(ಬೊಗಳೂರು ಶಾಸ್ತ್ರಿಯ ಬ್ಯುರೋದಿಂದ)
ಬೊಗಳೂರು, ನ.೩- ನಮ್ಮ ಚೆನ್ನುಡಿಗೆ ಕ್ಲಾಸಿಕಲ್ ಎಂಬ ಸ್ಟೇಟಸ್ ದೊರಕಿದ್ದೇ ತಡ, ಅದರ ವಿರುದ್ಧದ ಭಾಷೆಯಾಗಿರುವ ಬೊಗಳೆಗೂ ಅದೇ ಸ-ಮಾನ-ತೆಗೆ, ಅಶಾಸ್ತ್ರೀಯ ಮಾನ ನೀಡಬೇಕೆಂದು ಒಂದೇ ಕೊರಳಲ್ಲಿ ಆಗ್ರಹಿಸಲಾಗುತ್ತಿದೆ.
ಆದರೆ, ಬೊಗಳೆಗೆ ಯಾವ ಶಾಸ್ತ್ರಿಯ ಮಾನವನ್ನು ಕೊಡಬೇಕು ಎಂಬುದು ಕೇಂದ್ರದಲ್ಲಿರುವ ಭಾಷಾ ವಿಧ್ವಂಸಕರಿಗೆ ತಲೆನೋವಿನ ಸಂಗತಿಯಾಗಿಬಿಟ್ಟಿದೆ. ಈಗಾಗಲೇ ವಿನಿವಿಂಕ್ ಶಾಸ್ತ್ರಿ, ಬೇಡರ ಕಣ್ಣಪ್ಪದ ಶಾಸ್ತ್ರಿ ಎಲ್ಲರೂ ಇದ್ದಾರೆ. ಕೆಲವು ವರ್ಷಗಳ ಹಿಂದೆ ಬಸವನಹುಳು ಎಂದು ಖ್ಯಾತಿ ಪಡೆದಿದ್ದ ರವಿ ಶಾಸ್ತ್ರಿಯ ಹೆಸರೂ ಬಂದು ನುಸುಳಿಹೋಗಿದೆ. ಇವುಗಳೆಲ್ಲಾ ಗೊಂದಲ ಹೆಚ್ಚಿಸಲು ಕಾರಣವಾಗಿದೆ.
ಈ ಚರ್ಚೆ ನಡೆಯುತ್ತಿರುವಾಗಲೇ, ಅವುಗಳನ್ನೆಲ್ಲಾ ಪಕ್ಕಕ್ಕೆ ತಳ್ಳಿದ ಬೊ.ರ. ವ-ರದ್ದಿ ಬ್ಯುರೋ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸುವಲ್ಲಿ ಕಾರಣವಾಗದೇ ಇರುವ ಅಂದರೆ ಅದಕ್ಕೆ ಅಡ್ಡಿಯಾಗಿರುವ ಬಹುಮುಖ್ಯ ಅಂಶಗಳ ಬಗ್ಗೆ ಸಂಚೋದನೆ ಮಾಡಿತು.
ದ್ರಾವಿಡಭಾಷಾ ಐವರು ಮಕ್ಕಳಲ್ಲಿ ಹಿರಿಯಣ್ಣ ಎಂಬ ಸ್ಥಾನ ಕಿತ್ತುಕೊಂಡಿರುವ ತಮಿಳರಿಗೆ ಶಾಸ್ತ್ರಿಯ ಮಾನ ಬಂದದ್ದು ಹೇಗೆ? ಎಂಬುದನ್ನು ವಿಶ್ಲೇಷಿಸಲಾಗಿ, "ಸೇತು ಸಮುದ್ರವೇ ಇಲ್ಲ, ಅದನ್ನು ಶ್ರೀರಾಮನು ಕಟ್ಟಿಸಿಯೇ ಇರಲಿಲ್ಲ, ಇದ್ದಿದ್ದರೆ, ಆ ಸೇತುವೆಯನ್ನು ಕಟ್ಟಿದ ರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದು" ಎಂಬಲ್ಲಿಂದ, ಸೇತುವೆಯನ್ನು ರಾಮನೇ ನಾಶಪಡಿಸಿದ ಎಂಬಿತ್ಯಾದಿಯಾಗಿ ಬಾಯಿಗೆ ಬಂದಂತೆ ಹೇಳುತ್ತಾ, ಬೊ.ರ. ಬ್ಯುರೋಕ್ಕೇ ಸೆಡ್ಡು ಹೊಡೆದು ನಿಂತಿದ್ದವರಿರುವ ನಾಡಿನಲ್ಲಿ ಭಾಷೆಗಾಗಿ ಏನಾದರೂ "ಸಿಗುತ್ತದೆ" ಎಂಬ ಸುದ್ದಿ ಬಂದಾಗ ಬಾಲ ಮಡಚಿರುವುದು ಹೊರಬಿದ್ದಿದೆ.
ತಮಗೆ ಶಾಸ್ತ್ರಿಯನ್ನು ಕೊಡಬೇಕು ಎಂದು ಕೇಳುವಾಗ, ತಮಿಳರು ಮುಂದಿಟ್ಟಿರುವ ವಾದಗಳಲ್ಲಿ, 2004ರಲ್ಲಿ ಯುಪಿಎ ಅಧಿಕಾರಕ್ಕೆ ಬರುವಾಗ, ಯುಪಿಎಗೆ ಬೆಂಬಲ ಕೊಡಬೇಕಿದ್ದರೆ ಶಾಸ್ತ್ರಿಯನ್ನು ನಮಗೊಪ್ಪಿಸಬೇಕೆಂದು ಷರತ್ತು ವಿಧಿಸಿದ್ದರು. ಅದರ ಹೊರತಾಗಿ ಬೊಗಳೆ ರಗಳೆ ಬ್ಯುರೋದ ಗಮನ ಸೆಳೆದದ್ದು ಮತ್ತೊಂದು ವಾದ. ರಾಮಾಯಣ ಘಟಿಸಿದ ಕಾಲಕ್ಕಿಂತ ಹಿಂದೆಯೇ ಕಂಬನು "ಕಂಬ ರಾಮಾಯಣ" ಬರೆದಿದ್ದಿರಬಹುದು ಎಂಬುದಾಗಿಯೂ ತಮಿಳರು ಕೇಂದ್ರದೆದುರು ವಾದಮಂಡಿಸಿದ್ದಿರಬಹುದು ಎಂಬ ವಿ-ವಾದ! ಆದುದರಿಂದ ತಮಿಳು ಅತ್ಯಂತ ಪ್ರಾಚೀನ ಭಾಷೆ, ಆ ಕಾರಣಕ್ಕೆ ನಮಗೆ ಶಾಸ್ತ್ರಿಯ ಮಾನ ಬೇಕು ಎಂಬುದು ಅವರ ಅಪ-ವಾದವಾಗಿತ್ತು. ಅದಕ್ಕಾಗಿಯೇ ಅವರು, ಮೊನ್ನೆ ಮೊನ್ನೆಯಷ್ಟೇ ನಮಗೆ ತಿಳಿದುಬಂದ ಕನ್ನಡಕ್ಕೇಕೆ ಶಾಸ್ತ್ರಿ ಬೇಕು ಎಂದು ತಕರಾರೆತ್ತಿ ಅವರು ಮದ್ರಾಸು ಹೈಕೋರ್ಟಿನಲ್ಲಿ ತಕರಾರನ್ನೂ ಎತ್ತಿದ್ದಾರೆ.
ಅದಿರಲಿ... ಬೊಗಳೆಗೂ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕೀತು ಎಂದು ಬೊಗಳೂರಿನೆಲ್ಲೆಡೆ ಆತಂಕದ, ಭೀತಿಯ ಕರಾಳ ಛಾಯೆ ಆವರಿಸಿದ್ದು, ಈ ಛಾಯೆ ಎಷ್ಟು ಕಪ್ಪಗಿದೆಯೆಂದರೆ, ಬೊಗಳೂರು ಏಕಸದಸ್ಯ ಬ್ಯುರೋದಲ್ಲಿರುವ ಸಮಸ್ತ ಸಿಬ್ಬಂದಿಗೆ ಪರಸ್ಪರರ ಮುಖ ಕಾಣಿಸದಷ್ಟು! ಇದಕ್ಕೆ ಕಾರಣವೆಂದರೆ, ರಾಜ್ಯೋತ್ಸವ ಪ್ರಶಸ್ತಿಯ ಎರಡನೇ ಕಂತು ಈಗಾಗಲೇ ಬಿಡುಗಡೆಯಾಗಿದೆ, ಉಳಿದ ಏಳೆಂಟು ಕಂತುಗಳು ಕೂಡ ಒಂದೊಂದಾಗಿ ಬಯಲಿಗೆ ಬೀಳಲಿದ್ದು, ಇದರಲ್ಲಿ ಬೊಗಳೂರು ಕೂಡ ಸೇರಬಹುದೇ ಎಂಬ ಭಯಾತಂಕ.
ಹೀಗಾಗಿ, ಬೊಗಳೂರಿನ ಓದುಗರು ವದಂತಿಗೆ ಕಿವಿಗೊಡದಂತೆ, ನಿಮ್ಮ ಮನೆಯಂಗಳದಲ್ಲೇ ಸ್ಫೋಟ ಸಂಭವಿಸಿದರೂ, ಕೇಂದ್ರ ಸರಕಾರವು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ಭರವಸೆಯಲ್ಲಿ ಶಾಂತಚಿತ್ತದಲ್ಲಿ ಇರಬೇಕೂಂತ ಕೋರಲಾಗುತ್ತಿದೆ.
Read more...