ಬೊಗಳೆ ರಗಳೆ

header ads

ಪರಲೋಕ ಯಾತ್ರೆ: ಮೀಸಲಾತಿಗೆ ತಾಕೀತು!

(ಬೊಗಳೂರು ಪರಲೋಕ ಯಾತ್ರೆ ಬ್ಯುರೋದಿಂದ)
ಬೊಗಳೂರು, ಅ.22- ಪರಲೋಕ ಯಾತ್ರೆಗೆ ಚಂದ್ರಯಾನ ಕೈಗೊಂಡ ವಿಜ್ಞಾನಿಗಳ ವಿರುದ್ಧ ಕೇಂದ್ರ ಸರಕಾರವು ಕೆಂಡ ಕಾರಿದೆ. ಇದಕ್ಕೆ ಅದು ಕಾರಣಗಳ ಪಟ್ಟಿ ಮಾಡಿದ್ದು, ಅದನ್ನು ಬೊಗಳೂರು ಬ್ಯುರೋಗೆ ಮಾತ್ರ ಅದು ಕಳುಹಿಸಿದೆ.

ಚಂದ್ರನಲ್ಲಿಗೆ ಮಾನವರಹಿತವಾಗಿಯೇ ನೌಕೆಯನ್ನು ಕಳುಹಿಸಿದ್ದೇಕೆ? ಈ ಪ್ರಯಾಣದ ಸಂದರ್ಭದಲ್ಲಿ ಕೆಲವೊಂದು ಸೀಟುಗಳನ್ನು ಮೀಸಲಾತಿ ಮೂಲಕ ಓಟು ನೀಡುವವರಿಗೆಲ್ಲಾ ವಿತರಿಸಬಹುದಿತ್ತಲ್ಲಾ?

ಅಲ್ಪಸಂಖ್ಯಾತರೆಂದರೆ ಎಲ್ಲರಿಂದಲೂ ನಿರ್ಲಕ್ಷಿಸಲ್ಪಡುತ್ತಿರುವವರು. ಅವರಿಗಾದರೂ ಈ ಗಗನ ಯಾತ್ರೆಯಲ್ಲಿ ಪ್ರಾಮುಖ್ಯತೆ ನೀಡಬಹುದಿತ್ತು.

ಅಲ್ಲಿಗೆ ಒಂದಷ್ಟು ಮಂದಿಯನ್ನು ಕಳುಹಿಸಿದ್ದರೆ, ಅಲ್ಲಿಯೇ ಅವರು ಮಕ್ಕಳು-ಮರಿಗಳನ್ನು ಮಾಡಿಕೊಂಡು, ಮುಂದಿನ ಮಹಾ ಚುನಾವಣೆ ವೇಳೆಗೆ ಓಟು ಹಾಕುವ ನಿಟ್ಟಿನಲ್ಲಿ ಭಾರತಕ್ಕೆ ಕರೆಸಿಕೊಳ್ಳಬಹುದಾಗಿತ್ತಲ್ಲ... ಈ ಅಮೂಲ್ಯ ಅವಕಾಶವನ್ನು ಹಾಳು ಮಾಡಿದ್ದೇಕೆ?

ಒಂದು ಸಣ್ಣ ಜನೋಪಯೋಗಿ ರಸ್ತೆಯ ಕಾಮಗಾರಿಯಲ್ಲೇ ಸಾಕಷ್ಟು ನುಂಗುವವರು ನಾವು. ಇದರ ಸಿಬಿಐ ತನಿಖೆಯಾಗುವಷ್ಟರ ಮಟ್ಟಿಗೆ ನಾವು ಒಂದು ಪುಟ್ಟ ಯೋಜನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವಂತೆ ಮಾಡುತ್ತೇವೆ. ಹೀಗಿರುವಾಗ ಈ ನೂರಾರು ಕೋಟಿ ರೂಪಾಯಿ ವೆಚ್ಚದ, ಅಂತಾರಾಷ್ಟ್ರೀಯ ಯೋಜನೆಯಲ್ಲಿಯೂ ಅವ್ಯವಹಾರವಾಗಿದ್ದಿದ್ದರೆ, ನಮ್ಮ ಹೆಸರು ಓಟಿನ ಸಂದರ್ಭ ಪ್ರತಿಯೊಬ್ಬರ ಬಾಯಲ್ಲೂ ಕೇಳಿಬಂದು, ನಮಗೆ ಪ್ರಚಾರ ಸಿಗುವಂತಾಗುತ್ತಿತ್ತಲ್ಲ... ಅದನ್ನೇಕೆ ತಪ್ಪಿಸಿದಿರಿ? ಇದರಲ್ಲೇಕೆ ಹಣ ನುಂಗಲು ಬಿಡಲಿಲ್ಲ? ಕೂಡಲೇ ಸ್ಪಷ್ಟನೆ ನೀಡತಕ್ಕದ್ದು.

ಈಗಾಗಲೇ ಪರಲೋಕ ಯಾತ್ರೆಗೆ ನಮ್ಮ ಓಟಿನ ಬ್ಯಾಂಕೇ ಆಗಿಬಿಟ್ಟಿರುವ ಭಯ ಉತ್ಪಾದನಾ ಸಂಘಟನೆಗಳು ಸಾಕಷ್ಟು ಶ್ರಮ ವಹಿಸುತ್ತಿವೆ. ಅವುಗಳನ್ನು ಮೀರಿಸಿ ಪರಲೋಕ ಯಾತ್ರೆ ಕೈಗೊಂಡಿದ್ದು, ಅವರನ್ನು ಮೂಲೆಗುಂಪು ಮಾಡುವ ಮತ್ತು ತುಳಿಯುವ, ದಬ್ಬಾಳಿಕೆ ನಡೆಸುವ, ದೌರ್ಜನ್ಯ ಮಾಡುವ ಉದ್ದೇಶವನ್ನೇ ಹೊಂದಿರುವುದು ಸ್ಪಷ್ಟವಾಗಿದೆ. ಹೀಗಾಗಿ ಈ ಕುರಿತು ತನಿಖೆ ಎದುರಿಸಲು ಸಿದ್ಧರಾಗಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

12 ಕಾಮೆಂಟ್‌ಗಳು

  1. ಸೊಂಪಾದಕರೆ,
    “ಭೂಭಾರಹರಣದ ಉದ್ದೇಶಕ್ಕಾಗಿ ಇಹಲೋಕಸಭೆಯ ರಾಜಕಾರಣಿಗಳನ್ನು (ಮಧು)ಚಂದ್ರಯಾನದಲ್ಲಿ ಕಳುಹಿಸಲಾಗುವದು” ಎಂದು ನಿಧಾನಮಂತ್ರಿ ಒಣಮೋರೆ ಸಿಂಗಣ್ಣನವರು ಘೋಷಣೆ ಮಾಡಿದ ಬಳಿಕ ಕೇಳಿದ ಪ್ರತಿಕ್ರಿಯೆಗಳು ಹೀಗಿವೆ:

    ೧) “ತೂಕದಲ್ಲಿ ಹಾಗೂ ವಯಸ್ಸಿನಲ್ಲಿ ನಾನೇ ಹಿರಿಯ. ಆದ್ದರಿಂದ (ನನ್ನ ನಾಲ್ಕನೆಯ ಹೆಂಡತಿಯೊಂದಿಗೆ) ಮಧುಚಂದ್ರಕ್ಕೆ ನನ್ನನ್ನೇ ಮೊದಲು ಹಾರಿಸಬೇಕು”
    - - -ತಮಿಳುಕಾಡಿನ ಮರಣಾನಿಧಿ
    ೨) “ಇಲ್ಲಿ ನಿಮಗೆ ಸಲ್ಲಬೇಕಾದರೆ, ಅಲ್ಲಿ ನನ್ನನ್ನು ಸಲ್ಲಿಸಿರಿ”
    - - - ಶಿಬಿ ಸೋರಪ್ಪ
    ೩) “ಭೂಮಿಯ ಮೇಲೆ ನಾನು ನೂರು ಕೆಜಿ; ಚಂದ್ರನ ಮೇಲೆ ಕೇವಲ ೨೦ ಕೆಜಿ. ಆದ್ದರಿಂದ ಮರ ಸುತ್ತುತ್ತ ಹಾಡುವ ದೃಶ್ಯಗಳ ಶೂಟಿಂಗ ಅಲ್ಲಿ ಹಗುರ. ನನ್ನನ್ನೇ ಕಳುಹಿಸಿರಿ. ನಾಯಕನಾಗಿ ಯಾವುದೇ ಮಂಗನನ್ನು ಕಳುಹಿಸಬಹುದು”
    - - -ಮಾಜಿ ನಟಿ ಗೋಲಶ್ರೀ

    ಹೆಚ್ಚಿನ ಪ್ರತಿಕ್ರಿಯೆಗಳು ಈ ಕಿವುಡು ಕಿವಿಯ ಮೇಲೆ ಬಿದ್ದರೆ, ಮತ್ತೆ ಬರೆದು ಕಳಿಸುವೆನು (ನೀವೂ ಸಹ ಹಾರಿಲ್ಲ ಎಂದಾದರೆ.)
    ---ನಿಮ್ಮ ವ-ರದ್ದಿಖೋರ.

    ಪ್ರತ್ಯುತ್ತರಅಳಿಸಿ
  2. ಚಂದ್ರಯಾನಕ್ಕೆ ಹೋಗುವ ಸಲುವಾಗಿ ಮೀಸಲಾತಿ ಪಡೆಯಲು ಏನು ಮಾಡ್ಬೇಕು?
    ಗಣಪತಿ ಹಬ್ಬದ ದಿನ ಚಂದ್ರನನ್ನು ಕಂಡು ಶಾಪಗ್ರಸ್ತರಾದವರಿಗೆ ಮೀಸಲಾತಿ ಇದೆ ತಾನೆ? ಪ್ರತಿ ವರ್ಷ ತಪ್ಪದೆ ನಾನು ಶಾಪಗ್ರಸ್ತನಾಗುತ್ತಿರುವೆ - ಹಾಗಾಗಿ, ಮೀಸಲಾತಿಯಲ್ಲಿ ಅಗ್ರಪಾಲು ನನಗೇ ಸಲ್ಲಬೇಕು. ಇಲ್ಲದಿದ್ದರೆ ಟಾಕ್ ರಾಜ್ರೇಗೆ ಹೇಳಿ ನಿಮಗೆ ಅತ್ತ ಮಾಡಿಸ್ತೀನಿ - ಅದೂ ಆಗದಿದ್ದರೆ (ಒಂದೊಂದು ಸಲ ಅವನು ನನ್ನ ಮಾತು ಕೇಳೋಲ್ಲ) - ನಿಮ್ಮ ಕಛೇರಿ ಮುಂದೆ ಸಂಪು ಮಾಡುವೆ

    ಪ್ರತ್ಯುತ್ತರಅಳಿಸಿ
  3. ದಲಿತರಿಗೆ ಮೀಸಲಾತಿ ೩೦%
    ದಲಿತ ಮುಸ್ಲಿಮರಿಗೆ ೧೫%
    ದಲಿತ ಕ್ರಿಶ್ಚಿಯನ್ನರಿಗೆ ೧೫%
    ಮುಸ್ಲಿಮರಿಗೆ ೧೫%
    ಕ್ರಿಶ್ಚಿಯನ್ನರಿಗೆ ೧೫%
    ಅನ್ಯ ಹಿಂದುಳಿದವರಿಗೆ ೧೦%
    ಹಿಂದೂಗಳಿಗೆ ಚೊಂಬು
    ಇದು ಭವ್ಯ ಭಾರತದ ಮೀಸಲಾತಿ ನೀತಿ.....ಈ ಕಾಂಗ್ರೆಸ್ಸಿನ ದೇಶವಿರೋಧಿಗಳು ಎಲ್ಲಿವರೆಗೆ ಕೇಂದ್ರದಲ್ಲಿ ಆಡಳಿತದಲ್ಲಿರುತ್ತಾರೋ ಅಲ್ಲಿವರೆಗೆ ನಮ್ಮ ಹಿಂದೂಗಳು ತೃತೀಯ ದರ್ಜೆಯ ಪ್ರಜೆಗಳಾಗಿ ಬಾಳುವುದನ್ನು ತಪ್ಪಿಸಲು ಯಾವನಿಂದಲೂ ಸಾಧ್ಯವಿಲ್ಲ. ಅಲ್ಲದೆ ೧೦೦% ಮತಾಂತರ ಮಾಡದೆ ಸೋನಿಯಾ ಕೂಡಾ ವಿರಮಿಸಳು.

    ಪ್ರತ್ಯುತ್ತರಅಳಿಸಿ
  4. ಅಸತ್ಯಾನ್ವೇಷಿಗಳೆ, ಒಳ್ಳೆ ಪೋಸ್ಟ್.. ಅದಕ್ಕಿಂತ ಒಳ್ಳೆ ಕಮೆಂಟ್ ಸುನಾಥರಿಂದ :-)

    ಪ್ರತ್ಯುತ್ತರಅಳಿಸಿ
  5. ಅಸತ್ಯಾನ್ವೇಷಿಗಳೇ,
    ಬಲು ಮಜಾ ಇದೆ ಸಾರ್. ಓದಿ ನಗು ಬಂತು ಮತ್ತು ಸತ್ಯ ಅನಿಸಿತು.
    ನೀವು ನನ್ನ ಬ್ಲಾಗಿಗೊಮ್ಮೆ ಬನ್ನಿ. ನಾನು ಛಾಯಗ್ರಾಹಕನಾದ್ದರಿಂದ ನಿಮಗಲ್ಲಿ ಫೋಟೊ ಮತ್ತು ಲೇಖನಗಳು ಇಷ್ಟವಾಗಬಹುದು. ಆಹಾಂ! ಈಗ ನನ್ನ ಬ್ಲಾಗಿಗೆ ನಾಚಿಕೆಯಿಲ್ಲದ ಪಾರಿವಾಳ ಬಂದಿದೆ !
    ಶಿವು.ಕೆ

    ಪ್ರತ್ಯುತ್ತರಅಳಿಸಿ
  6. ಸುನಾಥರೆ,
    ಭೂಮಿಯಲ್ಲಿ ಹಣ ಎಲ್ಲ ಮಣಭಾರವಾಗುತ್ತಿದೆ. ಈ ಭಾರ-ಹರಣ ಮಾಡುವುದಕ್ಕಾಗಿಯೇ ಇರೋದು ಜಾರಕಾರಣಿಗಳು. ಸೋ ಅವವರೆಲ್ಲರೂ ಪರಲೋಕಕ್ಕೇ ಸೇರುವ ಸಂಚು ಮಾಡಿಕೊಳ್ಳುತ್ತಿದ್ದಾರೆ ಅಂತ ಪರಮಾತ್ಮನು ಸಂದೇಶ ನೀಡಿದ್ದಾನೆ.

    ಪ್ರತ್ಯುತ್ತರಅಳಿಸಿ
  7. ಲಕ್ಷ್ಮಿ ಅವರೆ!!!
    ದೀಪಾವಳಿಗಾಗಿ ನಮಗೆ ಐದಾರು ನಕ್ಷತ್ರ ಕಡ್ಡಿಗಳನ್ನು ಇಟ್ಟು ಹೋದದ್ದಕ್ಕೆ ಧನ್ಯವಾದ.

    ಪ್ರತ್ಯುತ್ತರಅಳಿಸಿ
  8. ಖಖಖ ಅಲ್ಲಲ್ಲ ಶ್ರೀಶ್ರೀಶ್ರೀ ಅವರೆ,
    ನೀವು ನಮ್ಮ ಮನೆ ಎದುರು ಒಂದು ಪಂಪು ಹಾಕಿದರೆ ಅತ್ಯುತ್ತಮ. ಅದು ಹೊಚ್ಚ ಹೊಸದಿರಲಿ, ವಿದೇಶದಿಂದ ತಂದಿದ್ದಾಗಿರಲಿ, ಮತ್ತು ಬೆಲೆ ಎಷ್ಟಾದರೂ ಪರವಾಗಿಲ್ಲ, ಹಣ ತೆತ್ತು ಖರೀದಿಸಿ ತನ್ನಿ. ನಾವು ಆರಾಮವಾಗಿ ಬಳಸುತ್ತೇವೆ. ಅದನ್ನು ಬಳಸುವುದಕ್ಕೆ ಮಾತ್ರ ನಮಗೆ 100 ಶೇ. ಮೀಸಲಾತಿ. ಹಣ ತೆರುವುದಕ್ಕೆ ಬೇಕಿದ್ದರೆ ನೀವೇ 100 ಶೇ. ಮೀಸಲಾತಿ ಇಟ್ಟುಕೊಳ್ಳಿ.

    ಪ್ರತ್ಯುತ್ತರಅಳಿಸಿ
  9. ಗುರುಗಳೇ,
    ನೀವು ಹೇಳಿದ ಚೊಂಬಿಗೂ ಮೀಸಲಾತಿ ಇದೆ. ಅದರಲ್ಲಿ ಹಿಡಿಸಬಹುದಾದ ನೀರನ್ನೂ ಕೂಡ ಇಂಥಲ್ಲಿಗೆ ಇಷ್ಟಿಷ್ಟೇ ಬಳಸಬೇಕು ಎನ್ನೋ ಮೀಸಲಾತಿ ಲೆಕ್ಕಾಚಾರ ಹಾಕಲಾಗುತ್ತಿದೆ ಎಂದು ಮಾವನ ಸಂಪನ್ಮೂಲ ಹೆಚ್ಚಳಗೊಳಿಸುವ ಸಚಿವ ದುರ್ಜನ ಸಿಂಗರು ದೃಢಪಡಿಸಿದ್ದಾರೆ.

    ಪ್ರತ್ಯುತ್ತರಅಳಿಸಿ
  10. ಹರೀಶರೇ,

    ನೀವು ಒಳ್ಳೆಯ ಅಂಚೆ ಅಂತ ಹೇಳಿದ್ದು ಕೇಳಿ ಇರಿಸುಮುರಿಸು ಆಯಿತು ಮತ್ತು ಸುನಾಥರನ್ನೇ ನಿಮ್ಮ ಬ್ಯುರೋದ ಮುಖ್ಯಸ್ಥರನ್ನಾಗಿ ಮಾಡಿಸುವ ಸಂಚಿನ ಬಗ್ಗೆಯೂ ಸುಳಿವು ದೊರೆಯಿತು. ಅವರನ್ನು ನಾವು ಬಿಟ್ಟುಕೊಡುವುದಿಲ್ಲ.

    ಪ್ರತ್ಯುತ್ತರಅಳಿಸಿ
  11. ಶಿವು ಅವರೆ, ನಿಮಗೆ ಸ್ವಾಗತ.

    ಆದರೆ ಬಂದ ಪೆಟ್ಟಿಗೇ, ನೀವು ಈ ರೀತಿಯ ಆರೋಪ ಮಾಡಿ ನಮ್ಮನ್ನು ಕಂಗೆಡಿಸಿದ್ದೀರಿ. ಇದನ್ನು ಓದಿ ನಗು ತರಿಸಿತು ಮತ್ತು ಸತ್ಯ ಅನ್ನಿಸಿತು ಅಂದಿದ್ದೀರಿ. ಹೀಗಾಗಿ ನಾವೀಗಾಗಲೇ ನಮ್ಮ ವ-ರದ್ದಿ-ಕೋರರಿಗೆ ನೋಟೀಸ್ ಜಾರಿ ಮಾಡಿದ್ದೇವೆ. ಇನ್ನು ಮುಂದೆ ಹೀಗಾಗದು ಎಂಬ ಭರವಸೆಯೂ ದೊರೆತಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D