ಬೊಗಳೆ ರಗಳೆ

header ads

ಮುಂಬಯಿಯನ್ನು ಬೊಂ'ಬಾಯಿ'ಯಾಗಿಸಲು ಸಂಚು !

(ಬೊಗಳೂರು ಸಂಚಾರಿ ಬ್ಯುರೋದಿಂದ)
ಬೊಗಳೂರು, ಜೂ.22- ಇದೀಗ ಸದ್ದಾದ ಸುದ್ದಿ. ದೇಶದ ವಾಣಿಜ್ಯ ರಾಜಧಾನಿ ಹೆಗ್ಗಳಿಕೆಯ ಮುಂಬಯಿಯ ಹೆಸರನ್ನು ಬೊಂಬಾಯಿ ಎಂದು ಬದಲಿಸಲು ಭಾರಿ ಒಳ ಸಂಚು ನಡೆಸುತ್ತಿರುವ ವಿಷಯವೊಂದು ಇಲ್ಲಿ ಬೆಳಕಿಗೆ ಬಂದಿದೆ.

ಈ ಭಾರೀ ಕಾರ್ಯತಂತ್ರದ ಹಿಂದೆ ಬೊಗಳಿಯರ ಮತ್ತು ವಾಚಾಳಿಯರ ಜಿಹ್ವಾಡ... ಅಲ್ಲಲ್ಲ, ಕೈವಾಡ ಇರುವುದು ಕಂಡುಬಂದಿದೆ.

ಎಲ್ಲೆಡೆ ಮಾತಿನ ಮಲ್ಲಿಯರನ್ನು ಮಾತ್ರವೇ ಅಲ್ಲ ಅಲ್ಪ ಸ್ವಲ್ಪ ಮಟ್ಟಿಗೆ ಮಲ್ಲರನ್ನು ಕೂಡ "ಬೊಂಬಾಯಿ" ಅಂತ ಪ್ರೀತಿಯಿಂದ ಉದ್ದಹೆಸರಿಟ್ಟು ಹಿಂದೆಲ್ಲಾ ಕರೆಯುತ್ತಿದ್ದರು. ಅಷ್ಟೊಳ್ಳೆ ಹೆಸರು ಗಳಿಸಲು ನಾವು ಪುಣ್ಯ ಮಾಡಬೇಕಿತ್ತು. ಆದರೆ ಈಗ ಮುಂಬಯಿ ಅಂತ ಕರೆದರೆ ಏನೋ ಇರಿಸುಮುರಿಸಾಗುತ್ತೆ ಅನ್ನೋದು ಬೊಂಬಾಯಿ ವಾಚಾಳಿಯರ ಸಂಘದ ಅಧ್ಯಕ್ಷೆ ವಾಚಾಳೀಶ್ವರಿ ಬಾಯಿ ಅವರ ಅಳಲು.

ಈ ಒಳ ಸಂಚಿನ ಬಗ್ಗೆ ಬೊಂಬಾಯಿಯನ್ನು ಕಿರಿದಾಗಿಸಿ ಮುಂಬಯಿಯಾಗಿಸಿದ ಠಾಳ್ ಬಾಕ್ರೆ ಅವರು ಈ ಸುದ್ದಿ ತಿಳಿಸಿದ ಬೊಗಳೆ ಬ್ಯುರೋದ ರಗಳೆ ಮೇಲೇ ಬಾರ್ಕಿಂಗ್ ಮಾಡಿದ್ದಾರೆ.

ಮಾತ್ರವಲ್ಲ, ಮುಂಬಯಿಗಿಂತ ಬೊಂಬಾಯಿಯೇ 100 ಪಟ್ಟು ಹೆಚ್ಚು ಉತ್ತಮವಾಗಿತ್ತು ಅಂತ ತಿಳಿಸಿದ ಖ್ಯಾತ ನಾಮ-ಶಾಸ್ತ್ರಜ್ಞ ಬೇಜಾನ್ ದಾರೂ ಪೀನೇವಾಲ ವಿರುದ್ಧ ಕೂಡ ಬಾಕ್ರೆ ಘರ್ಜಿಸಿದ್ದಾರೆ. ಬೊಂಬಾಯಿಯನ್ನು ಇಂಗ್ಲಿಷ್‌ನಲ್ಲಿ Bomb-bay ಎಂದು ಕರೆದ ಕಾರಣಕ್ಕಾಗಿಯೇ ಅಷ್ಟೊಂದು ಬಾಂಬ್ ಸ್ಫೋಟಗಳಾದವು. ಆ ಪ್ರಮಾಣದ ಬಾಂಬ್ ಸ್ಫೋಟಗಳು ಮುಂಬಯಿ ಆದ ಮೇಲೆ ನಡೆಯಲಿಲ್ಲವಲ್ಲ ಎಂಬುದು ಅವರ ಸಮರ್ಥನೆ.

1996ರಲ್ಲಿ ಅಸತ್ಯಾನ್ವೇಷಿ ಮುಂಬಯಿಯಲ್ಲಿದ್ದ ಸಂದರ್ಭದಲ್ಲಿ, "ನಮ್ಮ ಮನೆಯಲ್ಲೂ ಗಣಪತಿ ವಿಗ್ರಹ ಹಾಲು ಕುಡಿದಿದೆ" ಅಂತ ಕಣ್ಣಾರೆ ಹೇಳಿದ್ದ ಅಂದಿನ ಮುಖ್ಯಮಂತ್ರಿ- ರಮಣಿಯರ ಮನೋಹರಿಸಿದ್ದ ಜೋಷಿ ಅವರು ಕೂಡ ಪ್ರತಿಕ್ರಿಯೆ ನೀಡಿ, ಮುಂಬಯಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪ್ರವಾಹ, ಕಟ್ಟಡಕುಸಿತ ಇತ್ಯಾದಿ ದುರಂತಗಳ ಸರಮಾಲೆಗೆ ಏಳೂವರೆ ಶನಿ ದೋಷವಿದೆ, ಮುಂಬಯಿ ಮತ್ತೆ ಬೊಂಬಾಯಿಯಾಗಬೇಕು ಎಂದೆಲ್ಲಾ ಹೇಳುವುದು ಮೂಢ ನಂಬಿಕೆ ಎಂಬುದಾಗಿ ತಿಳಿಸಿದ್ದಾರೆ.

ಅಲ್ಲದೆ ಮುಂಬಯಿಯನ್ನು ಬೊಚ್ಚುಬಾಯಿ ಬೇಕಾದರೂ ಮಾಡುತ್ತೇವೆ, ಮತ್ತೆ ಬೊಂಬಾಯಿ ಮಾಡಲು ಖಂಡಿತಾ ಬಿಡುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ನಾನು ನೋಡಿರ್ಲಿಲ್ಲ. ಇದೇ ಮೊದಲ್ನೆಯ ಸರ್ತಿ ಬರ್ತಿರೋದು ಇಲ್ಲಿಗೆ. ಮಜವಾಗಿದೆ. ಸಂಜೆ ಬಂದು ಒಂದೆ ಉಸಿರಿನಲ್ಲಿ ಓದಿಯೇ ಬಿಡಬೇಕು ಎಂದು ನಿರ್ದರಿಸ್ದ್ದಿನಿ. ಉಸಿರುಗಟ್ಟದಿದ್ದರೆ ಸಾಕು:)

    ಇಂತಿ
    ಭೂತ

    ಪ್ರತ್ಯುತ್ತರಅಳಿಸಿ
  2. ಅಸತ್ಯಾನ್ವೇಷಿಗಳು ಸರ್ವಾಂತರ್ಯಾಮಿಗಳಾಗುತ್ತಿದ್ದಾರೆ. ಎಲ್ಲೆಂದೆಲ್ಲಾ ಸುದ್ದಿಗಳನ್ನು ತಂದು ನಮಗೆ ಕೊಡುತ್ತಿದ್ದಾರೆ. ನಮ್ಮ ಮನೆ ಹಿಂದೆ ನಡೆದ ವಿಷಯ ನನಗೇ ಗೊತ್ತಿರ್ಲಿಲ್ಲ. ಸ್ವಲ್ಪ ದಿನಗಳಾದ್ರೆ ನಮ್ಮ ಮನೆ ವಿಷಯ ಇಲ್ಲೇ ಓದಿ ತಿಳಿಯಬೇಕಾಗತ್ತೇನೋ? ಮನೆಯವರಿಗೆ ಸ್ವಲ್ಪ ಎಚ್ಚರಿಕೆ ಕೊಡ್ಬೇಕು.

    ಏಳೂವರೆ ಶನಿ ಬರೋದು ಸಂಜೆಗೋ ಬೆಳಗ್ಗೆಯೋ? ಜೋರಾನ್ ಬಾಜೂವಾಲಾ ಹೇಳಿದ ಮಾತುಗಳನ್ನು ನಂಬಬಾರದೆಂದು ಒಮ್ಮೆ ಠಳಕ್ ಭಕ್ರಿ ಹೇಳಿದ್ರು. ಬೊಂಬ್ಡ ಹೊಡಿಯೋರಿಗೆ ಇದು ಬೊಂಬಾಯಿ, ತಾಯಿ ಮೇಲೆ ಪ್ರೀತಿ ಇರೋರಿಗೆ ಮುಂಬಾ ಆಯಿ ಎಂತಲೂ ಹೇಳಿದ್ರು. ಪಾಪ ಈಗವರ ಬಾಯಿಯಲ್ಲಿ ಹಲ್ಲಿಲ್ಲದೇ, ಅವರು ಆಡುವ ಮಾತುಗಳು ಯಾರಿಗೂ ತಿಳಿಯೋಲ್ಲ.

    ಇನ್ನೊಂದು ವಿಷಯ ಈ ಮಾತಿನ ಮಲ್ಲಿಯ ಪತಿ ವಾರ್ತೆ ಓದುತ್ತಿದ್ದ ಮಲ್ಲ. ಈಗವನಿಗೆ ಹಲ್ಲಿಲ್ಲದೇ ಮಾತನಾಡಲಾಗುತಿಲ್ಲವಾಗಿ ವಾರ್ತೆಯನ್ನು ಮಲ್ಲಿ ಹರಿಸ್ತಿದ್ದಾಳಂತೆ - ಈ ವಿಷಯ ನಿಮಗೆ ಗೊತ್ತೇ?

    ಪ್ರತ್ಯುತ್ತರಅಳಿಸಿ
  3. ಮುಂಬೈಯಲ್ಲಿ ಏನಾಗುತ್ತಿದೆ ??

    ನಾನೇನೋ 'ತವಿಶ್ರೀ ವಿನಾ ಮುಂಬೈಯಲ್ಲಿ ತೃಣಮಪಿ ನ ಚಲತಿ' ಅನ್ನಕೊಂಡಿದ್ದೆ :)ಈಗ ನೋಡಿದರೆ ನಿಮಗೆ ಗೊತ್ತಿಲ್ಲದೆ ಹೆಸರು ಚ್ಯೆಂಜ್ ಮಾಡ್ತಿದರ !

    ಅಸತ್ಯಿಗಳೇ,
    ೧೯೯೬ನಲ್ಲಿ ನೀವೇನು ಮಾಡ್ತ ಇದ್ದಿರಿ ಮುಂಬೈನಲ್ಲಿ !?

    ಪ್ರತ್ಯುತ್ತರಅಳಿಸಿ
  4. ಶಿವ್ ಅವರೇ ಅದು ತೃಣಮಪಿ ಅಲ್ಲ ಟ್ರೈನ್‍ನಪಿ ನ ಚಲತಿ -

    ಚಲ್ತಿ ಹೈ ತೋ ಗಾಡಿ
    ರುಕ್ತಿ ಹೈ ತೋ ಬಾಡಿ (ಹೆಣ)
    ಲೋಕಲ್ ಮೇ ಹೈ ಮೇರಿ ಜಾನ್
    ಯೇಹೀ ಹೈ ಮುಂಬಯಿ ಕೀ ಶಾನ್

    ರವಿ ಕಾಣದ್ದನ್ನು ಪಂಡಿತ ಕಂಡ
    ಎನ್ನುವ ಉಕ್ತಿಯೇ ಇದೆಯಲ್ಲ. ೧೯೯೬ ವಿಷಯ ಏನು ೧೯೬೯ ವಿಷಯ ಕೇಳಿದ್ರೂ ಹೇಳ್ತಾರೆ ನಮ್ಮೂರ ಪಂಡಿತರು.

    ಪ್ರತ್ಯುತ್ತರಅಳಿಸಿ
  5. ಓ ಭೂತೋತ್ತಮರೇ, ನಿಮಗೆ ಖಂಡಿತವಾಗಿಯೂ ಸ್ವಾಗತ ಬಯಸುತ್ತೇವೆ. ಆದರೂ....

    ಸಂಜೆ ಬಂದು ಹೋಗಿ, ಆದರೆ ಕತ್ತಲಾದ ಮೇಲೆ ಬಂದರೆ ಮಕ್ಕಳೆಲ್ಲಾ ಹೆದರಿಕೊಂಡಾರು !

    ಪ್ರತ್ಯುತ್ತರಅಳಿಸಿ
  6. ಮಾವಿನ ರಸ ಮಾರುವವರೆ,

    ನೀವು ಮುಂಬಯಿಯಲ್ಲೇ ಇರುವವರಾಗಿರುವುದರಿಂದ ನಿಮ್ಮ ಹೆಸರೂ ಬದಲಾಗುತ್ತದೆ ಅಂತ ನಾಳೆ ರಿಪೋರ್ಟ್ ಮಾಡಬೇಕಾಗಬಹುದು. ಶೀಘ್ರದಲ್ಲೇ ಮುಂಬಯಿಗೆ ಅಸತ್ಯಾನ್ವೇಷಿ ತಂಡ ದಾಳಿ ಮಾಡಲಿದೆ. ಸ್ವಲ್ಪ ಜಾಗರೂಕರಾಗಿರಿ ಅಂತ ನಾವು ನಿಮಗೆ ಮೊದಲೇ ಸೂಚನೆ ಕೊಡುತ್ತಿರುವುದರಿಂದ ಇದಕ್ಕೆ ಲಂಚ ಅತ್ಯಗತ್ಯ.

    ಪ್ರತ್ಯುತ್ತರಅಳಿಸಿ
  7. ಶಿವ್ ಅವರೆ,
    ನಿಮ್ಮ ಪಾತರಗಿತ್ತಿ ಕೂಡ ಮುಂಬಯಿಗೆ ಹೋಗಿ ಹೆಸರು ಬದಲಿಸಿಕೊಂಡು ತಿರುಗಾಡ್ತಿದೆ ಅಂತ ಕೇಳಿದ್ದೀನಿ. ಬಹುಶಃ ಚಿಟ್ಟೆ ಅಂತ ಇರಬಹುದು.

    ಆಮೇಲೆ ತವಿಶ್ರೀ ಇದ್ದಕಾರಣ ತೃಣವನ್ನು ಅತ್ತಿತ್ತ ಅಲ್ಲಾಡಿಸಿದ್ದರಿಂದ ಥಳಕುಬಳುಕಿನ ಶ್ರೀನಿವಾಸ್ ಅಂತ ಆಗಿದ್ದಾರೆಂದು ಕೇಳಿಬಲ್ಲೆ. ನಿಜವಿರಬಹುದೇ?

    1996ರಲ್ಲಿ ನಾನು ಮುಂಬಯಿಯಲ್ಲಿ ಏನಾದರೂ ಸಿಗುತ್ತದೋ ಅಂತ ಅನ್ವೇಷಣೆ ಮಾಡುತ್ತಿದ್ದೆ. ಆಗಿನ್ನೂ ಅನನುಭವಿ. ಏನೂ ದಕ್ಕಲಿಲ್ಲ.

    ಪ್ರತ್ಯುತ್ತರಅಳಿಸಿ
  8. ಹೌದು, ಮಾವಿನ ರಸದವರು ಹೇಳಿದ್ದು ನಿಜ.

    ತವಿಶ್ರೀ ವಿನಾ ಲೋಕಲ್ ಟ್ರೈನ್ ಮಪಿ ಚಲತಿ. ಯಾಕೆ ಗೊತ್ತೇ? ಅವರಿರೋದು ನೋಟು ಮುದ್ರಿಸುವ ಬ್ಯಾಂಕಿನಲ್ಲಿ, ಅವರ ಜೇಬು ತುಂಬಿರುತ್ತದೆ, ಇದಕ್ಕಾಗಿ ಜೇಬುಗಳ್ಳರೂ ತುಂಬಿಕೊಂಡಿರುತ್ತಾರೆ.

    ಅವರೇ ಇಲ್ಲದಿದ್ದರೆ ಜೇಬುಗಳ್ಳರಿಗೇನು ಕೆಲಸ?

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D