ಬೊಗಳೆ ರಗಳೆ

header ads

ಕಂಡಲ್ಲಿ ಗುಂಡು: ಸರಕಾರದ ಕೊನೇ ಅಸ್ತ್ರ

(ಬೊಗಳೂರು ಗುಂಡು ಹಾಕುವ ಬ್ಯುರೋದಿಂದ)
ಬೊಗಳೂರು, ಅ.೭- ದೇಶಾದ್ಯಂತ ಕಳವಳಕಾರಿ ಪರಿಸ್ಥಿತಿ ಮತ್ತು ರಾಜ್ಯಾದ್ಯಂತ ಪಕ್ಷಾಂತರ-ಮತಾಂತರಗಳ ಗಂಡಾಂತರಗಳಿಂದ ಮುಳುಗಿರುವ ರಾಜ್ಯ ಸರಕಾರ, ಗುಂಡಾಂತರವೇ ಮೇಲು ಎಂದು ತಿಳಿದುಕೊಂಡಿದ್ದು, ಸಚಿವರು, ಶಾಸಕರು ಕಂಡಲ್ಲಿ ಗುಂಡು ಹಾಕಲು ನಿರ್ಧರಿಸಿದ್ದಾರೆ.

ಒಂದೆಡೆಯಿಂದ ಕೇಂದ್ರ ಸರಕಾರವೂ ಆರ್ಟಿಕಲ್ 355 ಎಂಬ ನಳಿಕೆಯ ಗುಂಡು ಹಾಕಿದೆ. ಮತ್ತೊಂಡೆಯಿಂದ ಧರ್ಮ ನೇತಾರರೂ ಕೂಡ ಮನೆ ಬಾಗಿಲಿಗೇ ಹೋದಾಗ ಛೀಮಾರಿಯೆಂಬ ಗುಂಡು ಹಾಕಿದ್ದಾರೆ. ಮಗದೊಂದೆಡೆಯಿಂದ ಉಗ್ರರು ಗುಂಡು ಹಾರಿಸಲು ಹೊಂಚು ಹಾಕುತ್ತಿದ್ದಾರೆ ಮತ್ತು ಸಿಕ್ಕಿ ಬೀಳುತ್ತಿದ್ದಾರೆ. ಇನ್ನೊಂದೆಡೆಯಿಂದ ರಾಜ್ಯ ಸರಕಾರದ ಗೃಹ ಸಚಿವರ ಮೇಲೂ ಮಾತಿನ ಗುಂಡಿನ ಸುರಿಮಳೆ ಸುರಿಯುತ್ತಿದೆ.

ಹೀಗಾಗಿ ಎಲ್ಲರೂ ತಮಗೆ ಗುಂಡು ಹಾಕುವಾಗ, ತಾವು ಕೂಡ ಗಡದ್ದಾಗಿ ಗುಂಡು ಹಾಕುವುದೇ ಸೂಕ್ತ ಎಂದು ತಿಳಿದಿರುವ ಸರಕಾರದ ಮಂದಿ, ಇದಕ್ಕಾಗಿ ಕಂಡಲ್ಲಿ ಗುಂಡು ಹಾಕಲು ನಿರ್ಧರಿಸಿದ್ದಾರೆ.

ಕಂಡಲ್ಲಿ ಗುಂಡು ಹಾಕುವುದರಿಂದ ತಲೆನೋವು ಕಡಿಮೆಯಾಗುತ್ತದೆ ಎಂದು ಬೊಗಳೂರಿನ ಹಿರಿಯರು ಅದ್ಯಾವತ್ತೋ ನುಡಿದಿರುವುದನ್ನು ಆದರ್ಶವಾಗಿರಿಸಿಕೊಂಡು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರದ್ದಿಯ ಮೂಲಗಳು ವರದ್ದಿ ಮಾಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

ಏನಾದ್ರೂ ಹೇಳ್ರಪಾ :-D