ಬೊಗಳೆ ರಗಳೆ

header ads

ಚೆನ್ನೈ ಕನ್ನಡಿಗರ ಓಟಿಗಾಗಿ ಪೆರಿಯ ತಂಬಿ ಪ್ರತಿಮೆ!

(ಬೊಗಳೂರು ಪ್ರತಿಮಾ ಬ್ಯುರೋದಿಂದ)
ಬೊಗಳೂರು, ಆ.11- ಬೊಗಳೂರಿನಲ್ಲಿ ಜಾಗವಿಲ್ಲದಿರುವುದರಿಂದ ಕರುನಾಡಿನ ಮೂರ್ತಿಗಳೆಲ್ಲವನ್ನೂ ತಮಿಳುಕಾಡಿನಲ್ಲಿ ಸ್ಥಾಪಿಸುವ ಬಗ್ಗೆ ಉಭಯ ರಾಜ್ಯಗಳ ನಡುವೆ ಒಪ್ಪಂದವೊಂದು ಏರ್ಪಟ್ಟಿದ್ದು, ಪ್ರಥಮ ಹೆಜ್ಜೆಯಾಗಿ ಸರ್ವಜ್ಞ ಮೂರ್ತಿಯು ಚೆನ್ನೈಯ ಅಯ್ಯಯ್ಯಾನವರಂನಲ್ಲಿ ಸ್ಥಾಪನೆಗೊಳ್ಳುತ್ತಿದೆ.

ಆ ನಂತರದ ದಿನಗಳಲ್ಲಿ ಕರ್ನಾಟಕ ಕಂಡ ಮಹಾನ್ ನೇತಾರರಾದ ವೇದೇಗೌಡ ಹಾಗೂ ಚಿನ್ನ ತಂಬಿಯಾಗಿಬಿಟ್ಟ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪೆರಿಯ ತಂಬಿಯ ಪ್ರತಿಮೆಯನ್ನೂ ಸ್ಥಾಪಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಪೆರಿಯ ತಂಬಿಯ ಪ್ರತಿಷ್ಠಾಪನೆಗಾಗಿ ಕಪ್ಪನೆಯ ಕನ್ನಡಕದ ನಿರ್ಮಾಣವು ಸಮಸ್ಯೆಯ ಸಂಗತಿ. ಯಾಕೆಂದರೆ, ಪೆರಿಯ ತಂಬಿಯು ತಮಿಳು ಭಾಷಿಕರಾದರೂ, ಅವರು ಹಾಕಬೇಕಿರುವುದು "ಕನ್ನಡ"ಕ. ಈ 'ಕನ್ನಡ'ಕ ಹಾಕಿದ ಕಣ್ಣಿನಲ್ಲಿ ನೋಡಿಬಿಟ್ಟರೆ, ಅವರಿಗೇನಾದರೂ ಅಜ್ಞಾನದ ಪೊರೆ ಸರಿದು, ಸುಜ್ಞಾನದ ಸಂಗತಿಗಳು ಕಂಡರೆ ಮತ್ತು ಅವರು ಏನಾದರೂ ಸರಿಯಾಗಿಬಿಟ್ಟರೆ ಎಂಬುದೇ ಹಲವು ಮಂದಿಯ ಆತಂಕ.

ಸರಿಯಾಗುವುದು ಎಂದರೆ ಹೇಗೆ? ಚೆನ್ನೈಯಲ್ಲಿರುನ ಕನ್ನಡಿಗ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಅವರು ಕೂಡ ಚೆನ್ನೈ ಕನ್ನಡಿಗರಿಗಾಗಿ ಒಂದಷ್ಟು ಪ್ರತಿಮೆಗಳನ್ನು ನೀಡುತ್ತಾರೆ. ಚೆನ್ನೈ ಅಥವಾ ತಮಿಳುನಾಡಿನ ಕನ್ನಡಿಗರಿಗೆ ಕಾವೇರಿ ನೀರು ಕುಡಿಸಬೇಕೆಂಬ ಅದಮ್ಯ ಆಸೆಯನ್ನು ಕರ್ನಾಟಕ ಸರಕಾರದ ಮುಂದಿಡಬುದಾಗಿದೆ.

ಈ ಕಾರಣಕ್ಕಾಗಿಯೇ, ಇದರ ಆರಂಭದಲ್ಲಿ ಸರ್ವಜ್ಞನ ಬಳಿಕ ಎರಡನೇ ಹೆಜ್ಜೆಯಾಗಿ ನಡೆಯುವ ಕಾರ್ಯಕ್ರಮಕ್ಕೆ, ನಿಮ್ಮೂರಿನ ಮುಖ್ಯಮಂತ್ರಿಯವರ ಪೆರಿಯ ತಂಬಿಯ ಪ್ರತಿಮೆ ಸ್ಥಾಪಿಸಲಾಗುತ್ತದೆ ಎಂದು ತಮಿಳುಕಾಡು ಸರಕಾರವು ವಾಗ್ದಾನ ನೀಡಿದೆ. ಅದರ ಅನಾವರಣಕ್ಕೆ ಕರ್ನಾಟಕದ ಮಹಾನ್ ಹೋರಾಟಗಾರ ನಾಟಾಳ್ ವಾಗರಾಜ್ ಅವರನ್ನು ಆಹ್ವಾನಿಸುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಯಾವುದೇ ಮೂಲಗಳು ವರದಿ ಮಾಡಿಲ್ಲ.

ಅಲ್ಲಿಗೆ, ತಮಿಳ್ನಾಡು ಕನ್ನಡಿಗರಿಗೂ ನಮ್ಮ ಮುಖ್ಯಮಂತ್ರಿಯ ಪೆರಿಯ ತಂಬಿಯ ಮನೆಯಿದು ಎಂಬ ಎಮ್ಮೆಯ ಸಂಗತಿಯೂ ದೊರೆಯುತ್ತದೆ, ಮತ್ತು ನಮ್ಮ ಕಾವೇರಿ ನೀರು ನಮಗೆ ಸ್ವಲ್ಪಸ್ವಲ್ಪ ಸಿಗುತ್ತದೆ ಎಂಬ ಹಿರಿಮೆಯೂ ಇರುತ್ತದೆ. ಆದರೆ ಹೆಚ್ಚು ಲಾಭವಾಗಿದ್ದು ತಮಿಳುನಾಡಿನ ಸಹೋದರರಿಗೆ ಎಂಬ ಅಂಶವು ಕಪ್ಪು ಕನ್ನಡಕದ ಹಿಂದೆ ಮರೆಯಾಗಿತ್ತು ಎಂದು ಮೂಲಗಳು ತಿಳಿಸಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಚಿನ್ನತಂಬಿ ಅಂದ್ರೆ ರೈಲ್ವೇ ಹಳಿ ಪಕ್ಕ ನೀರಿನ ಬಾಟಲು ಇಟ್ಕೊಂಡು ಬೆಳಗ್ಗೆ ಕುಳಿತಿರ್ತಾನಲ್ಲ, ಅವನು ತಾನೆ? ಈಗೀಗ ತಂಬಿಗೆ ಸಿಗೋಲ್ಲ ನೋಡಿ, ಅದಕ್ಕೇ ತೊಳೆದುಕೊಳ್ಳಲು ಬಾಟಲಿನಲ್ಲೇ ನೀರು ತೆಗೆದುಕೊಂಡಹೋಗಬೇಕು. ತಮಿಳರಿಗೆ ಕನ್ನಡಕ ಬೇಕ್ಲೇ ಬೇಕು ಬಿಡಿ, ಅದೇ ಕನ್ನಡಿಗರಿಗೆ ಬೇಕಿಲ್ಲ. ಅದಕ್ಕೇ ಅಲ್ವಾ ಕನ್ನಡ ಭಾಷಿಗರಿಗೆ ಕನ್ನಡಿಗರು ಅನ್ನೋದು, ಇಲ್ದೇ ಇದ್ರೆ ಕನ್ನಡಕಗಾರು ಅನ್ನಬೇಕಾಗುತ್ತಿತ್ತು.

    ಅಂದ ಹಾಗೆ ಪೆರಿಯ ತಂಬಿಗೆ ದೊಡ್ಡ ಬಾಟಲಿನಲ್ಲಿ ನೀರು ಕೊಟ್ಬಿಟ್ರೆ ಸಾಕು ಬಿಡಿ. ಬೆಳಗ್ಗೆ ಅದರಲ್ಲಿ ತೊಳೆದುಕೊಂಡು ಸಂಜೆಗೆ ಅದರೊಳಗಿನ್ನೇನೋ ಏರಿಸೋಕ್ಕೆ ಅವರಿಗೆ ಉಪಯೋಗವಾದೀತು. ಹಾಗೆ ಮಾಡಿದವರಿಗೆ ಮತವೂ ಸಿಕ್ಕೀತು, ಸರ್ವಜ್ಞನ ಮಾನವೂ ಉಳಿದೀತು ಮತ್ತು ಮೋರಿಯನ್ನೂ ಸ್ವಚ್ಛ ಮಾಡಿಯಾರು :P

    ಪ್ರತ್ಯುತ್ತರಅಳಿಸಿ
  2. ಚಡ್ಯೂರಿಯ next agenda:
    ಗಬ್ಬನಾರು ಪಾರ್ಕಿನಲ್ಲಿ ಪೇಪರ್ ಟೈಗರ್ ಪರಬಾಕರನ್ ಮೂರ್ತಿ
    ಸ್ಥಾಪನೆ; ಗೊಳ್ಳೇಗಾಲದಲ್ಲಿ ವೀರಬಪ್ಪನ್ ಮೂರ್ತಿ ಸ್ಥಾಪನೆ; ನಿಧಾನ ಸೌಧದ ಎದುರುಗಡೆ ಕರುಣಾಕಿಡಿಯ ಮೂರ್ತಿ ಸ್ಥಾಪನೆ!

    ಪ್ರತ್ಯುತ್ತರಅಳಿಸಿ
  3. ಹುಚ್ಚುಳ್ಳವರ ವಿವಾದದಲ್ಲಿ ವೋಟ್ ಹೊಡ್ಕೊಂಡವನೇ ಜಾಣ, ಬಾಯ್ಮುಂಚ್ಕೊಂಡ್ ಸಮ್ಮತಿ ಸೂಚಿಸಿದವನೇ ಮೇಧಾವಿ(ಸಾಹಿತಿ)"

    ಪ್ರತ್ಯುತ್ತರಅಳಿಸಿ
  4. ಏನೇನು ಮಾಡ್ತಾರೋ ರಾಜಕಾರಣಿಗಳು?
    ಏನಾದ್ರು ಸುದ್ದಿಲಿ ಇರೋಕೆ ಕೆಲಸ ಬೇಕು ಇವ್ರಿಗೆ ಅಷ್ಟೇ ಆಲ್ವಾ?

    ಪ್ರತ್ಯುತ್ತರಅಳಿಸಿ
  5. ತಿರುಕರೇ,
    ಪೆರಿಯ ತಂಬಿಗೆ ಪೆರಿಯ ಬಾಟ್ಲಿ ಕೂಡ ಸಾಕಾಗುವುದಿಲ್ಲ. ಅವರ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿಗಳಿಗೆ, ಮರಿ ಮಕ್ಕಳಿಗೆ ಸಾಕಾಗುವಷ್ಟು ದೊಡ್ಡ ಪೀಪಾಯಿಯೇ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಪ್ರತ್ಯುತ್ತರಅಳಿಸಿ
  6. ಸುನಾಥರೆ,
    ನೀವು ರೂಪಿಸಿರುವ ಅಜೆಂಡಾಗಳನ್ನು ಈಗಾಗಲೇ ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಹಣ ಮಂಜೂರಾದ ತಕ್ಷಣ ಹಣ ಇಟ್ಕೊಂಡು ಅದಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನು ನಿಮಗೆ ಕಳುಹಿಸಲಾಗುತ್ತದೆ. ಆ ಕಾಗದ ಪತ್ರಗಳ ಮೂಲಕ "ಯೋಜನೆ ಅನುಷ್ಠಾನವಾಗಿದೆ" ಎಂದು ದಾಖಲೆ ಸಮೇತ ಬೊಗಳೆ ಪತ್ರಿಕೆಯಲ್ಲಿ ಪ್ರಕಟಿಸಲು ಕೋರಲಾಗಿದೆ.

    ಪ್ರತ್ಯುತ್ತರಅಳಿಸಿ
  7. ಶ್ರೀತ್ರೀ ಅವರೆ,
    ಮೇಧಾವಿಗಳ ಮೇದಸ್ಸೂ ಹೆಚ್ಚಾಗಿ, ಅದು ಮೆದುಳನ್ನು ಆವರಿಸಿಕೊಂಡಿತ್ತು. ಇದೇ ಕಾರಣಕ್ಕೆ, ಅದನ್ನು ಅನಾವರಣಗೊಳಿಸಲು ಮತ್ತೊಂದು ಭರ್ಜರಿ ಸಮಾರಂಭ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

    ಪ್ರತ್ಯುತ್ತರಅಳಿಸಿ
  8. ಸಾಗರದಾಚೆಯಿಂದ ಬಂದಿರೋರೇ,
    ಹಾಗೆಯೇ, ಕಾಗೆ ಮತ್ತು ಇತರ ಹಕ್ಕಿಗಳಿಗೂ ಏನಾದ್ರೂ ಸಹಾಯ ಮಾಡ್ಬೇಕಲ್ಲ... ಆ ಕಾರಣಕ್ಕೆ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ ಎಂದು ನಮ್ಮ ಅನ್ವೇಷಣಾ ಬ್ಯುರೋದವರು ವರದ್ದಿ ತಂದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D