ಬೊಗಳೆ ರಗಳೆ

header ads

ನಷ್ಟವಾದ ಮಾನದ ಬೆಲೆ: ಬೊಗಳೆಗೆ ಸಂಶಯ

(ಬೊಗಳೂರು ಸಂಶಯ ಬ್ಯುರೋದಿಂದ)
ಬೊಗಳೂರು, ಡಿ.21- ಬೊಗಳೆ ರಗಳೆಗೆ ಇತ್ತೀಚೆಗೆ ಶಂಕೆಗಳು ಆರಂಭವಾಗಿದೆ. ಯಾಕೆ ಎಂದು ಯಾರ್ಯಾರ (ಇಲ್ಲದ ಮತ್ತು ಇರುವ) ತಲೆಗಳನ್ನು ಎಷ್ಟು ಕೆರೆದುಕೊಂಡರೂ ಗೊತ್ತೇ ಆಗುತ್ತಿಲ್ಲ ಎಂಬುದಕ್ಕೆ ಇತ್ತೀಚೆಗಿನ ಉದಾಹರಣೆ ಇಲ್ಲಿ ಓದಿದ ವರದಿ.

ಒದಿಯೋಗೌಡ್ರು ತಮ್ಮ ಮಾನದ ಬೆಲೆ 10 ಕೋಟಿ ಎಂದು ಕಟ್ಟಿಕೊಂಡಿದ್ದಾರೆ. ಇದು ತೀರಾ ಕಡಿಮೆ ಎನಿಸುತ್ತದೆಯೇ ಅಥವಾ ಅತಿಯಾಯಿತು ಎನಿಸುತ್ತದೆಯೇ ಎಂಬುದು ಎಷ್ಟು ತಲೆ ಕೆರೆದುಕೊಂಡರೂ ಹೊಳೆಯಲಾರದ ಸಂಗತಿ.

ದೇಶದ ಮಹೋನ್ನತ ಹುದ್ದೆ ಅಲಂಕರಿಸಿಯೂ ನಿಕೃಷ್ಟ ರಾಜಕಾರಣದ ಮೂಲಕವೇ ಸದ್ದು ಮಾಡುತ್ತಿರುವವರು ತಮ್ಮ ಮಾನದ ಬೆಲೆ ಇಷ್ಟು ಎಂದು ತೀರ್ಮಾನಿಸಿಬಿಟ್ಟಿದ್ದಾರೆ. ಹಾಗಿದ್ದರೆ ಇತ್ತೀಚೆಗಷ್ಟೇ ಸ್ವಯಂಕೃತ ತಂತ್ರಗಳಿಂದಾಗಿ ಅವರು ಆ ಮಾನವನ್ನು ಹರಾಜು ಹಾಕಿದ್ದಾಗ ಎಷ್ಟೊಂದು ಬೆಲೆ ಬಂದಿರಬಹುದು ಎಂಬ ಶಂಕೆಯೂ ಮೂಡಿದೆ. ಆದರೆ ಮಾನ ಹರಾಜು ಹಾಕಿದಾಗ ಬಂದ ಮೊತ್ತವನ್ನು ಗೌಪ್ಯವಾಗಿಡಲಾಗಿದೆ ಎಂದು ನಮ್ಮ ಗುಪ್ತ ಮೂಲಗಳು ಎಲ್ಲೆಲ್ಲಿಯೋ ಕೂತು ವರದಿ ಮಾಡಿವೆ.

ಮಾನವು ನಷ್ಟವಾಗಿರುವ ಬಗ್ಗೆ ಅಪಮೌಲ್ಯ ತೋರಿಸುತ್ತಿರುವುದರ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಲಿರುವ ಬೊಗಳೆ ರಗಳೆ ಬ್ಯುರೋ, ಇಷ್ಟು ಮೊತ್ತದ ಮಾನವನ್ನು ಆಗಾಗ್ಗೆ ಹರಾಜು ಹಾಕುತ್ತಾ, ಅದರಿಂದಾಗಿ ಸಂಪಾದನೆಯಾಗುವ ಭಾರೀ ಪ್ರಮಾಣದ ಸಂಪತ್ತು ಕೂಡಿ ಹಾಕಿರುವವರ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲು ನಿರ್ಧರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಈಚೆಗೆ ಕಂಡಕಂಡಲ್ಲಿ ಮಾನ ಹರಾಜು ನಡೆಯುತ್ತಿರುವುದರಿಂದ, ಒದೆಯೋಗೌಡ್ರ ಹರಾಜಿನಲ್ಲಿ ಅವರಿಗೆ ಅಂತಹ ಲಾಭವೇನೂ ಆಗಿಲ್ಲವೆಂಬುದು ಬೊಗಳೆ ಪತ್ರಿಕೆಯ ನೆರವಿಲ್ಲದೆ ನಾನೇ ಕಂಡುಕೊಂಡ ಅಸತ್ಯ.

    ಪ್ರತ್ಯುತ್ತರಅಳಿಸಿ
  2. ತಮಗೆ ಮಾನವಿದೆ ಎಂದು ಪ್ರಜೆಗಳಿಗೆ confuse ಮಾಡುವ ಉದ್ದೇಶದಿಂದ ಜಾರಕಾರಣಿಗಳು ಆಗಾಗ ಆಡುವ ಆಟಕ್ಕೆ ’ಮಾನನಷ್ಟ ಮೊಕದ್ದಮೆ’ ಎಂದು ಹೇಳುತ್ತಾರೆ.ಮೂರೂ ಬಿಟ್ಟವರ (ಟೊಪ್ಪಿಗೆ,ಲಂಗೋಟಿ ಹಾಗೂ ಪಾದರಕ್ಷೆ)ಮಾನ ಅಮೂಲ್ಯವಾದದ್ದು, ಅದಕ್ಕೆ ಬೆಲೆ ಕಟ್ಟಲಾಗದು.

    ಪ್ರತ್ಯುತ್ತರಅಳಿಸಿ
  3. ಶ್ರೀ ತ್ರೀ ಅವರೆ,

    ಹರಾಜಿನಲ್ಲಿ ಲಾಭ ಸಿಗದಿದ್ದರೂ ಅವರ ನಷ್ಟವಾಗಿರೋ ಮಾನಗಳನ್ನೆಲ್ಲಾ ಹೆಕ್ಕಿಕೊಂಡರೆ ಒಂದು ದೊಡ್ಡ ಗಂಟೇ ಆಗಬಹುದು. ಅದಕ್ಕೆ ತೆರಿಗೆ ಹಾಕಲು ಅಡ್ಡಆದಾಯ ತೆರಿಗೆ ಇಲಾಖೆಯವರು ಪ್ರಯತ್ನಿಸ್ತಾ ಇದ್ದಾರೆ.

    ಪ್ರತ್ಯುತ್ತರಅಳಿಸಿ
  4. ಸುಧೀಂದ್ರರೆ,

    ನಿಮ್ಮ ಮಾನ ನಷ್ಟದ ಕನ್‌ಫ್ಯೂಶನ್ ನಮಗೂ ಆಗಿದೆ. ಮತ್ತು ನೀವು ಮಾನನಷ್ಟ ಮೊಕದ್ದಮೆ ಎಂದರೇನು ಅಂತ ಥರ್ಡ್ ಕ್ಲಾಸ್ ವಿದ್ಯಾರ್ಥಿಗಳಿಗಾಗಿ ಒಂದು ವಾಕ್ಯದ ಉತ್ತರ ಸಿದ್ಧಪಡಿಸಿರುವುದು, ಮುಂದಿನ ಪರೀಕ್ಷೆಯಲ್ಲಿ ಸಾಕಷ್ಟು ಪ್ರಯೋಜನಕ್ಕೆ ಬರಲಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D