ಬೊಗಳೆ ರಗಳೆ

header ads

ಚುನಾವಣೆ: ಬುಷ್‌ಗೆ ಭಾರತದಲ್ಲಿ ಭಾರೀ ಬೇಡಿಕೆ!

(ಬೊಗಳೂರು ಅರಾಜಕಾರಣ ಬ್ಯುರೋದಿಂದ)
ಬೊಗಳೂರು, ಡಿ.23- ಮುಂದಿನ ತಿಂಗಳಿಂದ ಅಮೆರಿಕದಲ್ಲಿ ನಿರುದ್ಯೋಗಿಯಾಗಲಿರುವ ದೊಡ್ಡಣ್ಣ ಜಾರ್ಜ್ ಬೂಟ್ಸ್ ಅವರನ್ನು ಭಾರತವಾಸಿ ಮಾಡಲು ನಮ್ಮ ಜಾರಕಾರಣಿಗಳು ಸಂಚು ಹೂಡುತ್ತಿದ್ದಾರೆಂಬ ಮಹತ್ವದ ಅಂಶವೊಂದು ಮತದಾರರಲ್ಲಿ ಸಂಚಲನ ಮೂಡಿಸಿದೆ.

ಇತ್ತೀಚೆಗೆ ಇರಾಕಿ ಪತ್ರಕರ್ತನೊಬ್ಬ (ತಲೆಮರೆಸಿಕೊಂಡಿದ್ದ ಬೊ.ರ. ಬ್ಯುರೋದ ಸದಸ್ಯ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ) ಜಾರ್ಜ್ ಬೂಟ್ಸ್ ಅವರಿಗೆ ಲಾರ್ಜ್ ಶೂ ಎಸೆದದ್ದು, ಅವರು ಅದರಿಂದ ತಪ್ಪಿಸಿಕೊಂಡಿದ್ದು... ಈ ಘಟನಾವಳಿಗಳೆಲ್ಲವೂ ಭಾರತೀಯ ಜಾರಕಾರಣಿಗಳ ಕಣ್ಣು ಕುಕ್ಕುವಂತೆ ಮಾಡಿದೆ. ಈ ಕಾರಣಕ್ಕೆ ಜಾರ್ಜ್ ಬೂಟ್ಸ್ ಅವರನ್ನೇ ಭಾರತಕ್ಕೆ ಕರೆತಂದು ತಮ್ಮ ಪಕ್ಷದ ಟಿಕೆಟ್ ಕೊಡಿಸಿ, ಮುಂದಿನ ಚುನಾವಣೆಗಳಿಗೆ ಪಕ್ಷವನ್ನು ಸಂಪೂರ್ಣವಾಗಿ ಸನ್ನದ್ಧ ಸ್ಥಿತಿಯಲ್ಲಿರಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಅಂಶವೊಂದು ಬೊಗಳೆ ರಗಳೆ ಬ್ಯುರೋದಲ್ಲಿ ಲೀಕ್ ಆಗಿದೆ.

ಚುನಾವಣೆಗಳು ಸಮೀಪಿಸುತ್ತಿವೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜಾತಿ ರಾಜಕೀಯ, ಕೋಮು ರಾಜಕೀಯ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅರಾಜಕೀಯದಲ್ಲಿ ತೊಡಗಿದ್ದ ಸಂಭಾವ್ಯ ಅಭ್ಯರ್ಥಿಗಳೆಲ್ಲಾ ಚುನಾವಣೆಗೆ ನಿಲ್ಲಲು ಪತರಗುಟ್ಟುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ ಮತದಾರ ಜಾಗೃತನಾಗಿರುವುದು. ಏರುವ ಬೆಲೆ ಇಳಿಸುವ ಬದಲು, ಕೋಮು ಜ್ವರ, ಧರ್ಮದ ನಡುವೆ ವೈಷಮ್ಯದ ಬೀಜ ಬಿತ್ತುವ ರಾಜಕಾರಣಿಗಳೆಲ್ಲರೂ, ತಮಗೆ ಈ ಬಾರಿ ಜಾರ್ಜ್ ಬೂಟ್ಸ್‌ಗೆ ದೊರೆತ ಉಡುಗೊರೆಗಳು ಖಚಿತ ಎಂಬುದು ಮನದಟ್ಟಾಗಿವೆ. ಈ ಕಾರಣಕ್ಕಾಗಿಯೇ, ಜಾರ್ಜ್ ಬೂಟ್ಸ್ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿಲ್ಲ.

ಈ ಬಗ್ಗೆ "ಜಾರ್ಜ್ ಬೂಟ್ಸನ್ನೇಕೆ ಕರೆಸುತ್ತೀರಿ" ಎಂದು ಮೂಲವನ್ನು ಕೆದಕಿ ಕೆದಕಿ ಪ್ರಶ್ನಿಸಿದಾಗ, ಬಂದ ಉತ್ತರ "ತರಬೇತಿ" ಎಂಬ ನಾಲ್ಕಕ್ಷರದ ಶಬ್ದ. ಗೊತ್ತಾಗಲಿಲ್ಲ, ಅರ್ಥವಾಗಲಿಲ್ಲ ಎಂದು ತಲೆಯಲ್ಲಾಡಿಸಿದಾಗ ಈ ಕುರಿತು ವಿವರಣೆ ಬಂತು.

ಜನಾ ಖಂಡಿತವಾಗಿಯೂ ಹಾಳಾದ ಚಪ್ಪಲಿ, ಹರಿದು ಹೋದ ಶೂ, ಕೊಳೆತ ಮೊಟ್ಟೆ, ತರಕಾರಿ ಇತ್ಯಾದಿಗಳನ್ನು ಚುನಾವಣಾ ರ‌್ಯಾಲಿಗಳಲ್ಲಿ ಎಸೆಯುತ್ತಾರೆ ಎಂಬುದು ನಮಗೆ ಖಚಿತವಾಗಿಬಿಟ್ಟಿದೆ. ಆದುದರಿಂದ, ಕ್ಷಿಪಣಿಗಳಂತೆ ತೂರಿ ಬರುತ್ತಿರುವ ಈ ಅಮೂಲ್ಯ ವಸ್ತುಗಳಿಂದ ತಪ್ಪಿಸಿಕೊಂಡು, ಅದನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದು ಹೇಗೆ ಎಂಬುದರ ತರಬೇತಿಗಾಗಿ ನಾವು ಜಾರ್ಜ್ ಬೂಟ್ಸ್ ಅವರನ್ನು ಕರೆಸುತ್ತಿದ್ದೇವೆ ಎಂಬ ಅಮೂಲ್ಯ ಉತ್ತರ ಬಂದೇಬಿಟ್ಟಿತು.

ಹಾಗಿದ್ದರೆ, ಹೀಗೆ ಸಂಗ್ರಹವಾದ ಶೂಗಳನ್ನು, ಕೊಳೆತ ತರಕಾರಿಗಳನ್ನು, ಮೊಟ್ಟೆಗಳನ್ನು ಏನು ಮಾಡುತ್ತೀರಿ? ಎಂಬ ಪ್ರಶ್ನೆಗೆ ಅದನ್ನು ನಮ್ಮ ವಿರೋಧ ಪಕ್ಷದವರ ರ‌್ಯಾಲಿಗಳಿಗೆ ಪ್ಯಾಕ್ ಮಾಡಿ ಕಳುಹಿಸುತ್ತೇವೆ. ಶೂ ಎಸೆದ ಜೈದಿ ಎಂಬ ಇರಾಕಿ ಬೊಗಳೆಗಾರನನ್ನೂ ಕರೆಸಲಿದ್ದೇವೆ. ಅಲ್ಲಿ ಜನರಿಗೆ ಶೂ ತೂರುವುದು ಹೇಗೆ ಎಂಬ ಬಗ್ಗೆ ತರಬೇತಿ ಕೊಡಿಸುವ ಇರಾದೆಯೂ ಇದೆ ಎಂಬ ಅಂಶವನ್ನು ಅವರು ಬಯಲು ಮಾಡಿದ್ದಾರೆ.

ಆದರೆ, ಹೆಚ್ಚಿನ ರಾಜಕಾರಣಿಗಳಿಗೆ ನಿರಾಸೆಯಾದ ದುರಾಸೆಯೆ ಸಂಗತಿಯೆಂದರೆ, ಆ ಪತ್ರಕರ್ತ ಶೂ ಜತೆಗೆ ಸಾಕ್ಸ್ ಕೂಡ ಎಸೆಯಲಿಲ್ಲವಲ್ಲ ಎಂಬುದು. ಸಾಕ್ಸನ್ನೂ ಎಸೆದಿದ್ದರೆ, ಎಸೆಯುವ ವಸ್ತುಗಳ ಸದ್ಬಳಕೆ ಮಾಡಿಕೊಳ್ಳಬಹುದಿತ್ತು ಎಂಬುದು ಅವರ ಚಿಂತೆಯ ಕಾರ್ಮೋಡಕ್ಕೆ ಕಾರಣವಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

12 ಕಾಮೆಂಟ್‌ಗಳು

  1. ಆದರೆ, ಹೆಚ್ಚಿನ ರಾಜಕಾರಣಿಗಳಿಗೆ ನಿರಾಸೆಯಾದ ದುರಾಸೆಯೆ ಸಂಗತಿಯೆಂದರೆ, ಆ ಪತ್ರಕರ್ತ ಶೂ ಜತೆಗೆ ಸಾಕ್ಸ್ ಕೂಡ ಎಸೆಯಲಿಲ್ಲವಲ್ಲ ಎಂಬುದು. ಸಾಕ್ಸನ್ನೂ ಎಸೆದಿದ್ದರೆ, ಎಸೆಯುವ ವಸ್ತುಗಳ ಸದ್ಬಳಕೆ ಮಾಡಿಕೊಳ್ಳಬಹುದಿತ್ತು ಎಂಬುದು ಅವರ ಚಿಂತೆಯ ಕಾರ್ಮೋಡಕ್ಕೆ ಕಾರಣವಾಗಿತ್ತು.

    paapa....:) :) :)

    ಪ್ರತ್ಯುತ್ತರಅಳಿಸಿ
  2. ನಿಮ್ಮ ವ್ಯಂಗ್ಯವೇ ವ್ಯಂಗ್ಯ ಕಣ್ರೀ. ಪ್ರತಿ ದಿನ ಓದಿ ಮಜಾ ತೊಗೊಳ್ತಿದ್ರೂ ಕಮೆಂಟ್ ಮಾಡದೆ ಇದ್ದುಬಿಡ್ತಿದ್ದೆ. ಇನ್ನು ತಾಳಲಾಗಲಿಲ್ಲ.
    ಹೀಗೇ ಕಚಗುಳಿ ಇಡುತ್ತಿರಿ.
    ಧನ್ಯವಾದ.

    - ಚೇತನಾ ತೀರ್ಥಹಳ್ಳಿ

    ಪ್ರತ್ಯುತ್ತರಅಳಿಸಿ
  3. ಬುಶ್‌ಮನ್ ಹಾಗೂ ಆಲೂ ಪರಶಾದ ಇವರನ್ನು Cultureless Exchange Programmeನಲ್ಲಿ ಬದಲಾಯಿಸಿಕೊಂಡರೆ ಹೇಗೆ?
    'ಬುಶ್‌ಮನ್ ತರಬೇತಿ ಕೇಂದ್ರ'ಕ್ಕೆ ರಾಹು ಗಂದೀಯೇ ಮೊದಲ ವಿದ್ಯಾರ್ಥಿಯಂತೆ?

    ಪ್ರತ್ಯುತ್ತರಅಳಿಸಿ
  4. ಸಾಕ್ಸ್ ಸಮೇತ ಬೂಟು ಎಸೆದಿದ್ದರೆ...ಬುಷ್ ಅದರ ವಾಸನೆಗೇ ಮೂರ್ಛೆ ಹೋಗುತ್ತಿದ್ದ...ಸದ್ಯ...ಬದುಕಿದ...ಇಲ್ಲಿ ಆರೀತಿ ಮಾಡುವವರಿಲ್ಲವಲ್ಲಾ ಎಂದು ಖೇದವಾಗಿದೆ. ಆದರೆ ಭಾರತದಲ್ಲಿರುವ ರಾಜಕಾರಣಿಗಳಿಗೆ ಈ ರೀತಿ ಬೂಟು ಸೇವೆ ಮಾಡಿದಲ್ಲಿ ಭಾರತದಲ್ಲಿ ಬೂಟಿನ ಬೇಡಿಕೆ ಜಾಸ್ತಿಯಾಗಬಹುದು. ಆದರೆ ಇಲ್ಲಿ ಚಪ್ಪಲಿ ಸೇವೆಯೇ ಉತ್ತಮ ಹಾಗೂ ಮಿತವ್ಯಯಿ.

    ಪ್ರತ್ಯುತ್ತರಅಳಿಸಿ
  5. ಗುರುವೇ,
    ಬೊಗಳೆ ರಗಳೆ ಬ್ಯೂರೋದ ಸಂತಾಪಕರು ಇತ್ತೀಚೆಗೆ ಧರಿಸುತ್ತಿರುವ ಬೂಟುಗಳು ಅವರ ಕಾಲಿಗೇಕೆ ಹೊಂದಿಕೊಳ್ಳುತ್ತಿಲ್ಲ ಎಂಬ ಸಂ ಚೋದನೆ ನಡೆಸಲಾಗುತ್ತಿದೆ ಮತ್ತು ಇದರ ಸಿಬಾಯಿ ತನಿಖೆಗೆ ಆದೇಶ ಹೊರಡಿಸಲಾಗಿದೆ ಎಂಬ ಸುದ್ದಿ ಬೊಗಳೂರ ಬೀರುವಿನಲ್ಲಿ ಹರಿದಾಡುತ್ತಿದೆಯಂತೆ ಹೌದಾ?

    ಪ್ರತ್ಯುತ್ತರಅಳಿಸಿ
  6. ‘ಬುಷ್‌ಗೆ ಭಾರತದಲ್ಲಿ ಭಾರೀ ಬೇಡಿಕೆ!’ ತಲೆಬರಹ ನೋಡಿ ನಗು ತಡೆಯಲಾಗಲಿಲ್ಲ. :)

    ಸರಿ,ಯಾವಾಗ ಕರೆಸಿಕೊಳ್ಳುತ್ತೀರಿ ಹೇಳಿ?s

    ಪ್ರತ್ಯುತ್ತರಅಳಿಸಿ
  7. ಲಕ್ಷ್ಮಿ ಅವರೆ,
    ಹೌದು... ನಮ್ಮವರು ಪಾಪಿಗಳೇ..

    ಪ್ರತ್ಯುತ್ತರಅಳಿಸಿ
  8. ಚೇತನಾ ಅವರೆ,

    ನಮ್ಮ ಬ್ಯುರೋದ ಅಸತ್ಯವನ್ನೇ ನೀವು ವ್ಯಂಗ್ಯ ಎಂದು ಕರೆದು, ಅದರಲ್ಲಿ ಸತ್ಯದ ವಾಸನೆ ಮೂಡುವಂತೆ ಮಾಡಿದ್ದೀರಿ. ಹೀಗಾಗಿ ನಮ್ಮ ಏಕಸದಸ್ಯ ಬೊಗಳೂರು ಬ್ಯುರೋದ ಸಮಸ್ತ ಸಿಬ್ಬಂದಿ ಆಘಾತಕ್ಕೀಡಾಗಿದ್ದಾರೆ. ಮತ್ತು ಸುಧಾರಿಸಿಕೊಳ್ಳಲು ರಜೆ ಕೇಳ ತೊಡಗಿದ್ದಾರೆ. ನಿಮ್ಮಂಥವರಿಂದ ಇದೇ ರೀತಿ ಮತ್ತಷ್ಟು ಪ್ರೋತ್ಸಾಹ ಸಿಗಲಿ, ಮತ್ತಷ್ಟು ಆಘಾತಕ್ಕೀಡಾಗಿ ರಜೆ ಕೇಳಬಹುದು ಎಂಬ ಸಂಚು ಅವರದು.

    ಬರ್ತಾ ಇರಿ...
    ಧನ್ಯವಾದ.

    ಪ್ರತ್ಯುತ್ತರಅಳಿಸಿ
  9. ಸುನಾಥರೆ,
    ನಿಮ್ಮ exchange ಸಲಹೆಯನ್ನು ಆಲೂ ಪರವೂರ ಸಾದಾ ಅವರಿಗೆ ತಲುಪಿದೆವು. ಅದಕ್ಕೆ, exchange ಗೆ ನಾವು ಒಪ್ಪೋದಿಲ್ಲ... ಏನಿದ್ದರೂ in-change ಮಾತ್ರ ಅಂತ ರಚ್ಚೆ ಹಿಡಿದಿದ್ದಾರೆ. ಅಂದ್ರೆ export ಇಲ್ಲ, import ಮಾತ್ರವಂತೆ.

    ಪ್ರತ್ಯುತ್ತರಅಳಿಸಿ
  10. ಗುರುಗಳೆ,
    ನಿಮ್ಮ ಸಲಹೆಯೂ ಒಪ್ಪಬೇಕಾದ್ದೇ. ಚುನಾವಣೆ ಹತ್ತಿರ ಬರತೊಡಗಿದಂತೆಯೇ ನಮ್ಮಲ್ಲಿ ಬೂಟಿನ ಅಂಗಡಿಗಳಿಗೆ ನಿಷೇಧ ವಿಧಿಸ್ತಾರೆ ಎಂಬ ಸುದ್ಧಿ ಬ್ರೋಕಿಂಗ್ ಸುದ್ದಿಯಾಗಿ ಬರ್ತಾ ಇದೆ.

    ಪ್ರತ್ಯುತ್ತರಅಳಿಸಿ
  11. ಶಾನಿ ಅವರೆ,

    foot in the mouth ಆಗಿದ್ದೇ ಬೂಟು ಕಾಲಿಗೆ ಹೊಂದಿಕೊಳ್ಳದಿರಲು ಕಾರಣ ಅಂತ ನಾವು ಸಂಚೋದನೆ ಮಾಡದೆಯೇ ಹೇಳುತ್ತಿದ್ದೇವೆ.

    ನಿಮಗೊಂದು ಎಚ್ಚರಿಕೆ. ನಾವು ನಿಮ್ಮ ಹೆಸರನ್ನು ಇಂಗ್ಲಿಷಿನಲ್ಲಿ ಬರೆಯಲು ಹೋಗುವುದಿಲ್ಲ!

    ಪ್ರತ್ಯುತ್ತರಅಳಿಸಿ
  12. ಶ್ರೀತ್ರೀ ಅವರೆ,
    ನೀವು ಅಮೆರಿಕದಲ್ಲಿದ್ದುಕೊಂಡು ನಗುತ್ತಿರುವುದನ್ನು ನೋಡಿ ಬುಷ್ಷಿಗೇ ಸಂಶಯ ಬಂದಿದೆಯಂತೆ. ಅವರು ನಿಮ್ಮತ್ತ ಸಿಐಎ ಅಟ್ಟಿ, ಅದರ ಮೂಲಕ ನಮ್ಮ ಬ್ಯುರೋದವರೆಗೂ ಬಾರದಂತೆ ನೋಡಿಕೊಳ್ಳಿ. ಇದಕ್ಕಾಗಿ ನೀವು ನಗು ತಡೆದುಕೊಳ್ಳಲೇಕಾಗುತ್ತದೆ. ನಮ್ಮನ್ನು ಬಚಾವ್ ಮಾಡಿ!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D