2009 ರೆಸೊಲ್ಯುಷನ್: ಬೊಗಳೆ ಬ್ಯುರೋ ಬಂದ್

Wednesday, December 31, 2008

(ಬೊಗಳೂರು ಹೊಸವರ್ಷ ಬ್ಯುರೋದಿಂದ)
ಬೊಗಳೂರು, ಡಿ.31- ಹೊಸ ವರ್ಷ ಬರುತ್ತಿರುವಂತೆಯೇ, ಬೊಗಳೂರು ಮುಂದಿನ ವರ್ಷಕ್ಕೆ ಯಾವ ನಿರ್ಣಯ ಕೈಗೊಳ್ಳುತ್ತದೆ? ಅದರ ರೆಸೊಲ್ಯುಷನ್ ಹೇಗಿರಬಹುದು ಎಂಬ ಕುತೂಹಲ, ಹಪಹಪಿಕೆ, ಗ್ರಹಿಕೆ, ಪೂರ್ವಗ್ರಹಿಕೆ, ವಾಕರಿಕೆ ಎಲ್ಲ ಇರುವವರಿಗೆ ಇದೋ ಇಲ್ಲಿದೆ ಉತ್ತರ.

ಒಂದು ಸಂಗತಿ ಸ್ಪಷ್ಟಪಡಿಸುತ್ತಿದ್ದೇವೆ. ಇದು ಸ್ಮೋಕಿಂಗ್ ಬಿಟ್ಟು ಬರೇ ಕಿಂಗ್ ಆಗುತ್ತೇನೆ, ಕಿಂಗ್ ಫಿಶರ್ ಡ್ರಿಂಕಿಂಗ್ ಬಿಟ್ಟು ಓಲಾಡದ ಕಿಂಗ್ ಮಾತ್ರ ಆಗುತ್ತೇನೆ, ಅದು ಮಾಡುತ್ತೇನೆ, ಇದು ಮಾಡುತ್ತೇನೆ ಎಂದೆಲ್ಲಾ ಹೊಸ ವರ್ಷದ ಹಿಂದಿನ ದಿನವೇ ರಾತ್ರಿ ಪಾರ್ಟಿ ಆರಂಭವಾಗುವ ಮುನ್ನ ನಿರ್ಣಯ ಕೈಗೊಂಡು, ಪಾರ್ಟಿಯಲ್ಲಿ ತೇಲಾಡಿದ ಬಳಿಕ "ನಾನು ವಾಗ್ದಾನ ಮಾಡಿದ್ದು ಕಳೆದು ಹೋದ ವರ್ಷದಲ್ಲಿ ಅಲ್ವಾ? ನಾನು ಕಳೆದ ವರ್ಷದ ಬಗ್ಗೆಯೇ ಹೇಳಿದ್ದು. ಈ ವರ್ಷ ಏನಿದ್ರೂ ಹೊಸಾ ವರ್ಷ ಅಲ್ವಾ" ಅಂತ ಜಾರಿಕೊಳ್ಳುವವರು, "ಹೌದಾ? ನಾನು ಇಂತಹ ರೆಸೊಲ್ಯುಶನ್ ಕೈಗೊಂಡಿದ್ದೇನೆಯೇ?" ಎಂದು ನಮ್ಮನ್ನೇ ಯಾಮಾರಿಸಿ ಮರು ಪ್ರಶ್ನಿಸುವವರು, "ಈ ರೀತಿ ನಿರ್ಣಯ ಕೈಗೊಂಡಿದ್ದಿರಲೂಬಹುದು, ಆಗ ನಾನು ಅಮಲಿನಲ್ಲಿದ್ದಿರಬಹುದು" ಎಂದು ಸಮಜಾಯಿಷಿ ನೀಡುವವರು, "ನಾನು ಬೇರೆಯೇ ಹೇಳಿದ್ದೆ, ಇದನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ' ಅನ್ನೋ ಪಕ್ಕಾ ರಾಜಕಾರಣಿಗಳು--- ಮುಂತಾದವರಂತಲ್ಲ ಈ ಬೊಗಳೂರು ಬ್ಯುರೋ.

ಸದಾ ಸತ್ಯ ಹೇಳಿ ಹೇಳಿ ಬೋರಾದವರು, ಆಗೊಮ್ಮೆ ಈಗೊಮ್ಮೆ ಸುಳ್ಳು ಹೇಳುತ್ತಾರೆ. ಇದೇ ಮಾದರಿಯಲ್ಲಿ ಬೊಗಳೆ ರಗಳೆ ಬ್ಯುರೋ ಕೂಡ ಅಪರೂಪಕ್ಕೊಮ್ಮೆ ಸತ್ಯ ಹೇಳಲು ನಿರ್ಧರಿಸಿದೆ. ಹೀಗಾಗಿ ಈ ನಿರ್ಣಯ.

ಬೊಗಳೂರಿನ ನಿರ್ಣಯ:
ಈ ಸಂಚಿಕೆಯೊಂದಿಗೆ, ಬೊಗಳೂರು ಬ್ಯುರೋದಿಂದ ಪ್ರಕಟವಾಗುವ ಪತ್ರಿಕೆಯನ್ನು ಸದ್ಯಕ್ಕೆ ಈ ವರ್ಷ ನಿಲ್ಲಿಸಲಾಗುತ್ತದೆ.

ಆದರೆ, ಈ ರೆಸೊಲ್ಯುಶನ್‌ಗೆ ಮತ್ತೊಂದು ಲೈನು ಕೂಡ ಸೇರಿಸಲಾಗುತ್ತದೆ. ಅದೆಂದರೆ, ಮುಂದಿನ ವರ್ಷದಿಂದ ಯಥಾ ಪ್ರಕಾರ ಕೊರೆತ ಮುಂದುವರಿಸಲಾಗುತ್ತದೆ. ಓದುಗರು ಸಹಿಸಿ"ಕೊಲ್ಲಲು" ಕೋರಲಾಗಿದೆ.

ಓದುಗರಿಗೆ, ಓದದವರಿಗೆ, ಬರುವವರಿಗೆ, ಬಾರದವರಿಗೆ, ಬ್ಲಾಗೊಳು ಇಣುಕುವವರಿಗೆ, ಕಮೆಂಟಿಸುವವರಿಗೆ, ಬೈಯುವವರಿಗೆ, ತೆಗಳುವವರಿಗೆ... ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

Read more...

ಬಳೆ ತೊಟ್ಟಿಲ್ಲ ಏಕೆ?: ಬೊಗಳೂರು ಸರಕಾರ ಸ್ಪಷ್ಟನೆ

Monday, December 29, 2008

(ಬೊಗಳೂರು ಬಿರುದು-ಬಾವಲಿ ಬ್ಯುರೋದಿಂದ)
ಬೊಗಳೂರು, ಡಿ.29- ನಮ್ಮನ್ನಾಳುವವರು ಬಳೆ ತೊಟ್ಟುಕೊಂಡಿದ್ದಾರೆ ಎಂಬ ಮುದಿ ಹುಲಿಯ ಘರ್ಜನೆಗೆ ಸ್ಪಷ್ಟನೆ ನೀಡಿರುವ ಆಡಳಿತಗಾರರು, ತಾವೇಕೆ ಬಳೆ ತೊಟ್ಟುಕೊಂಡಿಲ್ಲ ಎಂಬುದನ್ನು ವಿವರಿಸಿದ್ದಾರೆ

ಬಳೆಗಳಿಗೇಕೆ ಅವಮಾನ ಮಾಡುತ್ತೀರಿ? ಎಂದು ನೇರಾನೇರ ಠಾಳಾ ಭಾಕ್ರೆಯನ್ನು ಪ್ರಶ್ನಿಸಿರುವ ಬೊಗಳೂರು ಸರಕಾರೀ ವ್ಯಾಕ್‌ತಾರರು, ನಾವು ಬಳೆ ತೊಟ್ಟುಕೊಂಡಿದ್ದರೆ, ಇಂದಿರಾ ಗಾಂಧಿ ಕೈಗೊಂಡಂತಹ ಧೀರ ಕಾರ್ಯಕ್ಕೆ ಮುಂದಾಗುತ್ತಿದ್ದೆವು. ಮುಂಬಯಿ ದಾಳಿ ಬಗೆಗಿನ ವಿಶ್ವ ಸಮುದಾಯದ ಗಮನವನ್ನು ಬೇರೆಡೆಗೆ ಹೊರಳಿಸುವ ಪಾಕಿಸ್ತಾನದ ಬಲೆಗೆ ಬೀಳುತ್ತಿರಲಿಲ್ಲ. ಸೋ... ಹೀಗಾಗಿಯೇ ನಾವು ಬಳೆ ತೊಟ್ಟುಕೊಂಡಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.

ನಾವೇನಾದರೂ ಬಳೆ ತೊಟ್ಟುಕೊಂಡಿದ್ದಿದ್ದರೆ, ಬೊಗಳೂರಿಗೆ ಪಾತಕಿಸ್ತಾನದ ಮೇಲೆ ದಾಳಿ ನಡೆಸುವ ಧೈರ್ಯವೂ ಇಲ್ಲ ಎಂಬ ಹೇಳಿಕೆ ಬರಲು ಅವಕಾಶ ನೀಡುತ್ತಿದ್ದೆವೇ? ಎಂದು ಪ್ರಶ್ನಿಸಿರುವ ವ್ಯಾಕ್‌ತಾರರು, ದೇಶದ ಭವಿಷ್ಯವೂ ಬಳೆಗಳ ಕೈಯಲ್ಲೇ ಇದೆ. ಹೀಗಾಗಿ ನಾವು ಈಗಾಗಲೇ ಬಳೆ ತೊಟ್ಟುಕೊಳ್ಳಲು ಹೋಗುವುದಿಲ್ಲ. ಹೇಗಿದ್ದರೂ ಶೇ.33 ಸ್ಥಾನವನ್ನು ಬಳೆ ತೊಟ್ಟುಕೊಳ್ಳುವವರಿಗೆ ಮೀಸಲಿಡಲು ನಾವು ಬಿಡುವುದಿಲ್ಲವಲ್ಲ... (ಆದರೆ ಮುಂದೆ ಹೇಗೋ ಗೊತ್ತಿಲ್ಲ ಎಂಬ ಮಾತನ್ನು ಮೆಲ್ಲನೇ ಹೇಳಲು ಅವರು ಮರೆಯಲಿಲ್ಲ.) ನಮ್ಮನ್ನೆಲ್ಲಾ ಜನರು ಕ್ಯಾಕರಿಸಿ ದೂರ ತಳ್ಳುವವರೆಗೂ ಬಳೆಗಳಿಲ್ಲದೆಯೇ ನಾವು ಅಧಿಕಾರ ಮುಂದುವರಿಸುತ್ತೇವೆ ಎಂಬ ಸ್ಪಷ್ಟನೆ ನೀಡಿದರು.

ಇತ್ತೀಚೆಗೆ ಜಗತ್ತಿನ ಪ್ರಮುಖ ಕಂಪನಿಗಳ ಪ್ರಧಾನ ಹುದ್ದೆಯನ್ನು ಬಳೆ ತೊಟ್ಟವರೇ ಅಲಂಕರಿಸುತ್ತಾ ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ. ಆಡಳಿತದಲ್ಲಿಯೂ ಅವರೇ ಮೇಲುಗೈ ಸಾಧಿಸಿದರೆ ದೇಶವು ಉದ್ಧಾರವಾಗುತ್ತದೆ. ಅದು ನಮ್ಮ ರಾಜಕೀಯಕ್ಕೆ ವಿರೋಧ. ಈ ಕಾರಣಕ್ಕೆ ಶೇ.33 ಮೀಸಲಾತಿಯನ್ನು ಜನರಿಗೆ ಗೊತ್ತಾಗದ ಹಾಗೆ ಸಂಸತ್ತಿನಲ್ಲಿ ಅಂಗೀಕಾರವಾಗದಂತೆ ನೋಡಿಕೊಳ್ಳುತ್ತೇವೆ. ಆದರೆ ಬಾಯಲ್ಲಿ ಮಾತ್ರ ಮಹಿಳಾ ಮೀಸಲಾತಿಗೆ ಬದ್ಧ ಅಂತನೇ ಹೇಳಿಕೊಳ್ಳುತ್ತಿರುತ್ತೇವೆ. ಯಾಕೆಂದರೆ, ನಮ್ಮ ಓಟಿನ ಬ್ಯಾಂಕಿನಲ್ಲಿ ಠೇವಣಿ ಕಡಿಮೆಯಾಗಬಾರದಲ್ಲ... ಮತ್ತು ಅವರು ಅಧಿಕಾರಕ್ಕೇರುವವರೆಗೂ ನಾವು ಮೇಯುತ್ತಿರಬಹುದಲ್ಲ ಎಂಬ ಸ್ಪಷ್ಟನೆಯೂ ಅವರಿಂದಲೇ ಬಂದಿದೆ.

ಇಡೀ ವಿಶ್ವ ಸಮುದಾಯದಲ್ಲಿ ಮುಂಬಯಿಯ ಹೆಸರೇ ನಲಿದಾಡುತ್ತಿದೆ. ಜನರೆಲ್ಲಾ ನೋಡಿ ನೋಡಿ, ಮಾತನಾಡಿ ಮಾತನಾಡಿ ಈ ಮುಂಬಯಿಗೇನಾದರೂ ದೃಷ್ಟಿ ತಗುಲಿದರೆ ಎಂಬ ಭೀತಿ ನಮ್ಮದು. ಸೋ... ಜನರ ಗಮನ ಬೇರೆಡೆ ಸೆಳೆಯುವುದೊಂದೇ ಮುಂಬಯಿಗೆ ದೃಷ್ಟಿ ತಗುಲದಂತಾಗಿಸಲು ಇರುವ ಉಪಾಯ.

ಅದಕ್ಕಾಗಿ, ಭಾರತ-ಪಾತಕಿಸ್ತಾನ ನಡುವೆ ಯುದ್ಧೋನ್ಮಾದ ಸೃಷ್ಟಿಸಿದರೆ, ಜಗತ್ತಿನ ಗಮನವು ಮುಂಬಯಿ ಪ್ರಕರಣದಿಂದ ಬೇರೆಡೆ ಹೋಗುತ್ತದೆ. ಭಾರತದಲ್ಲಿ ಮುಂಬಯಿ ದಾಳಿ ಮೇಲಿನಿಂದ ಗಮನ ಬೇರೆ ಕಡೆ ಹರಿದರೆ, ಪಾತಕಿಸ್ತಾನದ ಕಡೆಯಲ್ಲಿ ಉಗ್ರರ ನಿವಾರಣೆ ಮೇಲಿನ ಗಮನವೂ ನಿವಾರಣೆಯಾಗುತ್ತದೆ. ಉಪಖಂಡದಲ್ಲಿ ಯುದ್ಧ ತಡೆಯುವುದರತ್ತಲೇ ಜಗತ್ತು ಗಮನ ಹರಿಸುವುದರಿಂದ ಎರಡೂ ದೇಶಗಳ ಇಚ್ಛೆ ಈಡೇರಿದಂತಾಗುತ್ತದೆ. ಭಾರತವು ಮುಂಬಯಿಯನ್ನು ಮರೆಸಲು ಮಾಡಿದ ಯತ್ನ ಫಲಿಸುತ್ತದೆ, ಪಾಕಿಸ್ತಾನವು ಉಗ್ರರ ಮೇಲೆ ಕ್ರಮ ಕೈಗೊಳ್ಳುವ ಒತ್ತಡ ನಿವಾರಿಸಿಕೊಳ್ಳುವಲ್ಲಿ ಯಶಸ್ವಿಯಾತ್ತದೆ ಎಂದು ಬೊಗಳೂರಿನ ಆಡಳಿತ ಪಕ್ಷದ ಅರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಎಲ್ಲಾ ಕಾರಣಗಳಿಗಾಗಿಯೇ ನಾವು ಬಳೆ ತೊಟ್ಟುಕೊಂಡಿಲ್ಲ. ಬಳೆ ತೊಟ್ಟಿದ್ದರೆ ಇದಕ್ಕೆ ವಿರುದ್ಧವಾಗಿಯೇ ಎಲ್ಲವನ್ನೂ ಮಾಡಿಬಿಡುತ್ತಿದ್ದೆವು ಎಂದು ಅವರು ಕೊನೆಗೊಂದು ಪ್ಯಾರಾವನ್ನು ತಮ್ಮ ಮಾತಿನ ಮಧ್ಯೆ ಸೇರಿಸಿದ್ದಾರೆ.

Read more...

ಭಯೋತ್ಪಾದನಾಬಾದ್‌ನಲ್ಲಿ ಬೊಗಳೆ ಬ್ಯುರೋ!

Friday, December 26, 2008

(ಬೊಗಳೂರು ಪರದೇಶ ಪ್ರವಾಸ ಬ್ಯುರೋದಿಂದ)
ಬೊಗಳೂರು, ಡಿ.26- ಪಾತಕಿಸ್ತಾನವು ಉಗ್ರವಾದಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಎಲ್ಲ ಅವಕಾಶಗಳನ್ನು ಮುಕ್ತವಾಗಿರಿಸುವುದಾಗಿ ಭಾರತ ಸರಕಾರ ಘೋಷಿಸಿರುವುದರಿಂದ ಪಾತಕಿಸ್ತಾನವು ತುಂಬು ಸಂತೋಷಪಟ್ಟಿದೆ. ಪಾತಕಿಸ್ತಾನಿ ಪ್ರಧಾನಿ ಗಿಲಿಗಿಲಾನಿ ಮತ್ತು ಅದಕ್ಷ ಜಬರ್ದಾರಿ ಅವರು ಈ ಕುರಿತು ಬೊಗಳೂರಿಗೆ ವಿಶೇಷ ಸಂದೇಶ ರವಾನಿಸಿ, ತಮ್ಮ ಸಂತಸವನ್ನು ಹಂಚಿಕೊಳ್ಳಲು ಒಂದು ಪೊಟ್ಟಣ ಬಾಂಬ್ ಕಳುಹಿಸಿದೆ.

ಭಾರತವು ಎಲ್ಲ ಅವಕಾಶಗಳು ಮುಕ್ತ ಎಂದು ಕಳೆದ ಒಂದು ತಿಂಗಳಿಂದ ಹೇಳಿಕೊಳ್ಳುತ್ತಿದ್ದರೂ, ಏನೂ ಮಾಡದಿರುವುದರಿಂದ, ಪಾತಕಿಸ್ತಾನಕ್ಕೆ ಯುದ್ಧಕ್ಕೆ ಸನ್ನದ್ಧವಾಗಲು, ಉಗ್ರಗಾಮಿ ಶಿಬಿರಗಳನ್ನು ಅಡಗಿಸಿಡಲು, ಬಂಧಿತ ಉಗ್ರಗಾಮಿಯ ಕುಟುಂಬ ವರ್ಗವನ್ನು ಕತ್ತಲಕೋಣೆಯಲ್ಲಿರಿಸಲು, ತಾಲಿಬಾನ್ ಉಗ್ರರ ಜೊತೆ ಒಪ್ಪಂದ ಮಾಡಿಕೊಳ್ಳಲು... ಹೀಗೆ ಎಲ್ಲ ಅವಕಾಶಗಳನ್ನು ಮುಕ್ತವಾಗಿ ಒದಗಿಸಿದಂತಾಗಿದೆ ಎಂಬುದು ಪಾತಕಿಸ್ತಾನದ ಆಡಳಿತಗಾರರು ಬೊಗಳೂರಿಗೆ ಫೋನ್ ಮಾಡಿ ನೀಡಿದ ಸ್ಪಷ್ಟನೆ.

ಆದರೆ ಪಾತಕಿಸ್ತಾನವೇಕೆ ಉಗ್ರರನ್ನು ದಮನಿಸುತ್ತಿಲ್ಲ ಎಂಬುದು ಅರ್ಥವಾಗದೆ ಬೊಗಳೂರು ಬ್ಯುರೋ ಮಂದಿ ಇಲ್ಲದ ತಲೆಯನ್ನು ಕೆಡಿಸಿಕೊಳ್ಳತೊಡಗಿದ್ದರು. ಕೊನೆಗೆ ಎಲ್ಲ ಅವಕಾಶಗಳು ಮುಕ್ತ ಎಂಬ "ಕೋಳಿ ಕೇಳಿ ಮಸಾಲೆ ಅರೆಯುವ" ದಯನೀಯ ಹೇಳಿಕೆ ಬಗ್ಗೆ ತೀವ್ರ ದುಃಖದಿಂದ, ರೋಷದಿಂದ, ತಾಪದಿಂದ, ಕೋಪದಿಂದ, ದುಗುಡದಿಂದ, ದುಮ್ಮಾನದಿಂದ ಕಾಯುತ್ತಾ, ಕೊಟ್ಟ ಕೊನೆಗೆ ಸಂತಾಪದಿಂದಲೇ ಪಾತಕಿಸ್ತಾನದ ಆಡಳಿತಗಾರರನ್ನು ಸಂದರ್ಶಿಸಲೆಂದು ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಗಂಟು-ಮೂಟೆ ಕಟ್ಟಿಕೊಂಡು ಯುದ್ಧ ಸನ್ನದ್ಧರಾಗಿಯೇ ಭಯೋತ್ಪಾದನಾಬಾದ್‌ಗೆ ತೆರಳಿದರು.

ಅಲ್ಲಿ ಉಗ್ರದಟ್ಟಣೆಯಿಂದಾಗಿ (ಜನದಟ್ಟಣೆ ಮಾದರಿಯಲ್ಲಿ) ಕಾಲಿಡಲೂ ಜಾಗವಿಲ್ಲದಿದ್ದರೂ, ಕಾಲಿಟ್ಟ ಕೂಡಲೇ ನಮಗೆ ಎದುರಾದದ್ದು ಕೈಯಲ್ಲಿ ಎಳ್ಳುಂಡೆಯಂತೆ ಬಾಂಬುಗಳನ್ನು ಹಿಡಿದುಕೊಂಡು ಆಟವಾಡುತ್ತಿರುವ ಮಕ್ಕಳು. ಈ ಮಕ್ಕಳ ಅಪ್ಪ, ತನಗೆ ಹೀಗೆ ಸಿಕ್ಕಿದ ದುಡ್ಡಿನಲ್ಲಿ ಇವನ್ನೆಲ್ಲಾ ಮಕ್ಕಳಿಗೆ ತರಿಸಿಕೊಟ್ಟಿದ್ದಾನೆ ಎಂಬುದನ್ನು ಅವರೇ ಬಾಯಿ ದೊಡ್ಡದಾಗಿ ಬಿಟ್ಟು ಹೇಳಿದರು. ನೋಡಿದಾಗ ಬಾಯೊಳಗೂ ಒಂದು ಬಾಂಬ್ ಇತ್ತು!

ಅದಕ್ಷ ಜಬರ್ದಾರಿಯನ್ನು ಮತ್ತು ನಿಧನಾನಿ ಗಿಲಾನಿಯನ್ನು ಪ್ರಶ್ನಿಸಲೆಂದು ತೆರಳಿದವರಿಗೆ ಅಲ್ಲಿ ಅಚ್ಚರಿ ಕಾದಿತ್ತು. ಅವರೆಲ್ಲರೂ ತಾಲಿಬಾನ್ ಮುಖ್ಯಸ್ಥರು, ಐಎಸ್ಐ ಕುಖ್ಯಸ್ಥರು, ಲಷ್ಕರ್, ಜೈಷ್, ಅಲ್ ಖೈದಾ, ಜಮಾತ್ ಉದ್ ದಾವಾ ಮತ್ತಿತರ ಸಾವಿರಾರು ಉಗ್ರ ಸಂಘಟನೆಗಳ ನಾಯಿಕರು, ಮತ್ತು ಸೇನೆಯ ಅತಿಕುಖ್ಯಸ್ಥರೊಂದಿಗೆ ಭೋಜನ ಮಾಡುತ್ತಿದ್ದರು. ಬೊಗಳೂರು ಬ್ಯುರೋದ ಮಂದಿ ಬಂದ ಸುದ್ದಿ ಕೇಳಿಯೇ ಅದಕ್ಷ ಜಬರ್ದಾರಿ ನಮ್ಮನ್ನು ಪಕ್ಕಕ್ಕೆ ಕರೆದರು.

ತಕ್ಷಣವೇ ಬೊಗಳೂರು ಬ್ಯುರೋ ಸಿಬ್ಬಂದಿ ಒಂದು ಪ್ರಶ್ನೆ ಎಸೆದರು. "ನೀವೇಕೆ ಪ್ರಾಮಿಸ್ ಮಾಡಿದಂತೆ ಉಗ್ರವಾದಿಗಳನ್ನು ದಮನಿಸುತ್ತಿಲ್ಲ, ಉಗ್ರರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ?". ಬೊಗಳೂರು ಬ್ಯುರೋ ಎಸೆದ ಈ ಏಕೈಕ ಪ್ರಶ್ನೆಯನ್ನು ತಕ್ಷಣವೇ ಎತ್ತಿಕೊಂಡ ಜಬರ್ದಾರಿ, ನಡುಗುತ್ತಲೇ... "ಮಹಾಸ್ವಾಮಿ, ನೀವೇ ನಮ್ಮ ಮಾನ ಕಾಪಾಡಬೇಕು. ನಾವು ಉಗ್ರರ ಮೇಲೆ ಕ್ರಮ ಕೈಗೊಳ್ಳಲು ಹೊರಟೆವು. ಇದಕ್ಕಾಗಿ ಕಾರ್ಯಾಚರಣೆ ಆರಂಭಿಸಿದಾಗ, ಇಡೀ ಪಾತಕಿಸ್ತಾನದ ಜನರನ್ನೆಲ್ಲಾ ಬಂಧಿಸಬೇಕಾಯಿತು. ಅವರನ್ನೆಲ್ಲಾ ಇರಿಸಲು ಜೈಲುಗಳಲ್ಲಿ ಸಮಯ ಬೇಕಲ್ಲ... ಇದು ತೀರಾ ತೊಂದರೆಯ ಸಂಗತಿ. ಸೋ... ನಾವೀಗ ಪಾತಕಿಸ್ತಾನವನ್ನೇ ಜೈಲು ಎಂದು ಘೋಷಿಸಿದ್ದೇವೆ. ಉಗ್ರಗಾಮಿಗಳೆಲ್ಲರೂ ಬಂಧನದಲ್ಲಿದ್ದಾರೆ ಎಂದು ನೀವು ತಿಳಿದುಕೊಳ್ಳಿ" ಎಂಬ ಸಮಜಾಯಿಷಿ ನೀಡಿ, ತಕ್ಷಣವೇ ಐಎಸ್ಐ ಕುಖ್ಯಸ್ಥ, ಲಷ್ಕರ್ ಕುಖ್ಯಸ್ಥ, ಅಲ್ ಖೈದಾ ಕುಖ್ಯಸ್ಥ ಮತ್ತಿತರ ಉಗ್ರಗಾಮಿ ಸಂಘಟನೆಗಳ ಕುಖ್ಯಸ್ಥರ ಕೆಂಗಣ್ಣು ನೋಡಿ, ನಿಧಾನವಾಗಿ ಅಲ್ಲಿಂದ ಜಾರಿ ತಮ್ಮ ಸೀಟಿನಲ್ಲಿ ಕುಕ್ಕರಿಸಿದರು.

ಆ ಬಳಿಕ ಬಂದದ್ದು ಪಾತಕಿಸ್ತಾನದ ನಿಧಾನಮಂತ್ರಿ ಗಿಲಿಗಿಲಾನಿ. ಬೊಗಳೂರಿನ ಸಿಬ್ಬಂದಿ ಪ್ರಶ್ನೆ ಕೇಳುವ ಮುನ್ನವೇ ಉತ್ತರಿಸತೊಡಗಿದ ಅವರು, "ಸ್ವಾಮೀ... ಭಾರತ ಹೇಳಿದಂತೆ ಉಗ್ರಗಾಮಿ ಸಂಘಟನೆಗಳಿಗೆ ನಾವು ಕಡಿವಾಣ ಹಾಕುವುದಾದರೂ ಹೇಗೆ? ನಮ್ಮ ಅಸಹಾಯಕತೆಯನ್ನೂ ಒಂಚೂರು ಅರ್ಥ ಮಾಡಿಕೊಳ್ಳಬಾರದೇಕೆ? ನೋಡಿ, ನಾವೀಗ ಉಗ್ರಗಾಮಿ ಸಂಘಟನೆಗಳಿಗೆ ನಿಷೇಧ ವಿಧಿಸಿದರೆ, ಪಾತಕಿಸ್ತಾನವನ್ನು ಆಳುವವರು ಯಾರು? ನೀವೇ ಹೇಳಿ" ಎಂದರು.

"ನೀವಿದ್ದೀರಲ್ಲಾ? ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದವರು?" ಎಂದು ಬೊಗಳಿಗರು ಏನೂ ತಿಳಿಯದಂತೆ, ಪತ್ರಿಕಾವೃತ್ತಿಗೇ ನಾಲಾಯಕ್ಕಾದ ಪ್ರಶ್ನೆ ಕೇಳಿದಾಗ, ಗಿಲಿಗಿಲಿಯಾನಿಯಿಂದ ಬಂದ ಉತ್ತರ : ಏನ್ ಸ್ವಾಮಿ, ತಮಾಷೆ ಮಾಡ್ತಿದೀರಾ? ನನ್ನದು ಕೂಡ ಸ್ವಂತದ್ದಾದ ಭಯೋತ್ಪಾದನಾ ಸಂಘಟನೆ ಇದೆ. ಇಲ್ಲಿ ಪ್ರತಿಯೊಬ್ಬ ಜಾರಕಾರಣಿಗೂ ಇದೇ ರೀತಿಯ ಸ್ವಂತ ಸಂಘಟನೆಗಳಿವೆ. ಪಾತಕಿಸ್ತಾನವನ್ನು ನಾವೆಲ್ಲಾ ಸೇರಿಕೊಂಡೇ ಆಳುತ್ತಿದ್ದೇವೆ. ಹೀಗಾಗಿ ಭಯೋತ್ಪಾದನೆ ಸಂಘಟನೆಗಳನ್ನು ನಿಷೇಧಿಸಿದರೆ, ದೇಶವನ್ನು ಆಳಲು ಯಾರೂ ಇರುವುದಿಲ್ಲ! ಎಲ್ಲರೂ ಜೈಲಿನಲ್ಲಿದ್ದರೆ ಪಾತಕಿಸ್ತಾನದ ಪ್ರಜೆಗಳನ್ನು ನೋಡಿಕೊಳ್ಳುವವರಾದರೂ ಯಾರು? ಎಂದು ಅಲವತ್ತುಕೊಂಡೇ, ಅಲ್ಲಿಂದ ಜಾಗ ಖಾಲಿ ಮಾಡಿದರು.

ಅಲ್ಲಿಂದ ತಲೆಮರೆಸಿಕೊಂಡ ಬೊಗಳೂರು ಸಿಬ್ಬಂದಿ ಈಗಾಗಲೇ ಬೊಗಳೂರಿಗೆ ಬಂದು ಬಿದ್ದು ಚಾ-ತರಿಸಿಕೊಳ್ಳತೊಡಗಿದೆ.

Read more...

ಚುನಾವಣೆ: ಬುಷ್‌ಗೆ ಭಾರತದಲ್ಲಿ ಭಾರೀ ಬೇಡಿಕೆ!

Tuesday, December 23, 2008

(ಬೊಗಳೂರು ಅರಾಜಕಾರಣ ಬ್ಯುರೋದಿಂದ)
ಬೊಗಳೂರು, ಡಿ.23- ಮುಂದಿನ ತಿಂಗಳಿಂದ ಅಮೆರಿಕದಲ್ಲಿ ನಿರುದ್ಯೋಗಿಯಾಗಲಿರುವ ದೊಡ್ಡಣ್ಣ ಜಾರ್ಜ್ ಬೂಟ್ಸ್ ಅವರನ್ನು ಭಾರತವಾಸಿ ಮಾಡಲು ನಮ್ಮ ಜಾರಕಾರಣಿಗಳು ಸಂಚು ಹೂಡುತ್ತಿದ್ದಾರೆಂಬ ಮಹತ್ವದ ಅಂಶವೊಂದು ಮತದಾರರಲ್ಲಿ ಸಂಚಲನ ಮೂಡಿಸಿದೆ.

ಇತ್ತೀಚೆಗೆ ಇರಾಕಿ ಪತ್ರಕರ್ತನೊಬ್ಬ (ತಲೆಮರೆಸಿಕೊಂಡಿದ್ದ ಬೊ.ರ. ಬ್ಯುರೋದ ಸದಸ್ಯ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ) ಜಾರ್ಜ್ ಬೂಟ್ಸ್ ಅವರಿಗೆ ಲಾರ್ಜ್ ಶೂ ಎಸೆದದ್ದು, ಅವರು ಅದರಿಂದ ತಪ್ಪಿಸಿಕೊಂಡಿದ್ದು... ಈ ಘಟನಾವಳಿಗಳೆಲ್ಲವೂ ಭಾರತೀಯ ಜಾರಕಾರಣಿಗಳ ಕಣ್ಣು ಕುಕ್ಕುವಂತೆ ಮಾಡಿದೆ. ಈ ಕಾರಣಕ್ಕೆ ಜಾರ್ಜ್ ಬೂಟ್ಸ್ ಅವರನ್ನೇ ಭಾರತಕ್ಕೆ ಕರೆತಂದು ತಮ್ಮ ಪಕ್ಷದ ಟಿಕೆಟ್ ಕೊಡಿಸಿ, ಮುಂದಿನ ಚುನಾವಣೆಗಳಿಗೆ ಪಕ್ಷವನ್ನು ಸಂಪೂರ್ಣವಾಗಿ ಸನ್ನದ್ಧ ಸ್ಥಿತಿಯಲ್ಲಿರಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಅಂಶವೊಂದು ಬೊಗಳೆ ರಗಳೆ ಬ್ಯುರೋದಲ್ಲಿ ಲೀಕ್ ಆಗಿದೆ.

ಚುನಾವಣೆಗಳು ಸಮೀಪಿಸುತ್ತಿವೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜಾತಿ ರಾಜಕೀಯ, ಕೋಮು ರಾಜಕೀಯ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅರಾಜಕೀಯದಲ್ಲಿ ತೊಡಗಿದ್ದ ಸಂಭಾವ್ಯ ಅಭ್ಯರ್ಥಿಗಳೆಲ್ಲಾ ಚುನಾವಣೆಗೆ ನಿಲ್ಲಲು ಪತರಗುಟ್ಟುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ ಮತದಾರ ಜಾಗೃತನಾಗಿರುವುದು. ಏರುವ ಬೆಲೆ ಇಳಿಸುವ ಬದಲು, ಕೋಮು ಜ್ವರ, ಧರ್ಮದ ನಡುವೆ ವೈಷಮ್ಯದ ಬೀಜ ಬಿತ್ತುವ ರಾಜಕಾರಣಿಗಳೆಲ್ಲರೂ, ತಮಗೆ ಈ ಬಾರಿ ಜಾರ್ಜ್ ಬೂಟ್ಸ್‌ಗೆ ದೊರೆತ ಉಡುಗೊರೆಗಳು ಖಚಿತ ಎಂಬುದು ಮನದಟ್ಟಾಗಿವೆ. ಈ ಕಾರಣಕ್ಕಾಗಿಯೇ, ಜಾರ್ಜ್ ಬೂಟ್ಸ್ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿಲ್ಲ.

ಈ ಬಗ್ಗೆ "ಜಾರ್ಜ್ ಬೂಟ್ಸನ್ನೇಕೆ ಕರೆಸುತ್ತೀರಿ" ಎಂದು ಮೂಲವನ್ನು ಕೆದಕಿ ಕೆದಕಿ ಪ್ರಶ್ನಿಸಿದಾಗ, ಬಂದ ಉತ್ತರ "ತರಬೇತಿ" ಎಂಬ ನಾಲ್ಕಕ್ಷರದ ಶಬ್ದ. ಗೊತ್ತಾಗಲಿಲ್ಲ, ಅರ್ಥವಾಗಲಿಲ್ಲ ಎಂದು ತಲೆಯಲ್ಲಾಡಿಸಿದಾಗ ಈ ಕುರಿತು ವಿವರಣೆ ಬಂತು.

ಜನಾ ಖಂಡಿತವಾಗಿಯೂ ಹಾಳಾದ ಚಪ್ಪಲಿ, ಹರಿದು ಹೋದ ಶೂ, ಕೊಳೆತ ಮೊಟ್ಟೆ, ತರಕಾರಿ ಇತ್ಯಾದಿಗಳನ್ನು ಚುನಾವಣಾ ರ‌್ಯಾಲಿಗಳಲ್ಲಿ ಎಸೆಯುತ್ತಾರೆ ಎಂಬುದು ನಮಗೆ ಖಚಿತವಾಗಿಬಿಟ್ಟಿದೆ. ಆದುದರಿಂದ, ಕ್ಷಿಪಣಿಗಳಂತೆ ತೂರಿ ಬರುತ್ತಿರುವ ಈ ಅಮೂಲ್ಯ ವಸ್ತುಗಳಿಂದ ತಪ್ಪಿಸಿಕೊಂಡು, ಅದನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದು ಹೇಗೆ ಎಂಬುದರ ತರಬೇತಿಗಾಗಿ ನಾವು ಜಾರ್ಜ್ ಬೂಟ್ಸ್ ಅವರನ್ನು ಕರೆಸುತ್ತಿದ್ದೇವೆ ಎಂಬ ಅಮೂಲ್ಯ ಉತ್ತರ ಬಂದೇಬಿಟ್ಟಿತು.

ಹಾಗಿದ್ದರೆ, ಹೀಗೆ ಸಂಗ್ರಹವಾದ ಶೂಗಳನ್ನು, ಕೊಳೆತ ತರಕಾರಿಗಳನ್ನು, ಮೊಟ್ಟೆಗಳನ್ನು ಏನು ಮಾಡುತ್ತೀರಿ? ಎಂಬ ಪ್ರಶ್ನೆಗೆ ಅದನ್ನು ನಮ್ಮ ವಿರೋಧ ಪಕ್ಷದವರ ರ‌್ಯಾಲಿಗಳಿಗೆ ಪ್ಯಾಕ್ ಮಾಡಿ ಕಳುಹಿಸುತ್ತೇವೆ. ಶೂ ಎಸೆದ ಜೈದಿ ಎಂಬ ಇರಾಕಿ ಬೊಗಳೆಗಾರನನ್ನೂ ಕರೆಸಲಿದ್ದೇವೆ. ಅಲ್ಲಿ ಜನರಿಗೆ ಶೂ ತೂರುವುದು ಹೇಗೆ ಎಂಬ ಬಗ್ಗೆ ತರಬೇತಿ ಕೊಡಿಸುವ ಇರಾದೆಯೂ ಇದೆ ಎಂಬ ಅಂಶವನ್ನು ಅವರು ಬಯಲು ಮಾಡಿದ್ದಾರೆ.

ಆದರೆ, ಹೆಚ್ಚಿನ ರಾಜಕಾರಣಿಗಳಿಗೆ ನಿರಾಸೆಯಾದ ದುರಾಸೆಯೆ ಸಂಗತಿಯೆಂದರೆ, ಆ ಪತ್ರಕರ್ತ ಶೂ ಜತೆಗೆ ಸಾಕ್ಸ್ ಕೂಡ ಎಸೆಯಲಿಲ್ಲವಲ್ಲ ಎಂಬುದು. ಸಾಕ್ಸನ್ನೂ ಎಸೆದಿದ್ದರೆ, ಎಸೆಯುವ ವಸ್ತುಗಳ ಸದ್ಬಳಕೆ ಮಾಡಿಕೊಳ್ಳಬಹುದಿತ್ತು ಎಂಬುದು ಅವರ ಚಿಂತೆಯ ಕಾರ್ಮೋಡಕ್ಕೆ ಕಾರಣವಾಗಿತ್ತು.

Read more...

ಆಗುಂಬೆ ಘಾಟಿಯಲ್ಲಿ ನೇರ ರಸ್ತೆ: ಪಾಕ್ ಕೈವಾಡ!

Monday, December 22, 2008

(ಬೊಗಳೂರು ತಿರುವು-ಮುರುವು ಬ್ಯುರೋದಿಂದ)
ಬೊಗಳೂರು, ಡಿ.22- ಶಿರಾಡಿ ಘಾಟಿ, ಆಗುಂಬೆ ಘಾಟಿ, ಬಿಸಿಲೆ ಘಾಟಿ ಮುಂತಾದ U turn ಗಳು ಹೆಚ್ಚಾಗುತ್ತಿರುವ ರಸ್ತೆಗಳೆಲ್ಲೆಲ್ಲಾ ಇದೀಗ ವಾಹನಗಳು ನೇರವಾಗಿ ಧಾವಿಸಬಹುದು ಎಂಬುದನ್ನು ರದ್ದಿಮನೆಯೊಳಗೆ ಕುಳಿತ ನಮ್ಮ ವರದ್ದಿಗಾರರು ಘಂಟಾಘೋಷವಾಗಿ ಸಾರಿಬಿಟ್ಟಿದ್ದಾರೆ.

ಅವರು ಸುದ್ದಿ ತಿಳಿದ ತಕ್ಷಣವೇ ಬ್ಯುರೋದ ತನಿಖಾ ತಂಡವನ್ನು ಅತ್ತ ಕಡೆ ಅಟ್ಟಿದಾಗ ಸಾಕಷ್ಟು ಸಂಗತಿಗಳು ಹೊರಬಿದ್ದವು. ಇತ್ತೀಚೆಗೆ ಮುಂಬಯಿ ಮೇಲಿನ ದಾಳಿ ಹಿನ್ನೆಲೆಯಲ್ಲಿ ಮುಂಬಯಿಗಿಂತಲೂ ಹೆಚ್ಚಾಗಿ ಪಾಕಿಸ್ತಾನವು ವಿಶ್ವಪ್ರಸಿದ್ಧವಾಗುತ್ತಿದೆ. ಪಾಕಿಸ್ತಾನದಲ್ಲಿರುವ ಜೈಷೆ, ಲಷ್ಕರ್, ಜಮಾತ್, ಅಲ್ ಖೈದಾ ಇತ್ಯಾದಿತ್ಯಾದಿ ಅಲ್ಲಿನ ಜನಸಂಖ್ಯೆಗಿಂತಲೂ ಹೆಚ್ಚು ಇರುವ ಉಗ್ರಗಾಮಿ ಸಂಘಟನೆಗಳು ಕೂಡ ಮುಂಬಯಿಗಿಂತ ಹೆಚ್ಚಾಗಿ ಪ್ರಸಿದ್ಧಿ ಪಡೆಯುತ್ತಿವೆ. ಹೀಗಾಗಿ ನಮ್ಮೂರಿನ ಘಾಟ್ ರಸ್ತೆಗಳು ನೇರವಾಗುವುದಕ್ಕೂ ಪಾಕಿಸ್ತಾನಕ್ಕೂ ಯಾವುದಾದರೂ ನಂಟಿದೆಯೇ ಎಂಬುದು ನಮ್ಮ ಬ್ಯುರೋದವರ ಇಲ್ಲದ ತಲೆಗೆ ಠಣ್ಣಂತ ಹೊಳೆದದ್ದೇ ತಡ, ಮೂರು ಎಣಿಸುವಷ್ಟರಲ್ಲಿ ಅವರು ಪಾತಕಿಗಳ ನಾಡಿನಲ್ಲಿ ಬಿದ್ದಿದ್ದರು!

ಪಾತಕಿಸ್ತಾನಕ್ಕೆ ಹೊಕ್ಕಿದ್ದೇ ತಡ, ಅಲ್ಲಿ ಉಗ್ರರು ಯಾರು, ಮತ್ತು ಸರಕಾರ ನಡೆಸುತ್ತಿರುವ ಅಗ್ರರು ಯಾರು ಎಂಬುದೇ ತಿಳಿಯದೆ ಅತ್ತಿತ್ತ ಸುಳಿದಾಡುತ್ತಿದ್ದಾಗ, ಯು-ಟರ್ನ್‌ಗಳು ಹೆಚ್ಚಾಗಿರುವ ಸಂಗತಿ ದೃಢಪಟ್ಟಿತು. ಹಿಂದಿನ ದಿನ ಇದ್ದ ಬೋರ್ಡುಗಳು ಮರು ದಿನ ಬೇರೆಯೇ ರೀತಿಯಲ್ಲಿರುತ್ತಿದ್ದವು. ಹಿಂದಿನ ದಿನ ಜಮ್ಮುಕಾಶ್ಮೀರಕ್ಕೆ ರಸ್ತೆ ಮಾರ್ಗವನ್ನು ತೋರಿಸುವ ಬಾಣದ ಗುರುತು ಪೂರ್ವ ದಿಕ್ಕಿಗಿದ್ದರೆ, ಮರು ದಿನ ನೋಡಿದಾಗ ಅದು ಪಶ್ಚಿಮ ದಿಕ್ಕಿಗಿತ್ತು. ಎಲ್ಲಿ ಹೋದರಲ್ಲಿ ಯು-ಟರ್ನ್‌ಗಳೇ!

ಅಲ್ಲಿನ ಅಧ್ಯಕ್ಷ ಜಬರ್ದಾರಿಯೇ ಈ ಯು-ಟರ್ನ್‌ಗಳು, ತಿಪ್ಪರಲಾಗಗಳು, ಬಡಬಡಿಸುವಿಕೆಗಳ ರೂವಾರಿ ಎಂಬುದನ್ನು ಕಂಡುಕೊಳ್ಳಲಾಯಿತು. ಕ್ಷಣ ಕ್ಷಣಕ್ಕೂ ಅವರ ತಲೆ ಮತ್ತು ಕಾಲುಗಳು ಒಂದುಗೂಡುತ್ತಿದ್ದವು. ಇದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಂಡುಕೊಳ್ಳಲಾಯಿತು. ಅಕ್ಷರಶಃ Putting foot in his mouth!

ಈ ನಡುವೆ, "ಉಗ್ರರು ನಮ್ಮಲ್ಲಿಂದ ಭಾರತಕ್ಕೆ, ವಿಶೇಷವಾಗಿ ಮುಂಬಯಿಗೆ ಪ್ರವಾಸ ಹೋದವರಾಗಿದ್ದು, ಅವರ ಬಗ್ಗೆ ನಮ್ಮ ನೆಲದ ಕಾನೂನು ಪಾಲಿಸುತ್ತೇವೆ" ಎಂದು ಜಬರ್ದಾರಿ ಹೇಳಿಕೆ ನೀಡಿರುವುದು ಹಲವರ ಹುಬ್ಬನ್ನು ತಲೆಕೂದಲಿನೊಂದಿಗೆ ಬೆಸೆಯುವಷ್ಟರ ಮಟ್ಟಿಗೆ ಮೇಲೇರಿದೆ. ಪಾತಕಿಸ್ತಾನದಲ್ಲಿ ಕಾನೂನು ಎಂಬುದು ಇದೆಯೇ ಎಂಬ ಪ್ರಶ್ನೆಗೆ ಬೊಗಳೆ ರಗಳೆ ಬ್ಯುರೋದ ಅಸತ್ಯಾನ್ವೇಷಣೆ ಪ್ರವೀಣರಿಗೂ ಉತ್ತರ ಕಂಡುಕೊಳ್ಳಲಾಗಿಲ್ಲ. ಇದರ ತನಿಖೆಗೆ ಬಹುಶಃ ಇನ್ನೈದಾರುನೂರು ವರ್ಷಗಳು ತಗುಲಬಹುದು ಎಂದು ಒಂದು ಅಂದಾಜಿನ ಪ್ರಕಾರ ಹೇಳಲಾಗುತ್ತಿದೆ.

Read more...

ನಾಯಿಗೆ ಲಿಫ್ಟ್ ಕೊಡುವುದು ಕಡ್ಡಾಯ!

Thursday, December 18, 2008

(ಬೊಗಳೂರು ಪ್ರಾಣಿಗಳ ಬ್ಯುರೋದಿಂದ)
ಬೊಗಳೂರು, ಡಿ.18- ಶ್ವಾನ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ 11ರ ಹರೆಯದ ಲ್ಯಾಬ್ರಡಾರ್ ಜಾತಿಗೆ ಸೇರಿದ ಶಿಮು ಅವರನ್ನು ಸರ್ವಾಸಮ್ಮತಿಯ (ಸರ್ವ+ಅಸಮ್ಮತಿ) ಮೂಲಕ ಆಯ್ಕೆ ಮಾಡಲಾಗಿದೆ.

ಈಗಾಗಲೇ ಲೈಕಾ ಎಂಬ ನಾಯಿಯೊಂದು ಬಾಹ್ಯಾಕಾಶಕ್ಕೇ ಹೋಗಿ ಸಾಧನೆ ಮಾಡಿ ಬಂದಿದೆ. ಹೀಗಿರುವಾಗ ಕೇವಲ ಐದನೇ ಮಹಡಿಯನ್ನೇರಲು ನಮಗೆ ಅಂತರಿಕ್ಷಕ್ಕೇರುವ ವಾಹನ "ಲಿಫ್ಟ್" ಏರಲು ಕೂಡ ಅವಕಾಶ ಮಾಡಿಕೊಡದಿರುವುದು ಮಾನವ ಅಲ್ಲಲ್ಲ ಶ್ವಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ ಎಂದು ಶಿಮು ಅವರು ನ್ಯಾಯಾಲಯದಲ್ಲಿ ವಾದಿಸಿ ವಿಜಯ ಗಳಿಸಿರುವ ವರದಿಯೊಂದು ಇಲ್ಲಿ ಪ್ರಕಟವಾಗಿರುವುದೇ ಅವರು ಈ ಹುದ್ದೆಗೆ ಅಪ್‌ಲಿಫ್ಟ್ ಆಗಲು ಪ್ರಧಾನ ಕಾರಣ.

ಇನ್ನೊಂದೆಡೆ ಬೆಕ್ಕುಗಳು, ಬೆಕ್ಕಿನ ಮರಿಗಳು ಕೂಡ, ನಮಗೂ ಲಿಫ್ಟ್ ಸೌಲಭ್ಯ ಬೇಕು ಎಂದು ಹೋರಾಟ ಮಾಡಲು ಸಿದ್ಧತೆ ನಡೆಸುತ್ತಿರುವುದಾಗಿ ನಮ್ಮ ಪ್ರಾಣಿಗಳ ಬ್ಯುರೋದ ವರದ್ದಿಗಾರರು ಸುದ್ದಿ ಕದ್ದು ತಂದು ಸುರಿದಿದ್ದಾರೆ.

ಈ ಕಾರಣದಿಂದಾಗಿ, ಎಲ್ಲ ಪ್ರಾಣಿಗಳು ತಮ್ಮ ತಮ್ಮ ಜನಾಂಗದ ಒಕ್ಕೂಟಗಳನ್ನು ರಚಿಸಿಕೊಂಡಿರುವುದರಿಂದ, ಜಾರಕಾರಣಿಗಳು ತೀವ್ರ ಕನಿಕರದಿಂದ ಕರಗಿ ನೀರಾಗುತ್ತಾ, ಇವರ ಸಂಖ್ಯೆ ತೀರಾ ಕಡಿಮೆ ಇದೆ, ಅತ್ತಕಡೆ ಅವರ ಬಾಲಕ್ಕೆ ಎಲ್ಲರೂ ತುಳಿಯುತ್ತಲೇ ಇರುತ್ತಾರೆ, ಮತ್ತೊಂದೆಡೆ ಇವರು ಬೀದಿನಾಯಿಗಳನ್ನು ನಾಯಿಗೆ ಬಂದಂತೆ ಅಲ್ಲಲ್ಲ ಬಾಯಿಗೆ ಬಂದಂತೆ ದುಡಿಸಿಕೊಳ್ಳುತ್ತಾರೆ, ದೌರ್ಜನ್ಯ ಎಸಗುತ್ತಾರೆ ಎಂದೆಲ್ಲಾ ಕಾರಣಗಳನ್ನು ಮುಂದಿಡುತ್ತಾ, ಅವುಗಳಿಗೂ ಪ್ರತ್ಯೇಕ ಮೀಸಲಾತಿ ಸೌಲಭ್ಯ ದೊರಕಿಸಿಕೊಡಬೇಕೆಂದು ಆಗ್ರಹಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.

ನಾಯಿ-ಬೆಕ್ಕು-ಮಂಗ ಇತ್ಯಾದಿಗಳ ಪರವಾಗಿ ಈ ಹಿಂದೆಯೂ ಇಲ್ಲಿ , ಇಲ್ಲಿ ಮತ್ತು ಇಲ್ಲಿ ಮುಂತಾದೆಡೆ ಹೋರಾಡುತ್ತಲೇ ಬಂದಿರುವ ಬೊಗಳೆ ರಗಳೆ ಬ್ಯುರೋ, ಈ ಬಾರಿಯೂ ಹೋರಾಟಕ್ಕೆ ಹೊರಟಿರುವ ಹಿಂದೆ, ಮುಂದೆ ಚುನಾವಣೆಗೆ ನಿಲ್ಲುವ ಯೋಜನೆ ಇಲ್ಲ ಎಂಬುದನ್ನು ಬೊ.ರ. ಸಂತಾಪಕರು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ, ಲಿಫ್ಟ್‌ನೊಳಗೆ ತೂರಿಕೊಳ್ಳುವ ಪ್ರಾಣಿಗಳ ಮೈಯ ಪರಿಮಳವು ಉಳಿದ ಲಿಫ್ಟ್ ಪ್ರಯಾಣಿಕರ ಮೂಗಿಗೆ ಯಾವುದೇ ತೊಂದರೆಯುಂಟು ಮಾಡದಂತಿರಲು ಉಚಿತ ಪರ್ಫ್ಯೂಮ್ ಒದಗಿಸುವುದಾಗಿ ಅಮಾನವೀಯ ಹಕ್ಕುಗಳ ಓರಾಟಗಾರ ಸಂಸ್ಥೆಯೊಂದು ಘೋಷಣೆ ಮಾಡಿದೆ ಎಂದೂ ತಿಳಿದುಬಂದಿದೆ.

ಇವೆಲ್ಲದರ ನಡುವೆ, ಬೈಕಿನಲ್ಲಿ ಧಾವಿಸುವ ಕಾಲೇಜು ಯುವಕ-ಯುವತಿಯರಲ್ಲಿ ಲಿಫ್ಟ್ ಕೇಳುವುದಕ್ಕೆ ಕೂಡ ಶ್ವಾನ ಸಂಘದ ಪದಾಧಿಕಾರಿಗಳು ಗಂಭೀರವಾಗಿ ಯೋಚನೆ ಮಾಡಿದ್ದು, ಇನ್ನು ಮುಂದೆ ಶ್ವಾನಗಳು ಕೂರಲಿಕ್ಕಾಗಿಯೇ ವಿಶೇಷವಾದ ಸೀಟೊಂದನ್ನು ಪಿಲಿಯನ್ ಭಾಗದಲ್ಲಿ ಇರಿಸಿಕೊಳ್ಳಬೇಕು ಎಂಬ ಆಗ್ರಹವೂ ಕೇಳಿಬರತೊಡಗಿದೆ. ಜಾರಕಾರಣಿಗಳು ಇದರ ಹಿಂದೆಯೂ ಬಿದ್ದಿದ್ದು, ಬೈಕು-ಕಾರುಗಳಲ್ಲಿ ಶ್ವಾನ-ಮಾರ್ಜಾಲ ಜನಾಂಗೀಯರಿಗೆ ಲಿಫ್ಟ್ ನೀಡುವುದು ಕಡ್ಡಾಯ ಎಂಬೊಂದು ಶಾಸನ ಜಾರಿಗೆ ತರಲು ಒಕ್ಕೊರಲಿನಿಂದ ಸಜ್ಜಾಗುತ್ತಿದ್ದಾರೆ.

Read more...

ನಿವೃತ್ತ ಹುದ್ದೆಗಳಿಗೆ ಅರ್ಜಿಗಳ ಮಹಾಪೂರ!

Wednesday, December 17, 2008

(ಬೊಗಳೂರು, ನಿರುದ್ಯೋಗ ನಿವಾರಣೆ ಬ್ಯುರೋದಿಂದ)
ಬೊಗಳೂರು, ಡಿ.17- ನಿವೃತ್ತ ರಾಷ್ಟ್ರದ ಪತಿ ಮತ್ತು ನಿವೃತ್ತ ರಾಜ್ಯದ ಪಾಲ ಹುದ್ದೆಗೆ ಅರ್ಜಿ ಸಲ್ಲಿಸಲು ಬೊಗಳೂರಿನ ಸಮಸ್ತ ಜನತೆ ಧಾವಂತಕ್ಕೆ ಬಿದ್ದಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಇದಕ್ಕೆ ಕಾರಣವೆಂದರೆ, ಕಷ್ಟಪಟ್ಟು ದುಡಿದರೂ ದೊರೆಯದಷ್ಟು ಸಂಬಳವು ನಿವೃತ್ತಿಯಾದ ನಂತರ ದೊರಕುವುದೇ ಆಗಿರುತ್ತದೆ ಎಂದು ಬೊಗಳೂರು ಮಹಾಜನತೆ ಸ್ಪಷ್ಟಪಡಿಸಿದ್ದಾರೆ. ಈ ನಿವೃತ್ತರ ಹುದ್ದೆಗಳಿಗೆ ಬೇಡಿಕೆ ತೀವ್ರವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೀಸಲಾತಿ ನೀಡಬೇಕೇ ಎಂಬ ಬಗ್ಗೆ ಜಾರಕಾರಣಿಗಳೆಲ್ಲರೂ ಸೇರಿ ಸಭೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ನಮಗೂ ಸಂಬಳ ಹೆಚ್ಚಿಸಿ ಅಂತ ಸಂಸತ್ತಿನಲ್ಲಿ ನಿದ್ದೆ ಮಾಡುವ ಸಂಸದರೂ ಸೇರಿದಂತೆ ಹಲವರು ಪಟ್ಟು ಹಿಡಿದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾಕೆಂದರೆ, ಇಂಥದ್ದೊಂದು ವಿಷಯದಲ್ಲಿ ಸಂಸತ್ತಿನಲ್ಲಿ ಯಾವತ್ತಿಗೂ ಪಕ್ಷಭೇದವಿಲ್ಲ, ಆಡಳಿತ ಪಕ್ಷ- ವಿರೋಧ ಪಕ್ಷ ಎಂಬ ತಾರ ತಮ್ಯ ಇರುವುದಿಲ್ಲ. ಪಕ್ಷಭೇದವಿಲ್ಲದೆ ಒಮ್ಮತದಿಂದ ಅಂಗೀಕಾರವಾಗುವ ಏಕೈಕ ಮಸೂದೆ ಎಂದರೆ ಸಂಸದರ ವೇತನ ಏರಿಕೆ ಶಿಫಾರಸು. ಹೀಗಾಗಿ ಈ ಹುದ್ದೆಗಳಿಗೂ ಬೊಗಳೂರು ಜನತೆ ಮುಗಿಬೀಳುತ್ತಿದ್ದಾರೆ.

ಸಂಸದರ ಹುದ್ದೆಗೆ ಇರಬೇಕಾದ ಅರ್ಹತೆಗಳೇನು, ಇಷ್ಟೊಂದು ವೇತನ, ಅನುದಾನ ಪಡೆಯಲು ನಿದ್ರಾ ಸಂಸದನಿಗೆ ಏನೆಲ್ಲ ಇರಬೇಕು ಮತ್ತು ಇರಬಾರದು ಎಂಬುದನ್ನು ಪಟ್ಟಿ ಮಾಡಿ ಬೊಗಳೂರಿನ ಬೀದಿ ಬೀದಿಗಳಲ್ಲಿ ಹಚ್ಚಲಾಗಿದೆ. ಅವುಗಳು ಈ ರೀತಿಯಾಗಿರುತ್ತವೆ:

* ಸಂಸತ್ತಿನಲ್ಲಿ ನಿದ್ದೆ ಮಾಡುತ್ತಿರಬೇಕು.

* ದೇಶದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಮಸೂದೆ ಮಂಡನೆಯಾದರೆ, ಅದರಲ್ಲಿ ಓಟು ಬ್ಯಾಂಕಿಗೆ ಏನಾದರೂ ಪೆಟ್ಟಾಗಬಹುದೇ ಎಂದು ಹುಳುಕು ಹುಡುಕುವಲ್ಲಿ ಎತ್ತಿದ ಕೈ ಆಗಿರಬೇಕು, ಇಲ್ಲವಾದರೆ ಕಾಲೆತ್ತಿದರೂ ಆದೀತು.

* ರಾಜಕಾರಣಕ್ಕೇ ಜೀವನವನ್ನು ಸವೆಸುವ ನಡುವೆ ದೇಶದ ಹಿತ ರಕ್ಷಣೆ ಕುರಿತ ಚರ್ಚೆಗೆ ಸಮಯಾವಕಾಶವಿಲ್ಲವೇ? ಸಂಸತ್ತಿನ ರಿಜಿಸ್ಟರಿಗೆ ಬೆಳ್ಳಾಂಬೆಳಗ್ಗೆ ಸಹಿ ಹಾಕಿ, ಸರಕಾರಿ ವೆಚ್ಚದಲ್ಲಿ ವಿಮಾನದ ಮೂಲಕ ರಾಜಕಾರಣ ಮಾಡಲು ತೆರಳಬೇಕು.

* ಕ್ಷೇತ್ರದಲ್ಲಿ ನೆರೆ ಹಾವಳಿ, ಬರ, ಕ್ಷಾಮ, ರಸ್ತೆ ಸರಿ ಇಲ್ಲ, ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತದೆ ಇತ್ಯಾದಿ ಸಮಸ್ಯೆಗಳಿವೆಯೇ? ಈ ದೇಶದಲ್ಲಿರುವ ಸಮಸ್ಯೆಗಳಿಗೆ ಪರದೇಶದಲ್ಲಿ ಪರಿಹಾರ ಕಂಡುಹುಡುಕುವ ನಿಟ್ಟಿನಲ್ಲಿ ಹೊರ ದೇಶಕ್ಕೆ ತೆರಳುವ 'ಅಧ್ಯಯನ ನಿಯೋಗ'ದಲ್ಲಿ ಪಾಲ್ಗೊಳ್ಳುವ ಅದಮ್ಯ ಉತ್ಕಟ ಆಕಾಂಕ್ಷೆ ಹೊಂದಿರಬೇಕು.

* ಹಿಂದಿನ ಸಂಸದನ ಅವಧಿಯಲ್ಲಿ ಆದ ಉತ್ತಮ ಕೆಲಸ ಕಾರ್ಯಗಳೇನಾದರೂ ಇವೆಯೇ ಎಂಬುದನ್ನು ಪತ್ತೆ ಹಚ್ಚುವಲ್ಲಿ ನಿಪುಣರಿರಬೇಕು. ಮಾತ್ರವಲ್ಲ, ಅದನ್ನು ರದ್ದುಪಡಿಸಿ, ಆ ಕಾರ್ಯಕ್ರಮಗಳ ಬಗ್ಗೆ ತನಿಖೆ ನಡೆಸಲು ಆದೇಶಿಸುವುದರಲ್ಲಿಯೂ ಪರಮ ನೈಪುಣ್ಯ ಸಾಧಿಸಿರಬೇಕು.

* ದೇಶದಲ್ಲಿ ಎಲ್ಲಾದರೂ ಸಣ್ಣಪುಟ್ಟ ಸಂಘರ್ಷವೊಂದು ನಡೆದರೆ, ಅದರಲ್ಲಿ ಕೋಮು ಬಣ್ಣವನ್ನು ಪತ್ತೆ ಹಚ್ಚಿ, ಹೊರಗೆಳೆದು ಆ ಕುರಿತು ಧ್ವನಿ ಎತ್ತಲು ಸಿದ್ಧವಿರಬೇಕು.

* ಸರಕಾರವೊಂದು ಒಳ್ಳೆಯ ಕೆಲಸ ಮಾಡಿದರೆ, ನೀವು ವಿರೋಧ ಪಕ್ಷದವರಾಗಿದ್ದರೆ, ಅದರಲ್ಲಿನ ಹುಳುಕನ್ನು ಎತ್ತಿತೋರಿಸಬೇಕು. ಸಣ್ಣ ಪುಟ್ಟ ನ್ಯೂನತೆಯಾದರೂ ಅದನ್ನು ದೊಡ್ಡ ಕುಂಬಳಕಾಯಿ ಮಾಡಿ, ಸಾಂಬಾರು ಮಾಡುವಂತಿರಬೇಕು.

* ಅದೇ ರೀತಿ, ನೀವು ಆಡಳಿತ ಪಕ್ಷದಲ್ಲಿದ್ದರೆ, ವಿರೋಧ ಪಕ್ಷದವರು ನೀಡುವ ಒಳ್ಳೆಯ ಸಲಹೆಯನ್ನು ಕ್ಯಾಕರಿಸಿ ತಿರಸ್ಕರಿಸಬೇಕು. ಎಲ್ಲಾದರೂ ಕ್ರೆಡಿಟ್ ಅವರಿಗೆ ಹೋದರೆ ಎಂಬ ಆತಂಕ ನಿಮ್ಮ ಮನದಂಗಳದಲ್ಲಿ ಫುಟ್ಬಾಲ್‌ನಂತೆ ಅತ್ತಿಂದಿತ್ತ ಸುಳಿಯುತ್ತಿರಬೇಕು.

* ಆ ಮೇಲೆ, ನೀವು ಸರಕಾರದ ಸಚಿವ ಸಂಪುಟದಲ್ಲಿ ಸಾಧ್ಯವಿದ್ದಷ್ಟು ಮಟ್ಟಿಗೆ ಒಳಗೆ ತೂರಿಕೊಳ್ಳಲು ಪ್ರಯತ್ನಿಸಬೇಕು. ಸಮಾಧಾನವಾಗಲಿಲ್ಲವೋ, ಅಥವಾ ಸಿಕ್ಕಲಿಲ್ಲವೋ... ಯಾವುದಾದರೂ ರಾಜ್ಯದ ರಾಜ್ಯಪಾಲ ಹುದ್ದೆಗೆ, ಅಥವಾ ಯಾವುದಾದರೊಂದನ್ನು ಸುಧಾರಿಸಲು ರಚಿಸಲಾಗುವ ಆಯೋಗವೊಂದನ್ನು ನೇಮಿಸಲು ಒತ್ತಡ ಹೇರಿ, ಅದರ ಮುಖ್ಯಸ್ಥರಾಗಿಯೋ ಕಾರ್ಯನಿರ್ವಹಿಸುವ ಚಾಣಕ್ಯ ತಂತ್ರ ಮತ್ತು ಚಾಣಾಕ್ಷತೆ ನಿಮ್ಮಲ್ಲಿರಬೇಕು.

* ನೀವು ಹಣ್ಣು ಹಣ್ಣು ಮುದುಕರಾದಷ್ಟೂ ಸಂಸದರಾಗುವ ಅವಕಾಶಗಳು ಹೆಚ್ಚು.

* ಇದರೊಂದಿಗೆ, ನಿಮ್ಮ ಮಗ, ಮೊಮ್ಮಗ, ಸೊಸೆ, ಮರಿ ಮಗ, ಗಂಡ, ಹೆಂಡತಿ ಎಲ್ಲರನ್ನೂ ರಾಜಕೀಯಕ್ಕೇ ತಂದು ಬೆಳೆಸುವ ಚಾಕಚಕ್ಯತೆ ಹೊಂದಿರಬೇಕು. ಕುಟುಂಬವೇ ರಾಜಕಾರಣಕ್ಕಾಗಿ ಜೀವ ಸವೆಸುತ್ತಿದೆ, ಮಹಾನ್ ತ್ಯಾಗ ಮಾಡುತ್ತಿದೆ ಎಂಬಂತೆ ಜನರಲ್ಲಿ ಅಭಿಪ್ರಾಯ ಮೂಡಿಸುವಲ್ಲಿ ಸಫಲರಾಗಿರಬೇಕು.

* ಕಪಡಾ, ರೋಟಿ, ಮಕಾನ್ ಎಂಬುದೇ ನಿಮ್ಮ ಮೂಲ ಮಂತ್ರವಾಗಿರಬೇಕು. ಅಲ್ಪಸಂಖ್ಯಾತರನ್ನು ಮೇಲೆ ತರಬೇಕು, ದಲಿತರನ್ನು ಉದ್ಧಾರ ಮಾಡಬೇಕು ಎನ್ನುತ್ತಾ ಬೊಗಳೆ ಬಿಡಬೇಕೇ ಹೊರತು, ಅವರ ಅಭಿವೃದ್ಧಿಗಾಗಿ ನಿಜವಾಗಿಯೂ ಏನು ಮಾಡಬೇಕು ಎಂಬುದನ್ನು ಚಿಂತಿಸುವ ಗೋಜಿಗೆ ಹೋದಿರೋ... ನಿಮ್ಮ ಸಂಸತ್ಸದಸ್ಯತನವೇ ರದ್ದಾಗುತ್ತದೆ, ಜೋಕೆ!

* ಈ ಪಟ್ಟಿ ಹೀಗೆಯೇ ಬೆಳೆಯುತ್ತಿದ್ದು, ಇದಕ್ಕೆ ಬೊಗಳೆ ರಗಳೆ ಓದುಗರೂ ಕೊಡುಗೆ ನೀಡಬಹುದು ಅಂತ ನೋಟೀಸು ಬೋರ್ಡುಗಳಲ್ಲಿ ಎಚ್ಚರಿಕೆ ಎಂಬ ಶೀರ್ಷಿಕೆಯಡಿ ಬರೆಯಲಾಗಿದೆ.

Read more...

ಅಯೋಗ್ಯರು ಮನೆಗೆ: ಸರಕಾರಿ ಕಚೇರಿ ಖಾಲಿ ಖಾಲಿ!

Monday, December 15, 2008

(ಬೊಗಳೂರು ದುರಾಡಳಿತ ಸುಧಾರಣೆ ಬ್ಯುರೋದಿಂದ)
ಬೊಗಳೂರು, ಡಿ.15- ದೇಶವನ್ನು ಕಾಡುತ್ತಿರುವ ದುರಾಡಳಿತದ ಸುಧಾರಣೆಗೆ ನೇಮಿಸಲಾಗಿರುವ ಆಯೋಗ್ಯವೊಂದು ತನ್ನ ವರದಿಯಲ್ಲಿ ಇಲ್ಲಿ ಸಲ್ಲಿಸಿದ್ದು, ಇದರಿಂದಾಗಿ ದೇಶದ ಸರಕಾರಿ ಕಚೇರಿಗಳೆಲ್ಲವೂ ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸಿವೆ.

ಅಯೋಗ್ಯ ಅಧಿಕಾರಿಗಳನ್ನು ಅವರವರ ಸ್ವಂತ ಮನೆಗೆ ಕಳುಹಿಸಲು ಶಿಫಾರಸು ಮಾಡಿರುವುದರಿಂದ ಈ ರೀತಿಯ ತುರ್ತು ಪರಿಸ್ಥಿತಿ ಉದ್ಭವವಾಗಿದ್ದು, ಸರಕಾರಿ ಕಚೇರಿಗಳಲ್ಲಿ ಇದುವರೆಗೆ ಇದ್ದ ಅರಾಜಕತೆಯು ಮತ್ತಷ್ಟು ಹೆಚ್ಚಾಗಿಬಿಟ್ಟಿದ್ದು, ಬೊಗಳೂರಿನ ಪ್ರಜೆಗಳು ಕಂಗಾಲಾಗಿದ್ದಾರೆ ಎಂದು ಎಲ್ಲಿಯೂ ವರದ್ದಿಯಾಗಿಲ್ಲ.

ಆದರೆ, 14 ಮತ್ತು 20ನೇ ವರ್ಷಗಳಲ್ಲಿ ಸರಕಾರಿ ನೌಕರರ ನಿಷ್ಕ್ರಿಯತೆಯ ಪರಾಮರ್ಶೆ ನಡೆಯಲಿದೆ ಎಂಬುದು ಸಂತಸಕರ ಸಂಗತಿಯಾಗಿದ್ದು, ಕನಿಷ್ಠ ಇಷ್ಟು ವರ್ಷಗಳ ಕಾಲ ತಾವು ಕಚೇರಿಗೆ ಬಂದು ನಿದ್ದೆ ಮಾಡುತ್ತಿದ್ದರೆ, ಮೂರು ಪೀಳಿಗೆಗೆ ಆಗುವಷ್ಟು ಕಬಳಿಸಲು ಸದವಕಾಶ ದೊರೆಯುತ್ತದಲ್ಲಾ ಎಂಬುದು ಬೊಗಳೂರಿನ ಕಾರ್ಯಮರೆತ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಅಭಿಪ್ರಾಯ.

ಇಪ್ಪತ್ತು ವರ್ಷಗಳ ಕಾರ್ಯವೈಖರಿ ಪರಾಮರ್ಶೆ ಸಂದರ್ಭವೂ ಅವರು ಅಯೋಗ್ಯರು ಎಂದು ಸಾಬೀತಾಗದಿದ್ದರೆ ದೇಶದ ಪ್ರಜೆಗಳನ್ನು ದೇವರೇ ಕಾಪಾಡಬೇಕು ಎಂದು ಬೊಗಳೆ-ರಗಳೆ ಬ್ಯುರೋ ಸಂತಾಪಕರು ಸಂತಾಪ ಸೂಚಿಸಿದ್ದಾರೆ.

ಆದರೆ, ಈ ದುರಾಡಳಿತ ಸುಧಾರಣಾ ಆಯೋಗವನ್ನೇ ಅಯೋಗ್ಯ ಎಂದು ತಪ್ಪಾಗಿ ಬರೆದ ಸರಕಾರಿ ಮುದ್ರಣಾಲಯದ ಅಧಿಕಾರಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹತ್ತು ಹಲವು ವರ್ಷಗಳಿಂದ ದುರಾಡಳಿತ ಸುಧಾರಣೆಗೆ ವರದಿಯ ಮೇಲೆ ವರದಿ ಸಲ್ಲಿಸುತ್ತಲೇ ಬಂದಿರುವ ಕುರಿತು ಈಗಾಗಲೇ ಬೊಗಳೂರು ಬ್ಯುರೋ ಇಲ್ಲಿ ಒಂದೇ ಕಡೆ ನೂರಾರಿ ಬಾರಿ ಎಚ್ಚರಿಸಿದ್ದನ್ನು ಇಲ್ಲಿ ಪುಣ್ಯಸ್ಮರಣೆ ಮಾಡಿಕೊಳ್ಳಬಹುದಾಗಿದೆ.

Read more...

ಬ್ರೇಕ್ ನ್ಯೂಸ್: ಆಡ್ವಾಣಿ ಉಚ್ಚಾಟನೆಗೆ ಬಿಜೆಪಿ ಸಿದ್ಧತೆ!

Thursday, December 11, 2008

(ಬೊಗಳೂರು ಸುದ್ದಿ ಸ್ಫೋಟ ಬ್ಯುರೋದಿಂದ)
ಬೊಗಳೂರು, ಡಿ.11- ಬೀಜೇಪೀಪೀ ನಾಯಕ ಆಡ್ವಾಣಿ ವಿರುದ್ಧ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಿಜೆಪಿ ಚಿಂತಿಸುತ್ತಿದೆ. ಇದಕ್ಕೆ ಕಾರಣವೆಂದರೆ ಅವರು ನೀಡಿರುವ ಹೇಳಿಕೆ.

ಬೆಲೆ ಏರಿಕೆಯಲ್ಲಿಯೇ ಮುಳುಗಿ ಹೋಗಿರುವ ಕೇಂದ್ರದ ಯೂಪೀಪೀಏಯ್ ಸರಕಾರವು ದಾಖಲೆಗಳನ್ನು ಮಾಡಿ, ತಮ್ಮ ಪಕ್ಷದ ಸಾಧನೆಯನ್ನು ನಗಣ್ಯವಾಗಿಸಿದ್ದಾರೆ ಎಂಬುದಾಗಿ ಆಡ್ವಾಣಿ ಅವರು ಈ ರೀತಿ ಹೇಳಿಕೆ ನೀಡಬಾರದಾಗಿತ್ತು ಎಂದು ಪಕ್ಷದ ವರಿಷ್ಠ ಮಂಡಳಿಯು ಶೂಸಾಕ್ಸ್ ನೋಟೀಸ್ ಜಾರಿ ಮಾಡಿದೆ.

ಹಿಂದೂಸ್ತಾನವನ್ನೇ ತಮ್ಮ ತಾಯ್ನಾಡು ಎಂದು ತಿಳಿದುಕೊಂಡ ಹಿಂದೂಗಳನ್ನೇ ಭಯೋತ್ಪಾದಕರು ಎಂದು ಸಾಬೀತು ಮಾಡಲು ಪ್ರಯತ್ನಿಸುತ್ತಿರುವ ಮೂಲಕ ಭಯೋತ್ಪಾದನೆ ನಿಯಂತ್ರಣದಲ್ಲಿ ಯೂಪೀಪೀಏಯ್ ವಿಶಿಷ್ಟ ದಾಖಲೆಗಳನ್ನು ಮಾಡುತ್ತಿದೆ. ಆದರೆ ತಮ್ಮ ಎದುರಾಳಿ ಪಕ್ಷವನ್ನು ವೈಭವೀಕರಿಸುವುದೇಕೆ ಎಂಬುದು ತಮಗೆ ತಿಳಿಯದ ಸಂಗತಿ ಎಂಬುದಾಗಿ ಬೀಜಪೀಪೀ ವರಿಷ್ಠ ಮಂಡಳಿ ವ್ಯಾಖ್...ಯಾನಿಸಿದೆ.

ವಾಜಪೇಯಿಯವರಿಗೆ ಮಾಡಲಾಗದ್ದನ್ನೆಲ್ಲಾ ಯೂಪೀಪೀಏಯ್ ಸರಕಾರ ಮಾಡುತ್ತಿದೆ ಎಂದು ಹೇಳಿದ್ದ ಅಡ್ಡವಾಣಿಯಂತೆ ಹೇಳಿದ ಆಡ್ವಾಣಿ, ಹಿಂದೂ ಭಯೋತ್ಪಾದನೆ ಎಂಬ ಹೊಸದೊಂದು ಶಬ್ದವನ್ನು ಹುಟ್ಟುಹಾಕಿ, ಡಿಕ್ಷನರಿಗಳನ್ನು ಸಮೃದ್ಧವಾಗಿಸುತ್ತಿದ್ದಾರೆ ಎಂದು ಕೂಡ ಶಹಬ್ಬಾಸ್‌ಗಿರಿ ನೀಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳದಿರಬಹುದು.

Read more...

'ಕೇಶಿ'ರಾಜ ವೇದೇಗೌಡ ನುಡಿಸಿರಿಯಲ್ಲಿ ಪ್ರತ್ಯಕ್ಷ!

Monday, December 08, 2008

(ಬೊಗಳೂರು ಸಂಚೋದನಾ ಬ್ಯುರೋದಿಂದ)
ಬೊಗಳೂರು, ಡಿ.8- ಮೂಡುಬಿದ್ರಿಯಲ್ಲಿ ನುಡಿಸಿರಿ ಸಮ್ಮೇಳನಕ್ಕೆ ಬರಲೇ ಇಲ್ಲ ಎಂಬ ಅಪಹಾಸ್ಯ, ಅಪವಾದ ಮತ್ತು ಅಪ-ರೋಪದಿಂದ ಕಂಗೆಟ್ಟ ಬೊಗಳೆ, ಅಲ್ಲಿ ಕಂಡುಬಂದ ವಿಷಯವೊಂದನ್ನು ಸಂಚೋದಿಸಿ ಇಲ್ಲಿ ಪ್ರಕಟಿಸಿದೆ. ನುಡಿಸಿರಿಗೆ ಬಂದವರಿಗೆ ಅನ್ವೇಷಿ ಕಾಣಿಸದೇ ಇರುವುದಕ್ಕೆ ಅಲ್ಲಿಗೆ ವೇದೇಗೌಡರು ಬಂದಿದ್ದೇ ಕಾರಣ ಎಂಬುದನ್ನು ಇದೀಗ ಪತ್ತೆ ಹಚ್ಚಲಾಗಿದೆ.

ಮೊದಲ ದಿನ ಒಳಗಿದ್ದ ವೇದೇಗೌಡರು, ಬಳಿಕ ಆಳ್ವಾಸ್ ಕಾಲೇಜಿನ ಬಾಗಿಲಲ್ಲೇ ಬಂದು, ಮಿರಿ ಮಿರಿ ಮಿಂಚುವ ಬೆಳ್ಳಿಬಣ್ಣದ ತಲೆಗೂದಲು ಸವರಿಕೊಳ್ಳುತ್ತಿದ್ದರು! ಅರೆ! ವೇದೇಗೌಡರಿಗೆ ತಲೆಯೇ ಇಲ್ಲ, ಹೀಗಿರುವಾಗ ಕೂದಲೆಲ್ಲಿಂದ? ಬೊಗಳೆ ಬ್ಯುರೋದವರು ಬೊಗಳೆ ಬಿಡುತ್ತಿದ್ದಾರೆ ಎಂದು ಓದುಗರು ಪ್ರಶ್ನಿಸಬಹುದು. ಇದಕ್ಕೂ ಉತ್ತರ/ಕಾರಣ/ನೆಪ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ.

ಹೌದು... ವೇದೇಗೌಡರು ಅಲ್ಲಿದ್ದರು. ಜನರನ್ನು ಆಕರ್ಷಿಸುತ್ತಿದ್ದರು. ಅದೇ ಬೆಳ್ಳಿಕೂದಲ ಮೇಲೆ ಕೈಯಾಡಿಸಿಕೊಳ್ಳುತ್ತಾ... ವೇದೇಗೌಡರ ಈ ದುಸ್ಥಿತಿಗೆ ಕಾರಣ... ವಾರೆಕೋರೆಯಾಗಿ ತಾವು ಸಂಚೋದಿಸಿದ ಬಕ್ರೀ ಮೂತ್ರವನ್ನು ವೇದೇಗೌಡರ ತಲೆಗೆ ಹಚ್ಚಿ ಅಲ್ಲಿ ಮಾತ್ರ ಕೂದಲು ಬೆಳೆಯುವಂತೆ ಮಾಡಿದವರು ಪಂಚ್ ಶೆಟ್ಟರು. ಅದೇ ಬಾಯಿಯ ಸುತ್ತಮುತ್ತಲಿನ ಭಾಗದಲ್ಲಷ್ಟೇ ಕುರುಚಲು ಗಡ್ಡ ಇರಿಸಿಕೊಂಡು, ಕೈಯಲ್ಲೊಂದು ಶಾಯಿಪೆನ್ನನ್ನು ಖಡ್ಗದಂತೆ ಝಳಪಿಸುತ್ತಾ, ಕಾಲೇಜಿನ ದ್ವಾರದ ಬಲಭಾಗದಲ್ಲಿ ಅಲ್ಲಿಗೆ ಬಂದವರನ್ನೆಲ್ಲಾ ವಶೀಕರಣ ಮಾಡಿದಂತೆ ಸೆಳೆಯುತ್ತಿದ್ದರು!

ಅವರ ಸಂಚೋದನೆಯ ಫಲವೇ ವೇದೇಗೌಡರ ಬಕ್ಕ ತಲೆಯಲ್ಲಿ (ಹೊರಗೆ ಮಾತ್ರ, ಒಳಗೆ ಗೊತ್ತಿಲ್ಲ) ಕಾಡು ಬೆಳೆದದ್ದು. ಈ ಸುದ್ದಿಯನ್ನು ವಾರೆಕೋರೆ ವರದ್ದಿಗಾರ ಖಾಲಿ ತಲೆಮಾರ್ ಅವರು ತಂದುಕೊಟ್ಟಿದ್ದು, ಈ ಪರಮೌಷಧವನ್ನು ಸಂಚೋದಿಸಿದ್ದು ಬಕ್ರಪ್ಪ ಎಂಬ ಕುರಿಗಾಹಿ ಎಂಬುದನ್ನು ತಿಳಿಸಲು ಪ್ರಕಾಶ್ ಶೆಟ್ಟರು ಮರೆಯಲಿಲ್ಲ. 

ನುಡಿಸಿರಿ ಹೆಬ್ಬಾಗಿಲಲ್ಲೇ ಕತ್ತಿ ಝಳಪಿಸುತ್ತಾ ನಿಂತಿದ್ದ ಪ್ರಕಾಶ್ ಶೆಟ್ಟರು, ಕೇವಲ 100 ರೂಪಾಯಿಗೆ ನಿಮ್ಮ ತಲೆಯಲ್ಲಿ ಇಲ್ಲದ ಕೂದಲನ್ನು ಕೂಡಿಸುತ್ತಿದ್ದರು, ಇದ್ದ ಕೂದಲನ್ನು ಕಳೆಯುತ್ತಿದ್ದರು... ಮುಖಗಳನ್ನು ವಕ್ರವಾಗಿ ಎಳೆದು, ಕೈಕಾಲುಗಳನ್ನು ಅಡ್ಡಡ್ಡ ಜೋಡಿಸಿ... ಕೊನೆಗೆ ಏನೇನೋ ಹರಸಾಹಸ ಮಾಡಿ ನಿಮ್ಮ ವಿ-ರೂಪವನ್ನು ಸೃಷ್ಟಿಸಿ ನಿಮ್ಮ ಕೈಗಿಡುತ್ತಿದ್ದರು! ಆದರೂ ಅದು ನಿಮ್ಮ ರೂಪವಂತೂ ಖಂಡಿತ ಎಂದು ನೀವೇ ಬೆನ್ನು ತಟ್ಟಿಕೊಳ್ಳುತ್ತೀರಿ. ಅದರ ಜೊತೆಗೆ ವಾರೆಕೋರೆ ಎಂಬ ಸಂಚಿಕೆಯ ಕುರಿತ ಜನಾಭಿಪ್ರಾಯ ಸಂಗ್ರಹವೂ ನಡೆಯುತ್ತಿತ್ತು.

ಆದರೆ, ಈ ಬೊಕ್ಕತಲೆಯಲ್ಲಿ, ಅದಕ್ಕೂ ಹೆಚ್ಚಾಗಿ ಇಲ್ಲದ ತಲೆಯಲ್ಲಿ ಕೂದಲು ಮೂಡಿಸಬಲ್ಲ ಸಾಮರ್ಥ್ಯವಿರುವ ಬಕ್ರೌಷಧವನ್ನು ಹೇಗೆ/ಯಾವ ರೀತಿ (ಅಂದರೆ ಲೇಪಿಸಿಕೊಳ್ಳೋದೋ... ಸೇವಿಸೋದೋ) ಬಳಸುವುದು ಹೇಗೆಂಬ ಬಗ್ಗೆ ಅಲ್ಲಿದ್ದವರು ಯಾರೂ ಮುಖ ಸಿಂಡರಿಸುತ್ತಾ... ಬಾಯಿಬಿಡದೇ ಇರುವುದು ಹಲವು ಶಂಕೆಗಳಿಗೆ, ಮೂತ್ರಶಂಕೆಗಳಿಗೆ ಮತ್ತು ಆಮಶಂಕೆಗಳಿಗೆ ಕಾರಣವಾಗಿತ್ತು ಎಂಬುದಂತೂ ದಿಟ. 

Read more...

ನಾಯಕರ ಬಾಯಿಯಲ್ಲಿ 'ನಾಯಿ'ಕರು: ಪ್ರತಿಭಟನೆ

Friday, December 05, 2008

(ಬೊಗಳೂರು ನಾಯಿ-ಕರ ಬ್ಯುರೋದಿಂದ)
ಬೊಗಳೂರು, ಡಿ.5- ಇಲ್ಲ, ಇಲ್ಲ, ಶ್ವಾನ ಸಂಘದ ಅಧ್ಯಕ್ಷರು ಇಷ್ಟೊಂದು ಕುಪಿತರಾಗಿರುವುದನ್ನು ಜೀವಮಾನದಲ್ಲೇ ಬೊಗಳೆ ಬ್ಯುರೋ ಕಂಡಿಲ್ಲ. ನಿಷ್ಠೆಗೆ, ಪ್ರಾಮಾಣಿಕತೆಗೆ ಹೆಸರಾಗಿರುವ ತಮ್ಮ ಹೆಸರನ್ನು ಈ ಹೊಣೆಗೇಡಿ ರಾಜಕಾರಣಿಗಳ ಬಾಯಲ್ಲಿ ಕೇಳಿ ಅವರು ದಿಗಿಲುಗೊಂಡಿದ್ದರು.

ಈ ಕಾರಣಕ್ಕೆ, ತ್ವರಿತವಾಗಿ ಬೊಗಳೆ ರಗಳೆಯನ್ನು ಮಾತ್ರವೇ ಪತ್ರಿಕಾ ಗೋಷ್ಠಿಗೆ ಕರೆದು ಹೀನಾಮಾನವಾಗಿ ಜಾರಕಾರಣಿಗಳ ಮೇಲೆ ಕೆಂಡ ಕಾರಿರುವ ಅವರು, ಕರ್ತವ್ಯನಿಷ್ಠೆ, ಸ್ವಾಮಿನಿಷ್ಠೆಗೆ ಹೆಸರಾದವರು ನಾವು. ನಿಷ್ಠೆ, ಪ್ರಾಮಾಣಿಕತೆ, ಜನ ಸೇವೆ ಮುಂತಾದವು ಈ ನಾಯಿಕರ ಬಾಯಲ್ಲಿ ಬಂದರೆ ಆ ಶಬ್ದಗಳಿಗೇ ಸಂಚಕಾರ ಎಂಬಷ್ಟರ ಮಟ್ಟಿಗೆ ಕುಲಗೆಟ್ಟು ಹೋಗಿದೆ ನಮ್ಮ ವ್ಯವಸ್ಥೆ. ಇಂಥದ್ದರಲ್ಲಿ ನಮ್ಮ ಹೆಸರು ಆ ಜಾರಕಾರಣಿಗಳ ಬಾಯಲ್ಲಿ ಬರುವಂತೆ ಮಾಡಿದ್ದು ಯಾರು ಎಂದು ಬಾಲ ಅಲ್ಲಾಡಿಸಲು ಜಾಗವಿಲ್ಲದಿದ್ದರೂ ಜೋರಾಗಿಯೇ ಬಾಲ ಅಲುಗಾಡಿಸುತ್ತಾ ಬೊಗಳಿದರು.

ಇದನ್ನು ಇಡೀ ವಿಶ್ವದ ಅಷ್ಟೇಕೆ, ನಮ್ಮ ಬೊಗಳೂರಿನ ಶ್ವಾನಸಂಘಗಳು ಪ್ರತಿಭಟಿಸಲಿವೆ. ಈ ಜಾರಕಾರಣಿಗಳು ಹೋದಲ್ಲೆಲ್ಲಾ ಎರಡೂ ಕೈಮುಗಿಯುವ ಮಾದರಿಯಲ್ಲಿ, ನಾವು ಕೂಡ ಅವರನ್ನು ಕಂಡ ತಕ್ಷಣ ಒಂದು ಕಾಲನ್ನು ಮಾತ್ರವೇ ಎತ್ತಿ ಪ್ರತಿಭಟನೆ ನಡೆಸಲಿದ್ದೇವೆ. ಇದರಿಂದ ದೇಶದಲ್ಲಿ ಹೆಚ್ಚಾಗಿರುವ ಉಗ್ರಗಾಮಿಗಳ ಹಾವಳಿಯನ್ನು ಕೂಡ ಪರಿಣಾಮ ಬೀರದಂತೆ ಮಾಡಬಹುದು ಎಂದು ಶ್ವಾನಶ್ರೇಷ್ಠರು ಹೇಳಿದರು.

ಅದು ಹೇಗೆ ಎಂದು ತಬ್ಬಿಬ್ಬಾದ ಬೊಗಳೆಯೆದುರು ಜೋರಾಗಿಯೇ ಬೊಗಳಿದ ಅವರು, ಅಷ್ಟೂ ಗೊತ್ತಾಗಲ್ವೇನ್ರೀ..? ಉಗ್ರಗಾಮಿಗಳು ಅಲ್ಲಲ್ಲಿ ಬಾಂಬ್ ಬಿಸಾಕಿ ಹೋಗುತ್ತಾರೆ. ಅವುಗಳು ಸ್ಫೋಟಗೊಳ್ಳದಂತೆ ನಾವು ಕಾಲೆತ್ತಿ ಬಾಂಬ್ ಶಾಮಕ ಪದಾರ್ಥವನ್ನು ಸಿಂಪಡಿಸುತ್ತೇವೆ, ಇದರಿಂದ ಜಾರಕಾರಣಿಗಳಿಗೆ ಪ್ರತಿಭಟನೆ ಸೂಚಿದಂತೆಯೂ ಆಗುತ್ತದೆ, ನಮ್ಮ ಕರ್ತವ್ಯನಿಷ್ಠೆಯ ಮೂಲಕ ದೇಶದ ಜನರನ್ನು ರಕ್ಷಿಸಿದಂತೆಯೂ ಆಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಬೊಗಳೂರು ಬ್ಯುರೋದ ಮಂದಿ ಕಕ್ಕಾಬಿಕ್ಕಿಯಾಗಿ ಈ ಹೇಳಿಕೆಯನ್ನು ಇನ್ನೂ ಕೇಳಿಸಿಕೊಳ್ಳುತ್ತಾ, ಅರಗಿಸಿಕೊಳ್ಳಬೇಕೆಂಬಷ್ಟರಲ್ಲಿ ಮತ್ತೊಂದು ಬಾಂಬನ್ನೂ ಅವರು ಹಾಕಿದರು. ಇತ್ತೀಚೆಗೆ ಬಾಂಬ್ ನಿಷ್ಕ್ರಿಯ ದಳಕ್ಕೆ ನಿಷ್ಠಾವಂತ ನಾಯಿಗಳ ಬದಲು, ಕಂತ್ರಿನಾಯಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿಯೇ, ಬಾಂಬ್ ಸ್ಫೋಟದ ಪೂರ್ವ ಸೂಚನೆ ದೊರೆತರೂ ನಮ್ಮ ನಾಯಿ-ಕರು ಯಾವುದೇ ರೀತಿಯಲ್ಲಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ರಹಸ್ಯವನ್ನೂ ಅವರು ಬಿಚ್ಚಿಟ್ಟರು.

ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯ ದಳಕ್ಕೆ "ನಾನು ಜನನಾ'ಯಿ'ಕ" ಎಂದು ಬೊಗಳೆ ಬಿಡುವ ಮಂದಿ ಶಿಫಾರಸು ಮಾಡುವವರನ್ನೇ ನೇಮಿಸಿಕೊಳ್ಳಲಾಗುತ್ತದೆ. ಹೀಗಾಗಿ ಅವರಿಗೆ ಕಮ್ಮಿ ನಿಷ್ಠೆ. ಅರ್ಹರನ್ನು ಮಾತ್ರವೇ ಶ್ವಾನದಳಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಾಗರಿಕರ ಶ್ವಾಸ ಹೋಗಬಹುದು ಎಂದವರು ಎಚ್ಚರಿಸಿದ್ದಾರೆ.

Read more...

ಫಟೀಲ್ ರಾಜೀನಾಮೆ ಅನಗತ್ಯ: ಬೊಗಳೆ

Thursday, December 04, 2008

(ಸೊಂಪಾದಕೀಯ)
ಮುಂಬಯಿ ಸ್ಫೋಟ ಪ್ರಕರಣಗಳಿಗೆ ಸಂಬಂಧಿ'ಸ'ದಂತೆ ಕೇಂದ್ರದ, ರಾಜ್ಯದ ಗೃಹ ಸಚಿವರು, ಮುಖ್ಯಮಂತ್ರಿಗಳು, ಅವರು, ಇವರು ಮತ್ತಿತರರು ರಾಜೀನಾಮೆ ನೀಡಿರುವುದನ್ನು ಬೊಗಳೂರು ಬ್ಯುರೋ ಗಹಗಹಿಸಿ ಖಂಡಿಸುತ್ತದೆ.

ಇದಕ್ಕೆ ಪ್ರಧಾನ ಕಾರಣವೆಂದರೆ ಕೇಂದ್ರದ ಸಚಿವರು ರಾಜೀನಾಮೆ ನೀಡುವ ಅಗತ್ಯವೇ ಇರಲಿಲ್ಲ. ಕಳೆದ ನಾಲ್ಕಾರು ವರ್ಷಗಳಿಂದ ಅವರಿರುವಾಗ ಅದೆಷ್ಟೋ ಭಯೋತ್ಪಾದಕ ಘಟನೆಗಳು ನಡೆಯುತ್ತಿರಲಿಲ್ಲವೇ? ಅವರಿರುವಾಗಲೂ ಸಾಕಷ್ಟು ನಡೆದಿದೆ. ಇನ್ನು ಅವರಿಲ್ಲದಿದ್ದರೆ ಕಡಿಮೆಯಾಗುವ ಸಾಧ್ಯತೆ ಇದೆಯೇ? ಎಂಬ ಮೂಲ ಭೂತ ಪ್ರಶ್ನೆ.

ಅವರು ಆ ಪದವಿಯಲ್ಲಿರುವಾಗಲೂ ಯಾವುದೇ ಭಯೋತ್ಪಾದನಾ ಕೃತ್ಯಗಳನ್ನು ಬಲವಾಗಿಯೇ, ಒತ್ತಿ ಒತ್ತಿಯೇ ಖಂಡಿಸುತ್ತಿದ್ದರು. ಮುಂದೆಯೂ ಖಂಡಿಸುತ್ತಾರೆ. ಇಷ್ಟಕ್ಕೂ ಮಿಗಿಲಾಗಿ, ಬೊಗಳೆ ಬ್ಯುರೋದ ಈ ಖಂಡನೆಗೆ ಪ್ರಧಾನ ಕಾರಣವೆಂದರೆ, ಅವರು ಗೃಹ ಸಚಿವರಾಗಿದ್ದರು ಎಂಬುದು ಯಾವುದೇ ಹಂತದಲ್ಲಿಯೂ ಯಾರಿಗೂ ತಿಳಿದಿರಲಿಲ್ಲ. ದೊಡ್ಡ ದೊಡ್ಡ ವಿಧ್ವಂಸಕಾರಿ ಕೃತ್ಯಗಳು ನಡೆದಾಗ ಖಂಡಿಸುವ ಸಂದರ್ಭದಲ್ಲಿ ಮಾತ್ರವೇ ನಮ್ಮ ಗೃಹ ಸಚಿವರು ಅವರಾಗಿದ್ದರು ಎಂದಷ್ಟೇ ಗೊತ್ತಾಗುತ್ತಿತ್ತು.

ಉಳಿದ ಸಂದರ್ಭಗಳಲ್ಲೆಲ್ಲಾ, ಅವರಿದ್ದರು ಎಂಬುದಕ್ಕೆ ಪುರಾವೆಯೇ ದೊರೆತಿರಲಿಲ್ಲ. ಇದೂ ಅಲ್ಲದೆ, ಇಷ್ಟು ಭೀಕರ ಕೃತ್ಯಕ್ಕೆ ಕೇಂದ್ರಕ್ಕೊಂದು ಬಲಿಪಶು ಬೇಕಾಗಿತ್ತು. ಅದನ್ನು ದೊಡ್ಡ -ಜವಾಬ್ದಾರಿಯುತ ಪದವಿಯ ಸಣ್ಣ ವ್ಯಕ್ತಿಯ ತಲೆಗೆ ಹೊರಿಸಿ, ಮುಂಬರುವ ಚುನಾವಣೆಗಳಲ್ಲಿ "ನಾವು ಮತ್ತೊಂದು ತ್ಯಾಗ, ಬಲಿದಾನ ಮಾಡಿದ್ದೇವೆ" ಎಂದು ಹೇಳಿಕೊಳ್ಳುವ ಅಸ್ತ್ರವನ್ನಾಗಿಯೇ ಬಳಸಲಾಗುತ್ತಿರುವುದರಿಂದ ಇದು ದೇಶದ ಪ್ರಜೆಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಖಚಿತವಾಗಿದೆ.

ಈಗಾಗಲೇ ಜನರು ಎಚ್ಚೆತ್ತುಕೊಂಡಿದ್ದು, ಭಯೋತ್ಪಾದನೆಯಲ್ಲೂ ರಾಜಕೀಯ ಮಾಡುವವರು ಈಗಾಗಲೇ After-shock ಗಳ ಕೊಡುಗೆ ಪಡೆಯುತ್ತಿದ್ದಾರೆ. ಮೋದಿಗೆ ಹೇಮಂತ ಕರ್ಕರೆ ಪತ್ನಿ, ಕೇರಳ ಮುಖ್ಯಮಂತ್ರಿಗೆ ಉನ್ನಿಕೃಷ್ಣನ್, ಮತ್ತು ಇನ್ನೊಂದೆಡೆ ಸಂಜಯ್ ನಿರುಪಮ್‌ಗೆ ಜನರು ಚುರುಕು ಮುಟ್ಟಿಸಿದ್ದಾರೆ. ಇಷ್ಟಾಗಿಯೂ ರಾಜಕಾರಣಿಗಳು ರಾಜಕೀಯ ಮಾಡುವುದರಿಂದ ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಬೊಗಳೆಗೆ ಸುದ್ದಿಗೆ ಬರವಿರಲಾರದು ಎಂದು ಭರವಸೆ ನೀಡುತ್ತಿದ್ದೇವೆ. ಹಾಗೂ ನಾವು ಕೂಡ ಮೊಸಳೆ ಕಣ್ಣೀರು ಸುರಿಸುತ್ತೇವೆ.

Read more...

ನುಡಿಸಿರಿಯಲ್ಲಿ ಗುಡಿಸಲ್ಪಟ್ಟ ಬೊಗಳೆ

Wednesday, December 03, 2008

(ಬೊಗಳೂರು ಬೊಗಳೆ ಬ್ಯುರೋದಿಂದ)
ಬೊಗಳೂರು, ಡಿ.3- ನುಡಿಸಿರಿಗೆ ಹೋದ ಬೊಗಳೂರಿನ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿ ಕಂಗಾಲಾಗಿ ಕುಲಗೆಟ್ಟು ಹೋಗಿದ್ದಾರೆ. ಇದಕ್ಕೆ ಕಾರಣವೆಂದರೆ ಬೊಗಳೂರಿನಿಂದ ಹೊರಗೆ ಕಾಲಿಟ್ಟ ತಕ್ಷಣವೇ ಒಂದಿಲ್ಲೊಂದು ಘಟನೆಗಳು ದೇಶದ ವಿವಿಧೆಡೆ ನಡೆಯುತ್ತಿರುವುದು.

ಈ ಹಿಂದೆ ಒಮ್ಮೆ ಬೊಗಳೂರಿನಿಂದ ಹೊರಬಿದ್ದು ಮಂಗಳೂರಲ್ಲಿ ನೆಗೆದಾಗ ಕರ್ನಾಟಕದಲ್ಲಿ ಚರ್ಚ್ ಮೇಲೆ ದಾಳಿ ನಡೆಯಿತು, ಗಲಾಟೆ, ಹಿಂಸಾಚಾರ ಎಲ್ಲ ನಡೆದು ನಾಲ್ಕು ದಿನ ಬಂದ್. ಹೀಗಾಗಿ ಬೊಗಳೆ ಅಲ್ಲಿಗೆ ಬಂದು ಬಿದ್ದದ್ದೇ... ನಾಲ್ಕು ದಿನ ಏಳಲಿಲ್ಲ, ಆ ಬಳಿಕ ಮತ್ತೊಮ್ಮೆ ಬೊಗಳೂರಿನಿಂದ ಹೊರಗೆ ತಲೆ ಹಾಕಿದ ತಕ್ಷಣವೇ ಬೆಂಗಳೂರು, ಅಹಮದಾಬಾದ್ ಸರಣಿ ಬಾಂಬ್ ಸ್ಫೋಟಗಳು ನಡೆದವು. ಬೊಗಳೆಯ ಬೇಳೆ ಯಾವುದೂ ಬೇಯಲಿಲ್ಲ. ಈ ಬಾರಿಯೂ ಅಷ್ಟೇ, ಬೊಗಳೂರಿನಲ್ಲಿ ಮರೆಸಿಕೊಂಡಿದ್ದ ತಲೆಯನ್ನು ಹೊರಹಾಕಿದ್ದೇ ತಡ, ಮುಂಬಯಿಯು ಉಗ್ರರ ಸ್ವರ್ಗ ಆಗಿಹೋಯಿತು. ಬೊಗಳೆ ಸ್ತಬ್ಧವಾಯಿತು.

ಹೀಗಾಗಿ ಏನೂ ತಿಳಿಯದೆ ಅತ್ತಿತ್ತ ಸುಳಿದಾಡುತ್ತಿದ್ದಾಗ, ಬೊಗಳೂರಿನಿಂದ ಬೊ.ರ. ಬ್ಯುರೋ ಹೊರಬೀಳುವುದಕ್ಕೂ, ಉಗ್ರರ ದಾಳಿಗೂ ಖಚಿತ ಸಂಬಂಧವಿದೆ ಎಂದು ಗರಿಗರಿಯಾದ ಸೂಟು ಧರಿಸಿದ ಹಿಂದಿನ ಮನೆ ಮಂತ್ರಿಗಳು ಹೇಳಿಕೆ ನೀಡಿದ್ದು, ಅವರು ನೀಡಿರುವ ಹೇಳಿಕೆಗಳು ಉಗ್ರವಾದಕ್ಕಿಂತಲೂ ಉಗ್ರವಾಗಿ ಪರಿಣಮಿಸಿದ ಪರಿಣಾಮವಾಗಿ ಬೊಗಳೂರು ಸಿಬ್ಬಂದಿ ಅಸ್ವಸ್ಥರಾಗಿಬಿಟ್ಟರು.

ನುಡಿಸಿರಿಗೆ ಹೋದ ಬೊಗಳೆ ಯಾವುದೇ ರಗಳೆ ಮಾಡದಿರುವುದಕ್ಕೆ ಬಲವಾದ ಕಾರಣ ಅಲ್ಲಿ ದೊರೆತ ರಾಜೋಪಚಾರವೇ ಎಂಬ ವಾದವೂ ಒಂದೆಡೆಯಿಂದ ಕೇಳಿಬರುತ್ತಿದೆ. ನಮ್ಮ ಓದುಗರೆಲ್ಲರ ಭವ್ಯ ಹಾರೈಕೆಯಂತೆ ಅಲ್ಲಿ ಮೂರು ದಿನಗಳ ಕಾಲ ಮೆಲ್ಲಲು (ಅಂದರೆ ಮೇಯಲು) ಏನ್ ಸಿಗುತ್ತೋ... ಅದನ್ನೆಲ್ಲಾ ಮೊದಲ ದಿನವೇ ಕಬಳಿಸಿದ ಪರಿಣಾಮ, ಬೊಗಳೆ ಅಲ್ಲಿಗೆ ಬಂದು ಬಿದ್ದದ್ದು ನೇರವಾಗಿ ಹಾಸಿಗೆಗೆ. ನುಡಿಸಿರಿಯಲ್ಲಿ ಆಳ್ವರು ಬಡಿಸಿರಿ ಬಡಿಸಿರಿ ಎಂದಷ್ಟೇ ಹೇಳಿದ್ದು ಗೊತ್ತು. ಹಾಸಿಗೆಯಿಂದ ಎಚ್ಚರವಾದಾಗ, ಅವರ ಬಾಯಿಂದ ಗುಡಿಸಿರಿ ಸಾರಿಸಿರಿ ಎಂದು ಸಮ್ಮೇಳನದ ಆವರಣವನ್ನು ಸ್ವಚ್ಛಗೊಳಿಸುವ ಕರೆ ಕೇಳಿಬರುತ್ತಿತ್ತು! ಈಗ ಬೊಗಳೂರು ಸಿಬ್ಬಂದಿ ಸ್ವಸ್ಥರಾಗಿ ತಮ್ಮ ಸ್ವ-ಕಾರಸ್ಥಾನಕ್ಕೆ ಮರಳಿದ್ದು, ಕಾರ್ಯಾಚರಣೆ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.

Read more...

About This Blog

  © Blogger template Foam by Ourblogtemplates.com 2009

Back to TOP