ಬೊಗಳೆ ರಗಳೆ

header ads

ಮಾವನ ಹಕ್ಕುಗಳನ್ನು ಉಲ್ಲಂಘಿಸಿದ್ದೇಕೆ?

(ಬೊಗಳೂರು ಮಾವನ ಬ್ಯುರೋದಿಂದ)
ಬೊಗಳೂರು, ಜ.29- ಮಂಗನೂರಿನಲ್ಲಿ ಮಾವನ ಹಕ್ಕುಗಳನ್ನು ಹಾರಿ ಉಲ್ಲಂಘಿಸಿದ್ದಾರೆ (ಅಂದರೆ ಸಮುದ್ರ ಲಂಕೆಗೆ ಹಾರಿದಂತೆ ಸಾಗರ ಉಲ್ಲಂಘನೆ ಮಾಡಿದ್ದಾರೆ) ಎಂದು ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಬೊಗಳೂರು ಬ್ಯುರೋ ಪರಮಗಂಭೀರವಾದ ತನಿಖೆಗೆ ಸಿದ್ಧವಾಯಿತು.

ಪಬ್ಬಿಗೆ ತಮ್ಮ ಭಾವೀ ಸೊಸೆಯರನ್ನು ಕಳುಹಿಸುತ್ತಿರುವ ಮಾವನವರ ಹಕ್ಕುಗಳನ್ನೇ ಏಕೆ ಉಲ್ಲಂಘಿಸಬೇಕು ಎಂದು ಹಲವರಲ್ಲಿ ಪ್ರಶ್ನೆ ಕೇಳಿ ತನಿಖೆ ಶುರು ಹಚ್ಚಿಕೊಳ್ಳಲಾಯಿತು. ಹಲವರ ಔದಾಸೀನ್ಯಭರಿತ ಪ್ರತಿಕ್ರಿಯೆಗಳು ಮನ ಮುಟ್ಟಿ ತಟ್ಟಿ ಬಡಿದೆಚ್ಚರಿಸಿ, ಸಂಸ್ಕೃತಿಯನ್ನು ಅಟ್ಟುವಂತಿತ್ತು.

ಪಬ್ಬಿಗೆ ಹೋಗೋದು ಭಾರತೀಯ ಸಂಸ್ಕೃತಿ ಅಲ್ಲ, ಅಲ್ಲಲ್ಲ... ಭಾರತೀಯ ವಿಕೃತಿ ಅಲ್ಲ, ಹೌದು (!) ಅಂತಲೂ ಒಪ್ಪಿಕೊಳ್ಳೋಣ. ಆದ್ರೆ ದನಕ್ಕೆ ಅಲ್ಲಲ್ಲ ಬೆಕ್ಕಿಗೆ ಬಡಿದ ಹಾಗೆ ಎಳೆದಾಡಿ ಬಡಿಯೋದು? ಮಾವನ ಹಕ್ಕುಗಳು ಬಿಡಿ, ಪ್ರಾಣಿಗಳ ಹಕ್ಕು ಕೂಡ ಉಲ್ಲಂಘನೆಯಾದಂತೆಯೇ ಅಲ್ಲವೇ? - ಬೊಗಳೂರಿನ ಬೊಗಳೇಶ್ ಪ್ರಶ್ನೆ.

ಪಬ್ಬಿನಲ್ಲಿ ಕುಡಿಯುವುದು ಭಾರತೀಯ ವಿಕೃತಿ ಅಲ್ಲ ಅಂತಾದರೆ, ಮಹಿಳೆಯರು ಮಾತ್ರವೇ ಅಲ್ಲ, ಪುರುಷರು ಕೂಡ ಕುಡಿದು ನರ್ತಿಸುತ್ತಾರೆ. ಅವರಿಗೇಕೆ ಈ ವಿಕೃತಿ ಅನ್ವಯವಾಗುವುದಿಲ್ಲ? ಮಹಿಳೆಯರಿಗೆ ಮಾತ್ರವೇ ಬಡಿದದ್ದೇಕೆ? ಇದು ಮಹಿಳಾ ಹಕ್ಕುಗಳ ಉಲ್ಲಂಘನೆ ಎಂದು ಹೇಳಲಾಗುವ ಕಾರಣ, ಮತ್ತು ಬಡಿದದ್ದು ಸ್ತ್ರೀಯರಿಗೇ ಆಗಿರೋ ಕಾರಣ, ಅದು ಮಾವನ ಹಕ್ಕು ಉಲ್ಲಂಘನೆ ಆಗಲು ಸಾಧ್ಯವಿಲ್ಲ. ಅದನ್ನು ಅತ್ತೆಯ ಹಕ್ಕಿನ ಉಲ್ಲಂಘನೆ ಎಂದು ಕರೆಯಬೇಕು ಎಂದು ಆಗ್ರಹಿಸುತ್ತೇವೆ. - ಬೊಗಳಿನಿ ಉವಾಚ.

ಯುವ ಜನರು ಕುಲಗೆಟ್ಟು ಹೋಗುತ್ತಿದ್ದಾರೆ. ಯಾವಾಗಲೂ ಪಬ್ಬಿನಲ್ಲೇ ಇರುತ್ತಾರೆ. ಅಲ್ಲಿ, ತಮ್ಮ ಮಾವನ ಹಕ್ಕುಗಳನ್ನೆಲ್ಲಾ ಉಲ್ಲಂಘಿಸಿ, ಮಾವನ ಮನೆ ಸೇರ್ಕೋಂಡು ಕಂಬಿಗಳೆಷ್ಟಿವೆ ಎಂದು ಎಣಿಸುತ್ತಾ ಕೂರುತ್ತಾರೆ. ಅಷ್ಟೊಳ್ಳೆ ಭವ್ಯ ಭವಿಷ್ಯವಿರೋ ಯುವ ಜನತೆಯನ್ನು ಕೇವಲ ಕಂಬಿಗಳನ್ನು ಎಣಿಸಲು ಹಚ್ಚುವುದು ಅವರ ಮಾವನ ಹಕ್ಕುಗಳ ಉಲ್ಲಂಘನೆಯಲ್ಲವೇ? ಠಾಣೆಯಲ್ಲಿರೋ ಮಾವನೂ ಅವರನ್ನೆಲ್ಲಾ ಚೆನ್ನಾಗಿಯೇ ನಡೆಸಿಕೊಳ್ಳುತ್ತಾರಾದರೂ, ಅದನ್ನು "ಮಾವನೇ ಮಾವನ ಹಕ್ಕುಗಳನ್ನು ಉಲ್ಲಂಘಿಸುವುದು" ಎಂದು ಕರೆಯಲಾಗುತ್ತದೆಯೇ? - ಪಿಕ್‌ಪಾಕೆಟ್ ಪ್ರವೀಣನ ಮಿಲಿಯನ್ ಡಾಲರು ಪ್ರಶ್ನೆ.

ಇದೀಗ ಪಬ್ಬಿನಲ್ಲಿದ್ದವರ ಮಾವನ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಒಪ್ಪಿಕೊಳ್ಳೋಣ. ಆದರೆ ಅವರಿಗೆ ಇದಕ್ಕಾಗಿ ಹಣ ಕೊಟ್ಟು ಕಳುಹಿಸೋ ಮಾವನ ಬಗ್ಗೆ ನೀವೇನಂತೀರಿ? - ಭಾವಿ ಅಳಿಯನ ಪ್ರಶ್ನೆ

ಇದಕ್ಕೆಲ್ಲಾ ಸರಕಾರವೇ ಕಾರಣ. ನಮ್ಮ ಗೃಹ ಸಚಿವರನ್ನು ಬಂಧಿಸಿ ಜೈಲಿಗಟ್ಟಬೇಕು. ಅವರು ಕೂಡ ಅವರ ಮಾವನ ಹಕ್ಕುಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸರಕಾರವು ಹಿಟ್ಲರ್‌ನಂತೆ ವರ್ತಿಸುತ್ತಿದೆ. ಸೈನಿಕರನ್ನು ಬೆಳೆಸುತ್ತಿರುವುದೇ ಸರಕಾರ - ವಿರೋಧ ಪಕ್ಷದ (ಅ)ಮಾಯಕ.

ಕೊನೆಯಲ್ಲಿ ಸಿಕ್ಕಿದವರು (ಹೆಸರು ಮರೆತು ಹೋಗಿದೆ) ನೀಡಿದ ಅಭಿಪ್ರಾಯ: ವರದಕ್ಷಿಣೆ ತಗೊಂಡು ಮಾವನ ಎಲ್ಲ ಹಕ್ಕುಗಳ, ಕರ್ತವ್ಯಗಳ ಉಲ್ಲಂಘನೆ ನಡೆಯುತ್ತಲೇ ಇದೆ. ಅವರ ಮೇಲೇಕೆ ದಾಳಿ ಮಾಡಿ ಬಡಿಯೋದಿಲ್ಲ?

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಪಬ್ಬಿನಲ್ಲಿ ಮಬ್ಬು ಇದ್ದದ್ದಕ್ಕಾಗಿ ಬಟ್ಟೆ ಹಾಕಿಕೊಂಡ ಭಾಮಿನಿಯರನ್ನಷ್ಟೇ ಬಡೆದಿದ್ದಾರೆ ಎಂದು ಪೋಲೀ(ಸ) ಮೂಲಗಳು ತಿಳಿಸಿವೆ. ಹೀಗಾಗಿ ಇದರಲ್ಲಿ ಮಾನವಿದ್ದವರ ಯಾವ ಹಕ್ಕೂ ಉಲ್ಲಂಘನೆಯಾಗಿಲ್ಲ ಎಂದು ಮಾನವಿಲ್ಲದ ಆಯೋಗದ ಅಭಿಪ್ರಾಯವಾಗಿದೆ.

    ಪ್ರತ್ಯುತ್ತರಅಳಿಸಿ
  2. ನಮ್ಮನ್ನು ಬೆಕ್ಕು ಅಂದುಕೊಂಡು ಬಡಿದವರಿಗೆ ನಾವು ಸಿಂಹವಾಹಿನಿಯರು ಅನ್ನೋದು ಮರೆತುಹೋಗಿದೆ. parking lot ಇಂದ ನಾವು ಸಿಂಹಗಳನ್ನು ತೆಗೆದೆವೆಂದರೆ, ಅಡ್ರೆಸ್ಸು ತಪ್ಪದೆ ಇವರೆಲ್ಲ ಕರೆಕ್ಟಾಗಿ ಅವರವರು ಉಲ್ಲಂಘಿಸಿದ್ದ ಮಾವನ ಮನೆಯ ಹಕ್ಕಿನ ಬೌಂಡರಿಗಳನ್ನು ತಲುಪುತ್ತಾರೆ. ನಾನು ನನ್ನ ಸಿಂಹವನ್ನು ಕಟ್ಟಿಹಾಕಿರುವ ಚೈನ್ ನ ಬೀಗದಕೀಲಿ ಹುಡುಕಲು ಹೊರಟೆ ಈಗ.

    ಪ್ರತ್ಯುತ್ತರಅಳಿಸಿ
  3. ಸುನಾಥರೆ,
    ಮಾವ ಇದ್ದವರ ಎಲ್ಲ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಆದರೆ ಮಾನ ಇಲ್ಲದವರ ಹಕ್ಕುಗಳನ್ನು ಉಲ್ಲಂಘಿಸಲಾಗಿಲ್ಲ ಎಂದು ಅಲ್ಲೇ ಕ್ಯಾಮರಾ ಹಿಡಿದು ಏನು ಸಿಗುತ್ತದೆ ಎಂದು ಕಾಯುತ್ತಿದ್ದ ನಮ್ಮ ವ-ರದ್ದಿಗಾರರು ಸ್ಪಷ್ಟನೆ ನೀಡಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಲಕ್ಷ್ಮಿ ಅವರೆ,
    ನಿಮ್ಮ ಸಿಂಹವನ್ನು ಕಟ್ಟಿ ಹಾಕಿರುವ ಕೀಲಿ ಸಿಗದಿದ್ದರೆ ನಮಗೆ ತಿಳಿಸಿ... ಕಪಿಸೈನ್ಯವನ್ನು ಅಟ್ಟುತ್ತೇವೆ. ಆಮೇಲೆ, ನಿಮ್ಮ ಸಿಂಹವು ಘರ್ಜಿಸುವ ಬದಲು ಕುಂಯ್ಯ್... ಅಂದರೂ ಹೇಳಿ... ನೀವೇನಾದ್ರೂ ಅದರ ಬಾಲದ ಮೇಲೆ ಪವಿತ್ರ ಪಾದಸ್ಪರ್ಶ ಮಾಡಿದ್ದೀರೇ ಅಂತ ತನಿಖೆ ಮಾಡಿ ನಿಮಗೆ ಹೇಳುತ್ತೇವೆ.

    ಪ್ರತ್ಯುತ್ತರಅಳಿಸಿ
  5. ಮಾನ ಇಲ್ಲದ ಮಂದಿ ಪಬ್‍ನಲ್ಲಿ ಕುಳಿತು ತಮ್ಮ ಬಟ್ಟೆ ಜಾರುತ್ತಿರುವ ಅರಿವೇ ಇಲ್ಲದೆ ಸಿಕ್ಕ ಸಿಕ್ಕ ಮಂದಿಯಿಂದ ಕೈಯಾಡಿಸಿಕೊಂಡು ತೂರಾಡುತ್ತಿದ್ದರೆ...ಇಂತಹ ದೃಶ್ಯ ನೋಡಿದ ಆ ಪ್ರತಿಭಟನಾಕಾರರು ಯಾಕೆ ಕಾಮೋನ್ಮಾದರಾಗಿಲ್ಲ ಎಂಬ ಶಂಕೆ ನನಗೆ ಕಾಡುತ್ತಿದೆ. ಏಕೆಂದರೆ ಭಾರತ ಇತ್ತೀಚೆಗೆ ವೇಶ್ಯಾವಾಟಿಕೆ ಕೇಂದ್ರದ ಹೆಚ್ಚಳದಿಂದ ಏಡ್ಸ್ ಎಂಬ ಮಹಾಮಾರಿ ಹಬ್ಬುವುದರಲ್ಲಿ ವಿಶ್ವದ ಮೊದಲನೇ ರಾಷ್ಟ್ರವಾಗಿ ಹೊರಹೊಮ್ಮಿರುವುದು ಮಹಿಳಾ ಸಂಘಟನೆಗಳಿಗೆ ಕಣ್ಣಿಗೆ ಕಾಣುತ್ತಿಲ್ಲ.
    ಹಲ್ಲೆ ಮಾಡಿದ್ದು ತಪ್ಪು...ಆದರೆ ಹುಡುಗಿಯರು ಕುಡಿದು ತೂರಾಡಿ, ಅಮಲೇರಿ, ತಮ್ಮ ಶೀಲ ಕಳೆದುಕೊಂಡು ಮನೆಗೆ ಬರುವುದು ಸರಿಯಾ?. ಹೆಣ್ಣು ಹೆತ್ತವರು ಈ ಮದ ಕಾಮಿನಿಗಳ ಈ ಹುಚ್ಚಾಟದಿಂದ ತಾವು ಯಾಕಾದರೂ ಹೆಣ್ಣನ್ನು ಹೆತ್ತೆವು ಎಂದು ತಲೆ ಚಚ್ಚಿಕೊಳ್ಳುವ ಕಾಲ ದೂರವಿಲ್ಲ.

    ಯಾವುದು ಸರಿ...ಯಾವುದು ತಪ್ಪು?.....ಅಯ್ಯಯ್ಯೋ...ನಾವೇ ತಲೆ ಚಚ್ಚಿಕೊಂಡು ಬಿಡಬೇಕೆನಿಸುತ್ತಿದೆ. ಈ ಕಾಮಿನಿಯರ ಹುಚ್ಚಾಟ ಸರಿಯೇ?.....

    ಪ್ರತ್ಯುತ್ತರಅಳಿಸಿ
  6. ಸೀತೆಯಂತಹ ಸಾಧ್ವಿಯನ್ನೇ ಬಿಡದ ಜನ ಇವರು. ಕಟ್ಟಿಕೊಂಡ ಹೆಂಡತಿಗೇ ನ್ಯಾಯ ಒದಗಿಸದಾದ ರಾಜಾಧಿರಾಮ. ಹೀಗಿರುವಾಗ ’ರಾಮ’ಸೇನೆಯ ’ಕೋತಿ’ಗಳಿಂದ ಇದಕ್ಕಿಂತ ಹೆಚ್ಚಿನ ’ಕಪಿ’ಚೇಷ್ಟೆಯನ್ನೇನಾದರು ನಿರೀಕ್ಷಿಸಲು ಸಾಧ್ಯವೇ?
    ಇನ್ನೂ ನಮ್ಮನ್ನು ’ಕಾಪಾಡಲು’ ಯಾರಾದರೂ ಬರುತ್ತಾರೆ ಎಂಬ ಹುಸಿ ಆಸೆಯೊಂದಿಗೆ ಪೆಟ್ಟು ತಿಂದದ್ದೇ ಆ ಯುವತಿಯರ ಘೋರ ಅಪರಾಧ. ಏನೋ ’Modern’ ಅನ್ನೋ ಹೆಸರಿನಲ್ಲಿ ಜೀನ್ಸ್ ಧರಿಸಿ ’Pub’ ಗೆ ಹೊಗೋಕಾಗತ್ತೆ, ಅದೇ ಪ್ರಗತಿಶೀಲ ಧೋರಣೆ ಯಾರೋ ಮೂರನೆಯವ ಹೊಡೆಯಲು ಬಂದಾಗ ಎಲ್ಲಿಗೆ ಹೋಗಿತ್ತು? ತಿರುಗಿಸಿ ಬಾರಿಸಿದ್ದರೆ, ಅದೂ ಕೂಡ ’ಮಾಧ್ಯಮೀಕರಣ’ವಾಗಿ, ಕೇವಲ ಮಹಿಳೆಯರ ಮೇಲಿನ ದೌರ್ಜನ್ಯಕ್ಕಷ್ಟೇ ಸೀಮಿತವಾಗಿರುವ ಇಂತಹ ’ಪೌರುಷ’ವಂತರಿಗೊಂದು ಸವಾಲಾಗುತ್ತಿರಲಿಲ್ಲವೇ? ಗಾಂಧಿಗೆ ಗಾಂಧಿಯಾಗಿರು, ಲಾಡೆನ್ ಗೆ ಬುಷ್ ಆಗಿರು, ಕಲಿಗಾಲವಿದು. ಹಾರೆಂದ ಕೂಡಲೆ ಬೆಂಕಿಗೆ ಹಾರಲು, ತ್ರೇತಾಯುಗವಲ್ಲ.

    @ ಗುರು:
    ಕೆಲವು ಪ್ರಶ್ನೆಗಳು. ಉತ್ತರ ಹೇಳಬೇಕಾಗಿಲ್ಲ. ಕಂಡುಕೊಳ್ಳಿ ಸಾಕು.
    -ವೇಶ್ಯಾವಾಟಿಕೆ ಕೇಂದ್ರಗಳು ಹೆಚ್ಚಾಗಲು ಕಾರಣಗಳೇನು?
    -ಮದ ಕಾಮಿನಿಯರ / ಮದ ಕಾಮುಕರ ಶೇಕಡಾವಾರು ಅನುಪಾತವೆಷ್ಟು?
    -ಬಹುಪಾಲು ಹೆಣ್ಣು ಹೆತ್ತವರ ಇಂದಿನ ಸ್ಥಿತಿಯೇನು? (ಮುಂದಿನದನ್ನು ಮುಂದೆ ಖಂಡಿತಾ ನೋಡುತ್ತೀರಿ)

    ಪ್ರತ್ಯುತ್ತರಅಳಿಸಿ
  7. ಗುರುಗಳೆ,
    ಯಾವ ತಪ್ಪಿನ ಬಗೆಗೂ ತಲೆಕೆಡಿಸಿಕೊಳ್ಳಬೇಡಿ. ಇಲ್ಲಿ ಆಗಿದ್ದು ಮಾಧ್ಯಮಗಳ ಕರ್ತವ್ಯದ ಸ್ವಯಂ ಉಲ್ಲಂಘನೆಯಷ್ಟೆ.
    ಈ ರೀತಿ ಆಗುತ್ತೆ ಅಂತ ತಿಳಿದೂ ಕೂಡ ಪೊಲೀಸರಿಗೆ ತಿಳಿಸದೆ, ನಾವೇ (ಹುಡುಗಿಯರ ಹೆಡ್) ಬ್ರೇಕಿಂಗ್ ನ್ಯೂಸ್ ಬಿತ್ತರಿಸುತ್ತೇವೆ ಎಂಬ ಧಾವಂತದ ಬಗ್ಗೆ ಯೋಚಿಸಿದ್ರೆ ಸಾಕು. ಮತ್ತೆ ಕುಡಿಯೋದು, ಕೆಡೋದು ಎಲ್ಲ ಅವರವರ ಹಕ್ಕು, ಸ್ವಾತಂತ್ರ್ಯ ಅಥವಾ ಸ್ವೇಚ್ಛೆ.

    ಪ್ರತ್ಯುತ್ತರಅಳಿಸಿ
  8. ವಿನುತ ಅವರೆ, ಬೊಗಳೆ ನಾಡಿಗೆ ಸ್ವಾಗತ.

    ನಿಮ್ಮ ಮಾತಿನಲ್ಲಿ ಒಂದು ಪಾಯಿಂಟ್ ಬಗ್ಗೆ ಎಲ್ರೂ ಚರ್ಚೆ ಮಾಡ್ಬೇಕು. ಪಬ್‌ಗೆ ಹೋಗೋಕಾಗುತ್ತೆ, ಕಪಿಗಳು ಹೊಡೀತಿರೋವಾಗ ತಿರುಗಿ ಬಾರಿಸಿಲ್ಲವೇಕೆ?
    ಇಲ್ಲಿ ಎಲ್ಲವೂ ಪೂರ್ವ ಯೋಜಿತವೇ ಆಗಿರೋವಾಗ, ರಾಮಸೈನಿಕರು ಕೂಡ ಆ ಮಾಧ್ಯಮಗಳನ್ನೆಲ್ಲಾ ಕರೆಸುವುದರ ಜೊತೆಗೆ ಆ ಮಹಿಳೆಯರ ಹೆತ್ತವರನ್ನೂ ಕರೆದು ತರಬಹುದಿತ್ತು. ನಾವೇ ಹೊಡೀತೀವಿ ಅನ್ನಲು ಅವರಿಗೆ ಯಾರೂ ಅಧಿಕಾರ ಕೊಟ್ಟಿಲ್ಲವಲ್ಲ.

    ಬರ್ತಾ ಇರಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D