೋಟಿ ನೆರವು ನೀಡುತ್ತಲೇ, ಭಾರತ ನನ್ನ ಪರಮಾಪ್ತ ರಾಷ್ಟ್ರ ಎಂದು ಹೇಳಿಕೊಳ್ಳುತ್ತಿರುವ ಚೀನಾ, ಇವುಗಳೊಂದಿಗೆ ಮೈತ್ರಿಯನ್ನು ಗಾಢವಾಗಿ ಬೆಸೆಯುವವರು ಬೇಕಾರಾಗಿದ್ದಾರೆ.


ದೇಶದಲ್ಲಿ ಪ್ರಜೆಗಳು ಬೆಲೆ ಏರಿಕೆಯಿಂದ ಕಂಗಾಲಾಗಿ, ಪ್ರವಾಹ, ಅತಿವೃಷ್ಟಿ-ಪ್ರವಾಹ, ಅನಾವೃಷ್ಟಿಯಿಂದ ತತ್ತರಿಸುತ್ತಿದ್ದರೂ, ನಮಗೆ ಬೇರೆ ದೇಶಗಳೊಂದಿಗಿನ ಸಂಬಂಧವೇ ಮುಖ್ಯ, ಅದಕ್ಕಿಂತಲೂ ಅಣು ಒಪ್ಪಂದ ಮುಖ್ಯ ಎನ್ನುತ್ತಾ, ದೇಶದ ಜನತೆಯ ಕಣ್ಣೀರೊರೆಸಬೇಕಾದವರು ಬೇಕಾರಾಗಿದ್ದಾರೆ.


ಭವಿಷ್ಯದಲ್ಲಿ ನಡೆಯುವ ಉಗ್ರರ ನೂರಾರು ದಾಳಿ ಪ್ರಕರಣಗಳಿಗೆ ಈಗಲೇ ವಿಷಾದಿಸ್ತೀವಿ ಮತ್ತು ಮುಂದೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ತೀವಿ ಅಂತ ಭರವಸೆಯನ್ನು ಈಗಲೇ ಕೊಡುವ ದೇಶವಾಳುವ ನಾಯಕರೂ ಬೇಕಾರಾಗಿದ್ದಾರೆ.


ಮುಖ್ಯ ಅರ್ಹತೆ: ಉಗ್ರಗಾಮಿಗಳೇನಾದರೂ ಇನ್ನು ಮುಂದೆ ಭಾರತದ ಮೇಲೆ ದಾಳಿ ಮಾಡಿದರೆ ಅವರಿಗೆಲ್ಲಾ ಬಾಳಾ ಠಾಕ್ರೆ ಮತ್ತು ಶಿವಸೇನೆಯ ವಿರುದ್ಧ ಏನಾದರೂ ಒದರುವಂತೆ ಉಪಾಯ ಮಾಡಿ ಮನವೊಲಿಸುವುದು. ಇದರಿಂದ ಶಿವಸೈನಿಕರೇ ಈ ಉಗ್ರರನ್ನು ಚೆನ್ನಾಗಿ ಚಚ್ಚಿ ಚಚ್ಚಿ ಮುಗಿಸಿಬಿಡಬಹುದು. ಇಲ್ಲವಾದರೆ, ಹಿಂದಿ, ಇಂಗ್ಲಿಷಿನಲ್ಲಿ ಪ್ರಮಾಣವಚನ ಸ್ವೀಕರಿಸುವಂತೆ/ಶಪಥ ಮಾಡುವಂತೆ/ಪಣ ತೊಡುವಂತೆ/ ಭಾಷೆ ಕೊಡುವಂತೆ ಉಗ್ರರನ್ನು ಪ್ರೇರೇಪಿಸುವುದು. ಆಗ ಶಿವಸೇನೆ ಮತ್ತು ಮಹಾರಾಷ್ಟ್ರ ನವ ನಿರ್ನಾಮ ಸೇನೆಗಳು ನಾ ಮುಂದು ತಾ ಮುಂದು ಅಂತ ಚಚ್ಚಲು ಹೊರಡುತ್ತವೆ. ಇಂತ ಚಾಕಚಕ್ಯತೆ ಉಳ್ಳವರು ಕೂಡ ಬೇಕಾರಾಗಿದ್ದಾರೆ.
(ಸೂಚನೆ: ನಾವು ಸರಿಯಾಗಿಯೇ ಬರೆದಿದ್ದರೂ ಬೇಕಾಗಿದ್ದಾರೆ ಮಧ್ಯೆ ಒಂದು ರಾ ಹೆಚ್ಚು ಸೇರಿಕೊಂಡಿದ್ದು ಹೇಗೆಂಬುದು ನಮಗೇ ಗೊತ್ತಿಲ್ಲ. ಈ ಬಗ್ಗೆ ತನಿಖೆಗೆ ಆಯೋಗವೊಂದನ್ನು ರಚಿಸಲಾಗಿದ್ದು, ಅದಕ್ಕೆ ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಈ ಆಯೋಗವು ಸುಮಾರು ೧೭ ವರ್ಷಗಳ ಬಳಿಕ ಎಲ್ಲರಿಗೂ ಗೊತ್ತಿರುವ ವರದಿಯನ್ನು ಸಲ್ಲಿಸಲಿದೆ.)

Read more...

ಗಂಡಾಂತರ ಪದ ನಿಷೇಧಕ್ಕೆ ಪುರುಷರ ಆಗ್ರಹ

Thursday, November 19, 2009

(ಬೊಗಳೂರು ಗಂಡಸರು-ಹೆಂಡಸರ ಅಸಮಾನತಾ ಬ್ಯುರೋದಿಂದ)
ಬೊಗಳೂರು, ನ.19- ಇಂದು ಅಂತಾರಾಷ್ಟ್ರೀಯ ಪುರುಷರ ದಿನವಾಗಿರುವುದರಿಂದ ಬೊಗಳೂರಿನ ಬೀದಿ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ಅಖಿಲ ಬೊಗಳೆ ಪುರುಷರ ಸಂಘವು, ಗಂಡಾಂತರ ಎಂಬ ಶಬ್ದ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಹಿಳೆಯರು ಯಾವುದೇ ತಪ್ಪು ಮಾಡಿದರೂ ಅದು ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದನ್ನು ಗಂಡಾಂತರ ಎಂದು ಕರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಮಹಿಳೆಯರು ಗಂಡಂದಿರನ್ನು ಬದಲಾಯಿಸುವ ಪ್ರಕ್ರಿಯೆಗೆ ಮಾತ್ರವೇ ಗಂಡಾಂತರ ಎಂಬ ಪದವನ್ನು ಬಳಸಬೇಕು ಎಂದು ಆ(ಹ್)ಗ್ರಹಿಸಿದ್ದಾರೆ.

ಗಂಡಾಂತರ ಪದವನ್ನು ನಿಷೇಧಿಸದಿದ್ದರೆ, ಅದರ ಜೊತೆಗೆ ಪುರುಷರು ಆಗಾಗ್ಗೆ ಮಾಡುವ ತಪ್ಪುಗಳಿಗೆ ಮತ್ತು ಅವು ಭಾರೀ ತೊಂದರೆಗೆ ಕಾರಣವಾದರೆ, ಅವುಗಳನ್ನು ಹೆಂಡಾಂತರ(ಕಾರಿ) ಎಂದು ಕರೆಯಬೇಕು ಎಂದು ಕೂಡ ಒತ್ತಾಯಿಸಿದ್ದಾರೆ.

ಆದರೆ ಇದು ಹೆಂಡವನ್ನು ಪದೇ ಪದೇ ಬದಲಾಯಿಸಿ ಕುಡಿಯುವ ಪ್ರಕ್ರಿಯೆಗೆ ಪರ್ಯಾಯ ಪದವಾಗುತ್ತದೆಯೇ ಎಂದು ಬೊಗಳೂರು ಬ್ಯುರೋ ವರದ್ದಿಗಾರರು ಕೇಳಿದ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಲ್ಲ! ಅವರು ನಕ್ಕ ನಗೆ ನೋಡಿದರೆ, ಸಲ್ಮಾನ್ ರಶ್ದೀ ಆಗಾಗ್ಗೆ ಹೆಂಡ್ತೀರನ್ನು ಬದಲಾಯಿಸ್ತಾ ಹೆಂಡಾಂತರ ಮಾಡುವ ಪ್ರಕ್ರಿಯೆ ನೆನಪಿಗೆ ಬಂದಂತೆ ತೋರುತ್ತಿತ್ತು.

ಸಮಾನತೆ ಸಮಾನತೆ ಎಂದು ಹೋರಾಟ ಮಾಡುವ ಹೆಂಡಸರು ಉಫ್.... ಅಲ್ಲಲ್ಲ ಹೆಂಗಸರು, ಈ ಗಂಡಾಂತರದಂತಹುದೇ ಪದ (ಹೆಂಡಾಂತರ) ನಮಗೆ ಬೇಕು ಎಂದು ಒತ್ತಾಯಿಸುತ್ತಿಲ್ಲವೇಕೆ, ಕೂಗಾಡುತ್ತಿಲ್ಲವೇಕೆ ಮತ್ತು ಅರಚಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದ ಅವರು, ಆದರೆ, ಹೆಣ್ಣುಗಳ ಪಾನೀಯ ಸೇವನೆ ಪ್ರಕ್ರಿಯೆಗೆ ಹೆಂಗಸರ ಕುಡಿತ ಅಂತ ಕರೀತಾರೆ, ಅದೇ ರೀತಿ ಗಂಡುಗಳ ಪ್ರಕ್ರಿಯೆಗೆ ಗಂಗಸರ* ಕುಡಿತ ಅಂತ ಕರೆಯುವುದಿಲ್ಲವೇಕೆ, ಹೆದರಿಕೆಯೇ? ಎಂದು ಪ್ರಶ್ನಿಸಿದರು.

ಇದೇ ರೀತಿಯಾಗಿ, ಗಂಡಸರನ್ನೆಲ್ಲಾ ಹೆಂಡಸಾರಾಯಿ ಕುಡುಕರು ಅಂತೆಲ್ಲಾ ಹೀಯಾಳಿಸುತ್ತಾರೆ, ಇನ್ನು ಮುಂದೆ ಅದನ್ನು ಗಂಡಸಾರಾಯಿ ಎಂದು ಬದಲಾಯಿಸತಕ್ಕದ್ದು ಎಂದೂ ಅವರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಇಲ್ಲಿಯೂ ಹೆಂಗಸರಿಗೇ ಪ್ರಾಧಾನ್ಯತೆ ಕೊಟ್ಟು, ಸಾಮಾಜಿಕ ಅಸಮತೋಲನಕ್ಕೆ ನಾಂದಿ ಹಾಡುತ್ತದೆ ಎಂದವರು ಹೀಗಳೆದಿದ್ದಾರೆ.

ಈ ರೀತಿಯಾಗಿ ಮಹಿಳೆಯರಿಗೇ ಎಲ್ಲ ಪದಗಳಲ್ಲಿಯೂ ಪ್ರಾಧಾನ್ಯತೆ ನೀಡುವುದರಿಂದ ಸಾಮಾಜಿಕ ಸಮತೋಲನ ತಪ್ಪುತ್ತದೆ ಎಂದವರು ಅಭಿಪ್ರಾಯಪಟ್ಟರು.

* ಗಂಗಸರ = ಕರಾವಳಿ ಭಾಷೆಯಲ್ಲಿ ಹೆಂಡ ಎಂದರ್ಥ

Read more...

ನರ್ಸರಿ ರೈಮ್ ಬೇಡ, ಸಿನಿಮಾ ಹಾಡು ಕಲಿಸಿ: ಮಕ್ಕಳ ಆಗ್ರಹ

Monday, November 16, 2009

(ಬೊಗಳೂರು ಬಾಲ ಕರುಗಳ ಬ್ಯುರೋದಿಂದ)
ಬೊಗಳೂರು, ನ.15- ಕರ್ನಾಟಕ ರಾಜ್ಯೋತ್ಸವಕ್ಕೂ ಎಚ್ಚರವಾಗದ ಬೊಗಳೂರು ಬ್ಯುರೋ ವಿರುದ್ಧ ಕನ್ನಡ ವಿರೋಧಿ ಪತ್ರಿಕೆ ಎಂದು ಕನ್ನಡ ಹೋರಾಟಗಾರರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿರುವಂತೆಯೇ, ನಾವೇನೂ ಗಣಿ ಧಣಿಗಳೊಂದಿಗೆ ಸೇರಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿರುವ ಬೊಗಳೂರು ಸೊಂಪಾದಕರುಗಳು, ಇದೀಗ ಮಕ್ಕಳ ದಿನಾಚರಣೆಯ ದಿನ ಎಚ್ಚೆತ್ತುಕೊಳ್ಳಲು ನಿರ್ಧರಿಸಿದ್ದರಾದರೂ, ಅದು ಕೂಡ ಡೇಟ್ ಬಾರ್ ಆಗಿ ಹೋಗಿರುವುದಕ್ಕೆ ಯಾವುದೇ ಬಾರ್ ಕಾರಣವಲ್ಲ ಎಂದು ಸ್ಪಷ್ಟಪಡಿಸಲಾಗುತ್ತಿದೆ.

ಮಕ್ಕಳ ದಿನಾಚರಣೆ ಅದು ಕೂಡ ಎರಡನೇ ಶನಿವಾರ ಬಂದ ಕಾರಣದಿಂದಾಗಿ ಮಕ್ಕಳು ಮತ್ತು ಮರಿಗಳೆಲ್ಲಾ ಕೆಂಡಾಮಂಡಲವಾಗಿದ್ದುದು ಅವುಗಳ ಮುಖಾರವಿಂದ ನೋಡಿದಾಗಲೇ ಗೊತ್ತಾಗಿಬಿಟ್ಟಿತ್ತು ಬೊಗಳೂರು ಬ್ಯುರೋಗೆ. ಒಂದೊಂದೇ ಬಾಲದಕರುಗಳನ್ನು ವಿಚಾರಿಸುವುದು ಕಷ್ಟಕರ ಸಂಗತಿ ಎಂದು ತಿಳಿದ ಹಿನ್ನೆಲೆಯಲ್ಲಿ, ಅತ್ಯಂತ ಸುಲಭವಾದ ಬಾಲ-ಕರುಗಳ ಸಂಘವನ್ನು ಪ್ರವೇಶಿಸಲಾಯಿತು.

ಅವರು ಅದಾಗಲೇ ಬೊಗಳೂರು ಬ್ಯುರೋ ಸಿಬ್ಬಂದಿಗಾಗಿ ಕಾಯುತ್ತಿರುವಂತೆ ಕಂಡುಬಂದಿತ್ತು ಮತ್ತು ನಮ್ಮ ಸಿಬ್ಬಂದಿ ಹೊಕ್ಕ ತಕ್ಷಣ ಇದು ಪತ್ರಿಕಾಗೋಷ್ಠಿ ಎಂದು ಘೋಷಿಸಿ ಮಾತನಾಡತೊಡಗಿದರು.

ಮುಖ್ಯವಾಗಿ ಈ ಪತ್ರಿಕಾಗೋಷ್ಠಿ ಕರೆದಿರುವುದು ಮಕ್ಕಳಿಗೂ ಸಮಾನತೆ ಬೇಕು ಎಂಬುದನ್ನು ಹೇಳುವುದಕ್ಕಾಗಿ ಎಂದು ಬಾಲ-ಕರುಗಳ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಲ ಅವರು ಘೋಷಿಸಿದರು.

ನಮಗೆ ಅಂಗನವಾಡಿಗಳಲ್ಲಿ ನರ್ಸರಿ ರೈಮ್ ಹೇಳಿಕೊಡಲಾಗುತ್ತದೆ. ಹೇಳಿದ್ದನ್ನೇ ಹೇಳಿ ಹೇಳಿ ಸಾಕಾಗಿದೆ. ಆದರೆ, ಅದೇ ಬೆಳೆದುಬಿಟ್ಟ ಬಾಲಕರ ಬಾಯಲ್ಲಿ ಸಿನಿಮಾ ಪದಗಳು, ಮಚ್ಚು-ಗಿಚ್ಚು, ಹಳೇ ಪಾತ್ರೆ ಹಳೇ ಕಬ್ಣ ಮುಂತಾದ ಪದಗಳು ನಲಿದಾಡುತ್ತವೆ. ಆದರೆ ನಮಗೇಕೆ ಈ ಶಿಕ್ಷೆ ಎಂದು ಅವರು ಪ್ರಶ್ನಿಸಿದರು.

ಹೀಗಾಗಿ, ಇನ್ನು ಮುಂದೆ ನರ್ಸರಿ ರೈಮ್‌ಗಳ ಬದಲಿಗೆ ಕನ್ನಡದ ಸಿನಿಮಾ ಹಾಡುಗಳನ್ನೇ ನಮಗೆ ಕಲಿಸಬೇಕು, ಮತ್ತು ಅದನ್ನು ಬಾಲವಾಡಿ ಎಂದು ಕರೆಯಬಾರದು. ಬಾಲಶಿಕ್ಷಣ ಕೇಂದ್ರ ಎಂದು ಕರೆಯಬೇಕು ಎಂಬ ಬೇಡಿಕೆಗಳನ್ನೂ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಂದಿಟ್ಟರು.

ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಮುಂತಾದ ಕ್ಲಿಷ್ಟಕರ ಪದಗಳ ಉಚ್ಚಾರಣೆ ಮಕ್ಕಳಾಗಿರುವುದರಿಂದ ನಮಗೆ ಕಷ್ಟವಾಗುತ್ತದೆ. ಅದೇ ರೀತಿ ಬಾ ಬಾ ಬ್ಲ್ಯಾಕ್ ಶೀಪ್, ರೈನ್ ರೈನೇ ಗೋ ಅವೇ ಮುಂತಾದ ಅರ್ಥ ಹೀನ ಹಾಡುಗಳು ನಮಗೆ ಭವಿಷ್ಯದಲ್ಲಿ ಅಗತ್ಯವೇ ಇರುವುದಿಲ್ಲ. ಆದರೆ ಕೊಡೇ ಕಿಸ್ಸು, ಬಂತು ಬಂತು ಕರೆಂಟು ಬಂತು, ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಪಾಠ ಹೇಳೀ ಬನ್ನೀ... ಮುಂತಾದ ಕನ್ನಡ ಸಿನಿಮಾ ಹಾಡುಗಳನ್ನು ಈಗಲೇ ಕಲಿತುಕೊಂಡರೆ, ಮುಂದೆ ಕುಣಿಯೋಣು ಬಾರಾ, ನಲಿಯೋಣು ಬಾರಾ, ಲಿಟ್ಲ್ ಸಿಂಗರ್, ಚಾಂಪಿಯನ್ ಡ್ಯಾನ್ಸರ್ ಮುಂತಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ ಎಂದು ಬಾಲ ಪ್ರತಿಪಾದಿಸಿದರು.

ನಾವು ಯಾವತ್ತೋ ಕರೆದ ಪತ್ರಿಕಾಗೋಷ್ಠಿಯ ವಿವರ ಇನ್ನೂ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲವಲ್ಲ, ಎಂಥಾ ಪತ್ರಿಕೇರೀ ನಿಮ್ದು ಎಂದು ಬಾಲ-ಕರುಗಳೆಲ್ಲ ಜೋರು ಮಾಡಿ ಮಚ್ಚು-ಲಾಂಗು ಹಿಡಿದು ಬೆದರಿಕೆಯೊಡ್ಡಿದ ಬಳಿಕವಷ್ಟೇ ಈ ವರದ್ದಿಯನ್ನು ಇಲ್ಲಿ ಪ್ರಕಟಿಸಲಾಗಿದೆ ಎಂದು ಸೊಂಪಾದಕರು ಸ್ಪಷ್ಟಪಡಿಸಿದ್ದಾರೆ.

Read more...

ಸಂತ್ರಸ್ತ ಗ್ರಾಮಗಳ ಸ್ಥಳಾಂತರ: ಬೊಗಳೂರಲ್ಲಿ ಆತಂಕ

Tuesday, October 13, 2009

(ಬೊಗಳೂರು ಸಂತ್ರಸ್ತ ಸ್ಥಳಾಂತರ ಬ್ಯುರೋದಿಂದ)
ಬೊಗಳೂರು, ಅ.13- ಪ್ರವಾಹದ ಭೀತಿ ಎದುರಿಸುತ್ತಿರುವ ಹಳ್ಳಿಗಳನ್ನೇ ಸ್ಥಳಾಂತರಿಸುವ ಸರಕಾರದ ಕಾರ್ಯಕ್ರಮಕ್ಕೆ ಬೊಗಳೂರು ಒಂದು ಕಡೆಯಿಂದ ಸ್ವಾಗತಿಸಿದೆ ಮತ್ತು ಇನ್ನೊಂದು ಕಡೆಯಿಂದ ವಿರೋಧಿಸುತ್ತಿದೆ ಎಂದು ವರದಿಯಾಗಿದೆ.

ಓಟು ಪಡೆದು ನಿಧಾನಸಭೆಗೆ ಆಯ್ಕೆಯಾಗಿ ಅಲ್ಲಿ ಐದು ವರ್ಷಗಳ ಕಾಲ ನಿಧಾನವಾಗಿಯೇ ನಿದ್ದೆ ಮಾಡಿದ ಬಳಿಕ, ಮತ್ತೆ ಓಟು ಬರುವ ಹೊತ್ತಿಗೆ ನಿಧಾನವಾಗಿ ಮೇಲೆದ್ದು, ಸಕಲ ಮಂತ್ರಿ ಗಡಣ, ಹಿಂಬಾಲಕರನ್ನು ಕರೆದುಕೊಂಡು ಪ್ರವಾಹದೋಪಾದಿಯಲ್ಲಿ ಕ್ಷೇತ್ರಗಳಿಗೆ ಮಂತ್ರಿ ಮಾಗಧರು ಆಗಮಿಸುವುದರಿಂದ ಬೊಗಳೂರು ಸೇರಿದಂತೆ ಕೆಲವು ಹಳ್ಳಿಗಳ ಜನರು ಭಯಭೀತರಾಗಿದ್ದಾರೆ.

ಈ ರೀತಿ ಜಾರಕಾರಣಿಗಳ ಪ್ರವಾಹ ಬರುವ ಹಳ್ಳಿಗಳನ್ನು ಸ್ಥಳಾಂತರ ಮಾಡಿದರೆ, ಅಥವಾ ಇಂತಹಾ ಪ್ರವಾಹಗಳು ಮತ್ತೆ ಬಾರದಂತೆ ತಡೆದರೆ ಪುಣ್ಯ ಕಟ್ಟಿಕೊಟ್ಟಂತಾಗುತ್ತದೆ ಎಂದು ಬೊಗಳೂರಿನ ಜಾರಕೀಯ ಪ್ರವಾಹ ಸಂತ್ರಸ್ತರಲ್ಲೊಬ್ಬರಾದ ಬೊಗಳೇದಾಸ ಅವರು ಪ್ರತಿಕ್ರಿಯಿಸಿದ್ದಾರೆ.

ಈ ಗ್ರಾಮಗಳನ್ನು ನಿಧಾನಸೌಧ ಪಕ್ಕದಲ್ಲೇ ಇರುವ ಬೆಂಗಳೂರಿಗೆ ಸ್ಥಳಾಂತರಿಸಿದರೆ ಮತ್ತೂ ಉತ್ತಮ. ಅಲ್ಲಿನ ರಸ್ತೆಗಳಲ್ಲೇ ಹೇಗೂ ಬೇಕಾದಷ್ಟು ಹೊಂಡಾ-ಗುಂಡಿಗಳಿವೆ. ಅದರಲ್ಲೇ ಒಂದಷ್ಟು ಬೀಜ ಬಿತ್ತಿ ಕೃಷಿ ಮಾಡಬಹುದು ಎಂಬುದು ಅವರ ಮುಂದಾಲೋಚನೆ.

ಹಾಗಿದ್ದರೆ ಕಾಂಕ್ರೀಟು ಕಾಡುಗಳ ಮಧ್ಯೆ, ಕೃಷಿಗಾಗಿ ಫಲವತ್ತಾದ ಮಣ್ಣು ಬೇಡವೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಗಳೇದಾಸ ಅವರು, ಸಿಕ್ಕೇ ಸಿಗುತ್ತದಲ್ಲ. ಹೇಗೂ ರಸ್ತೆಗಳ ಹೊಂಡಾಗುಂಡಿಗಳಿಂದ ಸಾಕಷ್ಟು ಧೂಳು ಅಥವಾ ಮಳೆ ಬಂದರೆ ಕೆಸರು ಮೇಲೇಳುತ್ತದೆ. ಪಕ್ಕದ ಕಟ್ಟಡಗಳಿಗೆ ರಾಚಿದ ಈ ಧೂಳು ಮತ್ತು ಕೆಸರನ್ನು ತೆಗೆದು ನಾವು ರಸ್ತೆಯಲ್ಲಿ ನೆಟ್ಟ ಗಿಡಗಳ ಬುಡಕ್ಕೆ ಹಾಕುತ್ತೇವೆ. ಇದು ಫಿಲ್ಟರ್ ಆದ ಮಣ್ಣು ಆಗಿದ್ದು, ಸಾಕಷ್ಟು ಫಲವತ್ತಾಗಿರುತ್ತದೆ ಎಂದವರು ಸ್ಪಷ್ಟನೆ ನೀಡಿದರು.

ಈಗ ಸ್ಥಳಾಂತರವನ್ನು ಸ್ವಾಗತಿಸುವವರು, ಅದನ್ನು ವಿರೋಧಿಸಲು ಏನು ಕಾರಣವಿದೆ ಎಂದು ಕೇಳಿದಾಗ, ತತ್ತರಿಸಿ ಉತ್ತರಿಸಿದ ಬೊಗಳೆದಾಸ, ಅವರು ಆ ಗ್ರಾಮಗಳನ್ನು ಏನಾದರೂ ಬೊಗಳೂರಿಗೆಯೇ ಸ್ಥಳಾಂತರಿಸಿದರೆ ಎಂಬುದೇ ನಮ್ಮ ಆತಂಕ ಎಂದರು.

ಇದಕ್ಕೇಕೆ ಆತಂಕಪಡಬೇಕು ಎಂದು ಪ್ರಶ್ನಿಸಿದಾಗ, ಎಲ್ಲ ಜಾರಕಾರಣಿಗಳ ಪ್ರವಾಹವು ಇಲ್ಲಿಗೆ ಬಂದರೆ ಅವರನ್ನು ಇಡಲು ಇಲ್ಲಿ ಜಾಗ ಇಲ್ಲ. ಅದಕ್ಕಾಗಿಯೇ ಶೋಕೇಸುಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಒಂದಷ್ಟು ಜನರನ್ನು ಒಟ್ಟುಗೂಡಿಸಿ ಕೈಗೊಂದು ಮೈಕು ನೀಡುವ ಅನಿವಾರ್ಯತೆ ಎದುರಾಗುತ್ತದೆ. ಹೀಗಾಗಿ ಇಲ್ಲಸಲ್ಲದ ಕೆಲಸಕ್ಕೆ ಬೊಗಳೂರಿಗರು ಆತಂಕಿತರಾಗಿದ್ದಾರೆ ಎಂದರವರು.

Read more...

ನೋBell ಶಾಂತಿ ಪ್ರಶಸ್ತಿ ಒಬಾಮ ಅಲ್ಲ, ಒಸಾಮ!

Friday, October 09, 2009

(ಬೊಗಳೂರು Barking News! ಬ್ಯುರೋದಿಂದ)
ಬೊಗಳೂರು, ಅ.9- ಅಮೆರಿಕ ಅಧ್ಯಕ್ಷ ಒಬಾಮ ಅವರಿಗೇ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ನೇರಾನೇರವಾಗಿ, ಖಡಾಖಂಡಿತವಾಗಿ ತಳ್ಳಿ ಹಾಕಿರುವ ಬೊಗಳೆ-ರಗಳೆ, ಇದು ನಿಜ ಸುದ್ದಿಯನ್ನು ಒಡೆದು ಹಾಕಿದ (Breaking) ಸೊಂಪಾದಕರು ಮತ್ತು ವರದ್ದಿಗಾರರ ಕೈವಾಡ ಎಂದು ಘೋಷಿಸಿದೆ.

ಶೂ ಎಸೆದ ಪತ್ರಕರ್ತನನ್ನು ಕ್ಷಮಿಸಿದ್ದು, ಇರಾಕಿನಲ್ಲಿ ಯುದ್ಧಕ್ಕೆ ಮಂಗಳ ಹಾಡಿ ಶಾಂತಿಗೆ ಸಹಕರಿಸಿದ್ದು, ಮಾತ್ರವಲ್ಲದೆ ಭಾರತದ ಮೇಲೆ ದಾಳಿ ಮಾಡಿ, ದಿನಕ್ಕೊಂದು ಬಾಯಿಗೆ ಬಂದ ಹೇಳಿಕೆ ನೀಡುತ್ತಾ, ಸಣ್ಣ ಮಕ್ಕಳಂತೆ ಆಟವಾಡುತ್ತಿರುವ ಪಾಕಿಸ್ತಾನಕ್ಕೆ ಯಾವುದೇ ಬುದ್ಧಿ ಕಲಿಸುವ ಗೋಜಿಗೆ ಒಬಾಮ ಹೋಗಿಲ್ಲ ಎಂಬುದು ಅಪ(ಸ)ಥ್ಯವಾದರೂ, ಇದರ ನಡುವೆಯೇ ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಅವರು ನೊಣವೊಂದನ್ನು ಹೊಡೆದು ಕೊಂದು ತಮ್ಮ ಹಿಂಸಾ ಮನೋಭಾವ ಮೆರೆದಿದ್ದಾರೆ. ಇದು ಅಶಾಂತಿಯಲ್ಲವೇ? ಹೀಗಾಗಿ ಒಬಾಮಗೆ ಹೇಗೆ ಈ ಪ್ರಶಸ್ತಿ ಲಭಿಸಿತು ಎಂಬುದು ಬೊಗಳೂರು ತಲೆಯಿಲ್ಲದ ಸೊಂಪಾದ-ಕರುಗಳ ಪ್ರಶ್ನೆ.

ಇದರ ಹಿಂದೆ ಸ್ವತಃ ಒಬಾಮ ಕೈವಾಡವನ್ನೂ ತಳ್ಳಿ ಹಾಕುವಂತಿಲ್ಲ. ಯಾಕೆಂದರೆ, ಒಬಾಮ ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅಮೆರಿಕವನ್ನು ಬದಲಾಯಿಸುತ್ತೇವೆ ಎಂಬ ಸಂದೇಶದೊಂದಿಗೆ "Yes, We Can" ಎಂದೇ ಜನರಲ್ಲಿ ಸಮೂಹ ಸನ್ನಿ ಮೂಡಿಸಿದ್ದರು. ಈ ಕಾರಣಕ್ಕೆ, ನೊಬೆಲ್ ಸಮಿತಿಯವರಲ್ಲಿಯೂ "ನೀವು ನೊಬೆಲ್ ಪ್ರಶಸ್ತಿ ನನಗೆ ಕೊಡಬಹುದೇ?" ಎಂದು ಕೇಳಿದಾಗ, ಅದೇ ಸಮೂಹಸನ್ನಿಗೊಳಗಾಗಿದ್ದ ನೊಬೆಲ್ ಕಮಿಟಿಯವರು ಕೂಡ Yes, We can ಎಂದು ಹೇಳಿರುವುದೂ ಕೂಡ ಕಾರಣವಿರಬಹುದು ಎಂದು ಸಂದೇಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಆದರೆ, ಇಲ್ಲಿ ಬೊಗಳೂರಿನ ಸಂದೇಹ ಬೇರೆಯದೇ ಆಗಿದೆ. ಇತ್ತೀಚೆಗಿನ ದಿನಗಳಲ್ಲಿ ಸತ್ತಿದ್ದಾನೆಯೇ ಬದುಕಿದ್ದಾನೆಯೇ ಎಂಬುದಿನ್ನೂ ಸಾಬೀ-ತಾಗದಿರುವ ಮತ್ತು ಅಮೆರಿಕದ ಯಾವುದೇ ಡ್ರೋನ್ ದಾಳಿಯೂ ತಾಗದಿರುವ ಒಸಾಮ ಬಿನ್ ಲಾಡೆನ್ ಯಾವುದೇ ಸದ್ದು ಮಾಡುತ್ತಿಲ್ಲ. ಬಾಂಬು ಪಟಾಕಿ ಸಿಡಿಸಿದ್ದೂ ಕಡಿಮೆ. ಸದ್ದು ಮಾಡಲು Bell ಬೇಕಲ್ಲವೇ? ಹೀಗಾಗಿ No Bell ಆಗಿಬಿಟ್ಟಿರುವ ಒಸಾಮನಿಗೆ ಅಶಾಂತಿ ಪ್ರಶಸ್ತಿ ಸಿಕ್ಕಿದ್ದು, ಅದನ್ನು ಸೊಂಪಾದಕರು ಅಥವಾ ರದ್ದಿಗಾರರು ಪ್ರೂಫ್ ಮಿಸ್ಟೇಕ್‌ನಿಂದ ಒbaಮ ಮಾಡಿ ಜಗಜ್ಜಾಹೀರುಗೊಳಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಅಹಿಂಸೆ ಪ್ರತಿಪಾದಿಸಿದ ಗಾಂಧೀಜಿಗೇ ದೊರೆಯದ ನೋ-ಬೆಲ್, ಗಾಂಧೀಜಿಯೇ ನನಗೆ ಪ್ರೇರಣೆ ಎನ್ನುತ್ತಲೇ ನೊಣವೊಂದನ್ನು ಕೊಂದು ಹಾಕಿದ್ದ ಒಬಾಮನಿಗೆ ದೊರೆತಿರುವುದು ಸರ್ವಥಾ ಸರಿಯಲ್ಲ ಎಂಬ ಕಾರಣಕ್ಕಾಗಿಯೇ ಬೊಗಳೂರು ಬ್ಯುರೋ ಈ ರೀತಿಯ ತಗಾದೆ ಎಬ್ಬಿಸಿರುವುದಾಗಿ ಎಲ್ಲಿಯೂ ವರದಿಯಾಗಿಲ್ಲ.

Read more...

ಬೊಗಳೆ: ಜಾನುವಾರುಗಳ ದರ್ಜೆಗೆ ತಶಿ ಶರೂರ್ ಸಮರ್ಥನೆ

Thursday, October 01, 2009

(ಬೊಗಳೂರು ಟ್ವೀಟ್ ಬ್ಯುರೋದಿಂದ)
ಬೊಗಳೂರು, ಅ.1- ಕೇಂದ್ರ ಸಚಿವ ತಶಿ ಶರೂರ್ ಅವರು ವಿಮಾನದಲ್ಲಿ ಜಾನುವಾರು ಕ್ಲಾಸ್ ಇದೆ ಎಂಬ ಬಗ್ಗೆ ಹೇಳಿಕೆ ನೀಡಿ ಇದು ಸುಮ್ ಸುಮ್ನೇ ವಿವಾದವಾಗಿದ್ದನ್ನು ಕಂಡು ಕಿಡಿ ಕಾರಿದ್ದಾರೆ. ಅವರು ನೇರವಾಗಿ ಕಿಡಿ ಕಾರಿದವರೇ, ಅವರು ಕಾರಿದ ಕಿಡಿ ಬೊಗಳೂರಿನ ಕ.ಬು.ಗೇ ಬಂದು ಬಿದ್ದಿದೆ.

ಹೀಗಾಗಿ ಅವರು ಬೊಗಳೂರಿಗೇ ಬಂದು ಸಂದರ್ಶನ ನೀಡಿ ಒಂದು ಪ್ರಶ್ನೆಗೆ ಉತ್ತರಿಸಿ ಬೊಗಳೂರು ಬ್ಯುರೋವನ್ನು ತತ್ತರಿಸಿ ಹೋಗಿದ್ದಾರೆ.

ನೀವು ಜಾನುವಾರು ದರ್ಜೆಯ ವಿಮಾನ ಯಾನ ಅಂತ ಹೇಳಿದ್ದು ಸರಿಯೋ ತಪ್ಪೋ? ನೀವದನ್ನು ಒಪ್ಪುತ್ತೀರೋ ಇಲ್ವೋ? ಸಮರ್ಥಿಸಿಕೊಳ್ತೀರಾ ಇಲ್ಲಾ ನಿರಾಕರಿಸ್ತೀರಾ? ಪಕ್ಷವು ನಿಮ್ಮನ್ನು ಉಚ್ಚಾಟಿಸಿದರೆ ಒಪ್ತೀರಾ ಇಲ್ವಾ? ಜಾನುವಾರು ಅಂದಿದ್ದು ಸರಿಯೋ ತಪ್ಪೋ ಎಂಬಿತ್ಯಾದಿಯಾಗಿ ಒಂದೇ ಒಂದು ಪ್ರಶ್ನೆಯನ್ನು ಕೇಳಲಾಯಿತು.

ಅದಕ್ಕೆ ಅವರು ಉತ್ತರಿಸಿದ್ದು ಹೀಗೆ: ಜಾನುವಾರುಗಳು ಎಂದರೆ ನಾಯಿ, ಕುರಿ, ಬೆಕ್ಕು, ದನ, ಜನ, ಒಂಟೆ, ಆನೆ ಮುಂತಾದ ಪ್ರಾಣಿಗಳು ಬರುತ್ತವೆ. ನಾನು ನಿಜವಾಗಿಯೂ ಹೇಳಿದ್ದು ಆನೆಗಳನ್ನು ಉದ್ದೇಶಿಸಿ ಮಾತ್ರ. ಆದರೆ ಅವು ಬಿಳಿಯಾನೆಗಳಿಗೆ ಮಾತ್ರ!

ಅಂತ ಹೇಳಿ ಅವರು ಟ್ವಿಟ್ಟರಿನಲ್ಲಿಮತ್ತೊಂದು ಟ್ವೀಟ್ ಮಾಡಲು ಹೊರಟೇಹೋದರು.

Read more...

ಚಂದ್ರನಲ್ಲಿ ನೀರು: ಭೂಮಿಯಲ್ಲಿ ತಲ್ಲಣ!

Thursday, September 24, 2009

(ಬೊಗಳೂರು ನೀರು ಪತ್ತೆ ಬ್ಯುರೋದಿಂದ)
ಬೊಗಳೂರು, ಸೆ.24- ಚಂದ್ರನಲ್ಲಿ ಸಾಕಷ್ಟು ನೀರು ಇದೆ ಎಂಬುದನ್ನು ತಿಳಿದುಕೊಂಡ ನಾಗರಿಕರು, ಇದೀಗ ಭೂಮಿಯ ಮೇಲಿರುವ ನೀರನ್ನೆಲ್ಲಾ ಬೇಕಾಬಿಟ್ಟಿ ಖರ್ಚು ಮಾಡಲಾರಂಭಿಸಿರುವುದು ಬೆಳಕಿಗೆ ಬಂದಿದೆ.

ಬೊಗಳೂರಿನ ಗಲ್ಲಿ ಗಲ್ಲಿಗಳ ಚರಂಡಿಯೆಲ್ಲಾ ಇದೀಗ ತುಂಬಿ ತುಳುಕಾಡುತ್ತಿದ್ದು, ಪ್ರವಾಹದ ಭೀತಿಯೂ ಉಂಟಾಗಿದೆ. ಬಹುಶಃ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆಯಾಗಿರುವುದು ಕೂಡ ಇದೇ ಕಾರಣಕ್ಕೆ ಎಂದು ಅಜ್ಞಾನಿಗಳು ಶಂಕಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣವೇ, ವರ್ಷಗಟ್ಟಲೆ ಸ್ನಾನ ಮಾಡದೇ ಇರುವವರೆಲ್ಲರೂ ಇದೀಗ ಸ್ನಾನ ಮಾಡಲು ಆರಂಭಿಸಿದ್ದಾರೆ ಎಂಬ ವರದಿಗಳು ರಾಜ್ಯದ ನಾನಾ ಕಡೆಗಳಿಂದ ಬರತೊಡಗಿವೆ.

ಚಂದ್ರನಲ್ಲಿ ಹೇಗಿದ್ದರೂ ಸಾಕಷ್ಟು ನೀರು ಇದೆಯಲ್ಲ, ಇನ್ನು ನಮಗೇತರ ಭಯ ಎಂದು ಬೊಗಳೂರಿನ ಪ್ರಜೆಯೊಬ್ಬರು ನೀರನ್ನೇ ಕುಡಿಯುತ್ತಾ, ನೀರಿನಲ್ಲೇ ಸ್ನಾನ ಮಾಡುತ್ತಾ, ನೀರನ್ನೇ ಹೊರಬಿಡುತ್ತಾ ಪ್ರಶ್ನಿಸಿದ್ದಾರೆ.

ಈ ವರದಿ ಪ್ರಕಟವಾಗತೊಡಗಿದಂತೆಯೇ, ದೇವಸ್ಥಾನದಲ್ಲಿ ಲೋಟೆಗಳಲ್ಲಿ ತೀರ್ಥ ಕೊಡಲು ಆರಂಭವಾಗಿರುವುದಾಗಿ ವರದಿಗಳು ತಿಳಿಸಿವೆ. ಮತ್ತೆ ಕೆಲವರು, ಚಂದ್ರನಲ್ಲಿ ನೀರಲ್ಲ, ಬೀರು ಲಭ್ಯವಾಗಿದೆ ಎಂದು ಅಪಾರ್ಥ ಮಾಡಿಕೊಂಡು, ಸಿಕ್ಕಾಪಟ್ಟೆ ಬೀರು ಕುಡಿದು ಕುಡಿದು ಸುಸ್ತಾಗಿ ಅಲ್ಲಲ್ಲಿ ಬಿದ್ದಿರುವ ವರದಿಗಳೂ ಬೊಗಳೂರು ಬ್ಯುರೋದ ಬಾಗಿಲಲ್ಲಿ ಬಂದು ಬೀಳತೊಡಗಿವೆ.

ಇನ್ನೊಬ್ಬ ನಾಗರಿಕರು ಹೇಳುವಂತೆ, UPAವಾಸ (©ಸುನಾಥ) ಸರಕಾರವಂತೂ ತಿನ್ನುವ ವಸ್ತುಗಳ ಬೆಲೆ ಬೇಕಾಬಿಟ್ಟಿಯಾಗಿ ಏರಿಸಿಬಿಟ್ಟಿದೆ. ಇನ್ನು ಬದುಕುವುದು ಹೇಗೆಂಬ ಚಿಂತೆ ಆವರಿಸಿಬಿಟ್ಟಿತ್ತು. ಇದೀಗ ನೀರು ಸಿಕ್ಕಿರುವುದರಿಂದ ನೀರನ್ನೇ ಸಾಕಷ್ಟು ಬಾರಿ ಕುಡಿದು ಬದುಕಬಹುದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಚಂದ್ರನಲ್ಲಿ ನೀರು ಪತ್ತೆಯಾಗಿರುವ ಸಂಭ್ರಮದ ಸಂಗತಿ ಕೇಳಿ, ಅಲ್ಲಲ್ಲಿ ಹಾಲಿನಲ್ಲಿ ನೀರಿನಂಶ ಹೆಚ್ಚಾಗಿರುವುದೂ ಕಂಡುಬಂದಿದೆ. ಇದು ಹಾಲಿನ ಸಾಂದ್ರತೆ ಪತ್ತೆ ಯಂತ್ರದಲ್ಲಿ ಶೇ.90ರಷ್ಟು ದಾಖಲಾಗಿದೆ ಎಂದು ಬೊಗಳೂರು ರದ್ದಿಗಾರರ ಮೂಲಗಳು ತಿಳಿಸಿವೆ.

ಈ ಮಧ್ಯೆ, ಕೊಳಚೆ ನೀರನ್ನು ಚೆನ್ನಾಗಿ ಸೋಪು ಹಾಕಿ ತೊಳೆದು ಶುದ್ಧವಾಗಿ ಕಾಣಿಸುವಂತೆ ಮಾಡಿ ಬಾಟಲಿಯಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಪೂರೈಸುವ ಕಂಪನಿಗಳು ಅಂಗಾತ ನೆಲಕಚ್ಚತೊಡಗಿವೆ ಎಂದು ಮೂಲಗಳು ವರದ್ದಿ ಸುರಿದಿವೆ. ತೀವ್ರ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ, ಈ ಕಂಪನಿಗಳು ನೀರನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿರುವ ವರದ್ದಿಗಳು ಅಲ್ಲಲ್ಲಿಂದ ಬೊಗಳೂರು ಬ್ಯುರೋಗೆ ಬಂದು ತಲುಪತೊಡಗಿವೆ.

ಇಷ್ಟು ಮಾತ್ರವಲ್ಲದೆ, ಅಮೆರಿಕದಲ್ಲಿ ಟಾಯ್ಲೆಟ್ ಪೇಪರ್ ಉದ್ಯಮವೂ ಮಕಾಡೆ ಮಲಗಿದ್ದು, ಎಲ್ಲರೂ ಇದೀಗ ನೀರು ಉಪಯೋಗಿಸಲಾರಂಭಿಸಿರುವುದಾಗಿ ನಮ್ಮ ಬಾತ್ಮೀದಾರರಾದ ಬರಾಕ್ ಹೋಗಾಕ್ ಒಬಾಮ ಅವರು ಬೊಗಳೂರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಇನ್ನೊಂದೆಡೆ, ಚಂದ್ರನಲ್ಲಿ ನೀರು ಪತ್ತೆ ಮಾಡಿರುವುದರ ಹಿಂದೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುವ ಸಂಚು ಇದೆ ಎಂದು ಕಾನ್guess ವಕ್ತಾರರು ಅವಸರದ ಪತ್ರಿಕಾಗೋಷ್ಠಿ ಕರೆದು ದೂರಿದ್ದಾರೆ. ರಮ್ಜಾನ್ ಮಾಸ ಮುಗಿದ ತಕ್ಷಣವೇ ಆ ಚಂದ್ರನಲ್ಲಿ ನೀರು ಇದೆ ಎಂದೆಲ್ಲಾ ವರದ್ದಿ ಮಾಡಿರುವುದು, ಚಂದ್ರನನ್ನು ಮುಂದೆಂದೂ ಕಾಣಿಸದಂತೆ ಮಾಡುವ ಸಂಚು ಎಂದು ಅವರು ದೂರಿದ್ದಾರೆ. ಮಾತ್ರವಲ್ಲದೆ, ಚಂದ್ರನ ಮೇಲೆ ನೀರು ಇರುವಿಕೆಯನ್ನು ಪತ್ತೆ ಹಚ್ಚಿದ ಇಸ್ರೋ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಚಂದ್ರನಲ್ಲಿರುವ ನೀರಿನಲ್ಲಿ ಅಲ್ಪಸಂಖ್ಯಾತರಿಗೆ, ದಲಿತರಿಗೆ ಮೀಸಲಾತಿ ಇರಬೇಕು. ಒಳಮೀಸಲಾತಿಯನ್ನೂ ನೀಡಬೇಕು ಎಂದು ಒತ್ತಾಯಿಸತೊಡಗಿದ್ದಾರೆ.

ಇಷ್ಟೆಲ್ಲದರ ನಡುವೆ, ಚಂದ್ರನಿಗೊಂದು ಕೊಳವೆ ಸಿಕ್ಕಿಸಿ, ಅಲ್ಲಿಂದ ನೀರು ತರುವ ಅಥವಾ ಕದಿಯುವ ಹುನ್ನಾರವೂ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

Read more...

ಬೆಲೆ ಏರಿಕೆಗೆ 'ಆಟೋಮ್ಯಾಟಿಕ್' ಪ್ರತಿಭಟನೆ

Tuesday, September 22, 2009

(ಬೊಗಳೂರು ಅಪ್ರತಿಭ-ಟನೆ ಬ್ಯುರೋದಿಂದ)
ಬೊಗಳೂರು, ಸೆ.22- ಚೀಲ ತುಂಬಾ ನೋಟುಗಳನ್ನು ಹಾಕಿಕೊಂಡು ಜೇಬು ತುಂಬಾ ದಿನಸಿ ಸಾಮಾನು ಮತ್ತು ಒಂದು ಸಿಂಗಲ್ ತರಕಾರಿ ತುಂಡು ತರುವ ಸಾಧ್ಯತೆಯಿರುವ ಈ ಬೆಲೆ ಏರಿಕೆ ದಿನಗಳಲ್ಲಿ, ಕೇಂದ್ರದ ಪೀಪಿಏ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಪ್ರತಿಭಟಿಸಿ ಬೊಗಳೂರು ನಾಗರಿಕರು ಸ್ವಯಂಚಾಲಿತವಾಗಿ ಪ್ರತಿಭಟಿಸತೊಡಗಿದ್ದಾರೆ.

ವಿಶೇಷವೆಂದರೆ, ಈ ಪ್ರತಿಭಟನಾ ಆಂದೋಲನಕ್ಕೆ ಯಾರ ಕುಮ್ಮಕ್ಕು ಕೂಡ ಇಲ್ಲದಿರುವುದು ಮತ್ತು ಯಾರದ್ದೇ ಒತ್ತಡ, ಸಲಹೆ ಇತ್ಯಾದಿಗಳು ಅನಗತ್ಯವಾಗಿರುವುದು.

ಈ ಮಧ್ಯೆ, ಬೆಲೆ ಏರಿಕೆ ನಿಯಂತ್ರಿಸುವ ಬದಲು ನಾವು ಕಡಿಮೆ ಖರ್ಚು ಮಾಡುತ್ತಿದ್ದೇವೆ, ನೀವೂ ಕಡಿಮೆ ಖರ್ಚು ಮಾಡಿ ಎಂಬ ಸಂದೇಶ ನೀಡಲು ಕೇಂದ್ರದ Unprecedented Price-rise Agenda ಸರಕಾರ ನಿರ್ಧರಿಸಿದೆ.

ಸಚಿವರು, ಸಂಸದರು ಮತ್ತು 'ಸೂಪರ್ ಪ್ರಧಾನಿನಿ'ಯರೆಲ್ಲರೂ ಇಕಾನಮಿ ಕ್ಲಾಸ್ ಎನ್ನುತ್ತಾ ಬೊಗಳೆ ರಗಳೆ ಬ್ಯುರೋಗಿಂತಲೂ ಜೋರಾಗಿ ಬೊಗಳೆ ಬಿಡತೊಡಗಿರುವುದು ನಮ್ಮ ಬ್ಯುರೋದ ಅಸ್ತಿತ್ವಕ್ಕೇ ಬಂದ ಸವಾಲು ಆಗಿದೆ. ಕೇಂದ್ರದಲ್ಲಂತೂ ಸಾಕಷ್ಟು ಬೊಗಳೆ ಬ್ಯುರೋಗಳು ಅಣಬೆಗಳಂತೆ ಮೇಲೇಳುತ್ತಿವೆ. ಈ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ದುಂದುವೆಚ್ಚದ ಮಿತವ್ಯಯ ಬೋಧಿಸುತ್ತಾ ಬೊಗಳೆ ಬ್ಯುರೋ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆಯಾದರೂ, ಅದನ್ನು ಎಲ್ಲಿಯೂ ತೋರ್ಪಡಿಸಿಕೊಳ್ಳುತ್ತಿಲ್ಲ. ಜಾನುವಾರು ದರ್ಜೆಯಲ್ಲಿ ಪ್ರಯಾಣ ಮಾಡುವ ಸಲಹೆ ನೀಡಿದ ಕೇಂದ್ರದ ವಿದೇಶದ ಅಂಗವಾಗಿರುವ ಸಚಿವ ತಶಿ ಶರೂರ್ ಅವರನ್ನು ಪಶುಸಂಗೋಪನಾ ಖಾತೆ ಸಚಿವರನ್ನಾಗಿಸಬೇಕು ಎಂದು ಬೊಗಳೂರು ಬ್ಯುರೋ ಬಾಯಿಬಿಟ್ಟು ಆಗ್ರಹಿಸತೊಡಗಿದೆ.

ಇದಕ್ಕಾಗಿ ದೇಶದ ಪ್ರಜೆಗಳೆಲ್ಲರನ್ನೂ ಜಾನುವಾರುಗಳೆಂದು ಪರಿಗಣಿಸಿ, ಅವರಿಗೆ ದಿನಸಿ ಆಹಾರದ ಅಗತ್ಯವಿಲ್ಲ, ಅಕ್ಕಿಯಂತೂ ತೀರಾ ಅನಗತ್ಯ (ಇದಕ್ಕಾಗಿ ಅದರ ಬೆಲೆ 35 ರೂಪಾಯಿಗೂ ಹೆಚ್ಚು ಮಾಡಲಾಗಿದೆ). ಈ ಎಲ್ಲ ದುಂದುವೆಚ್ಚವನ್ನು ನಿಲ್ಲಿಸಿ ಮಿತವ್ಯಯ ಮಾಡಬೇಕು ಎಂದು ಪರಿಗಣಿಸಿರುವ ಕೇಂದ್ರದ ಸರಕಾರದ ಪಕ್ಷೋದ್ಧಾರದ ಗಮನವನ್ನು ಇತ್ತ ಕಡೆ ಸೆಳೆಯುವುದಕ್ಕಾಗಿ ಸಕಲ ಜನ-ಜಾನುವಾರುಗಳೊಂದಿಗೆ ಅಪ್ರತಿಭ-ಟನೆ ಮಾಡಲು ನಿರ್ಧರಿಸಲಾಗಿದೆ.

ಈ ಪ್ರತಿಭಟನೆಯ ಅಂಗವೇ ಬಾಯ್ಮುಚ್ಚುವ ಅಂಗ. ಅಂದರೆ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಯಾವುದೇ ಆಹಾರ ಪದಾರ್ಥ ಕೊಳ್ಳುವುದು ಅಸಾಧ್ಯವಾಗಿರುವುದರಿಂದ ಆಟೋಮ್ಯಾಟಿಕ್ ಆಗಿ ಉಪವಾಸ ಅನ್ನ ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ. ಇದು ಬೊಗಳೂರು ಜನತೆಗೆ ಗಾಂಧೀಜಿಯೇ ಹೇಳಿಕೊಟ್ಟಿದ್ದು, ಈಗಿನ ಸಾನಿಯಾ ಗಾಂಧೀಜಿಗಳು ಕೂಡ ಅದನ್ನೇ ಅನುಸರಿಸುವಂತೆ ಜನತೆಗೆ ಕರೆ ನೀಡಿರುವುದನ್ನು ಬೊಗಳೂರು ಬ್ಯುರೋ ಮಾತ್ರವೇ ವರದಿ ಮಾಡಿದೆ.

ಇದನ್ನು ಕೇಳಿ ಮಾನ್ಯ ನಿಧಾನ ಮಂತ್ರಿಗಳು ಮತ್ತವರ ಸಚಿವರ ಬಳಗವು ಮಾಧ್ಯಮಗಳ ಕಣ್ಣಿಗೆ ಬೀಳದಂತೆ ನಾಪತ್ತೆಯಾಗಿ ಬೊಗಳೂರಿನಲ್ಲಿ ಅವಿತು ಕೂತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

Read more...

ತಿರುಪತಿ ಲಡ್ಡು ಮಾತ್ರವಲ್ಲ, ನಾಮಕ್ಕೂ ಪೇಟೆಂಟ್!

Thursday, September 17, 2009

(ಬೊಗಳೂರು ನಾಮ ಹಾಕಿಸಿಕೊಳ್ಳೋ ಬ್ಯುರೋದಿಂದ)
ಬೊಗಳೂರು, ಸೆ.17- ತಿರುಪತಿಯ ನಕಲಿ ಲಡ್ಡು ತಯಾರಿಸದಂತೆ ನಿರ್ಬಂಧ ವಿಧಿಸಿರುವ ಬೆನ್ನಲ್ಲೇ, ನಾಮ ಹಾಕಿಸಿಕೊಳ್ಳುವುದಕ್ಕೂ ಪೇಟೆಂಟ್ ಮಾಡಿಸಬೇಕು ಎಂದು ಬೊಗಳೂರು ಪ್ರಜೆಗಳು ವ್ಯರ್ಥಾಲಾಪ ಆರಂಭಿಸಿದ್ದಾರೆ.

ಈಗಾಗಲೇ ನಮ್ಮನ್ನು ಆಳಲೆಂದು ನಾವು ಆರಿಸಿ ಕಳುಹಿಸಿದವರೆಲ್ಲರೂ ಬೊಗಳೂರಿನ ಬಡ ಪ್ರಜೆಗಳಿಗೆ ಸಾಕಷ್ಟು ಬಾರಿ ನಕಲಿ ಮೂರ್‌ನಾಮಗಳನ್ನು ಹಾಕಿದ್ದಾರೆ. ಕೇಂದ್ರ ಸರಕಾರವಂತೂ ತಿನ್ನುವ ಆಹಾರ ವಸ್ತುಗಳ ಬೆಲೆಯನ್ನು ಬೇಕಾಬಿಟ್ಟಿ ಏರಿಸಿ, ಆರಾಮವಾಗಿ ಪ್ರಯಾಣದಲ್ಲಿ ಮಿತವ್ಯಯ ಮಾಡಿ ಎಂಬಿತ್ಯಾದಿ ಗಿಮಿಕ್‌ಗಳ ಮೂಲಕ ಈಗಾಗಲೇ ಪ್ರಜೆಗಳಿಗೆ ದೊಡ್ಡ ದೊಡ್ಡ ಮೂರು ನಾಮ ಹಾಕಲಾರಂಭಿಸಿದೆ. ಇದೇ ರೀತಿ ರಾಜ್ಯ ಸರಕಾರದಲ್ಲಿ ಭದ್ರವಾಗಿ ನೆಲೆಯಾಗಿರುವ ಮಂತ್ರಿ-ಮಾಗಧರು, ಅಧಿಕಾರಿಗಳು ಕೂಡ ಗಣಿ ಲೂಟಿ, ಇದ್ದಿಲು-ಮಣ್ಣು-ಮಸಿ ಹಗರಣ, ಭೂಕಬಳಿಕೆ ಮುಂತಾದ ಹಗರಣಗಳು, ವಿದ್ಯುತ್ ಕೊಡುತ್ತೇವೆ ಎಂಬೋ ಭರವಸೆಗಳ ಹೆಸರಲ್ಲಿ ನಕಲಿ ನಾಮ ಹಾಕುತ್ತಿರುವುದನ್ನು, ನಮ್ಮನ್ನಾಳುವವರ ಅಂದ-ಚಂದ-ವೈಭವವನ್ನೆಲ್ಲ ಕಣ್ಣಾರೆ ಕಾಣಲಾರಂಭಿಸಿದ್ದಾರೆ.

ಚೀಲ ತುಂಬಾ ಹಣ ಒಯ್ದು, ಜೇಬು ತುಂಬಾ ದಿನಸಿ ಸಾಮಗ್ರಿ ಖರೀದಿಸಬೇಕಾಗಿರುವ ಈ ದಿನಗಳಲ್ಲಿ, ನಾಮ ಹಾಕಿಸಿಕೊಳ್ಳೋದಕ್ಕೂ ಕೆಲವರ ಬಳಿ ಹಣವಿಲ್ಲದಿರುವುದು ಕಂಡುಬಂದಿದೆ. ಹಿಂದೆ, ವಿನಿವಿಂಕ್‌ನಿಂದ ಬಿದ್ದ ನಾಮದಿಂದಲೇ ಪ್ರಜೆಗಳು 'ಚಾ'ತರಿಸಿಕೊಂಡಿಲ್ಲ, ಅದರ ನಡುವೆ ಆ ಸ್ಕೀಮು, ಈ ಸ್ಕೀಮು ಎಂಬಿತ್ಯಾದಿ ಸಾಲೋಸಾಲಾಗಿ ಬ್ಲೇಡು ಕಂಪನಿಗಳು ನಾಮ ಹಾಕುತ್ತಲೇ ಇರುತ್ತವೆ. ಈ ನಾಮದ ಮಹಿಮೆ ಅಪಾರವಾಗಿ, ನಾಮದ ಬಲ ಜೋರಾಗಿ ಜನರು ಜಾಗತಿಕ ಹಣಕಾಸು ಬಿಕ್ಕಟ್ಟಿನ ಮಧ್ಯೆ ಅಳಿದುಳಿದ ಬಿಡಿಗಾಸನ್ನೂ ಕಳೆದುಕೊಳ್ಳತೊಡಗಿರುವುದು ಈ ಪೇಟೆಂಟ್ ಕುರಿತ ಜನಾಗ್ರಹಕ್ಕೆ ಮೂಲ ಹೇತುವಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆಯೇ, ನಾಲ್ಕನೇ ನಾಮ ಹಾಕಲು ಭಾರೀ ಸಿದ್ಧತೆ ನಡೆದಿದ್ದು, ವಿಮಾನ ಪ್ರಯಾಣದಲ್ಲಿ ಎಕಾನಮಿ ದರ್ಜೆ, ಬ್ಯುಸಿನೆಸ್ ದರ್ಜೆ, ಎಕ್ಸಿಕ್ಯೂಟಿವ್ ದರ್ಜೆ ಮುಂತಾದವುಗಳು ಮಾತ್ರವಲ್ಲದೆ, ಹಸುಗಳ ದರ್ಜೆ, ನಾಯಿ-ನರಿಗಳ ದರ್ಜೆಗಳನ್ನೂ ತೆರೆಯುವ ಮೂಲಕ ಮತ್ತೊಂದು ನಾಮದ ಸ್ಮರಣೆಯೊಂದು ಕೇಳಿಬರುತ್ತಿದೆ ಎಂದು ಇಲ್ಲಿ ವರದಿಯಾಗಿರುವುದು, ಬಡ ಪ್ರಜೆಗಳೆಲ್ಲರೂ, ಇಷ್ಟೆಲ್ಲಾ ನಾಮಗಳನ್ನು ಎಲ್ಲಿ ಧರಿಸುವುದು ಎಂಬ ಕುರಿತು ಕಕ್ಕಾಬಿಕ್ಕಿಯಾಗಿದ್ದಾರೆ ಎಂದು ಅಪ್ರತ್ಯಕ್ಷದರ್ಶಿ ವರದಿಗಾರರು ವರದ್ದಿ ತಂದು ಸುರುವಿದ್ದಾರೆ.

ಇದ್ದ ಬದ್ದವರ ಕೈಯಲ್ಲಿ ನಮಗೆ ನಾಮ ಹಾಕಿಸಿಕೊಳ್ಳೋದೇ ಆಯ್ತು. ಹೀಗಾಗಿ ಈ ತಿರುಪತಿ ಲಡ್ಡಿನ ಬದಲು, ತಿರುಪತಿಯ ನಕಲಿ ನಾಮ ಹಾಕುವ ಈ ಪ್ರಕ್ರಿಯೆಗಳಿಗೆ ಪೇಟೆಂಟ್ ಮಾಡಿಸಿಟ್ಟರೆ ಸ್ವಲ್ಪವಾದರೂ ಉಸಿರುಬಿಡಬಹುದು ಎಂಬುದು ಬೊಗಳೂರು ಪ್ರಜೆಗಳ ಲೆಕ್ಕಾಚಾರ.

Read more...

Blame-Game: ನಿಮಗೆ ಬ್ಲೇಮ್, ನಮಗೆ ಗೇಮ್ ಎಂದ ಪಾಕ್!

Monday, September 14, 2009

(ಬೊಗಳೂರು Blame ಕ್ರೀಡಾ ಬ್ಯುರೋದಿಂದ)
ಬೊಗಳೂರು, ಸೆ.14- ಮುಂಬೈ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವು blame ಮಾತ್ರ ಮಾಡಬೇಕು, game ನಮಗೆ ಇರಲಿ ಎಂದು ಪಾತಕಿ ಸ್ತಾನವು ಸ್ಪಷ್ಟಪಡಿಸಿದೆ.

ಮುಂಬೈ ಮೇಲೆ ನಡೆದ ದಾಳಿಯ ವರ್ಷಾಚರಣೆ ಸಮೀಪಿಸುತ್ತಿರುವಂತೆಯೇ ಉಭಯ ರಾಷ್ಟ್ರಗಳ ನಡುವೆ ಸೌಹಾರ್ದತೆ ಏರ್ಪಡಲು ಹೊಸ ಹೊಸ ಸಾಧ್ಯತೆಗಳನ್ನು ಪರದಾಡಿ ಪರದಾಡಿ ಹುಡುಕಲಾಗುತ್ತಿದ್ದು, ಕಳೆದ ಒಂದು ವರ್ಷದಿಂದ "ಉಗ್ರರ ವಿರುದ್ಧ ಕ್ರಮ ಕೈಗೊಳ್ಳೀssssssssssss, ಇಲ್ಲವಾದರೆ ನಾವೇ ಕ್ರಮ ಕೈಗೊಳ್ಳುತ್ತೇವೆ" ಎಂದು ಪದೇ ಪದೇ ಹೇಳುತ್ತಿದ್ದ ಭಾರತ ಸರಕಾರವು ಪಾತಕಿಸ್ತಾನದ ಮೇಲೆ Blame ಮಾತ್ರ ಮಾಡಿ, Game ಆಡಲು ಅದಕ್ಕೆ ಬಿಟ್ಟಿರುವುದಾಗಿ ಮೂಲಗಳು ವರದ್ದಿ ಮಾಡಿವೆ.

"ನೀವು ಬ್ಲೇಮ್ ಮಾಡಿ, ನಾವು ಗೇಮ್ ಆಡುತ್ತೇವೆ" ಎಂದು ಇತ್ತೀಚೆಗೆ ಪಾತಕಿಸ್ತಾನದಿಂದ ಭಾರತದ ನಿಧಾನಮಂತ್ರಿ ಸೋನಿಯಾ ಸಿಂಗ್.... ಅಲ್ಲಲ್ಲ ಮನಮೋಹಕ ಸಿಂಗ್ ಅವರಿಗೆ ಪಾಕಿಸ್ತಾನದ ಸರಕಾರದ ಮುಖ್ಯಸ್ಥರೂ ಆಗಿರುವ ಐಎಸ್ಐ ಮುಖ್ಯಸ್ಥರು ಪತ್ರ ಬರೆದಿರುವುದಾಗಿ ಮೂಲಗಳು ಬೊಗಳೆ-ರಗಳೆಗೆ ತಿಳಿಸಿಲ್ಲ.

ಮುಂಬೈ ಮೇಲೆ ನಮ್ಮವರು ದಾಳಿ ಮಾಡಿ ಒಂದು ವರ್ಷವಾಗ್ತಾ ಬಂದ್ರೂ ನಿಮ್ ಕೈಯಲ್ಲಿ ಏನೂ ಮಾಡಲಾಗಿಲ್ಲ ಎಂಬ ಕುಹಕ ನಗೆಯೊಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಮೂಲಿ ಪ್ರಕ್ರಿಯೆಯಾಗಿಬಿಟ್ಟಿರುವ, ಗಡಿ ನಿಯಂತ್ರಣ ರೇಖೆ ದಾಟಿ ನುಸುಳುವ ಪ್ರಕ್ರಿಯೆಯ ಮೂಲಕ ಭಾರತ ಪ್ರವೇಶಿಸಿರುವುದಾಗಿ ಬೊ.ರ. ಬ್ಯುರೋದ ಮಂದಿ ಕದ್ದು ಮುಚ್ಚಿ ವರದ್ದಿ ತಂದು ಹಾಕಿದ್ದಾರೆ.

(ಕೆಲವಾರು ದಿನಗಳಿಂದ ಬೊಗಳೂರು ಬ್ಯುರೋ ಸಿಕ್ಕಾಪಟ್ಟೆ ಧೂಳು ತಿನ್ನುತ್ತಿದ್ದ ಕಾರಣ ಚಾ-ತರಿಸಿಕೊಂಡು ಬಳಿಕ ಧೂಳೊರೆಸಿ ವಾಪಸ್ ಮರಳಲಾಗಿದೆ. ಆದರೆ, ಈ ಸಮಯದಲ್ಲಿ ನಮ್ಮ ಬೊಗಳೆ-ರಗಳೆ ಪತ್ರಿಕೆ ಲಭಿಸದ ದಾರವಿಲ್ಲದ ಚಂದಾರಹಿತರು, ಅಡ್ಜಸ್ಟ್ ಮಾಡಿಕೊಂಡು, ಮುಂದಿನ ತಿಂಗಳ ಬಿಲ್‌ನಲ್ಲಿ ಸೇರಿಸಿ ನಮಗೆ ಪಾವತಿಸಲು ಕೋರಲಾಗಿದೆ.)

Read more...

About This Blog

  © Blogger template Foam by Ourblogtemplates.com 2009

Back to TOP