ಬೊಗಳೆ ರಗಳೆ

header ads

ಬೊಗಳೆ ಬಯಲಿಗೆಳೆದ ಸತ್ಯ: ಮಾಧ್ಯಮಗಳ ಬೌದ್ಧಿಕ ದಿವಾಳಿತನ!

(ಬೊಗಳೂರು ಜಾಗೋ ಗ್ರಾಹಕ್ ಜಾಗೋ ಬ್ಯುರೋದಿಂದ)
ಬೊಗಳೂರು, ನ.29- ಮುಂಬಯಿಯಲ್ಲಿ ಭಯೋತ್ಪಾದಕ ಕೃತ್ಯ ನಡೆದು ಸಾಕ್ಷ್ಯಾಧಾರ ಸಮೇತ ಉಗ್ರಗಾಮಿ ಸಿಕ್ಕಿಬಿದ್ದು 730ಕ್ಕೂ ಹೆಚ್ಚು ದಿನಗಳು ಕಳೆದು ಹೋದ ಸಂದರ್ಭದಲ್ಲಿ ನಡೆದ ಎರಡನೇ ವರ್ಷಾಚರಣೆಯಲ್ಲಿ ಮಾಧ್ಯಮಗಳ (ಬೊಗಳೆ ರಗಳೆ ಎಂಬ ಕುಖ್ಯಾತ ಪತ್ರಿಕೆಯ ಹೊರತಾಗಿ), ಟಿವಿ ಚಾನೆಲ್‌ಗಳು ಮತ್ತು ಅಂತರ್ಪಿಶಾಚಿ (internet) ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಪುತ್ರಿಕೋದ್ಯಮದ ವ್ಯಕ್ತಿನಿಷ್ಠೆಯನ್ನೇ ಅಲುಗಾಡಿಸಿ ವೃತ್ತಿನಿಷ್ಠೆಯನ್ನು ಮೆರೆದ ಪ್ರಕರಣವನ್ನು ಬೊಗಳೂರು ಬ್ಯುರೋ ಮಾತ್ರ ಕಂಡುಕೊಂಡಿದೆ.

ಬುರಖಾದತ್, ವೀರ್ ಸಾಂಘ್ವಿ ಅವರುಗಳೆಲ್ಲಾ ನೀರಾ ರಾಡಿಯಾ ಜೊತೆ ಸೇರಿಕೊಂಡು ಮೀಡಿಯಾವನ್ನು ರಾಡಿಯೆಬ್ಬಿಸಿದ ಬೆನ್ನಿಗೇ, 26/11 ವರದಿಗಾರಿಕೆಯಲ್ಲಿಯೂ ಎಲ್ಲ ಪತ್ರಿಕೆಗಳೂ, ಎಲ್ಲ ಮಾಧ್ಯಮಗಳೂ, ಎಲ್ಲ ಎಲ್ಲವುಗಳೂ ರಾಡಿಯೆಬ್ಬಿಸಿ ಪುತ್ರಿಕೋದ್ಯಮದ ಮುಖಕ್ಕೆ ಮಸಿ ಬಳಿದಿವೆ.

ಕಳೆದೊಂದು ತಿಂಗಳಿಂದ ಭರ್ಜರಿ ನಿದ್ರೆ ಮಾಡುತ್ತಿದ್ದ ಬೊಗಳೂರು ಬ್ಯುರೋದವರಿಗೆ ನಿದ್ದೆಯಿಂದೆದ್ದೇಳಲು ಇದೊಂದು ಅಂಶವಷ್ಟೇ ಸಾಕಾಗಿತ್ತು. ಪುತ್ರಿಕೋದ್ಯಮ ಮತ್ತು ಪುತ್ರಕೋದ್ಯಮವು ಗಬ್ಬೆದ್ದು ಹೋಗುತ್ತಿರುವ ಸಂದರ್ಭದಲ್ಲಿ ಮಹಾ ಮಹಾನ್ ಹೆಸರು ಕಟ್ಟಿಕೊಂಡಿದ್ದ, ನೂರಾರು ವರ್ಷಗಳಿಂದಲೂ ಚಾಲ್ತಿಯಲ್ಲಿರುವ ಮಾಧ್ಯಮಗಳು 26/11ರ ವರದಿಯಲ್ಲಿ ಎಡವಿದ್ದಾದರೂ ಏನು? ಯಾಕೆ ಎಂದು ಬೊಗಳೂರು ಓದುಗರಿಗೆ ಖಂಡಿತಾ ಈಗ ಅಚ್ಚರಿ ಮೂಡಿಸಬಹುದಲ್ಲವೇ?

ಹಾಗಿದ್ದರೆ, ಪುತ್ರಿಕಾ ಮಾಧ್ಯ-ಮಗಳಲ್ಲಿ ಪ್ರಕಟವಾಗಿರುವ ಮರುದಿನದ ವ-ರದ್ದಿಗಳ ಶೀರ್ಷಿಕೆಗಳನ್ನೇ ನೋಡಿ:

* ನಾವು ಶತ್ರುಗಳ (ಪಾಕಿಸ್ತಾನ)ದ ತಂತ್ರಗಳಿಗೆ ಎಂದಿಗೂ ಮಣಿಯುವುದಿಲ್ಲ: ಮನಮೋಹಕ ಸಿಂಗ್ (ನಿಧಾನಿ)
** ಮುಂಬಯಿ ದಾಳಿ ಖಂಡನೀಯ, ಪಾಕಿಸ್ತಾನವು ಭಯೋತ್ಪಾದನೆಯ ಉತ್ಪಾದನಾ ಘಟಕಗಳನ್ನು ಮುಚ್ಚಬೇಕು: ಸೇಮ್ ಕೃಷ್ಣ (ವಿದೇಶದ ಸಚಿವ)
*** ನಾವು ತಪ್ಪಿತಸ್ಥರನ್ನು ಹಿಡಿದು ಗಂಭೀರಾತಿಗಂಭೀರವಾಗಿ ಶಿಕ್ಷಿಸುತ್ತೇವೆ - ಪೀಚಿ ದಂಬರಂ (ಮನೆ ಸಚಿವ)
**** ಪಾತಕಿಸ್ತಾನವು ತನ್ನ ಭರವಸೆ ಈಡೇರಿಸಲೇಬೇಕು: ಪೀಚಿ ದಂಬರಂ (ಗೃಹದೊಳಗೆ ಸಚಿವ)
***** ಟೆರರ್ ನೆಟ್ವರ್ಕ್ ನಿರ್ಮೂಲಗೊಳಿಸದ ಹೊರತು ಪಾಕಿಸ್ತಾನದೊಂದಿಗೆ ಮಾತುಕತೆಯಿಲ್ಲ : ಮನಮೋಹಕ ಸಿಂಗ್ (ನಿಧಾನಿಯೇ ಪ್ರಧಾನಿ)
****** ನಮ್ಮ ನೆಲದಲ್ಲಿ ಭಯೋತ್ಪಾದನೆ ನೆಲೆಯೂರಲು ಬಿಡುವುದಿಲ್ಲ: ಸಾನಿಯಾ ಗಾಂಧಿ (ಉಪ (=UPA) ಅಧ್ಯಕ್ಷರು)
******* (ಅಡ್ಡ)ಕಸಬಿಗೆ ಗಲ್ಲು ಶಿಕ್ಷೆ ವಿಧಿಸಿ: ಮುಂಬೈಯಲ್ಲಿ ದಾಳಿಯಲ್ಲಿ ಹುತಾತ್ಮರಾದ ಧೀರ ಯೋಧರ ಕುಟುಂಬಿಕರು
******** ಭಯೋತ್ಪಾದನೆ ತಡೆಗೆ ನಾವು ಬದ್ಧ, ಭಾರತಕ್ಕೆ ಸಹಕರಿಸುತ್ತೇವೆ: ಪಾತಕಿಸ್ತಾನ
********* ಮುಂಬೈ ದಾಳಿಯಲ್ಲಿ ಕೈವಾಡವಿರುವ ಬಗ್ಗೆ ಇನ್ನೂ ಸಾಕ್ಷಿಗಳನ್ನು ಕೊಡಿ: ಪಾತಕಿಸ್ತಾನ
********** ಪಾಕಿಗೆ ಮತ್ತೊಂದು ಲಾರಿಯಲ್ಲಿ ದೋಸೆ (Dossier) ಕಳುಹಿಸುತ್ತೇವೆ- ಸೇಮ್ ಕೃಷ್ಣ (ವಿದೇಶದ ಮಂತ್ರಿ)

ಇವೆಲ್ಲವೂ ಸರಿಯೇ ಇದೆಯಲ್ಲಾ... ಇದರಲ್ಲೇನು ಪುತ್ರಿಕೋದ್ಯಮದ ಮಾನ ಮರ್ಯಾದೆ ಹರಾಜ್ಆಯ್ತು ಅಥವಾ ಹಜಾರ್ಆಯ್ತು ಅಂತ ನೀವೆಲ್ಲಾ ತಲೆಕೆಡಿಸಿಕೊಂಡಿದ್ದರೆ, ನಮ್ಮ ವರದ್ದಿಗಾರರೂ, ಸೊಂಪಾದಕರೂ ಮತ್ತು ಓದುಗರೂ ಆಗಿರುವ ಅಸತ್ಯಾನ್ವೇಷಿಗಳು ನೀಡಿರುವ ಅಂತಿಮ ಟಿಪ್ಪಣಿ, ಸ್ಪಷ್ಟನೆ ಇಲ್ಲಿದೆ.

ಅಸತ್ಯಾನ್ವೇಷಿ ಸ್ಪಷ್ಟನೆ, ವಿವರಣೆ:
"ಸ್ವಾಮೀ, ಈ ಮಾಧ್ಯಮಗಳೆಲ್ಲವೂ ಬೊಗಳೂರು ಸೊಂಪಾದಕರನ್ನು ಮಂಗ ಮಾಡಿವೆ. ಮತ್ತು ತಮ್ಮ ಓದುಗರನ್ನೂ 3ಖ ಆಗಿಸಿವೆ. ಇವೆಲ್ಲಾ ಸುದ್ದಿಗಳು 2008ರಲ್ಲಿ ದಾಳಿ ನಡೆದ ಬಳಿಕ ಪ್ರಕಟವಾಗುತ್ತಿದ್ದ ವರದಿಗಳು. ಮತ್ತು 2009ರಲ್ಲಿ 365ನೇ ದಿನಾಚರಣೆಯ ಮರುದಿನವೂ ಇದೇ ಸುದ್ದಿಗಳು ಪತ್ರಿಕೆಗಳು ಪ್ರಕಟವಾಗಿದ್ದವು. ಅವುಗಳನ್ನೇ ಹಿಡಿದು ಕಾಪಿ-ಪೇಸ್ಟ್ ಮಾಡಿ, ಪತ್ರಿಕೆಗಳು ಪುಟ ಭರ್ತಿ ಮಾಡಿದ್ದರೆ, ಟೀವಿ ಚಾನೆಲ್‌ಗಳು ಅದೇ ಮೊಂಬತ್ತಿ ಉರಿಸುವ, ಪುಷ್ಪಗುಚ್ಛವಿರಿಸಿ ಕೈಮುಗಿಯುವ ಚಿತ್ರಗಳನ್ನು ತೋರಿಸಿವೆ. ಎಲ್ಲವೂ ಆವತ್ತಿನದ್ದೇ. ಇದೆಲ್ಲವೂ ಹಣ ಕೊಟ್ಟು ಪತ್ರಿಕೆ ಓದುವ ಓದುಗರಿಗೆ ಮಾಡಿದ ವಂಚನೆ ಸ್ವಾಮೀ. ಇನ್ನೂ ಅರ್ಥವಾಗಲಿಲ್ಲವೇ? ಅಂದು ಎಲ್ಲ ವರದ್ದಿಗಾರರು ರಜೆಯಲ್ಲಿದ್ದುದರಿಂದ, ಪ್ರತಿವರ್ಷವೂ ಇದೇ ಮಾತು ಬಂದೇಬರುತ್ತದೆ ಎಂಬುದು ಗ್ಯಾರಂಟಿಯಾಗಿದ್ದುದರಿಂದ, ಇದನ್ನೇ ಕಾಪಿ ಪೇಸ್ಟ್ ಮಾಡಿದ್ದಾರೆ. ಇನ್ನೂ ಹಲವಾರು ವರ್ಷ ಇದೇ ಮುಂದುವರಿಯುತ್ತದೆ!"

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. ಅಸತ್ಯಾನ್ವೇಷಿಗಳು ಹೀಗೆಲ್ಲ ಸತ್ಯ ಕಂಡು ಹಿಡಿಯಬಾರದು. ಇದು ಪುತ್ರ(ತ್ರಿ)ಕೋದ್ಯಮದ ಮುಖಕ್ಕೆ ಮಸಿ ಬಳೆದಂತೆ.

    ಪ್ರತ್ಯುತ್ತರಅಳಿಸಿ
  2. ಬೌದ್ಧಿಕ ದಿವಾಳಿತನ ಇದ್ರೆ ಮತಪೆಟ್ಟಿಗೆಗೇನಾದರೂ ಕೊರತೆ ಆಗುತ್ತಾ...ಅಸತ್ಯದವರೆ.? ಬೇಗನೆ ವ-ರದ್ದಿ ತನ್ನಿ...

    ಪ್ರತ್ಯುತ್ತರಅಳಿಸಿ
  3. ಅನ್ವೇಷಿಗಳೇ,

    ಮಾಧ್ಯಮಗಳು ಕಾಪ್-ಪೇಸ್ಟ್ ದಿವಸ ಅಂತಾ ಅಂದುಕೊಂಡಿರಬಹುದು..
    ಅವರಿಗೆ ಕಂಟ್ರೋಲ್ ಸಿ- ಕಂಟ್ರೋಲ್ ವಿ ಸಿಕ್ಕಾಪಟ್ಟೆ ಪ್ರಾಣ.

    ನೀವು ಹೀಗೆಲ್ಲಾ ಕಂಡಿದ್ದು ಕಂಡಾಗೆ ಹೇಳಿದರೆ ಹೇಗೆ

    ಪ್ರತ್ಯುತ್ತರಅಳಿಸಿ
  4. ಇದು ಬರಿ ಬೊಗಳೆಯಲ್ಲೋ ಅಣ್ಣಾ , ಸತ್ಯದ ಅನ್ವೇಷಣೆ !

    ಪ್ರತ್ಯುತ್ತರಅಳಿಸಿ
  5. ಅನ್ವೇಷಿಯವರೇ ಮೊದಲ ಭೇಟಿ....ಎಲ್ಲ ಸ್ಕಾಮ್ ಎಂಬ ಪೆಡಂಭೂತದ ಬಲಿಗಳು ಎನ್ನೋದು ಖಂಡಿತಾ... ಅಲ್ವಾ...

    ಪ್ರತ್ಯುತ್ತರಅಳಿಸಿ
  6. ಸುನಾಥರೇ,
    ಸುಕುಮಾರ ಸ್ವಾಮಿಯಷ್ಟು ದೊಡ್ಡ ಪುತ್ರಿಕೋದ್ಯಮ ಇಲ್ಲಿ ನಡೀತಿಲ್ಲವಾದರೂ, ಸುಳ್ಳು ಕಂಡು ಹಿಡಿದೇ ಸಿದ್ಧ ಎಂಬುದು ನಮ್ಮ ರದ್ದಿಗಾರರ ಭೀಷಣ ಪ್ರತಿಜ್ಞೆ.

    ಪ್ರತ್ಯುತ್ತರಅಳಿಸಿ
  7. ಚುಕ್ಕಿಗಳ ಚಿತ್ತಾರಿಗರೇ,
    ಬೌದ್ಧಿಕ ದಿವಾಳಿತನವುಳ್ಳವರು ಮಾತ್ರವೇ ಕೊಟ್ಟ ಕೊನೆಯ ಉದ್ಯೋಗವಾಗಿ ಜಾರೋಕಾರಣಕ್ಕೆ ಬರುತ್ತಾರೆ. Politics is the last RESORT!

    ಪ್ರತ್ಯುತ್ತರಅಳಿಸಿ
  8. ಪಾತರಗಿತ್ತಿಯವರೇ,
    ಪ್ರಾಣ ಗೀಣ ಏನಿದ್ದರೂ, ಕಂಟ್ರೋಲ್ ಸಿ, ಕಂಟ್ರೋಲ್ ವಿ ಮಾಡೋವಾಗ ಕಂಟ್ರೋಲ್ ತಪ್ಪಿದ್ರೆ ಎಂಬುದೇ ನಮಗಿಲ್ಲದ ಭಯ!

    ಪ್ರತ್ಯುತ್ತರಅಳಿಸಿ
  9. ಸುಬ್ರಹ್ಮಣ್ಯರೇ,
    ನೀವು ಹೀಗೆಲ್ಲಾ ನಮ್ಮ ಬ್ಯುರೋದ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದ್ದಕ್ಕೆ ಸ್ವಾಗತವಿದೆ.

    ಪ್ರತ್ಯುತ್ತರಅಳಿಸಿ
  10. ನೀರಿನ ಕಣ್ಣಿನವರೇ,
    ನಿಮ್ಮನ್ನು ಎಲ್ಲೋ ನೋಡಿದ ಹಾಗಿದೆಯಾದರೂ, ಇದು ಮೊದಲ ಭೇಟಿ ಅಂತಾದರೆ ಬೊಗಳೂರಿಗೆ ಸ್ವಾಗತ.

    ಸ್ಕ್ಯಾಮ್ ಎಂಬ ಪೆಡಂಭೂತಗಳೇ ದೊಡ್ಡ 'ಬಲಿ' ಆಗಿರುವಾಗ ಅದಕ್ಕಿಂತ ದೊಡ್ಡ ಪೆಡಂಭೂತಗಳಿರುವಾಗ, ಅವುಗಳಿಗ್ಯಾವ ಚಿಂತೆ?

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D