ಬೊಗಳೆ ರಗಳೆ

header ads

ಬೊಗಳೆ ಬ್ಯುರೋ ದಿಲ್ಲಿಗೆ ಹೋಗಿಲ್ಲ : ಸ್ಪಷ್ಟನೆ

(ಬೊಗಳೂರು ಕಳವಳ ಬ್ಯುರೋದಿಂದ)
ಬೊಗಳೂರು, ಆ.17- 60ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೊಗಳೆ ರಗಳೆ ಬ್ಯುರೋವು ದೆಹಲಿಯ ಕೆಂಪುಕೋಟೆ ಸುತ್ತ ಮುತ್ತ ಠಳಾಯಿಸುತ್ತಿತ್ತು ಎಂಬ ವರದಿಗಳನ್ನು ಬೊಗಳೆ ಸಂತಾಪಕರು ತಳ್ಳಿ ಹಾಕಿದ್ದಾರೆ.

ಇಲ್ಲಿ ಪ್ರಕಟಿಸಿರುವ ಚಿತ್ರವು ಇ-ಮೇಲ್‌ನಲ್ಲಿ ಭಾರೀ ಪ್ರಮಾಣದಲ್ಲಿ ಫಾರ್ವರ್ಡ್ ಆಗುತ್ತಿರುವುದರಿಂದ ಬೆಚ್ಚಿ ಬಿದ್ದಿದ್ದೇವೆ ಎಂದು ನಾವಾಗಿಯೇ ತಿಳಿಸುತ್ತಿದ್ದು, ಯಾರು ಕೂಡ ಕಳವಳಗೊಳ್ಳಬಾರದು ಎಂದು ಈ ಮೂಲಕ ಎಚ್ಚರಿಸಲಾಗಿದೆ.

ತಾವೆಂದಿಗೂ ಕೆಂಪು ಕೋಟೆಗೆ ಹೋಗಿದ್ದಿಲ್ಲ, ಅಲ್ಲಿ ಧ್ವಜವನ್ನು ಹಾರಿಸಿದ್ದಿಲ್ಲ. ಮತ್ತು "ಯುವಕರೇ ಈ ದೇಶದ ಶಕ್ತಿ, ಅವರೆಲ್ಲಾ ಮುಂದೆ ಬರಬೇಕು, ಬಡವರ ಏಳಿಗೆಗೆ ಹಾಗೆ ಮಾಡಿದ್ದೇವೆ, ಹೀಗೆ ಮಾಡಿದ್ದೇವೆ" ಎಂಬಿತ್ಯಾದಿ ಬೊಗಳೆ ಬಿಟ್ಟಿಲ್ಲ ಎಂದು ಸಂತಾಪಕರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಬಡತನವನ್ನು ಇಷ್ಟು ಶೇಕಡಾ ನಿವಾರಿಸಿದ್ದೇವೆ, ಇನ್ನುಳಿದ ಬಡತನವನ್ನು ಇಂತಿಷ್ಟು ಸಮಯದಲ್ಲಿ ನಿವಾರಿಸುತ್ತೇವೆ ಎಂಬುದನ್ನು ಹೇಳಿಲ್ಲ. ಆದರೆ ಬಡತನ ನಿರ್ಮೂಲನೆ ಸಾಧ್ಯವಾಗದಿದ್ದರೆ ಬಡವರನ್ನೇ ನಿರ್ಮೂಲನೆ ಮಾಡಲಾಗುತ್ತದೆ ಎಂದು ಎಲ್ಲಾದರೂ ಹೇಳಿದ್ದಿರಬಹುದು ಎಂದು ಸಂತಾಪಕರು ತಮ್ಮ ಬಗ್ಗೆಯೇ ಸಂದೇಹ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಸಂತಾಪಕರೆ,
    Guard of Dishonour ಪಡೆಯುತ್ತಿರುವ ಈ ವ್ಯಕ್ತಿ ಯಾರು? “ನಾನಲ್ಲ!” ಅಂತ ನೀವಂತೂ ಹೇಳಿಬಿಟ್ಟಿದ್ದೀರಿ. ಶ್ರೀನಿವಾಸರೂ ಅಲ್ಲ;ಯಾಕೆಂದರೆ ಅವರಿಗಿದ್ದ ಮೀಸೆ ಈ ವ್ಯಕ್ತಿಗೆ ಕಾಣುವದಿಲ್ಲ.
    ಅಂದ ಮೇಲೆ ಭಾರತದ ಪ್ರಧಾನ ಕಂತ್ರಿಗಳಲ್ಲಿ ಒಬ್ಬರು? ಮರ್ಕಟಲಾಲ, ಮರ್ಕಟಗಂಧಿ, ಮರ್ಕಟಗೌಡ, ಮರ್ಕಟಸಿಂಗ? ಅಥವಾ Vision India-2020ರಲ್ಲಿ ಪ್ರಥಮ ಪ್ರಜೆಯಾಗಲಿರುವವರ ಭವಿಷ್ಯದ ಚಿತ್ರವನ್ನು ಮೊದಲೆ ಪ್ರಕಟಿಸಿಬಿಟ್ಟಿದ್ದೀರಾ?

    ಪ್ರತ್ಯುತ್ತರಅಳಿಸಿ
  2. ನಾನಲ್ಲ, ನಾನಲ್ಲ, ದೇವರಾಣೆಗೂ ನಾನಲ್ಲ ಎಂದು ಅನ್ವೇಷಿಯವ್ರು ಪದೇ ಪದೇ ಸ್ಪಷ್ಟನೆ ನೀಡುತ್ತಿರುವುದರ ಹಿಂದಿನ ರಹಸ್ಯವನ್ನು ಬೇಧಿಸಿ ಅಸತ್ಯವನ್ನು ಸ್ಪಷ್ಟಪಡಿಸಲು ನಮ್ಮ ವದರಿಗಾರರನ್ನು ಅಟ್ಟಿದ್ದೇವೆ... ಕೂಡಲೇ ಈ ಸ್ಪಷ್ಟೀಕರಣಗಳ ಸೃಷ್ಟೀಕರಣದ ಹಿಂದಿನ ಅಸತ್ಯ ಸ್ಪಷ್ಟವಾಗುತ್ತದೆ.

    ಪ್ರತ್ಯುತ್ತರಅಳಿಸಿ
  3. ಸುಧೀಂದ್ರರೆ,

    ಎಲ್ಲೋ ಸ್ಪೆಲ್ಲಿಂಗ್ ಮಿಸ್ಟೇಕ್ ಆದಂತೆ ಕಂಡುಬಂದಿದೆ. ಆದರೂ ಸಾವರಿಸಿಕೊಂಡು ಅದು Scratch-guard ಆಫ್ dishonour ಎಂದು ಆಗಬೇಕು ಎನ್ನುತ್ತಿದ್ದೇವೆ. ಯಾಕೆಂದರೆ ಅಲ್ಲಿರುವ ವ್ಯಕ್ತಿ ಪರಚಿ ಪರಚಿ Scratch ಆಗುತ್ತದೆ ಎಂಬುದು ಒಂದು ಕಾರಣ.

    ಅಂತೆಯೇ ನೀವು ಹೇಳಿದ ಪಟ್ಟಿಯಲ್ಲಿರುವವರಲ್ಲಿ ಒಬ್ಬರೇ ಅಲ್ಲಿದ್ದಾರೆ ಎಂದು ನಾವು ಖಂಡಿತವಾಗಿ ಸತ್ಯ ಹೇಳುವುದಿಲ್ಲ.

    ಪ್ರತ್ಯುತ್ತರಅಳಿಸಿ
  4. ಸುಪ್ರೀತರೆ,
    ನೀವು ಅಟ್ಟಿದ ವದರಿಗಾರರು ಇಲ್ಲಿ ಬಂದು ತಲುಪಿವೆ ಮತ್ತು ರಾಶಿ ಬಿದ್ದಿವೆ. ಅವುಗಳಲ್ಲಿ ಒಂದನ್ನು ಆರಿಸಿಯೇ ನಾವು ಈ ಅಂಕಣದಲ್ಲಿ ಚಿತ್ರ ಸಮೇತ ಪ್ರಕಟಿಸಿದ್ದೇವೆ ಎಂದು ಮತ್ತೊಂದು ಸ್ಪಷ್ಟೀಕರಣ ನೀಡುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D