ಬೊಗಳೆ ರಗಳೆ

header ads

OBC ಸರ್ಟಿಫಿಕೆಟ್ ಬಿಕರಿ

(ಬೊಗಳೂರು ಮೀಸಲಾತಿ ಬ್ಯುರೋದಿಂದ)
ಬೊಗಳೂರು, ಜೂ.19- ಮೀಸಲಾತಿ ಪರವಾಗಿ ಬೊಗಳೆ ಬ್ಯುರೋದ ಜತೆಗೆ ನಮ್ಮ ಪ್ರೇರಕ ಪತ್ರಿಕೆ ಮಜಾವಾಣಿ ಬ್ಯುರೋ ಕೂಡ ಕೈಜೋಡಿಸಿರುವುದರಿಂದ ಇರುವೆ ಬಲ ಬಂದಂತಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟು ತೀವ್ರಗತಿಯ ತನಿಖೆ ನಡೆಸಿದ ಬೊಗಳೆ ಬ್ಯುರೋಗೆ ಮತ್ತಷ್ಟು ಅಸತ್ಯದ ತಲೆ ಮೇಲೆ ಹೊಡೆಯುವ ಸಂಚುಗಳ ಬಗ್ಗೆ ತಿಳಿಯಿತು.

ಕೇಂದ್ರ ಸಂಪತ್ತಿನ ಮೂಲದ ಸಚಿವ ದುರ್ಜನ್ ಸಿಂಗ್ ಅವರು OBC ಪರವಾಗಿ ಮೀಸಲಾತಿಗೆ ಬಲವಾಗಿ ಹೋರಾಟ ಮಾಡುತ್ತಿರುವುದರ ಹಿಂದೆ ಅವರಿಗೇ ಮೀಸಲಾತಿ ಪಡೆಯುವ ಪರಮಗುರಿಯೇ ಕಾರಣ ಎಂಬ ಅಂಶ ಇಲ್ಲಿ ಬಯಲಾಗಿದೆ.

ಒಂದೆಡೆ ಹೆಚ್ಚಿಸಿದ "ಖೋಟಾ" ಸೀಟುಗಳಿಗೆ ಸಾಕಷ್ಟು ಬಾಚಿಕೊಂಡು ಸೂಕ್ತ ಜಾಗ ಮಾಡುವುದು ಹೇಗೆ ಎಂದು ಬೀರ್‌ಅಪ್ಪ ಮೂಗಿಲಿ ಅವರು ತಲೆಯನ್ನು ರಪರಪನೆ ಕೆರೆದುಕೊಳ್ಳುತ್ತಿದ್ದರೆ, ಹೇಗಾದರೂ ಮಾಡಿ ಈ ದೇಶದಲ್ಲಿ ನಾವೂ ಬದುಕಬೇಕು, ಅದಕ್ಕಾಗಿ OBC ಸರ್ಟಿಫಿಕೆಟ್ ಪಡೆದುಕೊಳ್ಳಬೇಕೆಂದು ಘೋರವಾಗಿ ಚಿಂತಿಸುತ್ತಿರುವವರಿಗೆ ಸರಕಾರ ಈ ರೀತಿ ಸಹಾಯ ಮಾಡಲು ಹೊರಟಿರುವುದು ಸರಕಾರದ ಜನಪರ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ವಿಶ್ಲೇಷಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಜಾತ್ಯಾಧಾರಿತ ರಾಷ್ಟ್ರ ಎಂಬ ಬಿರುದು ದೊರಕಿಸಿಕೊಡುವುದೇ ನಮ್ಮ ಮೂಲ ಗುರಿ ಎಂದು ಈಗಾಗಲೇ ಸರಕಾರ ಸ್ಪಷ್ಟಪಡಿಸಿದೆ.

ಅಟಲ್ ಬಿಹಾರಿ ವಾಜಪೇಯಿ, ಪ್ರಕಾಶ್ ಕಾರಟ್, ರಾಜನಾಥ್ ಸಿಂಗ್ ಹಾಗೂ ಅರ್ಜುನ್ ಸಿಂಗ್‌ರಂಥವರಿಗೇ ಒಂದೇ ಕ್ಷಣದಲ್ಲಿ OBC ಸರ್ಟಿಫಿಕೆಟ್ ದೊರಕಿಸಿಕೊಳ್ಳಬಹುದು ಎಂಬ ಅಂಶವನ್ನು ಇಂಡಿಯನ್ ಎಕ್ಸ್ ಪ್ರೆಸ್ ರೈಲು ಜೂ.17ರ ಮುಖಪುಟದಲ್ಲಿ ತನಿಖಾ ವರದಿ ಪ್ರಕಟಿಸಿ ಭಾರತೀಯರಿಗೆ ಬದುಕಲು ದಾರಿಯೊಂದನ್ನು ತೋರಿಸಿತ್ತು.

ಮಜಾವಾಣಿ ಹೋರಾಟ

ಈ ಮಧ್ಯೆ, ಬೊಗಳೆ-ರಗಳೆಯ ನೆಟ್ಟೊದೆತಗಳ ಸಂಖ್ಯೆ ಒಂದೇ ಸಮನೆ ಹೆಚ್ಚಾದ ಕಾರಣ ಬ್ಯುರೋದಲ್ಲಿ ಭೂಕಂಪನದ ಅನುಭವವಾದ ಕಾರಣ ಅದರ ಹಿನ್ನೆಲೆ ಶೋಧಿಸಹೊರಟಾಗ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ.

ಯಾರಿಂದಲೂ ಹಣ ಪಡೆಯದೆ ಅಸತ್ಯಾನ್ವೇಷಿ ನಡೆಸಿದ ತನಿಖೆ ವೇಳೆ, ಬ್ಲಾಗಿಸುವವರಿಗೂ ಶೇ.27 ಮೀಸಲಾತಿ ಬೇಕು ಅಂತ ಹೋರಾಟ ಮಾಡುತ್ತಿರುವ ಮಜಾವಾಣಿ ಬ್ಯುರೋದ ವಿಷಾದಾಂಕದ ಮೂಲಕವೇ ಈ ಹಿಟ್ಟುಗಳು (ನೆಟ್ಟೊದೆತಗಳು) ಬಂದಿದ್ದವು ಅಂತ ತಿಳಿಯಿತು.

ಇಡೀ ನೆಟ್ಟೋದುಗರನ್ನು ನಗೆಯ ನೆಟ್ಟಿನಲ್ಲಿ ಸಿಲುಕಿಸಿ, ಅವರ ಮನದ ದುಗುಡವನ್ನು ಒಂದೇ ವಾಕ್ಯದ ಡೋಸ್ ನೀಡಿ, ಅರೆಕ್ಷಣದಲ್ಲಿ ನಿವಾರಿಸುತ್ತಾ, ನೆಟ್ಟಿಗರಿಗೆ ಗಟ್ಟಿಗತನದ ನಗೆಯ ಅಮಲೇರಿಸಿದ್ದ ಮತ್ತು ಅಮಲೇರಿಸುತ್ತಲೇ ಇರುವ ಮಜಾವಾಣಿ ಬ್ಯುರೋ, ಬೊಗಳೆ-ರಗಳೆ ಉತ್ತಮ ಗುಣಮಟ್ಟದ್ದು, ಜನಪ್ರಿಯ ಎಂಬಿತ್ಯಾದಿ ಇಲ್ಲ ಸಲ್ಲದ ಅಪಾದನೆಗಳನ್ನು ಮಾಡಿಯಾದರೂ ಮೀಸಲಾತಿ ಪಡೆಯಬೇಕು ಎಂಬ ಕಾರಣಕ್ಕೆ ಮೀಸಲಾತಿ ಪರ ಹೋರಾಟ ಕಣಕ್ಕಿಳಿದಿದೆ ಎಂದು ತಿಳಿದುಬಂದಿದೆ.

ಈ ಕಾರಣಕ್ಕೆ ಮಜಾವಾಣಿ ಬ್ಯುರೋ ಸಂಪಾದಕರೂ, ಪ್ರಕಾಶಕರೂ, ಓದುಗರೂ, ವರದಿಗಾರರೂ ಮತ್ತು ಎಲ್ಲವೂ ಆಗಿರುವ ವಾರ್ತಾವಿದೂಷಕರಿಗೆ ನೆಟ್ಟೊದೆತಗಳಿಗೆ ಪ್ರತಿಯಾಗಿ ಸಾವಿರ ನಮನಗಳನ್ನು ಕೊಡಲು ಏಕಸದಸ್ಯ ಬೊಗಳೆ ರಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಈ ಲೇಖನ ಓದುತ್ತಿದ್ದಂತೆಯೇ ನನಗೆ ಬವಳಿ ಬಂದಿತು. (ನನಗೆ ಅಪಸ್ಮಾರವಿದೆಯೇ ಎಂದು ಪರೀಕ್ಷಿಸಲು ಮೀಸಲಾತಿಯಿಂದ ನಪಾಸಾದ ವೈದ್ಯರ ಬಳಿಗೆ ಹೋಗುತ್ತಿರುವೆ).

    ನಮ್ಮ ದೇಶ ಇಷ್ಜು ಮುಂದುವರಿದಿದೆಯೇ? ಕ್ಷಣ ಮಾತ್ರದಲ್ಲಿ ಸರ್ಟಿಫಿಕೇಟ್?

    ಮತ್ತೊಂದು ಸಂತೋಷದ ಸಮಾಚಾರವೆಂದರೆ ಮಜಾವಾಣಿ ಮತ್ತು ಬೊಗಳೆರಗಳೆ, ಈ ಎರಡೂ ಏಕಸ್ವಾಮತ್ವದ ಚಕ್ರಾಧಿಪತಿಗಳು, ತಮ್ಮ ತಮ್ಮ ಸ್ಥಾನಗಳಲ್ಲಿ ತಳ ಊರುತ್ತಿರುವುದು. ಈ ಎರಡೂ ತಾಣಗಳಿಗೆ ನೆಟ್ಟೊದೆತ ಕೊಡುವುದುಕ್ಕೆ ನಮ್ಮ ಕಡೆಯ ಜನಗಳನ್ನು ಕಳುಹಿಸುವೆ.

    ಜೈ ಭಜರಂಗ ಬಲಿ

    ಪ್ರತ್ಯುತ್ತರಅಳಿಸಿ
  2. ಇನ್ನೂ ಯಾವ ಲೋಕದಲ್ಲಿದ್ದೀರಿ ಮಾವಿನಸವಿಯವರೆ,
    ದೇಶ ಇಷ್ಟು ಮುಂದುವರಿದಿದ್ರೆ ದೇಶ ನಡೆಸೋರು ಬದುಕಬೇಕಲ್ವ!

    ಆ ಮೇಲೆ
    ಮಜಾವಾಣಿಗೆ ಹೋಲಿಸಿದರೆ ನಮ್ಮ ಚಕ್ರ ಚಿಕ್ಕದು. ಅದು ಏಕಸ್ವಾಮ್ಯದ್ದಾದರೂ ತ್ರಿಲೋಕಮಾನ್ಯವಾಗಿದೆ. ಅದರ ಹಿಂದೆ ಈ ಬೊ.ರ. ಮಗು ಬೋರಲಾಗಿ ಬೀಳುತ್ತಾ ಏಳುತ್ತಾ ನಿಧಾನವಾಗಿ ಬರ್ತಾ ಇದೆ.

    ನೀವು ಭಜರಂಗಬಲಿಯ ಗದೆ ತಂದು ನೆಟ್ಟೊದೆತ ಕೊಟ್ರೆ ಭಜರಂಗ ಬಲಿಯ ಟೆಂಪಲ್ ಆಧಾರದಲ್ಲಿರುವ ಈ ಬೊಗಳೆಯ ಟೆಂಪ್ಲೇಟ್ ಫಟಾಫಟ್ ಅಂದ್ಬಿಟ್ರೆ?

    ಪ್ರತ್ಯುತ್ತರಅಳಿಸಿ
  3. ಎನ್ ಅನ್ಯಾಯ ಇದು..ಇಂಡಿಯನ್ ಎಕ್ಸ್‍ಪ್ರೆಸ್ ಸಂಪಾದಕರಿಗೆ ಮತ್ತು ವರದಿಗಾರರಿಗೆ ಬೇಕಿದ್ದರೆ ಅವರಿಗೆ ಬೇಕಾದ ಜಾತಿ ಪತ್ರ ಕೊಡುಸ್ತ್ತಾ ಇದ್ದಿವಿ. ಎನೋ ಒಂದು ೫ ರೂಪಾಯಿ ಜಾಸ್ತಿ ಕೇಳಿದರೂ ಅಂತ ಎಲ್ಲ ಒಪನ್ ಮಾಡೋದ..ಸ್ಪಲ್ಪನೂ ನಿಯತ್ತು ಅನ್ನೋದೆ ಇಲ್ಲವಾಗಿದೆ..

    ಬೊಗಳೇ ಅವರೆ, ನಿಮ್ಮ ಹೋರಾಟಕ್ಕೆ ನಮ್ಮ ನಿಮ್ಮ ನೆಟ್ ಒದೆತಗಳಿಗೆ ನನ್ನ ಕಡೆಯಿಂದ ಒಂದು ತಗೋಳ್ಳಿ..ನೀವು ಹಿಂಗೆ ಬರಿತಿದ್ದರೆ ಹಿಂಗೆ ಒದೆತ ಜಾಸ್ತಿ ಅಗುತ ಇರುತ್ತೆ..ಹಿಂಗೆ ಮುಂದುವರಿಲು ನೆಟ್ಟೊದೆತಗಳು !

    ಪ್ರತ್ಯುತ್ತರಅಳಿಸಿ
  4. ಏನಾದ್ರೂ ಉತ್ತರ ಪ್ರದೇಶವೇ ವಾಸಿ. ಅಲ್ಲಿ ಒಂದು ಸರ್ಟಿಫಿಕೆಟ್‌ನ ಬೆಲೆ ಕೇವಲ 300ರೂ. ಬೆಂಗಳೂರಿನಲ್ಲಾದರೋ ಕನಿಷ್ಠ 2000ರೂ. ಕೊಡಬೇಕು. ಈ ಐಟಿಯವರ ಹಾವಳಿಯಿಂದಾಗಿ ಬೆಂಗಳೂರಿನಲ್ಲಿ ಪ್ರತಿಯೊಂದಕ್ಕೂ ತುಂಬ ದುಡ್ಡು ಕೊಡಬೇಕಾಗಿದೆ. ಸುಳ್ಳು ಸರ್ಟಿಫಿಕೇಟ್ ಪಡೆಯಲು ಕೊಡುವ ಲಂಚದಲ್ಲೂ ಒಬಿಸಿಗಳಿಗೆ 27%ರಷ್ಟು ಮಾತ್ರ ಲಂಚ ಕೇಳತಕ್ಕದ್ದು ಎಂದು ಕಾನೂನು ಮಾಡಲು ಬೆಂಗಳೂರಿನ ಒಬಿಸಿಗಳು ಚಳವಳಿ ನಡೆಸಲು ಹೊರಟಿರುವುದು ನಂಬಲನರ್ಹ ಮೂಲಗಳಿಂದ ತಿಳಿದುಬಂದಿಲ್ಲ.

    - ಪಬ್

    ಪ್ರತ್ಯುತ್ತರಅಳಿಸಿ
  5. ಓ ಶಿವ್ ಅವರೆ,
    ಯಾರಿಗೆ ನಿಯತ್ತು? ನಮಗೊ, ಎಕ್ಸ್-ಪ್ರೆಸ್ ನೋರಿಗೋ?

    ಸ್ವಲ್ಪ ಮೆಲ್ಲಗೆ ಒದೀರೀ.... ಬೊಗಳೆ ಗುಳ್ಳೆ ಒಡೆದೀತು..!

    ಪ್ರತ್ಯುತ್ತರಅಳಿಸಿ
  6. ಪಬ್ಬಿನಲ್ಲಿ ಕುಳಿತು ಅನಾನಸ್ ಹೀರುತ್ತಾ ಕುಳಿತಿರುವವರೇ,

    ದಯವಿಟ್ಟು ನಿಮ್ಮ ಅನನಾಸ್ ಎಂಬ ಹೆಸರು ಬದಲಿಸಿಕೊಳ್ಳಿ. ಯಾಕಂದ್ರೆ ಇತ್ತೀಚೆಗೆ ಆ ಹೆಸರಿನಿಂದ ಕಾಮೆಂಟಿಸುವವರ ಸಂಖ್ಯೆ ಜಾಸ್ತಿ ಆಗ್ತಿದೆ. ಅದಕ್ಕೂ ಮೀಸಲಾತಿ ಬಂದುಬಿಟ್ಟರೆ?

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D