ಬೊಗಳೆ ರಗಳೆ

header ads

ಗಾಂಧಿ ಜಯಂತಿ: ಬೊಗಳೆಯಿಂದ ಹಿಂಸಾತ್ಮಕ ಆಚರಣೆ

(ಬೊಗಳೂರು ಹಿಂಸಾತ್ಮಕ ಬ್ಯುರೋದಿಂದ ವಿಶೇಷ)
ಇಂದು ಗಾಂಧಿ ಜಯಂತಿ. ಈ ಸಂದರ್ಭ ಬೊಗಳೂರು ಜನತೆಗೆ ಗಾಂಧಿ ನೆನಪಾಗುವುದು ಯಾವಾಗ ಎಂಬುದರ ಬಗ್ಗೆ ನಮ್ಮ ಬ್ಯುರೋ ವಿಶೇಷ ವರದಿಯೊಂದನ್ನು ಸಂಗ್ರಹಿಸಿ ತೆರಳಿದೆ. ಆದರೆ ಅದು ಸಕಾಲದಲ್ಲಿ ತಲುಪಿಲ್ಲದ್ದರಿಂದ ಮಧ್ಯೆ ಮಧ್ಯೆ ಬಂದು ತಲುಪಿದ ಅರ್ಧಂಬರ್ಧ ವರದಿಯನ್ನೇ ಇಲ್ಲಿ ಅವಸರವಸರವಾಗಿ ಪಟ್ಟಿ ಮಾಡಲಾಗಿದೆ.

ದೇಶಾದ್ಯಂತ ಹಿಂಸೆ ತಾಂಡವವಾಡುತ್ತಿದೆ- ಶಾಂತಿ-ಅಹಿಂಸೆ ಬೋಧಿಸಿದ ಗಾಂಧೀಜಿ ನೆನಪಾಗುತ್ತಾರೆ.

ದೇಶಾದ್ಯಂತ ಭ್ರಷ್ಟಾಚಾರ ತಾಂಡವವಾಡುತ್ತಿದೆ - ಸತ್ಯ-ಶಾಂತಿ ಮೂರ್ತಿ ಗಾಂಧೀಜಿ ನೆನಪಾಗುತ್ತಾರೆ.

ಕಾಂಗ್ರೆಸ್ ಪಕ್ಷವು ಏನು ಬೇಕೋ ಅದೆಲ್ಲವನ್ನೂ ಮಾಡಿಕೊಳ್ಳುತ್ತಿದೆ - ಕಾಂಗ್ರೆಸ್ಸನ್ನು ವಿಸರ್ಜಿಸಬೇಕು ಎಂದು ಸಲಹೆ ನೀಡಿದ ಗಾಂಧೀಜಿ ನೆನಪಾಗುತ್ತಾರೆ.

ಕಾಶ್ಮೀರದಲ್ಲಿ ಹಿಂಸಾಚಾರ ಮೇಳೈಸುತ್ತಿದೆ - ದೇಶ ವಿಭಜನೆಯ ಸಂದರ್ಭದ ಗಾಂಧೀಜಿ ನೆನಪಾಗುತ್ತಾರೆ.

ಇಂದಿನ ದಿನ ನಾವು ಗಾಂಧೀಜಿ ಪುತ್ರ ಹರಿಲಾಲನಿಂದಾಗಿ ಗಾಂಧೀಜಿಯನ್ನು ನೆನಪಿಸಿಕೊಳ್ಳುತ್ತೇವೆ.

ಬೇಕು ಬೇಕಾದ್ದಕ್ಕೆ, ಬೇಡದಿದ್ದಕ್ಕೆಲ್ಲಾ ಸತ್ಯಾಗ್ರಹ ಮಾಡುತ್ತೇವೆ - ಗಾಂಧೀಜಿ ನೆನಪಾಗುತ್ತಾರೆ.

ಮುಸ್ಲಿಂ ಭಯೋತ್ಪಾದನೆ ಈ ಮಟ್ಟಕ್ಕೇರಿದ್ದರೂ, ವಿಸರ್ಜನೆಯಾಗಲೇಬೇಕೆಂದು ಗಾಂಧೀಜಿಯಿಂದ ಪರಿಗಣಿಸಲ್ಪಟ್ಟಿದ್ದ ಕಾಂಗ್ರೆಸ್ ನೇತೃತ್ವದ ಸರಕಾರ ಓಲೈಕೆ ರಾಜಕೀಯ ಮಾಡುತ್ತಲೇ ಇರುವಾಗ ಗಾಂಧೀಜಿ ನೆನಪಾಗುತ್ತಾರೆ.

ಸಂಸತ್ ಮೇಲೆ ದಾಳಿ ನಡೆಸಿ, ಕಾನೂನು ಪ್ರಕಾರ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿದ್ದರೂ, ಜೈಲಿನಲ್ಲೇ ಕೊಳೆಯುತ್ತಿರುವವರಿರುವಾಗ ಶಾಂತಿ, ಸಹನೆ, ತಾಳ್ಮೆ, ಅಹಿಂಸೆ ಬೋಧಿಸಿದ ಗಾಂಧೀಜಿ ನೆನಪಾಗುತ್ತಾರೆ.

ಶಾಂತಿ ಶಾಂತಿ ಶಾಂತಿ ಎಂದು ಬೋಧಿಸಿದ ಗಾಂಧೀಜಿ ನೆನಪಾಗುವಾಗ ಅದ್ಯಾಕೋ ಮತಾಂತರವೂ ನೆನಪಾಗುತ್ತದೆ. ಅಥವಾ ಮತಾಂತರ - ಹಿಂಸಾಚಾರ ನೋಡಿದಾಗ ಗಾಂಧೀಜಿಯೇ ನೆನಪಾಗುತ್ತಾರೆ.

ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದು, ದೇಶದ ರಕ್ಷಕ, ದೇಶದ ಸಾರ್ವಭೌಮತೆಯ ಉದ್ಧಾರಕ ಎಂದೆಲ್ಲಾ ಕರೆಸಿಕೊಳ್ಳುತ್ತಿರುವ "ಗಾಂಧಿ ಕುಟುಂಬ" ಎಂದು ಹೇಳುವಾಗ ಮಾತ್ರ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮಾತ್ರವಲ್ಲ ಸೋನಿಯಾ ಗಾಂಧಿಯೂ ನೆನಪಾಗುತ್ತಾರೆ!

ಆದರೋ.. ಭಾರತದ ಮುಂದಿನ ಭವ್ಯ ಭವಿಷ್ಯದ ನೇತಾರ ಎಂದು ಸ್ಮರಿಸಿಕೊಳ್ಳುವಾಗ ರಾಹುಲ್ ಗಾಂಧಿ ನೆನಪಾಗುತ್ತಾರೆ.

ಇವೆಲ್ಲದರ ಮಧ್ಯೆ, ಗಾಂಧಿ ಜಯಂತಿ ಆಚರಣೆಯ ವಿಷಯ ಬಂದಾಗ ಮಾತ್ರ, ಯಾವ ಗಾಂಧೀಜಿ? ಸೋನಿಯಾ? ರಾಹುಲ್? ಪ್ರಿಯಾಂಕ ಗಾಂಧಿಯೇ? ಎಂದೆಲ್ಲಾ ತಡಬಡಾಯಿಸಿದವರು ಬೊಗಳೂರು ಪ್ರಜೆಗಳು!

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. Guru... neenu yochane maado reeti ide ala, adu nanage nijavaglu esta aitade. Olle movie directorgal tara... enanno directagi helongu irbeku aadre heldangenu irbeku. Super bidu guru!!!
    Keep it up :)

    ಪ್ರತ್ಯುತ್ತರಅಳಿಸಿ
  2. "ಗಾಂಧಿಜಯಂತಿಯ ದಿನ ಸತ್ಯವನ್ನಾಡೋಣ,
    ಸುಳ್ಳಿಗೊ ಇಡಿ ವರ್ಷ ತೆರವೆ ಇಹುದು."
    ----ದ.ರಾ.ಬೇಂದ್ರೆ
    ಅಸತ್ಯಾನ್ವೇಷಿಗಳೆ,
    ಇವತ್ತಿನ ಪತ್ರಿಕೆಯಲ್ಲಿ ನೀವು ಹೇಳಿದ್ದು ಖರೆ ಐತಿ, ನೋಡ್ರಿ.

    ಪ್ರತ್ಯುತ್ತರಅಳಿಸಿ
  3. ಹಾಗೆಯೇ ಮಹಾತ್ಮಾ ಗಾಂಧಿ ವೈನ್ ಶಾಪ್ ಕೂಡ ನೆನಪಿಗೆ ಬರುತ್ತಿದೆ.

    -ಪಬ್

    ಪ್ರತ್ಯುತ್ತರಅಳಿಸಿ
  4. ಯಾವ ಗಾಂಧಿಯ ಬಗ್ಗೆ ಮಾತನಾಡುತ್ತಿದ್ದೀರ?. ಹೌದು...ನಿಮಗೆ ಇನ್ನೊಂದು ಅನ್ವೇಷಣೆಗೆ ಅವಕಾಶ ಮಾಡುತ್ತಿದ್ದೇನೆ...ಇಂದಿರಾಗಾಂಧಿಯ ತಂದೆಯ ವಂಶ ಗಾಂಧಿ ಅಲ್ಲ, ಅವಳ ಗಂಡನ ವಂಶ ಗಾಂಧಿ ಅಲ್ಲ. ಮತ್ತೆ ಹೇಗೆ ಅವಳು ಇಂದಿರಾ ಗಾಂಧಿ ಆದಾಳು.....? ನಿಮ್ಮ ಏಕ ಸದಸ್ಯ ಆಯೋಗಕ್ಕೆ ಒಂದು ಬುದ್ಧಿಮತ್ತೆಯ ಸವಾಲು. ಸ್ವೀಕರಿಸುತ್ತೀರಿ ತಾನೆ?.

    ಪ್ರತ್ಯುತ್ತರಅಳಿಸಿ
  5. ಅನಾನಿಮಸ್ಸರೆ,
    ಹೇಳೋದನ್ನು ಹೇಳ್ಲೇಬೇಕೂಂತಾನೂ ಆಗ್ಬೇಕು ಅನ್ನೋದು ನಮ್ ಧೋರಣೆ.

    ನೀವು ಹೇಳಿದಂತೆ ನಾವಂತೂ ಸೂಪರ್ ಬಿಡಲ್ಲ. :)

    ಪ್ರತ್ಯುತ್ತರಅಳಿಸಿ
  6. ಸುನಾಥರೆ,
    ಇದು ಆಟೋಮ್ಯಾಟಿಕ್ ಆಗಿ ಮತ್ತು ನಮ್ಮರಿವಿಗೆ ಬಾರದಂತೆಯೇ ಪೋಸ್ಟಿಸಿದ್ದು. ಹೀಗಾಗಿ ಬೇಂದ್ರೆ ಮಾತು ಇಲ್ಲಿ ಖರೇ ಆಗ್ಬಿಟ್ಟಿರ್ಬೋದು... ದಯ್ವಿಟ್ಟು ಹೊಟ್ಟೀಗೆ ಹಾಕ್ಕೋಳಿ...

    ಪ್ರತ್ಯುತ್ತರಅಳಿಸಿ
  7. ಪಬ್ಬಿಗರೇ,
    ನಿಮ್ಮ ಪಬ್ಬಿಗೇ ಅದ್ಯಾವ ಗಾಂಧೀ.... ವೈನ ಶಾಪ ಅಂತ ಕರೀಬೋದು....

    ಪ್ರತ್ಯುತ್ತರಅಳಿಸಿ
  8. ಗುರುಗಳೇ,
    ಯಾರೂ ಯಾವಾಗ ಬೇಕಾದರೂ ಗಾಂಧಿ ಆಗಬಹುದು. ವಾದ್ರಾ ಇದ್ದರೂ ಗಾಂಧಿ ಅಂತಾನೇ ನಮ್ ಹೈಕ್ಳು... ಅಂದ್ರೆ ಭಟ್ಟಂಗಿಗೋಳು ಕರಿಯೋದಿಲ್ವಾ... ಅದೇ ಥರಾ...
    ಹಿರಿಯ ಸ್ವಾತಂತ್ರ್ಯ ಯೋಧೆ ಸೋನಿಯಾ ಗಾಂಧಿ ಅಂತಾನೂ ಕರೀಬೌದು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D