ಬೊಗಳೆ ರಗಳೆ

header ads

ಎಟಿಎಂನಲ್ಲಿ ಚಿಲ್ಲರೆ ಹಣ!!!!

(ಬೊಗಳೂರು ಥೈ ಥೈ ಥೈಲಿ ಬ್ಯುರೋದಿಂದ)
ಬೊಗಳೂರು, ಜು.24- ದೇಶದಲ್ಲಿರುವ ಯಾವುದೇ ಎಟಿಎಂಗಳಲ್ಲಿ ಈಗೀಗ ನಾಲ್ಕಾಣೆ, ಎಂಟಾಣೆ, ಒಂದು ರೂಪಾಯಿ ಚಿಲ್ಲರೆ ಹಣಗಳು ಮಾತ್ರವೇ ಉದುರುತ್ತಿರುವುದು ವರದಿಯಾಗಿದೆ.

ಎಟಿಎಂಗಳಲ್ಲಿ ಯಾವತ್ತೂ ಸಾವಿರ ರೂ., ಐನೂರು ರೂ. ಸಂಬಳ ನಿರೀಕ್ಷಿಸುತ್ತಿದ್ದ ಬೊ.ರ. ಬ್ಯುರೋದ ಮಂದಿಗೆ ಇದು ಅಚ್ಚರಿಯ ವಿಷಯ. ಈ ಮಣಭಾರದ ಹಣ ಹೊತ್ತುಕೊಳ್ಳಲಾಗದೆ ತೊಳಲಾಡುತ್ತಾ, ಈ ಪರಿಸ್ಥಿತಿಯ ಬೆನ್ನ ಹಿಂದೆ ಬಿದ್ದಾಗ ಸತ್ಯಾಂಶ ಕಂತೆ ಕಂತೆಯಾಗಿ ಬಯಲಿಗೆ ಬಂತು.

ಅದೆಂದರೆ, ಸಂಸತ್ತಿನಲ್ಲಿ ಓಟು ಹಾಕುವುದಕ್ಕೆ ನೋಟುಗಳನ್ನೆಲ್ಲಾ ವಿತರಿಸಲಾಗಿದೆ. ಓಟು ಹಾಕಲು ನೋಟು ಕೊಟ್ಟರೂ, ಇಷ್ಟೊಂದು ಪ್ರಮಾಣದಲ್ಲಿ ನೂರು, ಐನೂರು, ಸಾವಿರ ರೂಪಾಯಿ ನೋಟುಗಳು ನಾಪತ್ತೆಯಾಗಿದ್ದೇಕೆ ಎಂಬುದು ಎಷ್ಟೇ ತಲೆ ಕೆರೆದರೂ ಹೊಳೆಯದಾದಾಗ, ತಲೆ ಕೆರೆಯಲು ಕೆರವನ್ನೇ ಹಿಡಿದು ನೋಡಿದಾಗ ತಕ್ಷಣವೇ ವಿಷಯ ಹೊಳೆಯಿತು.

ವಿಷಯ ಏನಂದ್ರೆ, ನಾವೆಲ್ಲಾ ತಿಳಿದುಕೊಂಡದ್ದು ಓಟಿಗಾಗಿ ನೋಟು ನೀಡುವುದು ಮಾತ್ರ. ಆದರೆ ಓಟು ಹಾಕದಂತೆಯೂ, ಮತದಾನಕ್ಕೇ ಬಾರದಂತೆಯೂ ಒತ್ತಾಯಿಸಿ ನೋಟು ಕೊಡುವ ಪ್ರಕರಣದಿಂದಾಗಿಯೇ ಈ ಎಲ್ಲಾ ನೋಟುಗಳು ಎಟಿಎಂನಿಂದ ಖಾಲಿಯಾಗಿವೆ ಎಂಬುದು ಆ ಬಳಿಕ ತಿಳಿಯಿತು.

ಹಾಗಿದ್ದರೆ ಈ ಸಂಸದರೇಕೆ ಹೀಗೆ ಮಾಡಿದರು? ಹಣವೇಕೆ ಪಡೆದರು? ಎಂಬ ಪ್ರಶ್ನೆಯ ಹಿಂದೆ ಹಿಂದೆಯೇ ಹೋದಾಗ ದೊರೆತ ವಿಷಯವೆಂದರೆ, ಜಾಗತಿಕವಾಗಿ ದೇಶದ ಮೌಲ್ಯ ಇಳಿಕೆಯಾಗಿರುವುದು. ಹಣದುಬ್ಬರ, ಬೆಲೆಗಳು ಎಲ್ಲಾ ಏರುತ್ತಿರುವಾಗ ಭ್ರಷ್ಟಾಚಾರದಲ್ಲಿಯೂ ಭಾರತದ ಸ್ಥಾನ ಏರಬೇಡವೇ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿದ್ದೇ ತಡ, ಸಂಸದರು ಈ ಸ್ಟಿಂಗ್ ಕಾರ್ಯಾಚರಣೆಗಿಳಿದು ಕೋಟಿ ಕೋಟಿ ಹಣ ಸ್ವೀಕರಿಸಿದರು ಎಂದು ತಿಳಿದುಬಂದಿದೆ.

ಮತ್ತೆ ಕೆಲವರ ಪ್ರಕಾರ, ಸಂಸದರಿಗೆ ನೀಡಿದ ಹಣ ಇಷ್ಟೆಯಾ? ಕೇವಲ ಒಂದು ಕೋಟಿ ನೀಡಿ ನಮ್ಮ ಮಹಾನ್ ದೇಶದ ಸಂಸದರು ಇಷ್ಟು ಕಳಪೆ ಮೌಲ್ಯದವರು ಎಂದು ಬಿಂಬಿಸಲು ಯತ್ನಿಸಿದವರ ವಿರುದ್ಧ ಆಕ್ರೋಶಗೊಂಡು ಈ ಹಣವನ್ನು ಅಲ್ಲಿ ತಂದು ಸುರಿದರು ಎಂದು ಕೂಡ ನಂಬಲನರ್ಹ ಮೂಲಗಳು ವ-ರದ್ದಿ ತಂದು ಸುರಿದಿವೆ.

ವಿಶ್ವಾಸ ಮತ ಆರಂಭವಾಗುವ ಮೊದಲೇ ನಮ್ಮ ಬೆಲೆ ಏನಿಲ್ಲವೆಂದರೂ 25ರಿಂದ 100 ಕೋಟಿ ಇದೆ ಅಂತ ಹಿರಿಯ ಸಂಸದರೇ ಹೇಳಿಕೆ ನೀಡಿದ್ದರು. ಈಗ ನೋಡಿದರೆ ಕೊಟ್ಟದ್ದು ಕೇವಲ 1 ಕೋಟಿ. ಇದಕ್ಕೆಲ್ಲಾ ನಾವು ಜಗ್ಗುವುದಿಲ್ಲ, ನಾವು ಇಂಥ ಹಣ ಮುಟ್ಟುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ನಮ್ಮದಲ್ಲದ ಮೂಲಗಳು ಹೇಳಿವೆ.

ಇನ್ನೂ ಒಂದು ನಂಬಲನರ್ಹ ಮೂಲದ ಪ್ರಕಾರ, ಸಂಸದರಲ್ಲಿ ಬಡತನ ಕಾಡುತ್ತಿದ್ದು, ಅವರಿಗೆ ಈಗ ಬೇಕಾಗಿರುವುದು ಹಣ ಮತ್ತು ಸಾಕಷ್ಟು 'ಮೌಲ್ಯ'ಆಧಾರಿತ ರಾಜಕೀಯ. ಈ ಕಾರಣಕ್ಕಾಗಿಯೇ ಸಂಸತ್ತಿನೊಳಗೆ ಹಣ ಹಂಚಲು ತರಲಾಗಿದೆ. ಇನ್ನು ಮುಂದೆ ಬಾಕಿ ಉಳಿದಿರುವ ಮದಿರೆ-ಮಾನಿನಿಯರ ಪೂರೈಕೆಯೂ ನಡೆಯಲಿದೆ ಎಂದು ಯಾರೂ ನಮಗೆ ವರದಿ ಮಾಡದೆಯೇ ಪ್ರಕಟಿಸಿದ್ದೇವೆ. ಅಧಿಕಾರ ಉಳಿಸಿಕೊಳ್ಳಲು ಈ ಸಂಸದರ ಬೆಲೆ ಇಷ್ಟೊಂದು ತುಟ್ಟಿಯೇ ಎಂದು ಸ್ವತಃ ಸರಕಾರವೇ ಬೆಲೆ ಏರಿಕೆಯಿಂದ ಕಂಗೆಟ್ಟುಹೋಗಿದ್ದು ಯಾರಿಗೂ ತಿಳಿಯದ ಸಂಗತಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ನನಗೆ ಸಣ್ಣ ಯಂತ್ರವೊಂದು ದೆಹಲಿಯಲ್ಲಿ ಬೇಕಾಗಿತ್ತು. ದೆಹಲಿಯಲ್ಲಿ ಚಿಕ್ಕ ವ್ಯವಹಾರವಿಟ್ಟುಕೊಂಡಿದ್ದ ನನ್ನ ಸ್ನೇಹಿತನ ಸ್ನೇಹಿತನಿಗೆ ನಿನ್ನೆ ಫೋನು ಮಾಡಿದೆ. ಆತ ಸಿಗಲಿಲ್ಲ. ಆತನ ಸೆಕ್ರೆಟರಿ ಸಿಕ್ಕಿದಳು. ಇನ್ನೊಬ್ಬನಿಗೆ ಫೋನು ಮಾಡಿದೆ. ಆತನೂ ಸಿಗಲಿಲ್ಲ. ಇದೇನಿದು ಹೀಗೆ? ದೆಹಲಿಯಲ್ಲಿರುವ ಎಲ್ಲ ವ್ಯಾಪಾರಿಗಳು ಒಮ್ಮೆಗೇ ನಾಪತ್ತೆಯಾಗಿದ್ದಾರಲ್ಲ ಎಂದು ಯೋಚಿಸಿ ಒಬ್ಬನ ಸೆಕ್ರೆಟರಿಗೇ ಮರು ಪ್ರಶ್ನೆ ಹಾಕಿ ಉತ್ತರ ಪಡೆದುಕೊಂಡೆ. ಅದೇನೆಂದರೆ ಎಲ್ಲರೂ ನೋಟು ಲೆಕ್ಕಮಾಡುವ ಯಂತ್ರ ಮಾರಲು ಸಂಸತ್ತಿಗೆ ಹೋಗಿದ್ದರು ಎಂಬುದಾಗಿ.

    -ಪಬ್

    ಪ್ರತ್ಯುತ್ತರಅಳಿಸಿ
  2. INDIA is Great! But, INDIANs are not great. POLITICS is Great, But POLITICians are not great. BLOG is Great, but...

    ಪ್ರತ್ಯುತ್ತರಅಳಿಸಿ
  3. ಕೋಲ ಸಭೆಯಲ್ಲಿ ಒಂದು ಫಲಕದ ಮೇಲಿನ (ಹಣೆ)ಬರಹ ಈ ರೀತಿಯಾಗಿದೆ:

    ರೇಟ್ ಬೋರ್ಡ್:
    (೧)ಮತದಾನ ಮಾಡದೆ ಇರುವದು : ರೂ. ೨೫ ಕೋಟಿ.
    (೨)ವಿಶ್ವಾಸ ಘಾತ ಮತ ಹಾಕಲು: ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವದು ಹಾಗು ರೂ.೫೦ ಕೋಟಿ
    (೩)ಪಕ್ಷಾಂತರ ಮಾಡಲು:ಸಚಿವ ಸ್ಥಾನ ಹಾಗು ಪದ್ಮಭೀಷಣ
    ಪ್ರಶಸ್ತಿ.
    -sd.Prime Monster ಮಹಾನ್ ಸಿಂಗ

    ಪ್ರತ್ಯುತ್ತರಅಳಿಸಿ
  4. ಪದ್ಮಭೂಷಣ=೧೦ ಲಕ್ಷ
    ಪದ್ಮವಿಭೂಷಣ=೨೦ ಲಕ್ಷ
    ಭಾರತ ರತ್ನ=೭೫ ಲಕ್ಷಕ್ಕೆ ಮಾರಾಟಕ್ಕೆ ಇದೆ.ಹೀಗೆ ಇರುವಾಗ ಇದೆಲ್ಲ ಯಾವ ಲೆಕ್ಕ?. ಈ ವಿಶ್ವಾಸಮತ ಡೀಲ್ ಮಾಡಲು ಕೊಟ್ಟ ಹಣ ೬೦೦ ಕೋಟಿ ರೂಪಾಯಿಗಳು. ಆದರೆ ಆನುಬಂಧದ ಡೀಲ್‌ನಿಂದ ಬರುವ ಹಣ ೬೦೦೦೦ ಕೋಟಿ ರೂಪಾಯಿಗಳು. ಇದಕ್ಕೆ ಅವರು ಹಾಕಿದ ಬಂಡವಾಳ ಕೇವಲ ೧೦% ಅಷ್ಟೇ.....ಸೋನಿಯಾ ಗಂಧಿಗೆ ಇದು ಯಾವ ಲೆಕ್ಕ?. RBIಯನ್ನೇ ಲೂಟಿ ಮಾಡಿದ ಹಣಮೋಹನ ಸಿಂಗ್‌ಗೆ ಇದು ತೃಣಮಾತ್ರ.ಕೆಲವು ಆದಾಯಗಳು ಈ ರೀತಿ ಇವೆ. ಅಮೆರಿಕಾದಿಂದ ಬಾಕಿ ಬರಬೇಕಾದವು:
    ಅಣುಬಂಧ ಡೀಲ್ = ೬೦೦೦೦ ಕೋಟಿ
    ಮತಾಂತರಕ್ಕೆ = ೫೦೦೦೦ ಕೋಟಿ
    ಭಯೋತ್ಪಾದನೆಗೆ = ೭೫೦೦೦ ಕೋಟಿ
    ಚರ್ಚ್ ನಿರ್ಮಾಣಕ್ಕೆ = ೪೦೦೦೦ ಕೋಟಿ
    ವಿಶ್ವಬ್ಯಾಂಕ್ ಸಾಲದ ಡೀಲ್= ೭೩೦೦೦ ಕೋಟಿ
    ಇದು ಬರೀ ಅಮೆರಿಕಾದಿಂದ ಆಗಿರುವ ಡೀಲ್.....ಈ ಥರಾ ಇನ್ನೆಷ್ಟು ಇವೆಯೋ...ದೇವರೇ ಬಲ್ಲ....

    ಪ್ರತ್ಯುತ್ತರಅಳಿಸಿ
  5. ಪಬ್ಬಿಗರೇ,
    ಓಹ್... ನೀವು 'ಎಲ್ರೂ ನೋಟು ಮುದ್ರಿಸುವ ಯಂತ್ರ ಮಾರಲು ಸಂಸತ್ತಿಗೆ ಹೋಗಿದ್ದಾರೆ' ಅಂತ ಹೇಳ್ತೀರಾ ಅಂತ ಕಾಯ್ತಾ ಕೂತಿದ್ದೆವು...

    ಪ್ರತ್ಯುತ್ತರಅಳಿಸಿ
  6. Hi Mental,

    Why didnt you learn to complete the sentence which was taught in LKG itself? If I go for "fill in the blanks", "but the blogger is not great". Anyway thanks for giving some clues about us. But, the filled part will be "blogger is not great". its definitely shame for us. Actually it should be "blogger is worst"!!!!

    Thanks for becoming active again...

    ಪ್ರತ್ಯುತ್ತರಅಳಿಸಿ
  7. ಸುನಾಥರೆ,
    ಮಾನ್‌ಸ್ಟರ್ ಸಹಿ ಇರುವ ಈ ರೇಟು ಬೋರ್ಡನ್ನು ಪೈಂಟಿನಲ್ಲಿ ಬರೆಯಲಿಲ್ಲ ಅಲ್ವೇ? ಯಾಕೆಂದರೆ, ಕಪ್ಪು ಹಲಗೆಯಲ್ಲಿ ಚಾಕ್ ಪೀಸ್‌ನಲ್ಲಿ ಬರೆದ್ರೆ, ಆಗಾಗ ಏರಿಕೆ ಮಾಡಬಹುದಲ್ಲ....

    ಪ್ರತ್ಯುತ್ತರಅಳಿಸಿ
  8. ಗುರುಗಳೇ,
    ನಿಮ್ಮ ಸಂ-ಚೋದನೆಗೆ ನಮ್ಮದೂ ಒಂದು ಐನೂರು, ಸಾವಿರ, 10 ಸಾವಿರ.... ಕೋಟಿ ನಮನಗಳು. ಸಾರಿ, ಅದಕ್ಕಿಂತ ಹೆಚ್ಚು ಕೋಟಿ ಕೊಡುವುದು ಸಾಧ್ಯವಿಲ್ಲ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D