ಉಗ್ರರಿಗೂ ಮತದಾನದ ಹಕ್ಕು: ಕೇಂದ್ರ ಚಿಂತನೆ

Monday, September 29, 2008

(ಬೊಗಳೂರು ಓಟಿನ ಬ್ಯಾಂಕು ಬ್ಯುರೋದಿಂದ)
ಬೊಗಳೂರು, ಸೆ.29- ಭಯೋತ್ಪಾದಕರಿಗೂ ಮತದಾನ ಹಕ್ಕು ನೀಡಲು ಕೇಂದ್ರ ಗೃಹದೊಳಗಿರುವ ಸಚಿವಾಲಯಕ್ಕೆ ಶಾಸನ ರೂಪಿಸಲು ತೀವ್ರ ಒತ್ತಡ, ಸಲಹೆ, ಮನವಿ ಇತ್ಯಾದಿಗಳು ಕೇಳಿಬರುತ್ತಿರುವುದು ಬೊಗಳೆ ರಗಳೆ ಬ್ಯುರೋದ ವ-ರದ್ದಿಗಾರರ ಕಿವಿಗೆ ಬಿದ್ದಿದೆ.

ಇದಕ್ಕೆ ಮೂಲ ಪ್ರೇರಣೆ ದುರ್ಜನ ಸಿಂಗರು ಕೈಗೊಳ್ಳುತ್ತಿರುವ ನಿರ್ಧಾರಗಳು. ತಮ್ಮ ಓಟಿನ ಬ್ಯಾಂಕುಗಳು ಇತ್ತೀಚೆಗೆ ಜೈಲು ಸೇರುತ್ತಿರುವುದರಿಂದ ತೀವ್ರ ಕಳವಳಗೊಂಡಿರುವ ಸರಕಾರವು, ಇನ್ನು ಮುಂದೆ ಚುನಾವಣೆಯಲ್ಲಿ ಜಯಿಸುವುದಾದರೂ ಹೇಗೆ ಎಂದು ಚಿಂತಾಕ್ರಾಂತವಾಗಿ ಕುಳಿತಿದ್ದಾಗ, ಅರ್ಜುನನಿಗೆ ಅಭಿಮನ್ಯುವಿನಿಂದ ದೊರೆತ ಮಾದರಿಯ ಸಲಹೆಯೊಂದು ಛಕ್ಕಂತ ಸರಕಾರದ ಅಂಗಳದಲ್ಲಿ ಬಂದು ಬಿದ್ದಿದೆ.

ಸ್ವತಃ ದುರ್ಜನ ಸಿಂಗರೇ ಇದರಿಂದ ಕಕ್ಕಾಬಿಕ್ಕಿಯಾಗಿ, ಈ ಸಲಹೆ ಬಿದ್ದದ್ದೆಲ್ಲಿಂದ ಎಂದು ಸಾವರಿಸಿಕೊಳ್ಳುವಷ್ಟರಲ್ಲಿ, ಶಾಸನ ರೂಪಿಸಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಲಾಗಿದೆ ಎಂದು ಮೂಲಗಳು ವರದ್ದಿ ಮಾಡಿವೆ.

ಇದರ ನಡುವೆಯೇ, ತಮ್ಮ ಗೃಹದ ಹೊರಗೆ ಮತ್ತೆ ಮತ್ತೆ ಪಟಾಕಿಗಳು ಸಿಡಿಯುತ್ತಿರುವುದು ಗೃಹದ ಸಚಿವರ ಗಮನಕ್ಕೆ ಬರುವ ವೇಳೆಗೆ ಆ ಸುದ್ದಿಯ Expiry date ಮುಗಿದಿರುತ್ತದೆ. ಹೀಗಾಗಿ, ಅವರು ಗೃಹದ ಒಳಗಿಂದ ಹೊರಗೆ ಬಂದು, "ಹೌದಾ, ಸಿಡಿದದ್ದು ಪಟಾಕಿಯೇ? ಬಹುಶಃ ದೀಪಾವಳಿ ಸಮೀಪಿಸುತ್ತಿದೆಯಲ್ಲ, ಅದೇ ಇರಬೇಕು" ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಂದಲೇ ಸ್ಪಷ್ಟನೆ ಕೇಳಿದ್ದಾರೆ.

ನಾಲ್ಕು ಹೆಜ್ಜೆ ಮುಂದುವರಿದು ಮಾತನಾಡಿದ ಅವರು, ತಮ್ಮ ಕಾರಿನತ್ತ ತಲುಪಿ, "ನಾವು ಅಲ್ಪ ಸಂಖ್ಯಾತರನ್ನು ರಕ್ಷಿಸಬೇಕು. ಪಾಪ, ಅವರು ಈ ದೇಶದಲ್ಲಿ ಅದೆಷ್ಟು ಭೀತಿಯ ವಾತಾವರಣದಲ್ಲಿ ಬದುಕುತ್ತಿದ್ದಾರೆ. ನೆರೆಯ ಪಾಕಿಸ್ತಾನದಲ್ಲೂ ನಮ್ಮಲ್ಲಿದ್ದಂಥದ್ದೇ ಸಮಸ್ಯೆಯಿದೆ. ನಾವಂತೂ ಭಾರತದಲ್ಲಿ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಟಿಬದ್ಧರಾಗಿದ್ದೇವೆ. ಅವರಿಗೆ ನಾವು ರಕ್ಷಣೆ ಕೊಡದಿದ್ದರೆ, ಬೇರೆ ಯಾರು ಕೊಡುತ್ತಾರೆ? ಉಳಿದ ಎಲ್ಲ ಪಕ್ಷದವರೂ ಭಾರತದಲ್ಲಿರುವವರ ಪರವಾಗಿಯೇ ಮಾತನಾಡುತ್ತಿವೆ. ನಾವಾದರೂ ಇವರ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಡ್ವೇ" ಎಂದು ಪ್ರಶ್ನಿಸಿದ್ದಾರೆ.

ಉಗ್ರಗಾಮಿಗಳೆಲ್ಲರನ್ನೂ ಭಯೋತ್ಪಾದಕರೆಂದು ದೂರವಿಡಲಾಗುತ್ತದೆ. ಅವರಿಗೆ ಮತದಾನದ ಹಕ್ಕನ್ನೂ ನಿರಾಕರಿಸುತ್ತಿರುವುದು ನಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಸಂಗತಿ. ಪಟಾಕಿ ಸ್ಫೋಟಿಸಿದ ಕೆಲವರನ್ನಂತೂ ಜೈಲಿಗೆ ತಳ್ಳಲಾಗುತ್ತಿದೆ. ಅವರೂ ಮಾನವರೇ ಅಲ್ಲವೇ? ಅವರಿಗೂ ಮಾನವೀಯತೆ ತೋರಿಸಬೇಡವೇ? ಓಟಿನ ಸಮಯದಲ್ಲಾದರೂ ಅವರಿಗೆ ಒಂದಷ್ಟು ಕ್ಷಣಗಳ ಕಾಲ ಹೊರಗೆ ಬಂದು ಮತ ಚಲಾಯಿಸುವಂತಾಗಲು, ಅದಕ್ಕೆ ಪೂರಕವಾದ ಕಾನೂನು ನಮ್ಮ ಮುಂದಿದೆ ಎಂದು ಕೇಂದ್ರದ ವಕ್ತಾರರು ಬೇರೆಲ್ಲಾ ಪತ್ರಿಕೆಗಳನ್ನು ಬಿಟ್ಟು, ಬೊಗಳೆ ರಗಳೆ ಬ್ಯುರೋದ ರದ್ದಿಗಾರರಿಗೂ ತಿಳಿಸದೆ ಪತ್ರಿಕಾ ಗೋಷ್ಠಿಯಲ್ಲಿ ವಾದಿಸಿದ್ದಾರೆ.

Read more...

ಶ್ವಾನ ದಳವನ್ನೇ ಬಾಂಬ್ ನಿಷ್ಕ್ರಿಯ ದಳವಾಗಿಸಿದರು!

Friday, September 26, 2008

(ಬೊಗಳೂರು ನಿಷ್ಕ್ರಿಯ ದಳದಿಂದ)
ಬೊಗಳೂರು, ಸೆ.26- ಕೇವಲ ಬಾಂಬ್ ಪತ್ತೆ ದಳದಿಂದಲೇ ಬಾಂಬ್ ನಿಷ್ಕ್ರಿಯ ದಳದ ಕೆಲಸ ಮಾಡಿಸಿದ ಬೊಗಳೂರು ಪೊಲೀಸರ ಸಂಶೋಧನೆಯನ್ನೇ ಬೊಗಳೆ ರಗಳೆ ಬ್ಯುರೋದ ಸಂಶೋಧಕರು ಪತ್ತೆ ಹಚ್ಚಿ ತಮ್ಮ ಚಾಕಚಕ್ಯತೆ ಮೆರೆದಿದ್ದಾರೆ.

ವಾಸ್ತವವಾಗಿ ಧಾರವಾಡದಲ್ಲಿ ಬಾಂಬ್ ಇದೆ ಎಂದು ಗೊತ್ತಾದಾಗ, ಬಾಂಬ್ ನಿಷ್ಕ್ರಿಯ ದಳವು ಬೆಂಗಳೂರಿನಿಂದ ಬರಲು ಏಳೆಂಟು ಗಂಟೆ ಹಿಡಿಯುತ್ತದೆ ಎಂಬುದು ಪೊಲೀಸರ ಚಿಂತೆಗೆ ಕಾರಣ. ಹೀಗಾಗಿ ಧಾರವಾಡದಲ್ಲೇ ಲಭ್ಯವಿದ್ದ ನಾಯಿಯೊಂದನ್ನು ಕರೆದೊಯ್ದ ಅವರು, ಬಾಂಬ್ ಪತ್ತೆ ದಳವನ್ನಾಗಿ ಮಾಡಿಕೊಂಡರು.

ಈ ನಾಯಿಗೆ ಸ್ಥಳದಲ್ಲೇ ಚೆನ್ನಾಗಿ ನೀರೋ/ಬೀರೋ ಕುಡಿಸಿದ ಅವರು, ಬಾಂಬ್ ಹುಡುಕಲಾರಂಭಿಸಿದರು. ಅರ್ಧ ಗಂಟೆ ಕಳೆಯುವಷ್ಟರಲ್ಲಿ ನಾಯಿಗೆ ಹೊಟ್ಟೆಯಲ್ಲಿ ಜಳಜಳವಾದ ಸದ್ದು. ತಡೆಯಲಾಗದೆ ಕಾಲೆತ್ತಿಯೇ ಬಿಟ್ಟಿತು. ಆದರೆ ಅದೃಷ್ಟವಶಾತ್ ಅದೇ ಸ್ಥಳದಲ್ಲಿ ಬಾಂಬ್ ಇದ್ದಿತ್ತು. ಅದು ನೀರು ಬಿದ್ದ ದೀಪಾವಳಿ ಪಟಾಕಿಯಂತೆ ಠುಸ್ ಎಂದಿತು. ಅಲ್ಲಿಗೆ ಬಾಂಬ್ 'ನಿಷ್ಕ್ರಿಯ'ವಾಯಿತು. ಇದನ್ನು ಪತ್ತೆ ಹಚ್ಚಿದ್ದು ಬೊಗಳೂರಿನ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಚಹಾ ಸೇವಿಸುತ್ತಿದ್ದಾಗ!

ಇದರಿಂದ ತಾವೇ ಬಾಂಬ್ ನಿಷ್ಕ್ರಿಯ ದಳವೊಂದನ್ನು ಸಂಶೋಧಿಸಿದ್ದೇವೆ ಮತ್ತು ಅದನ್ನು ಪ್ರಯೋಗ ಮಾಡಿ ಯಶಸ್ಸೂ ಸಾಧಿಸಿದ್ದೇವೆ ಎಂದು ಪೊಲೀಸರು ತಮ್ಮ ಬೆನ್ನು ತಟ್ಟಿಕೊಂಡು, ನಾಯಿಯ ಬೆನ್ನು ಸವರಿದ್ದಾರೆ.

ಈ ಮಧ್ಯೆ, ಪೊಲೀಸರು ಬೀಡಾಡಿ ನಾಯಿಗಳನ್ನೆಲ್ಲಾ ಬಾಂಬ್ ನಿಷ್ಕ್ರಿಯ ಮತ್ತು ಪತ್ತೆ ದಳಕ್ಕೆ ಸೇರಿಸುತ್ತಿದ್ದಾರೆ ಎಂಬುದರ ಸುಳಿವು ಪಡೆದ ಉಗ್ರಗಾಮಿಗಳು, ನಾಯಿಗಳ ದಾರಿ ತಪ್ಪಿಸಲು ಹೊಸ ಉಪಾಯ ಕಂಡುಕೊಂಡಿದ್ದಾರೆ. ಅದೆಂದರೆ ಗಂಡು ನಾಯಿಗಳಿಗೆ ತುಂಡು ನೀಡುವುದು ಮತ್ತು ಬೊಗ್ಗಿ ನಾಯಿಗಳನ್ನು ಹೆಚ್ಚು ಹೆಚ್ಚು ಈ ಶ್ವಾನ ದಳದತ್ತ ಛೂಬಿಡುವುದು.

ಅವರ ಕಾರ್ಯತಂತ್ರದ ಪ್ರಕಾರ, ಶ್ವಾನ ದಳದವರಿರುವೆಡೆಯಲ್ಲೆಲ್ಲಾ ಜೇಬಿನಲ್ಲಿ ಚಿಕನ್ ತುಂಡು ಇಟ್ಟುಕೊಂಡು ತಿರುಗಾಡುತ್ತಿರುವುದು. ಚಿಕನ್‌ನ ವಾಸನೆ ಗ್ರಹಿಸುವ ಈ ನಾಯಿಗಳು, ಹಣವಿರುವೆಡೆ ರಾಜಕಾರಣಿಗಳು ಸಕ್ರಿಯರಾಗುವಂತೆ, ಅವರನ್ನೇ ಹಿಂಬಾಲಿಸುವಂತೆ ಮಾಡುವುದು. ಶ್ವಾನ ದಳದ ಮತ್ತೊಂದು ಬಣವು ಬೊಗ್ಗಿ ನಾಯಿಗಳ ಹಿಂದೆ ಹೋಗುತ್ತಾ, ಬಾಂಬ್ ಮರೆತುಬಿಡುತ್ತವೆ. ಈ ರಣತಂತ್ರಕ್ಕೆ ಪ್ರತಿತಂತ್ರವೊಂದು ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದು ವರದಿಯಾಗಿದೆ.

Read more...

ದಕ್ಕದ ಭ್ರಷ್ಟಾಚಾರ ಪ್ರಶಸ್ತಿಗೆ ಅವಮಾನ!

Thursday, September 25, 2008

(ಬೊಗಳೂರು ಡಬ್ಬಾ ಪ್ರತಿಭಟನೆ ಬ್ಯುರೋದಿಂದ)
ಬೊಗಳೂರು, ಸೆ.25- ಕೇವಲ ಬೊಗಳೂರೆಂಬ ಪುಟ್ಟದಾದ ಆದರೆ ಬ್ರಹ್ಮಾಂಡದಂತಹ ಊರಿಗೆ ಸೇರಬೇಕಾಗಿದ್ದ ಬಿರುದು ಮತ್ತು ಬಾವಲಿಯು ಇಡೀ ದೇಶಕ್ಕೇ ದೊರೆತರೆ ಏನಾಗುತ್ತದೆ? ಬೊಗಳೂರಿನ ಮಂದಿಯಾದ ನಾವು ಖಂಡಿತವಾಗಿ ಪ್ರತಿಭಟಿಸಲೇಬೇಕಾಗುತ್ತದೆ.

ಆದರೆ ಇದೀಗ ನಮ್ಮದು ಡಬ್ಬ(ಲ್) ಪ್ರತಿಭಟನೆಗೆ ಯೋಜನೆ ರೂಪುಗೊಳ್ಳುತ್ತಿದೆ. ಯಾಕೆ ಗೊತ್ತೆ? ಬೊಗಳೂರಿಗೆ ದೊರೆಯಬೇಕಾದ ಪದವಿಯನ್ನು ಭಾರತಕ್ಕೆ ನೀಡಿದ್ದಾರೆ. ಅದೆಂದರೆ ಭ್ರಷ್ಟಾಚಾರದಲ್ಲಿ 85ನೇ ರಾಷ್ಟ್ರ ಭಾರತ ಎಂಬ ಸ್ಥಾನ-ಮಾನ. ವಿಶ್ವದಲ್ಲೇ ಹಣದುಬ್ಬರ ಏರುತ್ತದೆ, ಸೆನ್ಸೆಕ್ಸ್ ಧರಾಶಾಯಿಯಾಗುತ್ತದೆ, ವಹಿವಾಟುಗಳೆಲ್ಲಾ ತೋಪು ಹೊಡೆಯುತ್ತವೆ. ಆದರೆ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಕ್ಷೇತ್ರವೊಂದರಲ್ಲಿ ವ್ಯವಹಾರವಂತೂ ಎಗ್ಗಿಲ್ಲದೇ ಮುಂದುವರಿಯುತ್ತದೆ. ಅದಕ್ಕೆ ಯಾರ ಹಂಗೂ ಇಲ್ಲ.

ಇದೇ ಕಾರಣಕ್ಕಾಗಿ ಮತ್ತು ವಿಶ್ವಾದ್ಯಂತ ಅತ್ಯಂತ ಅಗೌರವಕ್ಕೆ ಪಾತ್ರರಾಗಿರುವುದಕ್ಕಾಗಿಯೇ ಬೊಗಳೂರು ಮಂದಿ ಭ್ರಷ್ಟಾಚಾರವನ್ನೇ ತಮ್ಮ ಜೀವನಾಂಶವಾಗಿ ಮಾಡಿಕೊಂಡಿದ್ದರು. ಆದರೆ ಇಷ್ಟೆಲ್ಲಾ ಶ್ರಮಪಟ್ಟರೂ, ಕಳೆದ ಬಾರಿಗಿಂತ ಭ್ರಷ್ಟಾಚಾರದ ರ‌್ಯಾಂಕಿನಲ್ಲಿ ಈ ಬಾರಿ ಭಾರೀ ಕುಸಿತವೇ ಕಂಡುಬಂದಿದೆ. ಕಳೆದ ವರ್ಷ 72ನೇ ಮಟ್ಟದಲ್ಲಿದ್ದ ನಮ್ಮ ದೇಶ, ಈ ಬಾರಿ 85ನೇ ಸ್ಥಾನಕ್ಕೆ ಇಳಿದಿದೆ (ಏರಿದೆ!).

ಬೊಗಳೂರಿನ ಮಂದಿಗೆ ಮತ್ತು ನಮ್ಮ ಬ್ಯುರೋದವರಿಗೆ ತೀವ್ರ (ಡಬ್ಬಲ್) ಆಕ್ರೋಶಕ್ಕೆ ಕಾರಣವಾಗಿರುವ ಅಂಶವೆಂದರೆ, ನಮಗೆ ದೊರೆಯಬೇಕಾದ ಈ ಪ್ರಶಸ್ತಿಯನ್ನು ಭಾರತ ಕಿತ್ತುಕೊಂಡಿದ್ದಲ್ಲ. ಬದಲಾಗಿ, ಕಿತ್ತುಕೊಂಡರೂ ಅದು ಉತ್ತಮ ನಿರ್ವಹಣೆ ತೋರಲಿಲ್ಲ. ಕಳೆದ ಸಲಕ್ಕಿಂತ ತೀರಾ ಕಳಪೆ ಪ್ರದರ್ಶನ ನೀಡಿ ರ‌್ಯಾಂಕಿನಲ್ಲಿ ಕುಸಿತ ದಾಖಲಿಸಿದೆ ಎಂಬುದಾಗಿದೆ.

ಈ ಕುರಿತು ಅಪ್ರಜ್ಞಾವಂತ ಅನಾಗರಿಕರು ತೀವ್ರ ಪ್ರತಿಭಟನೆ ಮಾಡಲು ನಿರ್ಧರಿಸಿ ನಿದ್ದೆಹೋಗಿದ್ದಾರೆ.

Read more...

ಸಿಎಮ್ಮು ರಾಜಕೀಯ ದೊಂಬರಾಟದ 'ಗೊಂಬೆ' ಅಲ್ಲ!

Tuesday, September 23, 2008

(ಬೊಗಳೂರು ನಿದ್ರೆಯಿಂದ ಎಚ್ಚೆತ್ತ ಬ್ಯುರೋದಿಂದ)
ಬೊಗಳೂರು, ಸೆ.23- ಬೊಗಳೂರಿನಿಂದ ಪರಾರಿಯಾಗಿದ್ದೇ ತಡ, ಮಂಗಳೂರು-ಬೆಂಗಳೂರುಗಳಲ್ಲಿ ದಾಳಿ-ಗಲಭೆಗಳ ನಡುವೆ ರಾಜಕೀಯ ದೊಂಬರಾಟ ಮೇರೆ ಮೀರುತ್ತಿರುವ ಹಂತ ತಲುಪಿದ ಸಂದರ್ಭದಲ್ಲಿ, ಈ ರಾಜಕೀಯ ದೊಂಬರಾಟಕ್ಕೆ ಮೂಲ ಪ್ರೇರಣೆಯೊಂದು "ಅದಲ್ಲ" ಅನ್ನಿಸಿಕೊಂಡಿದೆ.

ಅದೆಂದರೆ, ದೊಂಬರಾಟಗಳಿಗೆ ಬಳಸುವ ಗೊಂಬೆಯು 'ಅದು ಅಲ್ಲ' ಎಂದು ಗಣಿ ಧಣಿಗಳು ಇಲ್ಲಿ ಸ್ಪಷ್ಟಪಡಿಸಿದ್ದಾರೆ.

ನಾವು ಇದುವರೆಗೆ ನಮ್ಮ ಕೈಯಲ್ಲಿರೋದು ಸಿಎಂ ಗೊಂಬೆ ಅಂತ ತಿಳಿದುಕೊಂಡಿದ್ದೆವು. ಆದರೆ ಅದು ಆಟವಾಡುತ್ತಿರುವ ರೀತಿ ನೋಡಿದರೆ, ಅದು ಕೈಗೊಂಬೆಯಲ್ಲ. ಚನ್ನಪಟ್ಟಣದ ಗೊಂಬೆಗಿಂತಲೂ ಶಾರ್ಪ್ ಆಗಿದೆ ಎಂದು ಗಣಿ ರೆಡ್ಡಿಗಳು ವಿಶೇಷವಾಗಿ ಬೆಂಗಳೂರಿಗೆ ಓಡಿಬಂದಿದ್ದ ಬೊಗಳೆ ರಗಳೆ ಬ್ಯುರೋದ ಏಕಸದಸ್ಯ ಬ್ಯುರೋದ ತಂಡದ ಸಮಸ್ತ ಸಿಬ್ಬಂದಿಗೆ ಏಕಾಂತದಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅವರೀಗ ಕೈಗೊಂಬೆಯಲ್ಲ. ಅವರ ಕೈಗಳನ್ನು ಕಟ್ಟಿ ಹಾಕಲಾಗಿರುವುದರಿಂದ ಅವರು ಕೈಕಟ್‌ಗೊಂಬೆ ಹಾಗೂ ಕಣ್ಣುಗಳಿಗೂ ಬಟ್ಟೆಕಟ್ಟಿರುವುದರಿಂದ ಕಣ್‌ಕಟ್ ಗೊಂಬೆ ಎಂಬುದು ನಮಗೀಗ ಅರಿವಾಗಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಹಿತವನ್ನು ಬಲಿ ಕೊಡುವುದು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದನ್ನು ಬಲಿ ಕೊಟ್ಟರೆ, ಅದು ಮುಂದಿನ ಪೀಳಿಗೆಗೆ ಉಳಿಯುವುದಾದರೂ ಹೇಗೆ ಎಂದು ಮರು ಸವಾಲು ಹಾಕಿದ ಅವರು, ಆದರೆ ಈ ಹಿತ-ಅಹಿತ ಬಗ್ಗೆ ಗಂಭೀರವಾಗಿ, ಮಾರಾಮಾರಿಯಾಗಿ, ಭೀಕರವಾಗಿ, ಭೀಭತ್ಸಕರವಾಗಿ, ಅಸಹ್ಯವಾಗಿ ಚರ್ಚೆಯಾಗಬೇಕಿದೆ ಎಂದು ಮಾತ್ರ ಸೇರಿಸುವುದನ್ನು ಮರೆಯಲಿಲ್ಲ.

ನಾವಿರೋವಾಗ ಯಾವುದೇ ರೀತಿಯ ಅಕ್ರಮಗಳನ್ನು ಬೇರೆಯವರು ಮಾಡುವುದನ್ನು ಸಹಿಸುವುದಿಲ್ಲ ಮತ್ತು ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ಇದೇ ಸಂದರ್ಭದಲ್ಲವರು ಗುಸುಗುಸು ಎಂದು ಬೊಬ್ಬಿಟ್ಟಿದ್ದಾರೆ.

Read more...

ರಹಸ್ಯ ಭೇದಿಸುವ ಸಂಚು: ಬೊಗಳೂರು ಬಂದ್

Friday, September 12, 2008

ಬ್ರಹ್ಮಾಂಡ ಸೃಷ್ಟಿಯ ರಹಸ್ಯವರಿಯುವ ನೆಪದಲ್ಲಿ ಬೊಗಳೆ ರಗಳೆ ಬ್ಯುರೋದ ವಿರುದ್ಧ ಸುರಂಗ ಕಾರ್ಯಾಚರಣೆ ನಡೆಸಿ, ರಹಸ್ಯ ಪತ್ತೆ ಹಚ್ಚುವ ಅಸಹ್ಯ ಕಾರ್ಯ ಆರಂಭವಾಗಿರುವುದರಿಂದ ಕೆರಳಿರುವ ಬೊಗಳೂರು ಮಂದಿ, ಪ್ರತಿಭಟನಾರ್ಥವಾಗಿ ಬ್ಯುರೋ ಬಾಗಿಲು ಮುಚ್ಚಿ ಒಂದು ವಾರ ಕಾಲ ಪರಾರಿಯಾಗಲು ಮತ್ತು ಇಲ್ಲದ ತಲೆ ಮರೆಸಿಕೊಳ್ಳಲು ನಿರ್ಧರಿಸಿದ್ದಾರೆ.

ಇನ್ನೊಂದು ವಾರ, ಬೊಗಳೆ ಬ್ಯುರೋದ ಕುಟುಕು ಕಾರ್ಯಾಚರಣೆಯಿಲ್ಲದೆ, ನೆಟ್ಲೋಕದ ಮಂದಿ ನಿಶ್ಚಿಂತೆಯಿಂದ ನಿದ್ದೆ ಮಾಡಬಹುದೆಂಬ ಸಲಹೆ ನೀಡುತ್ತಾ....
-ಅನ್ವೇಷಿ

Read more...

ತಾಳಿ ಕಟ್ಟುವಾಗ ವಧು-ವರರ ಪವರ್ ಕಟ್!

Monday, September 08, 2008

(ಬೊಗಳೂರು ತಾಳಿ ಕಟ್ ಬ್ಯುರೋದಿಂದ)
ಬೊಗಳೂರು, ಸೆ.8- ತಾಳಿ ಕಟ್ಟುವಾಗ ಸ್ವಲ್ಪ ತಾಳಿ ಎಂಬ ಹಿರಿಯರ ವಾಕ್ಯಕ್ಕೆ ಸೊಪ್ಪು ಹಾಕದ ಮಂದಿ, ಕರೆಂಟು ಹೋದ ಪರಿಣಾಮ, ಪಕ್ಕದಲ್ಲೇ ಗೋಣೊಡ್ಡಿದ ಮುತ್ತಜ್ಜಿಯರಿಗೆ ತಾಳಿ ಕಟ್ಟಿದ ಪ್ರಸಂಗವೊಂದು ಇಲ್ಲಿ ವ-ರದ್ದಿಯಾಗಿದೆ.

ಇದಕ್ಕೆ ಕಾರಣವೆಂದರೆ, ಜಿಗಿಜಿಗಿ ಜನರಿಂದ ತುಂಬಿರುವ ವಿವಾಹ ಸಭಾಂಗಣದಲ್ಲಿ ತನ್ನ ಮರಿಮೊಮ್ಮಗಳಿಗೆ ಮದುವೆಯಾಗುವುದನ್ನು ಕಣ್ಣಾರೆ ಕಾಣಬೇಕು ಎಂದು ಮಂಟಪದಲ್ಲಿ ಹಾತೊರೆಯುತ್ತಿದ್ದ ಮುತ್ತಜ್ಜಿ. ಕರೆಂಟ್ ಹೋದಾಗ ಆಘಾತಗೊಂಡು, ತನ್ನ ಮರಿಮೊಮ್ಮಗಳನ್ನು ಇರುವೆ ಕಚ್ಚಿಕೊಂಡು ಹೋದರೆ... ಎಂಬ ಭೀತಿಗೊಳಗಾದಳು. ಸಾಲಂಕೃತಳಾದ ವಧುವಿಗೆ ಏನೂ ಆಗಬಾರದು ಅಂತ ತಮ್ಮ ಗೋಣನ್ನು ವಧುವಿನ ಮುಖದ ಬಳಿಯೇ ಇರಿಸಿದ್ದರು. ವರ ಮಹಾಶಯನಿಗೆ "ತಾಳಿ ತಾಳಿ" ಎಂದು ಹೇಳಿದ್ದಷ್ಟೇ ಕೇಳಿಸಿತ್ತು. ಅದು 'ತಾಳಿರಿ ತಾಳಿರಿ' ಎಂದಿದ್ದೋ, ಅಥವಾ 'ಮುಹೂರ್ತ ಬಂದಿದೆ ಬೇಗನೇ ತಾಳಿ ಕಟ್ಟಿ' ಅಂದಿದ್ದೋ ಎಂದು ಬೊಗಳೆ ರಗಳೆ ಬ್ಯುರೋದಂತೆ ವಿಶ್ಲೇಷಣೆ ಮಾಡಲು ಹೋಗದ ಆತ, ಪವರ್ ಕಟ್ಟಿನ ಮಧ್ಯೆಯೇ ತಾಳಿ ಕಟ್ಟಿದಾಗ ಕೆಲಸ ಕೆಟ್ಟಿತ್ತು. ಅಜ್ಜಿ ಗೋಳೋ ಎಂದು ಅಳಲಾರಂಭಿಸಿದಾಗಲೇ ವಿಷಯ ಅರಿವಿಗೆ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ವ-ರದ್ದಿ ತಂದೊಪ್ಪಿಸಿದ್ದಾರೆ.

ಈ ಕುರಿತು ಉನ್ನತ ವಿಶ್ಲೇಷಣೆ ಮಾಡಲಾರಂಭಿಸಿದ ಬೊಗಳೂರು ಬ್ಯುರೋ, ಮದುವೆಯಾಗುವುದು ಜನುಮ ಜನುಮದ ಅನುಬಂಧವಾದರೂ, ಪವರ್ ಕಟ್ ಇದ್ದಾಗಲೇ ತಾಳಿ ಕಟ್ಉವುದು, ಮುಂದಿನ ಭವಿಷ್ಯದಲ್ಲಿ ವಧು-ವರರಿಬ್ಬರ ಪವರ್‌ಗಳು ಕಟ್ ಆಗುವ ವಾಸ್ತವಾಂಶಕ್ಕೆ ಮುನ್ನುಡಿ ಮತ್ತು ಅವರವರ ಭವಿಷ್ಯದ ಕನ್ನಡಿ ಎಂದು ಹೇಳಲಾಗುತ್ತಿದೆ.

ಇನ್ನೊಂದು ವಾದದ ಪ್ರಕಾರ, ಇಷ್ಟವಿಲ್ಲದವರನ್ನು ಗಂಟು ಹಾಕುವ ಹೆತ್ತವರ ಪ್ರಯತ್ನದಿಂದ ಪಾರಾಗಲು ಇದು ವಧು ಮತ್ತು ವರರು ಸೇರಿಕೊಂಡು ಮಾಡಿದ ಪೂರ್ವಯೋಜಿತ ಸಂಚು. ಆದರೆ ಅವರ ಸಂಚಿನ ಅರಿವಿದ್ದ ಹೆತ್ತವರು, ಕಲ್ಯಾಣ ಮಂಟಪದಲ್ಲಿ 80ಕ್ಕಿಂತ ಹೆಚ್ಚು ವಯಸ್ಸಾದವರಿಗೆ ಮಾತ್ರವೇ ಪ್ರವೇಶ ನೀಡಿ, ಯತ್ನ ವಿಫಲಗೊಳಿಸಲು ಪ್ರಯತ್ನಿಸಿದ್ದರು. ಇದನ್ನು ಮೊದಲೇ ಊಹಿಸಿದ್ದ ವರ, ಚೆಂದಾಗಿ ಕಾಣುತ್ತಿದ್ದವಳಿಗೆ ಅಜ್ಜಿಯ ಮಾರುವೇಷದಲ್ಲಿ ಬರುವಂತೆ ಹೇಳಿದ್ದ. ಅಲ್ಲಿಗೆ ಆ ಅಧ್ಯಾಯ ಮುಗಿದಿತ್ತು.

ವರರ ಗೊಂದಲ: ತಾವು ಕಟ್ಟಿದ ತಾಳಿಯನ್ನು ಕಿತ್ತು, ಮರಳಿ ಮರಳಿ 'ಬಲಿಪಶು'ವಿಗೇ ಕಟ್ಟುವಂತೆ ಮಾಡಿದ ಹಿರಿಯರು ವಿರುದ್ಧ ಕೇಸು ದಾಖಲಿಸಲು ವರ-ಮಹಾಶಯರು ತೀರ್ಮಾನಿಸಿದ್ದಾರೆ. ಇದಕ್ಕೆ ಕಾರಣವೆಂದರೆ, ತಮ್ಮ ಮೇಲೆ ದ್ವಿಪತ್ನಿತ್ವ ಎಂಬ ಕೇಸು ಜಡಿಯುವ ಸಾಧ್ಯತೆಗಳು. ಯಾಕೆಂದರೆ ಒಂದೇ ಮಂಟಪದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ ಎಂದು ಬೊಗಳೆ ರಗಳೆ ಸಹಿತ ಹಲವಾರು ಪತ್ರಿಕೆಗಳು ವ-ರದ್ದಿ ಮಾಡಿದ್ದವು.

ಸಾಮೂಹಿಕ: ಆದರೆ, ಮತ್ತೆ ಕೆಲವರು ಇದು 'ಸಾಮೂಹಿಕ ವಿವಾಹ' ಆಗಿದ್ದುದರಿಂದ, ಯಾರು ಯಾರಿಗೆ ಬೇಕಾದರೂ, ಎಷ್ಟು ಬಾರಿಯೂ ತಾಳಿ ಕಟ್ಟಬಹುದು ಎಂದು ತಿಳಿದುಕೊಂಡಿದ್ದು, ಈ ರೀತಿಯ ವಿಶ್ಲೇಷಣೆಗಳಿಂದ ತಮ್ಮ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.

ಕಾಳದಂಧೆ: ಈ ಮಧ್ಯೆ, ಈ ಘಟನೆಗಳಿಂದ ಪ್ರೇರಿತರಾಗಿ ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಎಂಬ ಬೋರ್ಡು ತಗುಲಿಸಿಕೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ. ಕಲ್ಯಾಣ ಮಂಟಪಗಳಲ್ಲಿ ತಮಗೆ (ಕರೆಂಟು ತೆಗೆಯಲು) ಬೇಡಿಕೆ ಹೆಚ್ಚಾಗುತ್ತಿದ್ದು, ಇಂತಹ engineered ಮದುವೆ ಏರ್ಪಡಿಸಲೆಂದೇ ಅವರು ಡಿಪ್ಲೊಮಾಗಳನ್ನು ಕದ್ದು ತಗುಲಿಸಿಕೊಂಡಿದ್ದಾರೆ ಎಂಬುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.

ಆದರೆ, ಇದು ಬೊಗಳೆ ಬ್ಯುರೋ ಸಂಶೋಧಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಡೈವೊರ್ಜೀನ್ ಎಂಬ ವಿವಾಹೋತ್ತರ ಕಾರ್ಯಕ್ರಮದ ಬೇಡಿಕೆ ತಗ್ಗಿಸಿ, ಬ್ಯುರೋಗೆ ಭಾರೀ ಪ್ರಮಾಣದ ನಷ್ಟ ಉಂಟುಮಾಡುವ ಸಂಚು ಎಂಬುದೂ ಪತ್ತೆಯಾಗುತ್ತಿದೆ.

Read more...

ಡೈವೊರ್ಸ್‌ಗೆ ಹೊಸ ತಂತ್ರಜ್ಞಾನ 'ಡೈವೊರ್ಜೀನ್' ಪತ್ತೆ!

Friday, September 05, 2008

(ಬೊಗಳೂರು ತಂತ್ರಅಜ್ಞಾನ ಬ್ಯುರೋದಿಂದ)
ಬೊಗಳೂರು, ಸೆ. ೫- ದೇಶದೆಲ್ಲೆಡೆ ಪವಿತ್ರ ಬಾಂಧವ್ಯವಾಗಿ ಏರ್ಪಡಬೇಕಿದ್ದ ವಿವಾಹವು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಬಂಧನವಾಗಿ ಪರಿವರ್ತನೆಗೊಂಡು " ವಿವಾಹ....ಬಂ"ಧನ" ರೂಪೇಣ ಪಶು, ಪತ್ನಿ ಸುತಾಲಯಃ" ಎಂಬುದು ಜೋರಾಗಿಯೇ ಕೇಳಿಬರುತ್ತಿದೆ. ಇದಕ್ಕೆಲ್ಲಾ ಕಾರಣ ಬೊಗಳೆ ರಗಳೆ ಬ್ಯುರೋದ ಅಜ್ಞಾನಿಗಳು ಸಂಶೋಧಿಸಿದ ಡೈವೋರ್ಜೀನ್ ಎಂಬ ಹೊಸ ತಂತ್ರಾಂಶ ಎಂಬುದನ್ನು ನಮ್ಮ ಬದ್ಧ ಪ್ರತಿಸ್ಪರ್ಧಿ ಪತ್ರಿಕೆ ಇಲ್ಲಿ ಪ್ರಕಟಿಸಿದೆ.

ಗಂಡ ಹೆಂಡಿರ ಮಧ್ಯೆ ನಂಬಿಕೆ-ಅಪನಂಬಿಕೆ, ಕಟ್ಟಿಕೊಂಡ ಹೆಂಡತಿಗಿಂತಲೂ ದಾರಿಹೋಕರೇ ಚಂದ ಕಾಣುವುದು ಮತ್ತು ತಾಳಿ ಕಟ್ಟಿದ ಗಂಡನಿಗಿಂತಲೂ ಪಕ್ಕದ ಮನೆಯ ಮಹಿಳೆಯ ಗಂಡನೇ ಗ್ರೇಟ್ ಅನ್ನಿಸಿಕೊಳ್ಳುವುದು, ವಿವಾಹ ಬಂಧನ ಸಂದರ್ಭದಲ್ಲಿ ನೀಡಿದ ಧನ ಕಡಿಮೆಯಾಗಿದೆ ಅಂತ (ವಿಶೇಷವಾಗಿ ವಧುವಿನ ಅತ್ತೆಯಂದಿರಿಗೆ) ಪದೇ ಪದೇ ತೋರುವುದು ಮುಂತಾದ ರೋಗಲಕ್ಷಣಗಳಿಗೆ ಬೊಗಳೂರಿನ ತಂತ್ರಜ್ಞಾನ ಬ್ಯುರೋದಿಂದ ಸಂಶೋಧನೆ ಮಾಡಲ್ಪಟ್ಟ ಡೈವೋರ್ಜೀನ್ ಎಂಬ ವೈರಸ್ ಕಾರಣ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಈ ಡೈವೋರ್ಜೀನ್‌ನ ಪ್ರಭಾವ ಎಷ್ಟರ ಮಟ್ಟಿಗಿದೆಯೆಂದರೆ, ಇತ್ತಿತ್ತಲಾಗಿ, ಮದುವೆಯಾಗುವುದಕ್ಕೆ ಮುನ್ನವೇ ಡೈವೊರ್ಸ್ ನೀಡುವ ಪ್ರಕರಣಗಳೂ ಅಲ್ಲಲ್ಲಿ ಹೆಚ್ಚಾಗತೊಡಗಿವೆ. ಬಹುತೇಕವಾಗಿ ಇದು ಕಾಲೇಜು ಪರಿಸರಗಳಲ್ಲಿ ಹೆಚ್ಚೆಚ್ಚಾಗಿ ಮತ್ತು ಹುಚ್ಚುಚ್ಚಾಗಿ ಕಂಡುಬರುತ್ತಿರುವುದನ್ನು ಬೊಗಳೆ ರಗಳೆಯ ಅಪಾಪೋಲೀ ಬ್ಯುರೋದ ಸದಸ್ಯರು ಸ್ಟಿಂಗ್ ಕಾರ್ಯಾಚರಣೆಯ ಮೂಲಕ ಪತ್ತೆ ಹಚ್ಚಿದ್ದಾರೆ.

ಈ ವೈರಸ್ಸನ್ನು ನಗರಗಳಲ್ಲಾದರೆ ಬಹುತೇಕವಾಗಿ ಪಾರ್ಕು ಪ್ರದೇಶಗಳಲ್ಲಿ, ಗ್ರಾಮೀಣ ಭಾಗದಲ್ಲಾದರೆ ಬಸ್ ನಿಲ್ದಾಣ, ಬಾವಿಕಟ್ಟೆಗಳ ಬಳಿ ಬಿಡಲಾಗುತ್ತಿದೆ. ಹೀಗಾಗಿ ಪ್ರೇಮ ಅರಳುವ ಮುನ್ನವೇ ಬ್ರೇಕಪ್ ಆಗುವ ಸಾಧ್ಯತೆಗಳು ಅಂದರೆ ವಸ್ತುಶಃ ಪ್ರೇಮ ವಿಚ್ಛೇದನೆಗೊಳ್ಳುವ ಪ್ರಕರಣಗಳು ಅತಿಯಾಗುತ್ತಿವೆ.

ಈ ಹಿಂದೆ, ಬೊಗಳೆ ರಗಳೆ ಬ್ಯುರೋ ಸಂಶೋಧಿಸಿದ "Spoon-ಟೇನಿಯಸ್ ಡೈವರ್ಟೀನ್" ಎಂಬ ಡೈವರ್ಸ್ ಔಷಧ ಹಾಗೂ ಅರಿವಿಲ್ಲದೆ ಡೈವೊರ್ಸ್ ನೀಡಬಲ್ಲ ವಿಧಾನವು ಸರಿಯಾಗಿ ಕೆಲಸ ಮಾಡದ ಕಾರಣ ಈ ಹೊಸ ಸಂಶೋಧನೆಗೆ ಕೈಹಚ್ಚಲಾಗಿದೆ ಎಂದು ಏಕಸದಸ್ಯ ಬ್ಯುರೋದ ಸಮಸ್ಯ ಸಿಬ್ಬಂದಿಗಳು ವಿವರಿಸಿದ್ದಾರೆ.

ಆದರೆ, ಈ ಡೈವೊರ್ಜೀನ್‌ನ ಮೂಲ ಅಂಶವಾಗಿರುವ ಜೀನ್ ಅನ್ನೇ ನಾಶಪಡಿಸುವುದು ಮತ್ತು ಆ ಮೂಲಕ ಜನಸಂಖ್ಯಾ ಸ್ಫೋಟ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಡೈವರ್ಸ್ ಆಂದೋಲನಕ್ಕೆ ಕಡಿವಾಣ ಹಾಕುವ ಪ್ರಯತ್ನವೂ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬುದು ಡೈವೊರ್ಜೀನ್ ಸಂಶೋಧಕರಿಗೆ ನುಂಗಲಾರದ ತುತ್ತು.

Read more...

ಮಾನವನಿಂದ ಮಂಗ: ಹಾಟ್ ಕಲ್ಚರ್ ವಿಕಾಸವಾದ

Wednesday, September 03, 2008

(ಬೊಗಳೂರು ಅಸತ್ಯ Someಚೋದನಾ ಬ್ಯುರೋದಿಂದ)
ಬೊಗಳೂರು, ಸೆ.2- ಮಾನವರಿಂದಲೇ ಮಂಗ ಎಂಬ ವಿಕಾಸವಾದಕ್ಕೆ ಹೊಸ ಪುಷ್ಟಿ ದೊರೆತದ್ದು ಬೊಗಳೂರು ಬ್ಯುರೋದ ಸೊಂಪಾದಕರಿಂದ ಎಂದು ಬೊಟ್ಟು ಮಾಡಿ ತೋರಿಸುತ್ತಿದ್ದವರಿಗೆ ಹೊಸ ಸುದ್ದಿ. ಇದು ತಪ್ಪು ಎಂದು ಇಲ್ಲಿ ಸಾಬೀತಾಗಿದೆ.

ಇದೀಗ ಜಗತ್ತಿನಲ್ಲಿ ಹಾಟ್ ಕಲ್ಚರ್ ಹೆಚ್ಚಾಗುತ್ತಿದೆ. ಯಾವುದೇ ಚಲನಚಿತ್ರ ನೋಡಿದರೂ ಹಾಟ್ ಹಾಟ್ ಆಗಿರೋ ತಾರೆಯರು ಮೈ ಕುಲುಕಿಸುತ್ತಿರುತ್ತಾರೆ. ಹೀಗಾಗಿ ದೇಹದ ತಾಪಮಾನ ಹೆಚ್ಚಾಗುತ್ತಿರುವಂತೆಯೇ ಬಿಚ್ಚೋಲೆ ಗೌರಮ್ಮರ ಮಾನ ಹರಾಜಾಗುತ್ತಾ ದೇಶದ ತಾಪಮಾನವೂ ಏರುತ್ತಲೇ ಇರುತ್ತದೆ. ಈ ರೀತಿಯಾಗಿ ಉಷ್ಣತೆ ಏರುತ್ತಿರುವುದರಿಂದ ಮಾನವನಾಗಿದ್ದ ಪ್ರಾಣಿಯು ನಿಧಾನವಾಗಿ ಮಂಗನ ರೂಪವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಬೊಗಳೂರಿನ ಏಕ ಸದಸ್ಯ ಬ್ಯುರೋದ ಅವ್ಯವಸ್ಥಾಪಕ ಮುಖ್ಯ ಕಿರಿ(ಕಿರಿ) ಸೊಂಪಾದಕರು ಭಾರೀ ಪ್ರಯತ್ನ ಪಟ್ಟು ಪತ್ತೆ ಹಚ್ಚಿ, ತಮ್ಮ ಮೇಲೆ ಯಾರಾದರೂ ಕಿರುಬೆರಳೆತ್ತಿ ತೋರಿಸುತ್ತಿರುವುದನ್ನು ತಪ್ಪಿಸಲು ಶತ ಪ್ರಯತ್ನ ಮಾಡಿದ್ದಾರೆ.

ಇತ್ತೀಚೆಗೆ ನಟೀಮಣಿಯರು ಪುಟ್ಟ ಬೆಂಕಿ ಪೆಟ್ಟಿಗೆಯೊಳಗೆ ಮಡಚಿ ಇರಿಸಬಹುದಾದಷ್ಟು ಭಾರೀ ಗಾತ್ರದ ಉಡುಗೆ ತೊಡುವ, ಅಥವಾ ಆ ಉಡುಗೆಯನ್ನು ದೇಹಕ್ಕೆ 'ಸ್ಯಾಂಪಲ್' ಆಗಿ ತೋರಿಸುವ ಪ್ರವೃತ್ತಿ ಹೆಚ್ಚಿಸುತ್ತಾ ಪ್ರಸಿದ್ಧಿ ಪಡೆಯಲು ಹರಸಾಹಸ ಮಾಡುತ್ತಿರುವುದರಿಂದ ಸುತ್ತಮುತ್ತಲಿನವರು ಕೂಡ ಹಾಟ್ ಆಗಿ ತಾಪಮಾನ ಹೆಚ್ಚಾಗಿಬಿಡುತ್ತಿದೆ. ಇದರಿಂದಾಗಿ ಅಲ್ಲಲ್ಲಿ ಅನ್ಯಾಯ, ಅನಾಚಾರ, ಅತ್ಯಾಚಾರ ಇತ್ಯಾಚಾರಗಳು ನಡೆಯುತ್ತಿವೆ. ಈ ರೀತಿ, ಮಾನವರು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಪ್ರಾಣಿಗಳಾಗಿ ವಿಕಾಸಗೊಳ್ಳುತ್ತಿದ್ದಾರೆ ಎಂಬುದು ಬೊಗಳೆ ರಗಳೆಯ ಅಸತ್ಯ ಬ್ಯುರೋ ಕಂಡುಕೊಂಡಿರುವ ನಿಗೂಢ ರಹಸ್ಯವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ಪೈಸಿ ಗರ್ಲ್ಸ್ ಮುಂತಾದ ಹಿರಿಮೆ-ಗರಿಮೆಗಳನ್ನು ಪಡೆದುಕೊಂಡು ಮನಸ್ಸನ್ನು ಸ್ಪೈಸೀಕರಣಗೊಳಿಸಿರುವುದರಿಂದ ಜಾಗತಿಕ ತಾಪಮಾನವೂ ಹೆಚ್ಚಾಗುತ್ತಿದೆ ಎಂದು ನಮ್ಮ ವಿಶ್ಲೇಷಣಾಕಾರರು ತರ್ಕಿಸಿದ್ದಾರೆ.

Read more...

ಬೊಗಳೆಯಲ್ಲಿ ತಾಪಮಾನದ ರಗಳೆ!

Tuesday, September 02, 2008

ಜಾಗತಿಕ ತಾಪಮಾನ ಹೆಚ್ಚುತ್ತಿರುವುದೇಕೆ ಮತ್ತು ಇದರ ನೇರ ಪರಿಣಾಮ ಬೊಗಳೆ ರಗಳೆ ಬ್ಯುರೋದ ಮೇಲೆ ಬಿದ್ದದ್ದು ಹೇಗೆ ಅಂತ ತಿಳಿದುಕೊಳ್ಳಬೇಕೇ? ನಾಳಿನ ಸಂಚಿಕೆ ತರಿಸಿಕೊಳ್ಳಿ.

ನೀವು ಕ್ಲಿಕ್ ಮಾಡಿದರೆ ನಿಮ್ಮ ಮನೆ ಬಾಗಿಲಿನಲ್ಲಿ ಈ ಅಂತರ್ಜಾಲದ ರದ್ದಿ ಪತ್ರಿಕೆ ಬಿದ್ದಿರುತ್ತದೆ!!!!

ಸರ್ವರಿಗೂ ಬೊಗಳೆ ರಗಳೆಯ ಅಚ್ಚುಮೆಚ್ಚಿನ ಗಣಪತಿಯ ಹುಟ್ಟುಹಬ್ಬದ ಶುಭಾಶಯಗಳು.

Read more...

ಈಡಿಯಟ್ ಪದವಿಗೆ ವ್ಯಾಖ್ಯಾನ: ಬೊಗಳೆ ಹರ್ಷ!

Monday, September 01, 2008

(ಬೊಗಳೂರು ಈಡಿಯಟ್ ಬ್ಯುರೋದಿಂದ)
ಬೊಗಳೂರು, ಸೆ.1- ಬೊಗಳೂರು ಬ್ಯುರೋದ ಅವ್ಯವಸ್ಥಾಪಕ ಮುಖ್ಯ ಕಿರಿ ಕಿರಿ ಸಂಪಾದಕರ ಹುದ್ದೆಯ ಘನತೆಯ ಬಗ್ಗೆ ಪರಮೋಚ್ಚನ್ಯಾಯಾಲಯದಲ್ಲಿ ತೀವ್ರ ಚರ್ಚೆ ನಡೆದಿರುವುದು ಬೊಗಳೆ ರಗಳೆಗೆ ಸಂದ ಗೌರವ ಎಂದು ನಮ್ಮ ಬ್ಯುರೋ ಹರ್ಷ ವ್ಯಕ್ತಪಡಿಸಿದೆ.

'ನಿಜವಾಗಿಯೂ ಈಡಿಯಟ್' ಎಂಬ ಪದವು ಮತ್ತು ಈಡಿಯಟ್ ಎಂಬ ಪದವು ನಿಜವಾಗಿಯೂ, ಅತ್ಯಂತ ಹೆಚ್ಚು ದುರ್ಬಳಕೆಗೀಡಾದ ಗೌರವಾರ್ಹ ಶಬ್ದವಾಗಿದೆ. ಬೊಗಳೆ ರಗಳೆ ಬ್ಯುರೋ ಸೊಂಪಾದಕರು ಹುಟ್ಟಿದ ಇಷ್ಟು ವರ್ಷಗಳ ಬಳಿಕ ಇದಕ್ಕೆ ಹೊಚ್ಚ ಹೊಸ ವ್ಯಾಖ್ಯಾನವನ್ನು ಕಲ್ಪಿಸಲು ಹೊರಟಿರುವುದು ತಮ್ಮ ಸಾಧನೆಗೆ ಸಂದ ಅಗೌರವ ಎಂದು ಸೊಂಪಾದ ಕರುಗಳು ಬೆನ್ನು ತಟ್ಟಿಕೊಂಡಿದ್ದಾರೆ.

ಆದರೆ, 20ರವರೆಗೆ 'ಒಂದುಎರಡು' ಹೇಳಲು ಬರಬೇಕು ಎಂಬ ಶರತ್ತಿನ ಬಗ್ಗೆ ಮಾತ್ರ ಒಂದಷ್ಟು ಅಸಮಾಧಾನವಿದೆ. ಹಲವಾರು ಎದುರಾಳಿ ಪತ್ರಿಕೆಗಳು ಬೊಗಳೆ ರಗಳೆ ಸೊಂಪಾದಕರ ವಿರುದ್ಧ ಕೇಸುಗಳನ್ನು ಜಡಿದಿರುವುದರಿಂದ, ಬಹುಶಃ ಮುಂದೊಂದು ದಿನ ಇದು ಕಂಬಿ ಎಣಿಸಲು 'ಪೂರ್ವಾಭ್ಯಾಸ' ಮಾಡಿದಂತಾಗುತ್ತದೆ ಎಂಬುದು ನಿಜವಾದರೂ, 20ರವರೆಗೆ ಎಣಿಸುತ್ತಾ ಕೂತರೆ, ಬೊಗಳೆ ರಗಳೆ ಪತ್ರಿಕೆ ಹೊರತರುವುದಾದರೂ ಹೇಗೆ? ಅಷ್ಟೊಂದು ಸಂಖ್ಯೆಗಳನ್ನು ಯೋಚನೆ ಮಾಡುವಷ್ಟರಲ್ಲಿ ನಾಲ್ಕೈದು ದಿನಗಳು ಕಳೆದುಹೋಗಬಹುದು ಎಂಬುದು ಸೊಂಪಾದಕರ ಆತಂಕ.

ಇದೂ ಅಲ್ಲದೆ, ಇಲ್ಲಿ ಗಮನ ಸೆಳೆದಿರುವ ಮತ್ತೊಂದು ಅಂಶವೂ ಇದೆ. ದಿನ ಎಣಿಕೆ ಮಾಡುತ್ತಿರಬೇಕು ಎಂಬುದು ಕೂಡ ದಯನೀಯ ಸಲಹೆ. ಇದು ಅಂತಿಮ ದಿನ ಎಣಿಕೆಯೋ, ಅಥವಾ ಕ್ಷಣಗಣನೆಯೋ ಎಂಬುದನ್ನು ಸ್ಪಷ್ಟೀಕರಿಸಬೇಕು ಎನ್ನುವುದು ನಮ್ಮ ಬ್ಯುರೋದ ಏಕೈಕ ಸಂತಾಪಕರ ಅಭಿಮತ.

ಸೂಚನೆ: ಬಲಬದಿಯಲ್ಲಿ ಬೊಗಳೆ ರಗಳೆ ಬ್ಯುರೋ ನಡೆಸಿದ ಸಮೀಕ್ಷೆಯಲ್ಲಿ, ಬ್ಲಾಗ್ ಎಂಬ ಪದಕ್ಕೆ ಬೊಗಳೆ ಎಂಬ ಪದವೇ ಸೂಕ್ತ ಎಂದೆಲ್ಲಾ ಬೊಗಳೆ ಬಿಟ್ಟು ಗುಂಡಿ ಒತ್ತಿದ ನಮ್ಮ ಮೂರಾಬಟ್ಟೆ ಓದುಗರಿಗೆಲ್ಲರಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳು.

Read more...

About This Blog

  © Blogger template Foam by Ourblogtemplates.com 2009

Back to TOP