ಬೊಗಳೆ ರಗಳೆ

header ads

ಕೂಪಮಂಡೂಕಗಳ ಸಾಮೂಹಿಕ ವಿವಾಹೋತ್ಸವ

(ಬೊಗಳೂರು ಕೂಪಕಪ್ಪೆ ಬ್ಯುರೋದಿಂದ)
ಬೊಗಳೂರು, ಆ.23- ಮಂಗಳೂರು ಸಹಿತ ಕರ್ನಾಟಕದ ವಿವಿಧೆಡೆ ಭಾರಿ ಮಳೆಯಾಗುತ್ತಿರುವ ಸುದ್ದಿ ಇದ್ದರೂ ರಾತ್ರಿ ಜೀರುಂಡೆಗಳ ಝೀsssssssನ್ಕಾರಕ್ಕೆ ಕಪ್ಪೆಗಳ ವಟವಟ ವಾದ್ಯದ ಹಿಮ್ಮೇಳ ವಾದನವೇಕಿಲ್ಲ ಎಂದು ಬೆಚ್ಚಿ ಬಿದ್ದ ಬೊಗಳೆ ರಗಳೆ ಬ್ಯುರೋ ಸಿಬ್ಬಂದಿ ಈ ಬಗ್ಗೆ ಅನ್ವೇಷಣೆಗೆ ಹೊರಟಾಗ ಸಿಕ್ಕಿದ್ದು ಈ ಸುದ್ದಿ.
 
ಬೊಗಳೆಊರು ಸೇರಿದಂತೆ ಈ ಪ್ರದೇಶದಲ್ಲಿ ಕಪ್ಪೆಗಳೇ ಕಾಣಸಿಗುತ್ತಿಲ್ಲ. ಇದಕ್ಕೆ ಕಾರಣ? ಎಲ್ಲಾ ಕಪ್ಪೆಗಳೂ ಸಾಮೂಹಿಕವಾಗಿ ಪಶ್ಚಿಮ ಬಂಗಾಳದ ಜಲಪಾಯ್ಗುರಿ ಜಿಲ್ಲೆಗೆ ವಲಸೆ ಹೋಗಿವೆ ಮತ್ತು ಉಳಿದವು ಕೂಡ ಹೋಗತೊಡಗಿವೆ ಎಂಬ ಆಘಾತಕಾರಿ ಅಂಶ.
ಅಲ್ಲೇನು ನಡೆಯುತ್ತಿದೆ ಎಂದರೆ, ಬೇರೇನಲ್ಲ... ಅಲ್ಲಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಅದೇ... ಮಳೆಗಾಗಿ ಸಾಮೂಹಿಕ ಮಂಡೂಕ ವಿವಾಹ.
 
ಕೆಲವು ಕಪ್ಪೆಗಳು, ಈ ಬೊಗಳೂರಲ್ಲಿ ಹೇಗೂ ಮಳೆ ಬರುತ್ತಿದೆಯಲ್ಲ, ಬಂಗಾಳ ಕೊಲ್ಲಿಯ ಪಕ್ಕದಲ್ಲೇ ಇರುವ ಮಳೆ ಬಾರದ ಬಂಗಾಳದಲ್ಲಿ ನಮ್ಮ ಪವಾಡ ತೋರಿಸಿ ನಾವು ಕೂಡ ಕೂಪಮಂಡೂಕಗಳಾಗಿಯೇ ಇರುವ ಬದಲು ದೇವಮಾನವರಂತೆ ಭೂಪಮಂಡೂಕಗಳಾಗೋಣ ಎಂದುಕೊಂಡು ಅತ್ತ ಕಡೆಗೆ ಕುಪ್ಪಳಿಸುತ್ತಾ ಸಾಗಿದ್ದರೆ, ಮತ್ತೆ ಕೆಲವು ವಟವಟಗುಡುತ್ತಲೇ ಬಾಯಲ್ಲಿ ಅಂಟುದ್ರವ ಸುರಿಸುತ್ತಾ ಸಾಗುತ್ತಿದ್ದವು.
 
ಕಪ್ಪೆಗಳ ಕುಪ್ಪಳಿಕೆ ಹೆಜ್ಜೆಯ ಸಪ್ಪಳದ ಜಾಡು ಹಿಡಿದು ಮುನ್ನಡೆದಾಗ ಅನ್ವರ್ಥವಾಗಬೇಕಿದ್ದ ಹೆಸರು ಅಪಾರ್ಥವಾಗಿದ್ದ ಜಲಪಾಯ್ಗುರಿ ತಲುಪಿದೆವು. ಜಲ ಇರಬೇಕಾಗಿದ್ದ ಅಲ್ಲಿ ಮಳೆಯಿಲ್ಲದೆ ಜಲಕ್ಷಾಮವಿತ್ತು.
 
ಅಲ್ಲಲ್ಲಿ ಚಪ್ಪರ, ತಳಿರು ತೋರಣಗಳನ್ನು ಹಾಕಲಾಗಿತ್ತು. ವಿವಾಹಾಕಾಂಕ್ಷಿ ಕಪ್ಪೆಗಳ ಅಪ್ಪಂದಿರು ಚಪ್ಪರದಡಿ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು. ಅವರಲ್ಲೂ (ವಟ)ವಟದಕ್ಷಿಣೆಯ ಬಗ್ಗೆಯೇ ಮಾತುಕತೆ ನಡೆದಿತ್ತೆಂಬುದು ಆ ವಟವಟ ವಾಲಗ ಧ್ವನಿಯ ಮಧ್ಯೆ ಕೇಳಿ ಬಂದ ಸಂಗತಿ.
 
ಗಂಡು ಕಪ್ಪೆಗಳು ಇನ್ನು ಮುಂದೆ ಹೆಚ್ಚು ಹೆಚ್ಚು ಕುಪ್ಪಳಿಸದಂತೆ ಅಂಕುಶ ತೊಡಿಸಿ ಅವೆಲ್ಲಕ್ಕೂ ಮದುವೆ ನೆರವೇರಿಸಿ ಕೂಪಕ್ಕೆ ಹಾಕಿದ ಬಳಿಕ ವಧೂ-ವರರನ್ನು ನೀರಿಲ್ಲದ ಕೊಳವೊಂದಕ್ಕೆ ಬಿಡಲಾಯಿತು. ಅಷ್ಟರಲ್ಲಿ ವಟವಟ ಸದ್ದಿನಷ್ಟೇ ಜೋರಾಗಿ ಮಳೆ ಸುರಿಯಲಾರಂಭಿಸಿತು.
 
ಈ ಮಧ್ಯೆ, ಕಪ್ಪೆಗಳೆಲ್ಲಾ ಸಂಸಾರ ಸಾಗಿಸುತ್ತಾ ಸುಖವಾಗಿರಲು, ಒಂದು ದಿನ ಅವುಗಳ ಮಧ್ಯೆ ವಿರಸ ಏರ್ಪಟ್ಟಿತು. ತನ್ನ ಅನುಮತಿ ಪಡೆಯದೆಯೇ ಅಷ್ಟೊಂದು ಮೊಟ್ಟೆಗಳನ್ನು ನೀರಿಗೆ ಬಿಟ್ಟದ್ದೇಕೆ ಎಂದು ಗಂಡು-ಹೆಣ್ಣು ಕಪ್ಪೆಗಳ ಮಧ್ಯೆ ಜಗಳ ಆರಂಭವಾಯಿತು. ತಾನು ಇಟ್ಟ ಅಷ್ಟೂ ಮೊಟ್ಟೆಗಳನ್ನು ಬೇರೆಯವರಿಗೆ ತಿನ್ನಲು ಕೊಟ್ಟಿದ್ದೇಕೆ ಎಂಬುದು ವಧೂಕಪ್ಪೆಯ ಆಕ್ರೋಶ.
 
ಕೆಲವು ಮಂಡೂಕ ದಂಪತಿಗಳ ಕಲಹಕ್ಕೆ ಈ ವಿಷಯ ಕಾರಣವಾದರೆ, ಮತ್ತೆ ಕೆಲವು ಕಪ್ಪೆಗಳ ಅಪ್ಪಗಳು ವಟದಕ್ಷಿಣೆಗಾಗಿ ತಗಾದೆ ಎಬ್ಬಿಸಿದ ಪರಿಣಾವಾಗಿ ಒಂದೊಂದೇ ಕಪ್ಪೆಗಳು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವು. ವಿವಾಹ ವಿಚ್ಛೇದನವಾಗತೊಡಗಿದಂತೆಯೇ ಆ ಊರಿನಲ್ಲಿ ಮಳೆ ಕಡಿಮೆಯಾಯಿತು. ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಾಗ ಮಳೆಯೂ ನಿಂತೇ ಬಿಟ್ಟಿತು.
 
ಒಟ್ಟಿನಲ್ಲಿ ಆ ಊರಿನವರಿಗೆ ಮಳೆಯಿಲ್ಲ, ಈ ಊರಿನಲ್ಲಿ ಕಪ್ಪೆಗಳಿಲ್ಲ ಎಂಬ ಪರಿಸ್ಥಿತಿ.
 
ಕಪ್ಪೆಗಳೆಲ್ಲಾ ಭ್ರಮನಿರಸನಗೊಂಡು ಒಂದೊಂದಾಗಿ ಮರಳತೊಡಗಿವೆ ಎಂಬುದು ಈ ಸುದ್ದಿ Post ಮಾಡುವ ವೇಳೆಗೆ ಬಂದ ಸುದ್ದಿ.
 
ಸೂಚನೆ: ಕಪ್ಪೆಗಳ ಮದುವೆಯ ವೀಡಿಯೋ ಶೂಟಿಂಗ್ ಚಿತ್ರ ಇಲ್ಲಿದೆ. ವಿವಾಹದ ಫೋಟೋ ಇಲ್ಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಕಪ್ಪೆಗಳ ಮದುವೆ ಬಗ್ಗೆ ಎಷ್ಟೆಲ್ಲಾ ಮಾಹಿತಿ ಸಂಪಾದಿಸಿದ್ದೀರಿ. ಅಂದ ಹಾಗೆ ನಿನ್ನೆ ರಾತ್ರಿ ನಿದ್ರೆ ಮಾಡ್ಲಿಲ್ವಾ?

    ಇನ್ನೊಂದು ಸಣ್ಣ ಸಂಶಯ. ನಿನ್ನೆಯ ವಿಚಿತ್ರಾನ್ನ ಅಂಕಣದಲ್ಲಿ ಉಂಗುರದ ಬಗ್ಗೆ ಜೋಷಿಗಳು ಪ್ರಸ್ತಾಪಿಸಿದ್ದರು. ಕಪ್ಪೆಗಳು ಮದುವೆ ಆಗುವಾಗ ಉಂಗುರವನ್ನು ಎಲ್ಲಿಗೆ ತೊಡಿಸುವುವು (ಗಂಡು ಹೆಣ್ಣಿಗೆ, ಹೆಣ್ಣು ಗಂಡಿಗೆ). ಆ ಉಂಗುರಕ್ಕೂ ಮೊಟ್ಟೆಗಳಿಗೂ ಏನಾದರೂ ಸಂಬಂಧವಿದೆಯೇ?

    ಮಂಡೂಕ ಪರಿಷತ್ತಿನವರು ಈ ವರ್ಷದ ಗೌರವ ಡಾಕ್ಟರೇಟ್ ಅನ್ನು ಮಾನ್ಯ ಅಸತ್ಯರಿಗೆ ಪ್ರದಾನಿಸುತ್ತಿದ್ದಾರೆಂದು ವದಂತಿ ಬಂದಿದೆ. ಇದು ನಿಜವೇ. ಹಾಗಿದ್ರೆ ನಮಗೆ ಎಲ್ಲಿ ಪಾರ್ಟಿ ಕೊಡಿಸುವಿರಿ (ಬಾವಿಯಲ್ಲಿ ಮಾತ್ರ ಬೇಡ, ಕಪ್ಪೆಗಳು ಕಾಲೆಳೆಯುತ್ತವೆ).

    ಪ್ರತ್ಯುತ್ತರಅಳಿಸಿ
  2. ಕಪ್ಪೆಗಳಿಗೆ ಯಾರು ಕೂಡ ಉಂಗುರ ಹಾಕೋದೇ ಇಲ್ಲ...
    ಯಾಕಂದ್ರೆ ಅವು ಕುಪ್ಪಳಿಸಿದಾಗ ಉಂಗುರ ಎಲ್ಲೋ ಹೋಗಿರುತ್ತದೆ ಎಂದು ನೆಪ ಹೇಳಿ ಕಪ್ಪೆಗಳ ಉಂಗುರಕ್ಕೆ ಎಂದು ಹಣ ಪಡೆದು ನಮ್ ರಾಜಕಾರಣಿಗಳು ಉಂಗುರ ನುಂಗುರ!!

    ಅಗೌರವ ಡಾಕ್ಟರ ಏಟಿಗೆ ಪಾರ್-ಟೀಯೇ?
    ಪಬ್ಬಿಗೆ ಬನ್ನಿ ಅಂತ ಅನಾನಸ್ ಪಬ್ಬಿಗರು ಕರೆಯುವ ಸಾಧ್ಯತೆಗಳಿವೆ. ಕಾಯೋಣ...

    ಪ್ರತ್ಯುತ್ತರಅಳಿಸಿ
  3. ಇದೀಗ ಬಂದ ಸುದ್ದಿ..
    ಆ ನವವಿವಾಹಿತ ಕಪ್ಪೆಗಳು ಹನಿಮೂನ್‍ಗೆಂದು ಮುಂಬೈನ ಸಿಹಿ ನೀರ ಸಮುದ್ರದ ಕಡೆ ಹೊರಟಿವೆ ಅಂತೆ.ಅವುಗಳಿಗೆ ಯಾರಾದರೂ ಮಾವಿನರಸರು ಸಿಹಿ ನೀರಿನ ಬಗ್ಗೆ ಬ್ಲಾಗ್‍ನಲ್ಲಿ ಬರೆದದನ್ನು ಓದಿ ಹೇಳಬಾರದೇ?

    ಅಂದಾಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ನೆಗೆಯುವ ನಮ್ಮ ಖಾದಿದಾರಿ ಕಪ್ಪೆಗಳು ಈ ಸುದ್ದಿ ಕೇಳಿ ಆ ಕಪ್ಪೆಗಳ ಬದಲು ನಮಗೆ ಶಾಂತಿ ಮಾಡಿದ್ದರೆ ಮಳೆ ಬರ್ತಾ ಇತ್ತು ಅಂತಾ ಬೊಗಳೆ ಬ್ಯುರೋದ ಅಖಚಿತ ಮೂಲದಿಂದ ತಿಳಿದುಬಂದಿದೆ

    ಪ್ರತ್ಯುತ್ತರಅಳಿಸಿ
  4. ಶಿವ್ ಅವರೆ,
    ಮುಂಬಯಿಗೆ ಹನಿಮೂನಿಗೆ ತೆರಳಿದ ಕಪ್ಪೆಗಳು ಅಲ್ಲಿ ನೀರು ಸಿಹಿಯಾಗಿದ್ದುದರಿಂದ ಹನಿ ಮಾತ್ರ ತಿಂದವು, ಮೂನ್ ಮೂನ್ ಸೇನ್ ಸಿಗಲೇ ಇಲ್ಲವಂತೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D