ಬೊಗಳೆ ರಗಳೆ

header ads

'ಪೇಪರಿನೋರು ಅಭಿವೃದ್ಧಿ ಕಾರ್ಯ ಮಾಡ್ದಿದ್ರೆ

ವೋಟರ್ಸ್‌ಗೆ ನಾ ಹ್ಯಾಂಗ್ ಮುಖಾ ತೋರಿಸ್ಲಿ?'

ಪತ್ರಿಕೆಗೆ ಪಾಠ ಮಾಡಲು ಮಂತ್ರಿಗಿರಿಗೆ ರಾಜೀನಾಮೆ ಆಫರ್ !
(ಬೊಗಳೂರು ಬ್ಯುರೋ ವರದಿ)
ಬೊಗಳೂರು, ಏ.28- ಸಮಸ್ತ ಕನ್ನಡಿಗರ ಹೆಮ್ಮೆ ಎಂದು ವಿಶ್ವಾದ್ಯಂತ ಮನೆಮಾತಾಗಿರುವ ಪತ್ರಿಕೆಯನ್ನೇ ತನ್ನದೆಂದು ಹೇಳಿಕೊಂಡು ಅದಕ್ಕೆ ಪಾಠ ಹೇಳಿಕೊಡುವುದಕ್ಕಾಗಿ ಕರ್ನಾಟಕದ ಸಚಿವರೊಬ್ಬರು ಮಂತ್ರಿಗಿರಿಗೆ ರಾಜೀನಾಮೆ ನೀಡುವ ಯೋಚನೆಯಲ್ಲಿದ್ದಾರೆ.

ಕೊಪ್ಪಳ ಉಸ್ತುವಾರಿ ಸಚಿವರ ಕ್ಷೇತ್ರಕ್ಕೆ "ಮುಖ್ಯಮಂತ್ರಿ ಬಂದರೆ ಮುಕ್ಕಾಲು ಕೋಟಿ ರೂ. ಖರ್ಚು" ಎಂಬ ಶೀರ್ಷಿಕೆಯಡಿ ವಿಜಯಕರ್ನಾಟಕದಲ್ಲಿ ಪ್ರಕಟವಾದ ವರದಿಗೆ ಯದ್ವಾತದ್ವಾ ಉತ್ತರಿಸಿರುವ, ಜರ್ಮನಿಯ ಸಂದುಹೋದ ಸರ್ವಾಧಿಕಾರಿ ಹಿಟ್ಲರ್‌ನ ಸ್ಥಾನ ತುಂಬಲು ಅರ್ಜಿ ಗುಜರಾಯಿಸಿರುವ ಸಚಿವರು, ಈ ರೀತಿಯ ಸುಳ್ಳು ಸುದ್ದಿ ಪ್ರಕಟಿಸಿ ಪತ್ರಿಕೆ ತಮ್ಮ ಘನತೆಗೆ, ಶ್ರೀಮಂತಿಕೆಗೆ ಚ್ಯುತಿ ತಂದಿದೆ ಎಂದು ಘಂಟಾಘೋಷವಾಗಿ ಸಾರಿದ್ದಾರೆ.

ಮುಖ್ಯಮಂತ್ರಿ ಬಂದರೆ ಕೇವಲ ಮುಕ್ಕಾಲು ಕೋಟಿ ರೂ. ಖರ್ಚಾಗಿದೆ ಅಂತ ಪತ್ರಿಕೆಯವರು ಸುಳ್ಳು ಬರೆದಿದ್ದಾರೆ. ತಮ್ಮ ಇದ್ದಬದ್ದ ಮಾನ ಕಾಪಾಡಲಾದರೂ ಹತ್ತಿಪ್ಪತ್ತು ಕೋಟಿ ಖರ್ಚಾಗಿದೆ ಅಂತ ನಿಜ ವಿಷಯ ಬರೆಯಬಹುದಿತ್ತಲ್ಲ, ಕೇವಲ ಮುಕ್ಕಾಲು ಕೋಟಿ ಖರ್ಚು ಮಾಡಿದ್ದೆಂದು ಮುಖ್ಯಮಂತ್ರಿಗೆ ತಿಳಿದರೆ ತನ್ನ ಮಾನ ಏನಾಗಬೇಡ ಎಂದು ಅವರು ಪ್ರಶ್ನಿಸಿದ್ದಾರೆ.

ವರದಿಗಾರನಿಗೆ ಅ ಆ ಇ ಈಯನ್ನು ಸ್ಲೇಟಿನಲ್ಲಿ ಬರೆದು ಹೇಳಿಕೊಡುವುದಾಗಿ ಪ್ರತಿಜ್ಞೆ ಮಾಡಿರುವ ಸುಸ್ತುವಾರಿ ಮಂತ್ರಿ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈ ಪತ್ರಿಕೆಯನ್ನು ನಂ.1 ಮಾಡಲು ಎಷ್ಟು ಕಷ್ಟ ಪಟ್ಟಿದ್ದೇನೆ, ಈ ಪತ್ರಿಕೆ ನಡೆಸಲು ಕೋಟ್ಯಂತರ ರೂ. ಖರ್ಚಾಗುತ್ತದೆ. ಹಾಗಿರುವಾಗ ಇಂಥ ಪತ್ರಿಕೆಯನ್ನು ನಡೆಸುತ್ತಿರುವ "ನನಗೆ" ಈ ಕನಿಷ್ಠ ಖರ್ಚಿನ ವರದಿ ಅಪಮಾನವಲ್ಲವೆ ಎಂದವರು ಕೇಳಿದ್ದಾರೆ.

ಅಭಿವೃದ್ಧಿ: ತನ್ನ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಆಗಿಲ್ಲ ಅಂತಲೂ ಪತ್ರಿಕೆ ಸುಖಾಸುಮ್ಮನೆ ಸುಳ್ಳಾಸುಳ್ಳು ಬರೆದಿದೆ. ಅಸತ್ಯಾನ್ವೇಷಿಗಳೆ, ನೀವೇ ಬಂದು ನೋಡಿ, ನಮ್ಮ ಕ್ಷೇತ್ರ ಶಂಕುಸ್ಥಾಪನೆಯಲ್ಲಿ ವಿಶ್ವದಾಖಲೆ ಮಾಡಲು ಹೊರಟಿದೆ. ಈ ಕ್ಷೇತ್ರದಲ್ಲಿ ಎಷ್ಟೊಂದು ಶಂಕುಗಳಿವೆಯೆಂದರೆ ವಸತಿರಹಿತರು ಕೂಡ ಈ ಶಂಕುಗಳನ್ನೇ ಆಧುನಿಕ ಶೌಚಾಲಯವಾಗಿಸಿಕೊಂಡು ದೇಹಬಾಧೆ ತೀರಿಸಿಕೊಳ್ಳುತ್ತಾರೆ. ಇಲ್ಲಿರುವ ಸಾವಿರಾರು ಅಡಿಗಲ್ಲುಗಳೇ ತಮ್ಮ ಸಾಧನೆ, ಅಭಿವೃದ್ಧಿ ಕಾರ್ಯಕ್ಕೆ ಸಾಕ್ಷಿ ಎಂದು ಸಚಿವರು ಒದರಿದ್ದಾರೆ.

ಇಲ್ಲಿ ಹುಟ್ಟಿದಾರಭ್ಯ ಪಾಳುಬಿದ್ದಿರುವ ಇಷ್ಟೊಂದು ಅಡಿಗಲ್ಲುಗಳಿವೆಯಲ್ಲ ಎಂದು ತೋರಿಸಿದ ಸಚಿವರು, ಅಭಿವೃದ್ಧಿ ಮಾಡುವ ಕಾರ್ಯವೇನಿದ್ದರೂ ಪತ್ರಿಕೆಗಳಿಗೆ ಬಿಟ್ಟ ವಿಷಯ. ತನ್ನ ಕೆಲಸ ಅಡಿಗಲ್ಲು ಹಾಕಿ ಭಾಷಣ ಮಾಡುವುದು ಮಾತ್ರ. ಇದಕ್ಕೇ ಸಾಕಷ್ಟು ಸಮಯ ತಗುಲುತ್ತದೆ. ಹೀಗಿರುವಾಗ ಪತ್ರಿಕೆಯವರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದಿದ್ದರೆ ಮುಂದಿನ ಬಾರಿ ಮತಭಿಕ್ಷೆಗಾಗಿ ಮತದಾರರಿಗೆ ಮುಖತೋರಿಸುವುದಾದರೂ ಹೇಗೆ ಎಂದವರು ಪ್ರಶ್ನಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಸುಳ್ಳು ಸುದ್ದಿ ಪ್ರಕಟಿಸಿ ಮಾನ ಮಂತ್ರಿಗಳ ಮಾನ (ಇದೆಯೆಂದು ಭಾವಿಸುವೆ) ಕಾಪಾಡಿದ ಕನ್ನಡಿಗರ ಎಮ್ಮೆಗೆ ಎಷ್ಟು ಕಾಣಿಕೆ ಸಿಕ್ಕಿತೆಂಬುದು ತಿಳಿಯಲಿಲ್ಲ. ಪಕ್ಕಕ್ಕೆ ಬರುವೆ ನನಗೊಬ್ಬನಿಗೇ ತಿಳಿಸಿ. ನಾನು ಪಾಲು ಕೇಳುವುದಿಲ್ಲ.

    ಚಾಟು ಡಬ್ಬವನ್ನೂ ಸೇರಿಸಿರುವುದು ಬಹಳ ಸಂತೋಷದ ವಿಷಯ. ಮಿಕ್ಕೆಲ್ಲ ಅಂತರ್ಜಾಲ ಪತ್ರಿಕೆಗಳಿಗೆ ಪತ್ರಿಕೆಯು ಸಡ್ಡು ಹೊಡೆಯುತ್ತಿದೆ ಎಂಬುದು ಗಾಳಿಯ ಕೇಳಿಬಂದ ಮಾತು.

    ಪ್ರತ್ಯುತ್ತರಅಳಿಸಿ
  2. ಮಾವಿನರಸರೇ,
    ನಿಮ್ಮ ಮಾವಿನ ರಸಾಯನದಂತಹ ನುಡಿಗೆ ಧನ್ಯವಾದಗಳು. ಏನೇ ಆದರೂ ನಿಮ್ಮ ಡಿಸ್ಪ್ಲೇ ಹೆಸರಂತೂ ನನ್ನ ನಾಲಿಗೆಯಲ್ಲಿ ಸರಿಯಾಗಿ ನಿಲ್ಲುವುದೇ ಇಲ್ಲ. ಅದಕ್ಕಾಗಿ ಮಾವಿನ ರಸವೇ ಸೂಕ್ತ ಎಂದು ಭಾವಿಸುತ್ತೇನೆ.

    ಚಾಟು ಡಬ್ಬವನ್ನು ನಿಮ್ಮಿಂದಲೇ ಕದ್ದದ್ದು ಅಂತ ನಿಮಗೆ ಗೊತ್ತಾಗದಿದ್ದರೆ ಸಾಕು ಮಾರಾಯ್ರೇ...

    ಎಷ್ಟು ಕಾಣಿಕೆ ಸಿಕ್ಕಿದೆ ಅಂತ ಕೇಳಿದ್ರೀ ತಾನೆ? ಹೇಳಿಬಿಡುತ್ತೇನೆ. ಇತ್ತ ಆಲಿಸಿ "#$@!^&*$#@" ಕೇಳಿಸಿತಲ್ವ....?

    ಪ್ರತ್ಯುತ್ತರಅಳಿಸಿ
  3. houdu nanu kannadigalu :) nanna blog nanna bhavanegalannu heluthade. nanu ondu dodda sankastha dalli iddene addarinda nanna blogs hange ide. kannada fonts kanisuthede.
    reply madidakke Dhanyavada

    ಪ್ರತ್ಯುತ್ತರಅಳಿಸಿ
  4. ಬೊಗಳೆ ಓದಲು ಆಸಕ್ತಿ ತೋರಿದ್ದಕ್ಕೆ ಧನ್ಯವಾದ ಒಗಟು ಅವರೆ,
    ನಿಮ್ಮೆಲ್ಲಾ ಸಂಕಷ್ಟಗಳು ಬೊಗಳೆ ವಾಚನ (ಪುರಾಣವಾಚನ, ಸಹಸ್ರನಾಮಾರ್ಚನೆ ಇತ್ಯಾದಿಯಂತೆ)ದಿಂದ ಪರಿಹಾರವಾಗುತ್ತವೆ ಎಂದು ಅಸತ್ಯಾನ್ವೇಷಿ ಮುನಿಗಳು ಭರವಸೆ ನೀಡಿದ್ದಾರೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D