ಬೊಗಳೆ ರಗಳೆ

header ads

ಗಡಿ ಭದ್ರತೆಗೆ ಬೀದಿ ನಾಯಿ: ಶ್ವಾನ ಸಂಘ ಹರ್ಷ

(ಬೊಗಳೂರು ಶ್ವಾನಪ್ರಿಯ ಬ್ಯುರೋದಿಂದ)
ಬೊಗಳೂರು, ಜೂ. 12- ಬೀದಿ ನಾಯಿಗಳೂ ಕಾಲ ಬಂದಿರುವುದರಿಂದ, ಇತ್ತೀಚೆಗೆ ಎಲ್ಲ ಬೀದಿ ನಾಯಿಗಳು ಸೈನ್ಯ ಸೇರಲು ಅರ್ಜಿ ಸಲ್ಲಿಸಿವೆ. ಇದಕ್ಕೆ ಪ್ರಧಾನ ಕಾರಣವೆಂದರೆ, ಬೀದಿ ನಾಯಿಗಳಿಗೂ ಸಾಕಷ್ಟು ತಿಂದುಣ್ಣಲು ದೊರೆಯುತ್ತದೆ, ಕುಡಿಯಲು ಬಿಯರ್ ದೊರೆಯುತ್ತದೆ ಎಂಬುದೇ ಆಗಿದೆ.

ಶ್ವಾನಗಳಿಗೆ ಬಿಯರ್ ಕೊಟ್ಟರೆ ಏನು ಪ್ರಯೋಜನ ಎಂದು ಊರಿಡೀ ಸುತ್ತಾಡಿದರೂ ಸಿಗಲೊಲ್ಲದ, ಕೊನೆಗೂ ಸಿಕ್ಕ ಒಂದು ಬೀದಿ ನಾಯಿಯನ್ನು ಮತ್ತು ಅದರ ಏಕಸದಸ್ಯ ಸಂಘದ ಅಧ್ಯಕ್ಷೆಯನ್ನು ಕೇಳಲಾಯಿತು.

ಉತ್ತರ ಮುಗುಮ್ಮಾಗಿತ್ತು. ನೀವು ಹೀಗೆಲ್ಲಾ ಕೇಳಿ ನಮಗೆ ಸಿಗೋ ಬಿಯರ್ ಕೂಡ ಇಲ್ಲದಂತೆ ಮಾಡಬೇಡಿ ಎಂಬ ಮನವಿಯೊಂದಿಗೇ ಮಾತಿಗೆ ಆರಂಭಿಸಿದ ಶ್ವಾನ ಕು'ಮರಿ', ಗಡಿಯಾಚೆಗಿಂದ ಸಾಕಷ್ಟು ಬಾಂಬ್‌ಗಳು ಇತ್ತ ಬರುತ್ತವೆ. ಅವುಗಳಲ್ಲಿ ಜಿಹಾದಿ ಮಾನವ ಬಾಂಬುಗಳೂ ಸೇರಿರುತ್ತವೆ. ಈ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲು ನಮ್ಮನ್ನು ಬಳಸಲಾಗುತ್ತದೆ ಎಂದು ಶ್ವಾನ ಕು(ನ್ನಿ)'ಮರಿ' ಹೇಳಿದಳು.

ಅದು ಹೇಗೆ, ಎಂದು ಗೊತ್ತಿದ್ದರೂ ಗೊತ್ತಿಲ್ಲದಂತೆ ಬೊಗಳೂರು ಪ್ರತಿನಿಧಿಗಳು ಕೇಳಿದರು.

ಅದಕ್ಕೆ ಬಂದ ಉತ್ತರ ಹೀಗಿತ್ತು: ಬೀದಿಬೀದಿಗಳಲ್ಲಿ ಸುತ್ತಾಡುತ್ತಾ, ಲೈಟುಕಂಬ, ಟೆಲಿಫೋನ್ ಕಂಬಗಳನ್ನು ಕಂಡಾಗ ಒಂದು ಕಾಲೆತ್ತುತ್ತಾ, ಈ ಕಂಬಗಳು ಬುಡದಿಂದಲೇ ಮುರಿಯುವಷ್ಟರ ಮಟ್ಟಿಗೆ ನಮ್ಮ ಚಾಕಚಕ್ಯತೆ ಪ್ರದರ್ಶಿಸುತ್ತಿದ್ದೆವು. ಈ ಕಾರಣಕ್ಕೆ ನಮ್ಮ ಬೀದಿ ನಾಯಿಗಳ ಸಂಘವನ್ನೇ ಆರಿಸಿ, ನಮ್ಮನ್ನೇ ಸೇನೆಗೆ ಸೇರಿಸಿಕೊಳ್ಳಲಾಗಿದೆ ಎಂದು ಆಕೆ ವಿವರಿಸಿದಳು.

"ಇಷ್ಟು ಪ್ರಬಲವಾಗಿರುವ ಯೂರಿನಾಸ್ತ್ರ ಬಳಸಿ, ಯಾವುದೇ ತೆರನಾದ ಬಾಂಬ್‌ಗಳನ್ನೂ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ನಮ್ಮ ರಕ್ತದಲ್ಲೇ ಇದೆ. ರಕ್ತದಲ್ಲಿದ್ದ ಅದು ಶೋಧನೆಗೊಂಡು, ಒಂದು ಕಾಲೆತ್ತಿದಾಗ ಹೊರಗೆ ಬರುತ್ತದೆ. ಈ ಯೂರಿನಾಸ್ತ್ರ ಬಿದ್ದ ತಕ್ಷಣ ಯಾವುದೇ ಬಾಂಬ್ ಕೂಡ ಗಪ್‌ಚುಪ್" ಎಂದು ಉತ್ತರಿಸುತ್ತಾ, ಬಾಲವೆತ್ತಿ, ಡೊಂಕಾದ ಬಾಲವನ್ನು ಸರಿಪಡಿಸಿಕೊಳ್ಳಲು ಹೆಣಗಾಡುತ್ತಾ ಶ್ವಾನ ಕು-ಮರಿ ಅಲ್ಲಿಂದ ಒಂದು ಕಾಲುಕಿತ್ತಿತು.

ನಮ್ಮ ಪ್ರತಿನಿಧಿಗಳು ಕುಮಾರಣ್ಣನಂತೆ ಮುಖಕ್ಕೆ ಕರವಸ್ತ್ರ ಮುಚ್ಚಿಕೊಂಡು ಅಲ್ಲಿಂದ ಕಾಲುಕಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಓಹ್! ಈಗಲಾದ್ರೂ ಬೀದಿ ನಾಯಿಗಳ ಬಲದ ಅರಿವಾಯ್ತಲ್ಲ! ಅವುಗಳನ್ನು ನಂಬಿದರೆ ನಮ್ಮ ರಕ್ಷಣೆಗೆ ಲೋಪವಿಲ್ಲ. ಅದಕ್ಕೇ ಅಲ್ವೇ ಹೇಳೋದು, ಹಮಾರ ಕುತ್ತಾ ಹಮಾರ ದೇಶ್ ಕಾ ಶ್ವಾನ್ ಹೈ ಶಾನ್ ಹೈ ನಿಶಾನ್ ಹೈ - ಬೀದಿ ನಾಯಿಗಳಿಗೆ ಸಂಸತ್ತಿನಲ್ಲಿ ಖುರ್ಚಿ ಕಾಯ್ದಿರಿಸುವುದರ ಬಗ್ಗೆ ಉನ್ನತ ಮಟ್ಟದ ಚರ್ಚೆ ನಡೆದಿದೆ ಎಂಬುದನ್ನು ಬಹಿರಂಗವಾಗಿ ಹೇಳಲಿಚ್ಛಿಸುವುದಿಲ್ಲ

    ಪ್ರತ್ಯುತ್ತರಅಳಿಸಿ
  2. ಕಾಲೆತ್ತುವವನಿ(ಳಿ)ಗೇ ಕಾಲ ಅಂತಾಯ್ತು!

    ಪ್ರತ್ಯುತ್ತರಅಳಿಸಿ
  3. ಬೀದಿನಾಯಿಗಳ ಉಪಯೋಗ ಸದ್ಯ ಇಲ್ಲಾದರೂ ಆಯ್ತಲ್ಲಾ, ಅದೇ ಸಂತೋಷ :)

    ಪ್ರತ್ಯುತ್ತರಅಳಿಸಿ
  4. ಶ್ರೀನಿವಾಸರೆ,
    ಬೀದಿನಾಯಿಗಳ ಬಲ ಮಾತ್ರವಲ್ಲ ಅವುಗಳ ಬಾಲದ ಬಲದ ಬಗ್ಗೆಯೂ ಈಗಾಗಲೇ ನಮಗೆ ಅರಿವಾಗಿದೆ. ಇದಕ್ಕೆ ಕಾರಣ, ಅಂದು ನಿಮ್ಮೂರಿಗೆ ಬಂದಾಗ, ಅದರ ಬಾಲ ಅಲ್ಲಾಡಿಸಲು ಜಾಗ ಬಿಡದ್ದಕ್ಕೆ ನಮ್ಮೂರಿನಿಂದ ನಿಮ್ಮೂರಿನವರೆಗೆ ವಾಹನಕ್ಕಿಂತಲೂ ವೇಗವಾಗಿ ಹೋಗುವಂತೆ ಮಾಡಿತ್ತು! ಯೇ ತೋ ಹಮಾರಾ ಶ್ವಾನ್ ಹೈ, ಆಪ್ ಕಾ ಶ್ವಾನ್ ಹೈ.

    ಪ್ರತ್ಯುತ್ತರಅಳಿಸಿ
  5. ಸುನಾಥರೆ,
    ಅದು ಕಾಲು ಎತ್ತುವ ಕಾರಣದಿಂದಾಗಿಯೇ ಕೆಲವೆಡೆ ಅದಕ್ಕೆ ಕಾಳು ಅಂತಲೂ ಹೆಸರಿಡುತ್ತಾರೆ ಎಂದು ಸಂಚೋದಿಸಿದ್ದೇವೆ. ಇದು ನಿಮಗೆ ತಿಳಿದಿರಲಿ ಅಂತ ಅಂಕಣದಲ್ಲಿ ಇದನ್ನು ಪ್ರಕಟಿಸಬೇಕೆಂದಿದ್ದೇವೆ.

    ಪ್ರತ್ಯುತ್ತರಅಳಿಸಿ
  6. ಸಾಗರದಾಚೆಯಿಂದ ಬರುವವರೆ,
    ಮೆಲ್ಲಗೆ ಹೇಳಿ, ಜಾರಕಾರಣಿಗಳಿಗೇನಾದ್ರೂ ಗೊತ್ತಾದ್ರೆ, ಅವೆಲ್ಲವನ್ನೂ ಹಿಡಿದು ತಂದು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಬಿಟ್ಟಾರು!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D