sterilization: ಸರಕಾರದ ಬೆಂಬಲ, ಶ್ವಾನಗಳ ಆಕ್ರೋಶ!

Monday, May 11, 2009

(ಬೊಗಳೂರು ಸ್ಟೆರ್ಲೈಸೇಶನ್ ಬ್ಯುರೋದಿಂದ)
ಬೊಗಳೂರು, ಮೇ 11- ಜನಸಂಖ್ಯಾ ನಿಯಂತ್ರಣಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಕಡ್ಡಾಯ ಅಥವಾ ಬಲವಂತ ಮಾಡುವ ವಿವಾದವನ್ನು ಮತ್ತಷ್ಟು ತಣ್ಣಗಾಗಿಸುವ ನಿಟ್ಟಿನಲ್ಲಿ ರದ್ದಿಗೋಷ್ಠಿ ಕರೆದಿರುವ ಬೊಗಳೂರು ನಿಧಾನಮಂತ್ರಿ ಕಾರ್ಯ'ಲಯ'ವು, ಇದಕ್ಕೆ ತಮ್ಮ ಬೆಂಬಲವಿದೆ ಎಂದು ಘೋಷಿಸಿದ್ದಾರೆ.

ಆದರೆ ಇದು ಸಾಮಾಜಿಕವಾಗಿ ತೀರಾ ತುಳಿಯಲ್ಪಟ್ಟವರು, ಹಿಂದುಳಿದವರು, ಎಲ್ಲವೂ ಆಗಿರುವ ಕಡಿಮೆ ಸಂಖ್ಯೆಯಲ್ಲಿರುವವರಿಗೆ ಕಡ್ಡಾಯವಾಗಬಾರದು. ಯಾಕೆಂದರೆ ಅವರು ಕೂಡ ಬಹುಸಂಖ್ಯಾತರಾಗಿ, ಈ ದೇಶದ ಎಲ್ಲ ಆಸ್ತಿಗಳಿಗೆ ಸಮಾನ ಹಕ್ಕುದಾರರಾಗಬೇಕಾದ ಅಗತ್ಯವಿದೆ. ಬಹುಸಂಖ್ಯೆಯಲ್ಲಿರುವವರೊಂದಿಗೆ ಅವರ ಸಂಖ್ಯೆಯೂ ಸರಿ ಸಮಾನವಾದರೆ ಸಾಮಾಜಿಕ ತಾರತಮ್ಯ ನೀಗುತ್ತದೆ, ಸಮಾನತೆಯ ಮಹಾನ್ ಕನಸು ನನಸಾಗುತ್ತದೆ. ಹೀಗಾಗಿ ಬಹುಸಂಖ್ಯಾತರಿಗೆ ಮಾತ್ರವೇ ಇದನ್ನು ಅನ್ವಯಿಸಬೇಕಾಗುತ್ತದೆ ಎಂದು ನಿಧಾನಮಂತ್ರಿಗಳು ಅತ್ತು ಕರೆದು ಹೇಳಿದ್ದಾರೆ.

ಈ ಮಧ್ಯೆ, ಬಾಲ ಅಲ್ಲಾಡಿಸಲು ಜಾಗ ಇಲ್ಲ ಎಂದೆಲ್ಲಾ ವರದ್ದಿ ಮಾಡಿ, ತಮ್ಮನ್ನೂ ಸಂತಾನಹರಣ ಶಸ್ತ್ರಚಿಕಿತ್ಸಾ ಆಂದೋಲನದ ಭಾಗವಾಗಿಸಲು ಹೆಣಗಾಡುತ್ತಿರುವ ಬೊಗಳೂರು ಬ್ಯುರೋ ವಿರುದ್ಧ ಶ್ವಾನ ಸಮುದಾಯ ಆಕ್ರೋಶ ವ್ಯಕ್ತಪಡಿಸಿರುವುದಾಗಿ ನಮ್ಮ ಸ್ಟಿಂಗ್ ಆಪರೇಶನ್ ಬ್ಯುರೋ ವರದಿ ಮಾಡಿದೆ.

ಮಾತ್ರವಲ್ಲದೆ, ಇತ್ತೀಚೆಗೆ ಚುನಾವಣೆ ಸಂದರ್ಭದಲ್ಲಿ ಜಾರಕಾರಣಿಗಳ ಬಾಯಲ್ಲಿ ಕಾಲು ಕತ್ತರಿಸಬೇಕು, ತಲೆ ಕತ್ತರಿಸಬೇಕು, ಕೈ ಕತ್ತರಿಸಬೇಕು, ನಾಲಿಗೆ ಕಡಿಯಬೇಕು ಎಂಬಿತ್ಯಾದಿ ಹೇಳಿಕೆಗಳೂ ವ್ಯಕ್ತವಾಗಿರುವುದರಿಂದ ಈ ಸಂತಾನಹರಣ ಶಸ್ತ್ರಚಿಕಿತ್ಸೆಗೂ ಕತ್ತರಿಪ್ರಯೋಗಕ್ಕೂ ಏನಾದರೂ ಸಂಬಂಧವಿದೆಯೇ ಎಂದೂ ಶ್ವಾನ ಸಮುದಾಯದವರು ಆತಂಕ ವ್ಯಕ್ತಪಡಿಸಿರುವುದಾಗಿ ಅದರ ಮುಖ್ಯಸ್ಥ ಬೊಗ್ರ ಕುಮಾರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

2 ಕಾಮೆಂಟ್:

sunaath May 11, 2009 3:49 PM  

ನಿಧಾನ ಮಂಡಲಗಳಲ್ಲಿ ಪ್ರವೇಶ ಬಯಸುವ ಶ್ವಾನಗಳಿಗೆ ಮೊದಲು ಶಸ್ತ್ರಚಿಕಿತ್ಸೆ ಮಾದಿಸಬೇಕು. ಅಂದರೆ ದುಃಶ್ಶಾಸಕರ ಸಂತಾನ ಕಡಿಮೆಯಾದೀತು.

ಅನ್ವೇಷಿ May 13, 2009 8:34 AM  

ಸುನಾಥರೆ,
ನಿಮ್ಮ ಸಲಹೆಯನ್ನು Someಸತ್ ಸದಸ್ಯರಿಗೂ ಅಳವಡಿಸುವಂತೆ ಶಿಫಾರಸು ಮಾಡಿದ್ದಾರೆ. ಅದನ್ನು ಯಾವುದೇ ದಾಕ್ಷಿಣ್ಯವಿಲ್ಲದೆ ರಾಷ್ಟ್ರದ ಅದಕ್ಷರು ತಿರಸ್ಕರಿಸಿದ್ದಾರೆ.

Post a Comment

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

About This Blog

  © Blogger template Foam by Ourblogtemplates.com 2009

Back to TOP