ಬೊಗಳೆ ರಗಳೆ

header ads

ಭ್ರಷ್ಟಾಚಾರದ ಬೀಜಗಳು ಇಲ್ಲಿ ನೂರ್ಕಾಲ ಬಾಳುತ್ತವೆ !

(ಬೊಗಳೂರು someಶೋಧನೆ ಬ್ಯುರೋದಿಂದ)‌
ಬೊಗಳೂರು, ಜೂ.21- ಸಾವಿರಾರು ವರ್ಷಗಳ ಕಾಲ ಬೀಜವನ್ನು ಸಂರಕ್ಷಿಸುವ ತಂತ್ರಜ್ಞಾನವೊಂದು ಜಗತ್ತಿಗೆ ಪರಿಚಿಸಲ್ಪಟ್ಟಿರುವುದರಿಂದ ಚಿಂತಾಜನಕವಾಗಿ ಕಳವಳಗೊಂಡಿರುವ ಬೊಗಳೂರು ಬ್ಯುರೋ, ಈ ಅಜ್ಞಾನದ some-ಶೋಧಕರನ್ನು ತದ್ವಾತದ್ವಾ ತರಾಟೆಗೆ ತೆಗೆದುಕೊಂಡ ಪ್ರಸಂಗ ವರದಿಯಾಗಿದೆ.

ಬೊಗಳೂರು ಬ್ಯುರೋದ ಈ ಕಳವಳಕ್ಕೆ ಕಾರಣವೆಂದರೆ ಇದರಲ್ಲಿ ಭಾರತೀಯ ಭ್ರಷ್ಟರಾಜಕಾರಣಿಗಳ ಕೈವಾಡವೇನಾದರೂ ಇದೆಯೇ ಎಂಬುದು. ಅಲ್ಲದೆ, ಅವರೂ ತಮ್ಮ ತಮ್ಮ ವಿವಿಧ ನಮೂನೆಯ ಬೀಜಗಳನ್ನು ಈ ಕೇಂದ್ರದಲ್ಲಿ ಠೇವಣಿ ಇರಿಸಬಹುದೆಂಬ ಆತಂಕ. ಇಂಥ ರಾಜಕಾರಣಿಗಳ ಆಯ್ಕೆಯ ಬೀಜಗಳಲ್ಲಿ ಭ್ರಷ್ಟಾಚಾರದ ಬೀಜ, ಜಾತಿ ಬೀಜ, ಕೋಮು ಸಂಘರ್ಷದ ವಿಷಬೀಜ, ಲಂಚೋಪಾಯಗಳ ಬಗೆಗಿನ ಬೀಜಗಳೂ ಸೇರಿವೆ ಎಂಬುದು ಅನ್ವೇಷಣೆ ಸಂದರ್ಭ ಬಯಲಾಗಿದೆ.

ಈ ರಾಜಕಾರಣಿಗಳು ತಮ್ಮಲ್ಲಿ ಕೂಡಿಟ್ಟು ಮಿಕ್ಕುಳಿದ ಹಣವನ್ನು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಅದುಮಿಟ್ಟಂತೆಯೇ ಮತ್ತು ಅದು ಅಲ್ಲಿ ಸುರಕ್ಷಿತವಾಗಿರುತ್ತಾ, ಯಾವಾಗ ಬೇಕಾದರಾವಾಗ ತೆಗೆಯಬಹುದಾದಂತಹ ಸೌಲಭ್ಯ ಇದೆ ಮತ್ತು ಈ ದೇಶದ ಯಾವ ಕಾನೂನು ಕೂಡ ಅದನ್ನು ಮುಟ್ಟದಂತೆ ಮಾಡಲು ಅವರೇ ಹೊಸ ಹೊಸ ಕಾನೂನುಗಳನ್ನು ಮಾಡುತ್ತಿರುವುದರಿಂದ ಅದರಿಂದ ಪ್ರೇರಣೆ ಪಡೆದು ತಮ್ಮ ಬೀಜಗಳನ್ನೂ ಅಲ್ಲಿ ಸುರಕ್ಷಿತವಾಗಿ ಕಾಪಿಡಲು ಸಿದ್ಧರಾಗಿದ್ದಾರೆ.

ಯಾವುದೇ ಪ್ರಳಯಕ್ಕೂ ಜಗ್ಗದಂತೆ ಪರ್ವತದಲ್ಲಿ 70 ಮೀಟರ್ ಕೊರೆದು ಈ ಬೀಜ ಬ್ಯಾಂಕನ್ನು ಭೂಗತವಾಗಿ ಸ್ಥಾಪಿಸಲಾಗಿದೆ. ಇದರ ರಿಮೋಟ್ ಕಂಟ್ರೋಲ್ ಇರುವುದು ಸ್ವೀಡನ್‌ನಲ್ಲಿ. ಕೇಂದ್ರ ಸರಕಾರವು ದೇಶದಲ್ಲಿ Price control ಮಾಡಲಾಗದಿದ್ದರೂ, ಇಟಲಿ ಮೂಲದ ಕೇಂದ್ರವೊಂದರ ಮೂಲಕ Remote controlled ಆಡಳಿತ ನಡೆಸುತ್ತಿರುವ ಅನುಭವದ ಹಿನ್ನೆಲೆಯಲ್ಲಿ ಈ ಬೀಜ ಬ್ಯಾಂಕಿನ ರಿಮೋಟ್ ಕಂಟ್ರೋಲ್ ಪಡೆಯಲು ಹಕ್ಕು ಮಂಡಿಸಿತ್ತಾದರೂ ಅದರಲ್ಲಿ ವಿಫಲವಾಯಿತು ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಬಹಳ ಉಪಯುಕ್ತ ಮತ್ತು ಮಹತ್ವಪೂರ್ಣ ಮಾಹಿತಿ ನೀಡಿದ್ದೀರಿ. ಅದಕ್ಕಾಗಿ ವಂದನೆಗಳು. ಆದರೂ ಇನ್ನೂ ಕೆಲವು ಬೀಜಗಳನ್ನು ನೀವು ಹೆಸರಿಸಿಲ್ಲ. ಯಾಕೆ ಕಾಲಾಭಾವವೇ ಅಥವಾ ಪತ್ರಿಕಯೆಲ್ಲಿ ಸ್ಥಳವಿಲ್ಲವೇ? ರಾಜಕಾರಣಿಗಳ ಬೀಜಗಳು ಷಂಡತಿಲ ಎಂದು ಯಾರೋ ಎಲ್ಲೋ ಹೆಸರಿಸಿದಂತಿತ್ತು. ಇದು ನಿಜವೇ?

    ಈ ತಂತ್ರಜ್ಞಾನ ಇಷ್ಟು ದಿನಗಳು ಎಲ್ಲಿತ್ತು? ಸ್ವಿಸ್ ಬೀಜದ ಕೀಲಿಕೈ ಸಂಖ್ಯೆ ತಿಳಿಸಿ. (ಬಹಿರಂಗವಾಗಿ ಬೇಡ).

    ಆದರೂ ನಿಮ್ಮ ಕೆಲಸ ಶ್ಲಾಘನೀಯ. ಇಂತಹ ಕೆಲಸವನ್ನು ಯಾವ ಪತ್ರಿಕೆಗಳೂ ಇಲ್ಲಿಯವರೆವಿಗೂ ಮಾಡಿರಲಿಲ್ಲ. ಹಿಂದೊಮ್ಮೆ ಶ್ರೀಮತಿ ಗಾಡದಿಯವರು ಮಾಹಿತಿ ಕ್ಯಾಪ್ಸುಲ್ ಎಂದು ಕೆಲವು ಉಪಯುಕ್ತ ಮಾಹಿತಿಗಳನ್ನು ನೆಲದೊಳಗೆ ಹುಗಿದಿಡುವ ಹುನ್ನಾರ ಮಾಡಿದ್ದರು. ನೆನಪಿದೆಯೇ? ಯಾವಾಗ ಅಂತ ನನ್ನನ್ನೇ ಕೇಳ್ತೀರಾ? ಕುರ್ತುಪರಿಸ್ಥಿತಿಯ ಸಮಯದಲ್ಲಿ - ೧೯೭೫-೭೬ ರಲ್ಲಿ.

    ಅದರ ಪುನರಾವರ್ತನೆಯನ್ನು ಸೊಸೆ ಮಾಡುತ್ತಿರಬಹುದೇ ಎಂಬ ಗುಮಾನಿ ನನಗೆ. ಇದರ ಬಗ್ಗೆ ತಕ್ಷಣ ಮಾಹಿತಿ ಸಂಗ್ರಹಿಸಿ ನಮ್ಮ ಮುಂದಿಡಬೇಕೆಂದು ಕೇಳಿಕೊಳ್ಳುವೆ.

    ಪ್ರತ್ಯುತ್ತರಅಳಿಸಿ
  2. ಮಾಯಾವಿ ನಸರೇ,
    ಎಲ್ಲಾ ಬೀಜಗಳನ್ನು ನಾವಿಲ್ಲಿ ಬಿತ್ತಿದ್ದರೂ, ಸಂಪಾದಕರು ಕತ್ತರಿಪ್ರಯೋಗ ಮಾಡಿದ್ದಾರೆ. ಕೆಲವಾದರೂ ಮೊಳಕೆಯೊಡೆಯಬಹುದೆಂದು ನಿರೀಕ್ಷಿಸಲಾಗಿದೆ.

    ಗೋನಿಯಾ ಸೋಂಧಿ ಕೈಯಲ್ಲಿರುವ ರಿಮೋಟ್ ಕಂಟ್ರೋಲರ್ ಉಪಕರಣವನ್ನೇ ವಶಪಡಿಸಿಕೊಳ್ಳಲು ಹುನ್ನಾರ ನಡೆಯುತ್ತಿರುವ ಬಗ್ಗೆ ಶೀಘ್ರವೇ ವರದಿ ಪ್ರಕಟಿಸಲಾಗುತ್ತದೆ.

    ಪ್ರತ್ಯುತ್ತರಅಳಿಸಿ
  3. ಬೀಜವನ್ನು ಬಿತ್ತಲು ಬೊಗಳೆ ರಗಳೆ ತುಂಬಾ ಹದವಾದ ಭೂಮಿ.

    ಬಿತ್ತಿರೋ ಬೀಜವನು ಎತ್ತಿರೊ ಫಸಲನು!!

    -ವಿಶ್ವನಾಥ

    ಪ್ರತ್ಯುತ್ತರಅಳಿಸಿ
  4. ವಿಶ್ವನಾಥರೆ,
    ನಿಮ್ಮ ಮಠದ ಕಣ್ಣು ವಿಶ್ವಪುಟದ ಮೂಲಕ ನಮ್ಮ ಬೊಗಳೆ ಮೇಲೆ ಬಿತ್ತಾ? ಮಣ್ಣಿನ ಮಗ ವೇದೇ ಗೌಡ್ರಿಗೆ ಹೇಳಬೇಡಿ ಮತ್ತೆ....!

    ನೀವು ಬೀಜ ಬಿತ್ತಿ, ಫಸಲು ತೆಗೆಯಲು ನಾವು ಯಾವತ್ತೂ ಕಾದು ಕೂತಿರುತ್ತೇವೆ. ಇದು ನಮ್ಮ ರಾಜಕಾರಣಿಪ್ರಣೀತ ಕಲೆ.

    ಪ್ರತ್ಯುತ್ತರಅಳಿಸಿ
  5. ಏನಿದು ಅನ್ಯಾಯ!

    ಕಲಿಗಾಲವಯ್ಯ ಕಲಿಗಾಲ
    ಒಳ್ಳೆಯ ಮಂದಿಗೆ ಕೊನೆಗಾಲ
    ಬೊಗಳೆಯ ದಾಸರ ಹುನ್ನಾರ
    ಹರಹರಾ ವಿಶ್ವನಾಥೇಶ್ವರ

    ಮಠಾಧೀಶ್ವರರು ಅಂದ್ರೆ ಏನು ಸಾಮಾನ್ಯವೇ? ಜಗದ್ರಕ್ಷಕರು. ಜಗತ್ತಿನ ಒಳಿತಿಗಾಗಿ ಚಿಂತಿಸುವುದಷ್ಟೇ ಕೆಲಸ. ಅಂತಹವರಿಗೆ ಮೈ ಮುರಿದು ಫಸಲು ತೆಗೆಯಲು ಹೇಳುವುದೇ? ಅಂತಹ ಫಸಲನ್ನು ನಾವು ಉಣುವುದೇ?

    ಪ್ರತ್ಯುತ್ತರಅಳಿಸಿ
  6. ಹೇಳಿದ್ನಲ್ಲಾ ಮಾವಿನ ಮಠಾಧೀಶರೇ,
    ಇದು ರಾಜಕೀಯಪ್ರಣೀತ ಪುಣ್ಯಕಾರ್ಯವಾಗಿರುವುದರಿಂದ ಮತ್ತು ಎಲ್ಲೂ ಕೂಡ ಮೇಯಬಹುದು ಎಂಬ ಅಲಿಖಿತ ವೇದವಾಕ್ಯವಿರುವುದರಿಂದ ಇದೆಲ್ಲಾ ಕಾಮನ್!

    ಪ್ರತ್ಯುತ್ತರಅಳಿಸಿ
  7. ಬೀಜಾನ್ವೇಷಿಗಳೆ,

    ನನಗೆ ತಿಳಿದಿದ್ದು ಸ್ವಲ್ಪ, ಇದರ ಬಗ್ಗೆ ಮತ್ತಸ್ಟು ತಿಳಿಸಿದ್ದಕ್ಕಗಿ ದ.ವಾ. ವ್ಯಂಗ್ಯದ ಜೊತೆ ಜೊತೆಗೆ, ಸುದ್ದಿ ಸಾರವನ್ನು ಹೀರ್ವಂತಾಯಿತು.

    ನಮಸ್ಕಾರಗಳೊಂದಿಗೆ
    ಭೂತ

    ಪ್ರತ್ಯುತ್ತರಅಳಿಸಿ
  8. ಭೂತರೆ,
    ನೀವು ಹೀರಿದ ಕಾರಣ ಹಿಂಡಿ ಹಿಪ್ಪೇಗಾಯಿಯಂತಾಗಿದೆ ಭ್ರಷ್ಟಾಚಾರದ ಬೀಜ.

    ದಯವಿಟ್ಟು ಬೀಜವನ್ನು ಹಿಂದಿನ ಸ್ಥಿತಿಗೆ ಮರಳಿಸಲು ಕೋರಲಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D