ಬೊಗಳೆ ರಗಳೆ

header ads

ಮಾರಿಗೆ ಕೊಟ್ಟಿದ್ದು ಲವ್ ಲೆಟರ್ ಅಲ್ಲ!

(ಬೊಗಳೂರು ಅನಾರೋಗ್ಯ ಬ್ಯುರೋದಿಂದ)
ಬೊಗಳೂರು, ಜೂ.26- ತೀವ್ರ ಕೆಲಸದ ಒತ್ತಡವಿರುವಾಗಲೂ ರಜೆಯನ್ನೇ ಹಾಕದೆ ಅಸತ್ಯಾನ್ವೇಷಿ ಕಾಲು ಸವೆಸಿದ್ದು ಭಾರತದಿಂದ ಹೊರಗೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಕೋಮು ಘರ್ಷಣೆಯೇ ನಡೆದಿಲ್ಲ ಏಕೆ ಎಂಬ ಅಚ್ಚರಿಯು ಕಾಡಿದ್ದೇ ಈ ಪಯಣಕ್ಕೆ ಕಾರಣ.

ಅಚ್ಚರಿಯ ಹಿನ್ನೆಲೆಯೂ ಅಚ್ಚರಿಯಾಗಿದೆ. ಸಿಂಧ್ ಪ್ರಾಂತ್ಯದ ಶಾಸಕನೊಬ್ಬ ಸದನದಲ್ಲೇ ಶಾಸಕಿಗೆ ಪ್ರೇಮ ಪತ್ರ ಕೊಟ್ಟು ಸಿಕ್ಕಿಹಾಕಿಕೊಂಡಿದ್ದ ವರದಿ ಇಲ್ಲಿ ಪ್ರಕಟವಾಗಿತ್ತು. ಹಿನ್ನೆಲೆ ಶೋಧಿಸಿದಾಗ ಆತ ಹಿಂದು, ಆಕೆ ಮುಸ್ಲಿಂ. ಆದರೂ ಭಾರತದ ಅರಾಜಕಾರಣಿಗಳಂತೆ ಅಲ್ಲಿ ಯಾರೂ ಈ ವಿಷಯವನ್ನು ಕೋಮು ಸಂಘರ್ಷಕ್ಕೆ ತಿರುಗಿಸಿಲ್ಲವೇಕೆ ಎಂಬುದೇ ಬೊಗಳೆ ರಗಳೆ ಬ್ಯುರೋ ಅರಿವಿಗೆ ಬಾರದ ಅಸತ್ಯ. ಇಲ್ಲಿನವರು ರಾಜಕಾರಣಿಗಳಾಗಲು ನಾಲಾಯಕ್ಕು, ಅವರಿಗೆ ಭಾರತದಲ್ಲಿ ತರಬೇತಿ ಕೇಂದ್ರ ಆರಂಭಿಸಬೇಕು ಎಂಬ ಹೊಸ ಯೋಚನೆಯೂ ಬಾರದಿರಲಿಲ್ಲ.

ಈಶ್ವರ ಅಂದರೆ ಕಾಮದಹನ ಮಾಡಿದವನಲ್ವೆ, ಆತ ಕೂಡ ಕೈಲಾಸದಲ್ಲೇ ಇರೋದಲ್ವೆ ಎಂಬ ಆತಂಕದಿಂದಲೇ ಅಲ್ಲಿಗೆ ಹೋದಾಗ ತಿಳಿದು ಬಂದಿದ್ದು, ಇದು ನೀಲವರ್ಣದ, ಪಾರ್ವತಿಪತಿ ಶಿವನಲ್ಲ. ಇದು ಲಾಲ್ ಬಣ್ಣದ ಈಶ್ವರನ ಕಿತಾಪತಿ ಅಂತ. ಈ ಈಶ್ವರ ಲಾಲ್ ಹೋಗಿ ಹೋಗಿ ಮಾರಿಗೆ ಲವ್ ಲೆಟರ್ ಕೊಡೋದೇ?

ನಾರಿ ಮುನಿದರೆ ಮಾರಿ ಅಂತ ಕೇಳಿದ್ದೀರಿ, ಆದರೆ ನೇರವಾಗಿ ಮಾರಿಗೇ ನೀವು ಈ ಥರ ಲವ್ ಲೆಟರ್ ಕೊಟ್ಟಿದ್ದೇಕೆ ಎಂಬ ಅಸತ್ಯಾನ್ವೇಷಿಯ ಪ್ರಶ್ನೆಗೆ ಉತ್ತರಿಸಿದ ಈಶ್ವರ, ಏನಿಲ್ಲ, ನಾನು ಸುಮ್ಮನೆ ಮಾರಿ ಬಿಸ್ಕಿಟ್ ತಿನ್ತಾ ಇದ್ದೆ. ಅದರ ಪೊಟ್ಟಣ ಖಾಲಿಯಾದಾಗ ಗುಮಾಸ್ತನ ಕೈಲಿ ಅದನ್ನು ಕೊಟ್ಟೆ, ಆದ್ರೆ ಅದರಲ್ಲಿ ಮಾರಿ ಅಂತ ಮುದ್ರಿತ ಅಕ್ಷರಗಳಿದ್ದುದರಿಂದ ಆ ಗುಮಾಸ್ತ ಅದನ್ನು ಓದಿ ಶಾಜಿ ಮಾರಿಗೆ ಕೊಟ್ಟೇಬಿಟ್ಟ ಎಂದು ಸಮರ್ಥಿಸಿಕೊಂಡ!

ಹಾಗಿದ್ರೆ ಕಳೆದೊಂದು ವರ್ಷದಿಂದ ನೀವು ಎಸ್ಎಂಎಸ್ ಕಳಿಸ್ತಾ ಇದ್ದೀರಿ ಅಂತ ಅವಳು ಆಪಾದಿಸಿದ್ದಾಳಲ್ಲ ಎಂದು ಕೇಳಿದಾಗ, ಹಾಗೇನೂ ಇಲ್ಲ, ಕೈಯಲ್ಲಿ ಮೊಬೈಲ್ ಇತ್ತು. ಕಾಲೇಜಿನಲ್ಲಿದ್ದಾಗಲೂ ಇದ್ದಬದ್ದವರಿಗೆ ಎಸ್ಎಂಎಸ್ ಫಾರ್ವರ್ಡ್ ಮಾಡ್ತಿದ್ದೆ, ಅದೇ ರೀತಿ ಈಗಲೂ ನನ್ನ ಮೊಬೈಲಿನಲ್ಲಿದ್ದ ಎಲ್ಲಾ ನಂಬರಿಗೂ ನಾನು ಎಸ್ಎಂಎಸ್ ಕಳಿಸ್ತಾ ಇದ್ದೆ. ಆಕೆಯದು ಯಾವ ಡಬ್ಬಾ ಮೊಬೈಲೋ ಏನೋ, ನಾನು ಕಳಿಸಿದ ಶಾರ್ಟ್ ಮೆಸೇಜನ್ನು ಇನ್ನಷ್ಟು ಶಾರ್ಟ್ ಮಾಡಿಸಿ ಆಕೆ ಅಪಾರ್ಥವಾಗುವಂತೆ ಮಾಡಿಬಿಟ್ಟಿದೆ ಅಂತ ನೋ-(ಕುಛ್ ಭೀ ನಹೀಂ)ಕಿಯಾ ಕಂಪನಿ ವಿರುದ್ಧ ಕೆಂಡ ಕಾರಿದರು.
ಃಃಃಃಃಃಃಃಃಃಃಃಃಃಃಃಃಃಃಃ
ನೆಟ್ಟೊದೆತಗಳು 4000 ದಾಟಿದ ಕಾರಣ ಒತ್ತಡ ತಾಳಲಾರದೆ ಚಿಕಿತ್ಸೆ ಅಗತ್ಯ ಅಂತ ವೈದ್ಯರು ಸೂಚಿಸಿದ್ದಾರೆ. ಇದಕ್ಕಾಗಿ ನಾಳೆ ಚಿಕಿತ್ಸೆಯ ಕುರಿತು ವಿವರಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಹಿಂದು ಮುಸ್ಲಿಂ ಹುಡುಗ ಹುಡುಗಿಯಲ್ಲಿ ವೈಮನಸ್ಯ ಬರೋಕ್ಕೆ ಛಾನ್ಸೇ ಇಲ್ಲ. ಯಾಕೆಂದರೆ (ನಮ್ಮ ಬೀರುವಿನ ಸಂಶೋಧನೆ) ಪ್ರೀತಿಸುತ್ತಿದ್ದಂತೆಯೇ ಅವರಿಬ್ಬರೂ ಕುರಿಸ್ತಾನರಾಗುವರು (ಗಂಡು ಕುರಿಯಾದರೆ ಹೆಣ್ಣು ಕುರುಬಿ). ಇದರ ಹಿಂದೆ ಅಮೆರಿಕೆಯ ಶುಬ್ಬಣ್ಣನ ಕಿತಾಪತಿ ಇದೆ ಎಂಬುದೂ ತಿಳಿದುಬಂದಿದೆ. ಕಾಪಿಗಳು ಡಾಲೆನ್ ಜೊತೆ ಸೇರುತ್ತಿದ್ದಾರೆ ಎಂದು ಈ ತಂತ್ರ ಉಪಯೋಗಿಸುತ್ತಿದ್ದಾರೆ. ಇನ್ನೂ ಹಲವು ಜೋಡಿಗಳು ಹೀಗೆಯೇ ಮದುವೆ ಆಗುವರೆಂದೂ ತಿಳಿದುಬಂದಿದೆ.

    ೪,೦೦೦ ನೆಟ್ಟೊದೆತಗಳಾದ್ರೂ ಇನ್ನೂ ನಿಲ್ಲೋಕೆ ಶಕ್ತಿ ಇದೆ ಅಂದ್ರೆ ನಿಮ್ಮನ್ನು ಪ್ರಶಂಸಿಸಲೇಬೇಕು. ಇದಕ್ಕೆ ನೀವು ದಿನ ಏನು ತೆಗೆದುಕೊಳ್ತಿದ್ದೀರಿ (ಹೊಟ್ಟೆಗೆ ಸ್ವಾಮಿ ಇನ್ನೆಲ್ಲಿಗೂ ಅಲ್ಲ).

    ಮಹತ್ವದ ಸುದ್ದಿ ಬಿತ್ತರಿಸಿದುದ್ದಕ್ಕೆ ನನ್ನಿಂದೊಂದು ಒದೆ (ಕ್ಷಮಿಸಿ ವಡೆ).

    ಪ್ರತ್ಯುತ್ತರಅಳಿಸಿ
  2. ಪ್ರೇಮಪತ್ರಾನ್ವೇಶಿಗಳು, ಪಕಸ್ತಾನಕ್ಕೆ ತೆರಳಿ, ಸುದ್ದಿ ತಂದದಕ್ಕೆ ವಂದನೆಗಳು. ಕೆಂಪಣ್ಣ, ಮಾರಿಗೆ ಸಾರಿ(ಬಹಿರಂಗವಾಗಿ) ಕೇಳಿದ್ದರೆ , ಸಾಕೀ ವಸ್ತ್ರಾಂತ್ ಥರಹ ಕ್ಷಮಿಸುತ್ತಿದಳೊ ಏನೊ?

    ೪೦೦೦ ನೆಟ್ಟೊಡೆತಕ್ಕೆ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  3. ಮಾವಿನರಸರೆ,

    ಇಷ್ಟೊದೆತ ತಿಂದೂ ನೆಟ್ಟಗಿರುವುದಕ್ಕೆ ನೆಟ್ಟೋದುಗರು ಬಿಟ್ಟೋಡಿದ ಅಭಿಮಾನದ ಕೇಕ್ ತೆಗೆದುಕೊಳ್ಳುತ್ತೇವೆ.

    ನಿಮ್ಮ ಬೀರುವಿನಲ್ಲಿರುವ sum ಮಾತ್ರ ಕಳಿಸಿಕೊಡಿ. ಶೋಧನೆ ಮತ್ತೆ ನೋಡಿಕೊಳ್ಳೋಣ.

    ಪ್ರತ್ಯುತ್ತರಅಳಿಸಿ
  4. ಲೀಫಾಕ್ ಮಾನಸಪುತ್ರರೇ,

    ನಳಪಾಕಸ್ತಾನದಲ್ಲಿ ನಳ ಮಾತ್ರ ಸಿಗುತ್ತಾರೆ, ದಮಯಂತಿ ಇಲ್ಲವಂತೆ.

    ನಿಮ್ಮ ನೆಟ್ಟೊದೆತ ದಿಂದ ನೆಟ್ ಒಡೆಯದಿದ್ದರೆ ಸಾಕು !
    ಧನ್ಯವಾದ.

    ಪ್ರತ್ಯುತ್ತರಅಳಿಸಿ
  5. ನಾರಿ ಮುನಿದರೆ ಮಾರಿ ಆಗ್ತಾಳೆ...

    ಈಕೆ ಮೊದಲೇ ಮಾರಿ, ಹೀಗೆ ಈಶ್ವರನ ಮೇಲೆ ಮುನಿದರೆ ಅವಳನ್ನೇನನ್ನಬೇಕು? ಹೆಮ್ಮಾರಿ? ಮಾರಿ++?

    ಅಂದಹಾಗೆ, ಉಪ್ಪಿಗೆ (ಉಪೇಂದ್ರನಿಗೆ) ಈ ಸುದ್ದಿ ತುಂಬಾ ವರ್ಷಗಳ ಹಿಂದೆಯೇ ಸಿಕ್ಕಿತ್ತು ಅನ್ನಿಸ್ತದೆ. ಇಲ್ಲಾಂದ್ರೆ "ಮಾರಿ ಕಣ್ಣು ಹೋರಿ ಮ್ಯಾಗೆ..." ಎಂದು ಯಾಕೆ ಅರಚುತ್ತಿದ್ದ? ಈ ಮಾರಿ ಈಶ್ವರನನ್ನು ಲವ್ವಿಸುತ್ತಿಲ್ಲ, ಅವಳ ಕಣ್ಣು ಹಾಕಿರೋದು ಹೋರಿ ಮ್ಯಾಲೆ ಅಂತ ತಾನೆ?

    ಪ್ರತ್ಯುತ್ತರಅಳಿಸಿ
  6. ಜೋಶಿ ಅವರೆ,

    ನಾರಿ ಮುನಿದರೆ ಏನನ್ನು ಮಾರಿ? ಎಷ್ಟನ್ನು ಮಾರಿ ?ಅನ್ನೋದು ಅರ್ಥವಾಗದ ಸಂಗತಿ.

    ಆದ್ರೆ ಉಪ್ಪಿನ ಕೇಸಿನಲ್ಲಿ, ಮಾರಿ ಯಾರು, ಹೋರಿ ಯಾರು ಎಂಬುದು ಯೋಚನೆಗೆ grass ಒದಗಿಸಿದೆ. ಉಪ್ಪೇ ಹೋರಿಯೋ, ಅಥವಾ ಆತನ ಅರ್ಧ-ಅಂಗಿ ಬೆಂಗಾಳಿನಿಯ ಕಣ್ಣು ಉಪ್ಪಿನ ಮೇಲೆ ಬಿದ್ದದ್ದೋ ತಿಳಿದಿಲ್ಲ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D